"ಚುಚ್ಚಬೇಕು ಅಂತ ಮಾಡಿದ್ರೆ, ಅದು ನನಗೆ ತಾಗುವುದಿಲ್ಲ";ರಿಷಬ್ ಶೆಟ್ಟಿಯೊಂದಿಗಿನ ಮನಸ್ತಾಪಕ್ಕೆ ರಾಜ್ ಬಿ ಶೆಟ್ಟಿ ಪ್ರತಿಕ್ರಿಯೆ
ಡಿಸೆಂಬರ್ನಲ್ಲಿ ಸ್ಯಾಂಡಲ್ವುಡ್ ಮಿಂಚುತ್ತಿದೆ. ಮೂರು ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತಿವೆ. ಅದರಲ್ಲೂ ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ '45' ಸಿನಿಮಾದ ಬಗ್ಗೆ ಎಲ್ಲರ ಕಣ್ಣು ಬಿದ್ದಿದೆ. ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನ ಬೇರೆ. ಈಗಾಗಲೇ ಹಾಡುಗಳು, ಸಿನಿಮಾದ ತುಣುಕುಗಳ ಸದ್ದು ಮಾಡುತ್ತಿವೆ. ಇನ್ನೇನು ರಿಲೀಸ್ಗೆ ಕೆಲವೇ ದಿನಗಳು ಬಾಕಿ ಉಳಿದಿರುವುದರಿಂದ ರಾಜ್ ಬಿ ಶೆಟ್ಟಿ ಸೇರಿದಂತೆ ಚಿತ್ರತಂಡ ಪ್ರಚಾರದಲ್ಲಿ ಬ್ಯುಸಿಯಾಗಿದೆ.
'45' ಸಿನಿಮಾ ಭರ್ಜರಿಯಾಗಿ ಪ್ರಚಾರ ಮಾಡುತ್ತಿದೆ. ಇತ್ತೀಚೆಗೆ ರಿಷಬ್ ಶೆಟ್ಟಿ ಕೂಡ '45' ಸಿನಿಮಾ ಬಗ್ಗೆ ಮಾತಾಡಿದ್ದರು. ಆ ವೇಳೆ ಶಿವಣ್ಣ ಹಾಗೂ ಉಪೇಂದ್ರ ಅವರ ಹೆಸರನ್ನು ತೆಗೆದುಕೊಂಡಿದ್ದರು. ರಾಜ್ ಬಿ ಶೆಟ್ಟಿಯ ಹೆಸರನ್ನು ಕೈ ಬಿಟ್ಟಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿಯ ಮಧ್ಯೆ ಮೈಮಸ್ಸು ಮೂಡಿದೆ ಎಂಬ ಚರ್ಚೆ ಶುರುವಾಗಿತ್ತು.

ರಿಷಬ್ ಶೆಟ್ಟಿ ನಿರ್ದೇಶಿಸುತ್ತಿದ್ದ 'ಕಾಂತಾರ ಚಾಪ್ಟರ್ 1'ನಲ್ಲಿ ಕೆಲಸ ಮಾಡುವುದಕ್ಕೆ ರಾಜ್ ಬಿ ಶೆಟ್ಟಿ ಹಿಂದೇಟು ಹಾಕಿದ್ದಕ್ಕೆ ಈ ವೈಮನಸ್ಸಿಗೆ ಕಾರಣ ಎಂದು ಹೇಳಲಾಗಿತ್ತು. ಈ ಬಗ್ಗೆ '45' ಸಿನಿಮಾದ ಪ್ರಚಾರದ ಸಮಯದಲ್ಲಿ ಮಾಧ್ಯಮಗಳಿಗೆ ರಾಜ್ ಬಿ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಅಸಲಿಗೆ ಏನು ಹೇಳಿದ್ದಾರೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಮೈಕ್ ಆಫ್ ಆಗಿತ್ತಾ?
'45' ಸಿನಿಮಾ ಬಗ್ಗೆ ರಿಷಬ್ ಶೆಟ್ಟಿ ಮಾತಾಡುವಾಗ ರಾಜ್ ಬಿ ಶೆಟ್ಟಿ ಹೆಸರನ್ನು ಹೇಳಿರಲಿಲ್ಲ. ಇದು ಉದ್ದೇಶ ಪೂರ್ವಕವಾಗಿ ಆಗಿದ್ದಾ? ಇಲ್ಲ ಮೈಕ್ ಆಫ್ ಆಗಿತ್ತಾ? ಇದಕ್ಕೆ ರಾಜ್ ಹೇಳೋದು ಹೀಗಿ. "ನಾನು ಈ ಸಿನಿಮಾ ಬಗ್ಗೆ ಮಾತಾಡಬೇಕಾದರೂ ಮೊದಲ ಹೆಸರು ಹೇಳೋದು ಶಿವಣ್ಣ ಅವರದ್ದೇ.. ಆಮೇಲೆ ಉಪೇಂದ್ರ ಅವರದ್ದು, ಆಮೇಲೆ ಅರ್ಜುನ್ ಜನ್ಯ ಅವರ ಹೆಸರು ಹೇಳುತ್ತೇನೆ. ನಾನು ಇದರಲ್ಲಿ ಒಂದು ಪಾತ್ರವನ್ನು ಮಾಡಿದ್ದೇನೆ ಅಷ್ಟೇ. ಕೆಲವೊಮ್ಮೆ ಫ್ಲೋನಲ್ಲಿ ಮಾತಾಡಬೇಕಾದರೆ, ನೆನಪಿಗೆ ಬಾರದೆ ಇರಬಹುದು ಅಷ್ಟೇ. ಅರ್ಜುನ್ ಜನ್ಯ ಅವರಿಗೆ ಕಮ್ಯೂನಿಕೇಟ್ ಮಾಡಿದಂತೆ ಮೊದಲು ರೆಕಾರ್ಡ್ ಮಾಡಿದಾಗ ಮೈಕ್ ಆಫ್ ಆಗಿತ್ತು. ಹೀಗಾಗಿ ಆ ಫ್ಲೋನಲ್ಲಿ ಮಿಸ್ ಆಗಿರಬಹುದು. ಅದಕ್ಕೆ ನಾನು ಅಷ್ಟು ಹರ್ಟ್ ಆಗುವಂತಹ ಅವಶ್ಯಕತೆ ಇಲ್ಲ. ಹೆಸರು ಹೇಳಿಲ್ಲ ಅಂದರೆ, ಉದ್ದೇಶ ಪೂರ್ವಕವಾಗಿ ಅದನ್ನು ಮಾಡುತ್ತಾರೆಂದು ನಾನು ಅಂದುಕೊಳ್ಳುವುದಿಲ್ಲ. ಬೈ ಮಿಸ್ಟೇಕ್ ಆಗಿ ಆಗಿದ್ದರೆ, ಏನೂ ಸಮಸ್ಯೆಯಿಲ್ಲ ಅನ್ನೋದು ನನ್ನ ಭಾವನೆ." ಎನ್ನುತ್ತಾರೆ ರಾಜ್ ಬಿ ಶೆಟ್ಟಿ.
"ನನಗೆ ತಾಗುವುದಿಲ್ಲ"
ಇನ್ನು ರಿಷಬ್ ಶೆಟ್ಟಿ ಉದ್ದೇಶವಾಗಿ ಹೀಗೆ ಮಾಡಿರಲಿಕ್ಕಿಲ್ಲ ಅನ್ನೋದು ರಾಜ್ ಬಿ ಶೆಟ್ಟಿಯ ನಂಬಿಕೆ. ಒಂದು ಚುಚ್ಚಬೇಕು ಅಂತ ಯಾರೇ ಹೀಗೆ ಮಾಡಿದರೂ, ಅದು ನನಗೆ ತಾಗುವುದಿಲ್ಲ ಎಂದು ಹೇಳಿದ್ದಾರೆ. "ನನಗಂತೂ ಏನೂ ಮನಸ್ತಾಪವಿಲ್ಲ. ನಾನು ಎಲ್ಲೂ ಹೆಸರು ಮಿಸ್ ಮಾಡಲಿಲ್ಲ. ಉದ್ದೇಶಪೂರ್ವಕವಾಗಿ ಮಿಸ್ ಮಾಡಿದ್ದಾರೆ ಅಂತ ಅನಿಸುವುದಿಲ್ಲ. ಯಾವುದೇ ಫ್ಲೋನಲ್ಲಿ ಮಿಸ್ ಮಾಡಿರಬಹುದು. ಇದನ್ನು ಬಿಡಬಹುದು ಅಂತ ಅನಿಸುತ್ತೆ. ಅಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳುವುದು ಬೇಡ. ಅದು ಚುಚ್ಚಬೇಕು ಅಂತ ಹೀಗೆ ಮಾಡ್ತಾರೆ ಅಂದುಕೊಂಡರೆ, ಅದು ಯಾಕೆ ಮಾಡುತ್ತಾರೆ. ಅದು ನನಗೆ ತಾಗುವುದೂ ಇಲ್ಲ." ಎಂದಿದ್ದಾರೆ.

"ಜಗಳ ಆಡುವುದು ಡಿಗ್ರಿಯಲ್ಲೇ ಮುಗೀತು"
ಇನ್ನು 'ಕಾಂತಾರ' ಸೀರಿಸ್ನಲ್ಲಿ ಕೆಲಸ ಮಾಡುವುದಿಲ್ಲ ಮೊದಲೇ ಹೇಳಿದ್ದು, ಮುಂದೆ ಯಾವುದೇ ಸಿನಿಮಾಗೆ ರಿಷಬ್ಗೆ ತಮ್ಮ ಅಗತ್ಯವಿದ್ದರೆ ಕೆಲಸ ಮಾಡುವುದಾಗಿಯೂ ಹೇಳಿದ್ದಾರೆ. "ರಿಷಬ್ ಶೆಟ್ಟಿಯ ಮುಂದಿನ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಬೇಕು ಅಂದರೆ ನಾನು ಹೋಗಿಯೇ ಹೋಗುತ್ತೇನೆ. ಮುನಿಸು, ಸಿಟ್ಟು ಮಾಡಿಕೊಳ್ಳುವುದಕ್ಕೆ ನಾವು ಮಕ್ಕಳಲ್ಲ. ನನಗೆ 38 ವರ್ಷ ಆಯ್ತು. ಅವರಿಗೆ 39 ವರ್ಷ ಆಯ್ತು ಅನಿಸುತ್ತೆ. ಹೊಡೆದಾಡುವುದು, ಜಗಳ ಆಡುವುದನ್ನು ನಾನು ಡಿಗ್ರಿಯಲ್ಲಿ ಮುಗಿಸಿದ್ದೇನೆ." ಎನ್ನುತ್ತಾರೆ ರಾಜ್.
ರಕ್ಷಿತ್ ಶೆಟ್ಟಿ ಸಿನಿಮಾಗೂ ಕೆಲಸ
ರಿಷಬ್ ಶೆಟ್ಟಿ ಅಷ್ಟೇ ಅಲ್ಲ. ಇನ್ನೇನು ಶುರುವಾಗಲಿರುವ ರಕ್ಷಿತ್ ಶೆಟ್ಟಿಯ 'ರಿಚರ್ಡ್ ಆಂಟೋನಿ' ಸಿನಿಮಾಗೂ ಅಗತ್ಯ ಬಿದ್ದರೆ, ಕೆಲಸ ಮಾಡುವುದಾಗಿ ಹೇಳಿದ್ದಾರೆ. "ರಕ್ಷಿತ್ ಶೆಟ್ಟಿಯದ್ದೇ ರಿಚರ್ಡ್ ಆಂಟೋನಿ ಶುರುವಾದರೆ, ನಾನು ನನ್ನ ತಂಡ ಯಾವ ರೀತಿ ಕೆಲಸ ಮಾಡುವುದಕ್ಕಾದರೂ ನಾನು ಹಾಗೂ ನನ್ನ ತಂಡ ರೆಡಿಯಿದ್ದೇವೆ. ಅಷ್ಟೇ ಅಲ್ಲ, ಅರ್ಜುನ್ ಜನ್ಯ ಅವರೊಂದಿಗೂ ನಾನು ಚೆನ್ನಾಗಿದ್ದೇನೆ. ಈ ಸಿನಿಮಾಗೆ ಅವರೊಂದಿಗೆ ಸೇರಿಕೊಂಡು ಏನು ಮಾಡುವುದಕ್ಕೆ ಸಾಧ್ಯವಿದೆಯೋ ಅದನ್ನೆಲ್ಲ ಮಾಡುವುದಕ್ಕೆ ಪ್ರಯತ್ನ ಪಡುತ್ತಿದ್ದೇನೆ." ಎಂದು ವಿವಾದಕ್ಕೆ ತೆರೆ ಎಳೆದಿದ್ದಾರೆ.


Click it and Unblock the Notifications











