"ನಾನು ಯಾರನ್ನೂ ಸೋಲಿಸುವುದಕ್ಕೆ ಬಂದಿಲ್ಲ" ಎಂದಿದ್ದ ಅಣ್ಣಾವ್ರು; ಮಗನ ಯಶಸ್ಸಿನಲ್ಲಿ ತಂದೆ ನೆನೆದ ರಾಘಣ್ಣ
ಯುವ ರಾಜ್ಕುಮಾರ್ ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಾಗಿದೆ. ಇತ್ತೀಚೆಗೆ 'ಯುವ' ಸಿನಿಮಾ ಗೆಲುವಿನ ಖುಷಿಯನ್ನು ಇಡೀ ತಂಡ ಸಂಭ್ರಮಿಸಿದೆ. ಯುವ ಗೆದ್ದ ಖುಷಿಯಲ್ಲಿ ರಾಘವೇಂದ್ರ ರಾಜ್ಕುಮಾರ್ ಕೂಡ ಇದ್ದಾರೆ. ಇದೇ ಸಂದರ್ಭದಲ್ಲಿ ಅಣ್ಣಾವ್ರನ್ನು ನೆನಪಿಸಿಕೊಂಡಿದ್ದಾರೆ.
ಮಗಳ ಗೆದ್ದ ಖುಷಿಯ ವೇಳೆ ತಂದೆ ಹೇಳಿದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಅಭಿನಯಕ್ಕೆ, ಸರಳತೆಗೆ ಹೆಸರಾಗಿದ್ದ ಅಣ್ಣಾವ್ರ ಮಾತುಗಳು ಕೂಡ ಅಷ್ಟೇ ತೂಕದಿಂದ ಕೂಡಿರುತ್ತಿತ್ತು. ತಮ್ಮ ತಂದೆ ಚಿತ್ರರಂಗದಲ್ಲಿ ಗೆದ್ದಿದ್ದು ಹೇಗೆ? ಆ ಗೆಲುವಿನ ಸೀಕ್ರೆಟ್ ಏನು? ಅನ್ನೋದನ್ನು ರಾಘಣ್ಣ ಮಗನ ಮುಂದೆ ಹೇಳಿಕೊಂಡಿದ್ದಾರೆ.

ಡಾ.ರಾಜ್ಕುಮಾರ್ಗೆ ತಮ್ಮ ವೃತ್ತಿ ಬದುಕಿನಲ್ಲಿ ಗೆಲುವನ್ನು ಕಂಡಿದ್ದೇ ಹೆಚ್ಚು. ಕನ್ನಡ ಸಿನಿ ಪ್ರಿಯರನ್ನು ನಾಲ್ಕೈದು ದಶಕಗಳ ಕಾಲ ರಂಜಿಸಿದ್ದಾರೆ. ಈ ಯಶಸ್ಸು ಕಂಡ ಅವರ ಆತ್ಮೀಯರೊಬ್ಬರು ನಿಮ್ಮನ್ನು ಯಾರು ಸೋಲಿಸಲೇ ಇಲ್ಲ ಅಂತ ಹೇಳಿದ್ದರಂತೆ. ಅದಕ್ಕೆ ಅಣ್ಣಾವ್ರು ಕೊಟ್ಟ ಉತ್ತರವೇನು? ಅನ್ನೋದನ್ನು ರಾಘಣ್ಣ ಪುತ್ರ ಯುವ ಮುಂದೆ ಹೇಳಿದ್ದಾರೆ. ಅದೇನು? ಆ ಸಂದರ್ಭವೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಯುವ' ರಾಜ್ಕುಮಾರ್ಗೆ ಮೊದಲ ಸಿನಿಮಾಗೆ ಸಿಕ್ಕ ಯಶಸ್ಸಿನ ಬೆನ್ನಲ್ಲೇ ವೇದಿಕೆ ರಾಘಣ್ಣ ಮೇಲೆ ಬದುಕಿನ ಪಾಠ ಮಾಡಿದ್ದಾರೆ. ಅಣ್ಣಾವ್ರ ಮಾತುಗಳನ್ನು ಮುಂದಿಟ್ಟುಕೊಂಡು ಚಿತ್ರರಂಗದಲ್ಲಿ ತಮ್ಮ ನಡೆ ಹೇಗಿರಬೇಕು ಅನ್ನೋದನ್ನು ಪರೋಕ್ಷವಾಗಿ ಹೇಳಿಕೊಟ್ಟಿದ್ದಾರೆ. ಅದಕ್ಕೆ ಅಣ್ಣಾವ್ರ ಮಾತುಗಳನ್ನೇ ಉದಾಹರಣೆಯಾಗಿ ತೆಗೆದುಕೊಂಡಿದ್ದಾರೆ.
"ನಮ್ಮ ತಂದೆಗೆ ಯಾರೋ ಕೇಳಿದ್ರು. ಅಣ್ಣಾ ನೀವು ನಟನೆ ಮಾಡುವುದಕ್ಕೆ ಶುರು ಮಾಡಿದ ದಿನದಿಂದ ಯಾರೂ ನಿಮ್ಮನ್ನು ಸೋಲಿಸಲೇ ಇಲ್ಲ ಅಂದ್ರು. ಆಗ ನಮ್ಮ ತಂದೆ ನಾನು ಯಾರನ್ನೂ ಸೋಲಿಸುವುದಕ್ಕೆ ಬಂದಿಲ್ಲ. ಎಲ್ಲರ ಮನಸ್ಸನ್ನು ಗೆಲ್ಲುವುದಕ್ಕೆ ಬಂದಿದ್ದೀನಿ ಅಂತ ಹೇಳಿದ್ರು." ಎಂದು ರಾಘಣ್ಣ ಹೇಳಿಕೊಂಡಿದ್ದಾರೆ.

ಇದೇ ವೇಳೆ ಅಣ್ಣಾವ್ರ ಕೆಲವು ಗುಣಗಳನ್ನು ಯುವನಲ್ಲಿಯೂ ಕಂಡಿದ್ದನ್ನು ರಾಘಣ್ಣ ಗಮನಿಸಿದ್ದಾರೆ. ಆ ಬಗ್ಗೆನೂ 'ಯುವ' ಸಕ್ಸಸ್ ಮೀಟ್ನಲ್ಲಿ ರಿವೀಲ್ ಮಾಡಿದ್ದಾರೆ. "ನನಗೆ ಏನೂ ಗೊತ್ತಿಲ್ಲ. ನನ್ನ ಕೆಲಸ ಇಷ್ಟೇ. ಒಬ್ಬ ನಿರ್ದೇಶಕ ಏನು ಹೇಳುತ್ತಾನೆ, ಅವನನ್ನು ಒಪ್ಪಿಸಿಬಿಟ್ಟರೆ ಆಯ್ತು. ಒಂದು ಆತ್ಮವನ್ನೇ ಒಪ್ಪಿಸುವುದಕ್ಕೆ ಆಗುವುದಿಲ್ಲ. ನೂರಾರು ಆತ್ಮವನ್ನು ಒಪ್ಪಿಸಲು ಹೇಗೆ ಸಾಧ್ಯ ನಮ್ಮ ತಂದೆ ಹೇಳಿದ್ದರು. ಈ ಗುಣ ಯುವನಲ್ಲಿ ಕಂಡಿದ್ದೇನೆ. ನಿರ್ದೇಶಕ ಒಪ್ಪುವವರೆಗೂ ಮಾಡಿದ. ಈ ಗುಣ ಅವನನ್ನು ತುಂಬಾ ದೂರ ಕರೆದುಕೊಂಡು ಹೋಗುತ್ತೆ." ಎಂದು ರಾಘಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯುವ ರಾಜ್ಕುಮಾರ್ ಅನ್ನು ಚಿತ್ರರಂಗಕ್ಕೆ ಪರಿಚಯಿಸಲು ಯಾರೂ ಬ್ಯಾಕ್ ಬೋನ್ ಇರಲಿಲ್ಲ. ಅದು ಅವರಿಗೆ ಸಾಕಷ್ಟು ನೋವು ಕೊಟ್ಟಿತ್ತು. ಅದನ್ನು ಹಲವು ಬಾರಿ ರಾಘಣ್ಣ ಹೇಳಿಕೊಂಡಿದ್ದರು. ಈಗ ಮತ್ತೆ ಆ ನೋವಿನ ಬಗ್ಗೆ ಮಾತಾಡಿದ್ದಾರೆ. "ನನಗೊಂದು ನೋವಿತ್ತು. ನನಗೆ, ನಮ್ಮ ಅಣ್ಣನಿಗೆ, ನಮ್ಮ ತಮ್ಮನಿಗೆ ಎಲ್ಲ ಬ್ಯಾಕ್ ಬೋನ್ ಇತ್ತು. ನಮ್ಮ ತಂದೆ, ನಮ್ಮ ತಾಯಿ, ನಮ್ಮ ಚಿಕ್ಕಪ್ಪ, ಉದಯ್ ಶಂಕರ್ ಎಲ್ಲಾ ಇದ್ದರು. ಒಂದು ಕೋಟೆನೇ ಇತ್ತು. ಇವನೊಂತರ ಅನಾಥನಾಗಿಬಿಟ್ಟನಲ್ಲ ಅಂತ ನೋವಿತ್ತು. ನನಗೂ ಹುಷಾರು ತಪ್ಪಿಬಿಡ್ತು. ಏನು ಹೀಗಾಗಿ ಹೋಯ್ತುಲ್ಲ. ಮಕ್ಕಳು ಬರೋ ಸಮಯಕ್ಕೆ ನಾನು ಹೀಗಾಗಿಬಿಟ್ಟೆ ಅಂತ. ಅಂತಹ ಟೈಮ್ನಲ್ಲಿ ನನ್ನ ತಮ್ಮ ಕೈ ಹಿಡಿದು ಇವರಿಗೆ ಒಪ್ಪಿಸಿಬಿಟ್ಟು ಹೋದನಲ್ಲ. ಇದೇ ದೇವರೇ ಮಾಡಿದಂತಹ ಒಂದು ಆಶೀರ್ವಾದ." ಎಂದಿದ್ದಾರೆ.


Click it and Unblock the Notifications











