Raj B Shetty:'ಬಂದರ್' ಜೊತೆ 'ಗರುಡ ಗಮನ' ಲುಕ್ ಕೊಟ್ಟ ರಾಜ್ ಬಿ ಶೆಟ್ಟಿ; ಬಾಲಿವುಡ್ಗೆ ಎಂಟ್ರಿ
ಕನ್ನಡ ಚಿತ್ರರಂಗದ ಇಮೇಜ್ ಅನ್ನೇ ಬದಲಿಸಿದ್ದು ರಾಜ್ ಬಿ ಶೆಟ್ಟಿ. ವಿಭಿನ್ನ ಸಿನಿಮಾಗಳ ಮೂಲಕ ಕನ್ನಡಿಗರನ್ನು ಥಿಯೇಟರ್ ಕಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೂವರೆಗೂ ಅವರೇ ನಿರ್ದೇಶಿಸಿದ, ನಿರ್ಮಿಸಿದ ಸಿನಿಮಾಗಳು ಕೇವಲ ಬಾಕ್ಸಾಫೀಸ್ನಲ್ಲಷ್ಟೇ ಗೆದ್ದಿಲ್ಲ. ಇಡೀ ದೇಶದ ಗಮನವನ್ನೇ ಸೆಳೆದಿದೆ. ಅದಕ್ಕೆ ಅವರ ಬತ್ತಳಿಕೆಯಿಂದ ಬಂದ ಸಾಕಷ್ಟು ಸಿನಿಮಾಗಳು ಸಿಗುತ್ತವೆ.
ರಾಜ್ ಬಿ ಶೆಟ್ಟಿ ನಿರ್ದೇಶಿಸಿದ 'ಗರುಡ ಗಮನ ವೃಷಭ ವಾಹನ', 'ಟೋಬಿ' ಅಂತಹ ಸಿನಿಮಾಗಳು ಕನ್ನಡ ಚಿತ್ರರಂಗಕ್ಕೆ ನಿಜಕ್ಕೂ ಹೊಸ ಇಮೇಜ್ ಕೊಟ್ಟಿವೆ. ಅದರಲ್ಲೂ ರಾಜ್ ಬಿ ಶೆಟ್ಟಿ ನಿರ್ಮಿಸಿದ 'ಸು ಫ್ರಮ್ ಸೋ' ಬಾಕ್ಸಾಫೀಸ್ನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಸೂಪರ್ಸ್ಟಾರ್ಗಳೇ ಮಾಡಲು ಸಾಧ್ಯವಾಗದ ಸಾಧನೆಯನ್ನು ರಾಜ್ ಬಿ ಶೆಟ್ಟಿ ಟೀಮ್ ಮಾಡಿತ್ತು.

ರಾಜ್ ಬಿ ಶೆಟ್ಟಿ ಟ್ಯಾಲೆಂಟ್ ಕನ್ನಡ ಅಲ್ಲದೇ ಮಲಯಾಳಂ ಚಿತ್ರರಂಗಕ್ಕೂ ಗೊತ್ತಿದೆ. ಹೀಗಾಗಿ ಈಗಾಗಲೇ ರಾಜ್ ಬಿ ಶೆಟ್ಟಿ ಮಲಯಾಳಂ ಸೂಪರ್ಸ್ಟಾರ್ಗಳ ಜೊತೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ಅವರಿಗೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಈಗ ಇನ್ನೊಂದು ಹೆಜ್ಜೆ ಮುಂದಿಟ್ಟಿದ್ದಾರೆ. 'ಗರುಡ ಗಮನ ವೃಷಭ ವಾಹನ' ಲುಕ್ನಲ್ಲಿ ಬಾಲಿವುಡ್ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.
ಹೌದು, ರಾಜ್ ಬಿ ಶೆಟ್ಟಿ ಸದ್ದಿಲ್ಲದೆ ಬಾಲಿವುಡ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ. ಅದ್ಯಾವಾಗ ಸಿನಿಮಾ ಮುಗಿಸಿ ಬಂದ್ರೋ.. ಇದೂವರೆಗೂ ಸಿನಿಮಾ ಬಗ್ಗೆ ಬಾಯಿನೇ ಬಿಟ್ಟಿರಲಿಲ್ಲ. ಈಗ ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದ್ದಂತೆ ಅವರ ಫ್ಯಾನ್ಸ್ಗೆ ಶಾಕ್ ಆಗಿದೆ. ಅದು ಮತ್ಯಾವುದೂ ಅಲ್ಲ. ಬಾಲಿವುಡ್ ನಟ ಬಾಬಿ ಡಿಯೋಲ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಬಂದರ್'.
ಬಹಳ ದಿನಗಳಿಂದ 'ಬಂದರ್' ಸಿನಿಮಾವನ್ನು ನೋಡುವುದಕ್ಕೆ ಅವರ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದರು. ಆದರೆ, ಅಂದುಕೊಂಡಿದ್ದಕ್ಕಿಂತ ಕೊಂಚ ತಡವಾಗಿದೆ. ಆದರೂ, ಸಿನಿಮಾದಲ್ಲಿ ಸರ್ಪ್ರೈಸ್ಗಳ ಸುರಿಮಳೆಯನ್ನೇ ನಿರ್ದೇಶಕರು ಸುರಿಸಿದ್ದಾರೆ. ಅದರಲ್ಲಿ ಮಲಯಾಳಂ ನಟ ಇಂದ್ರಜಿತ್ ಸುಕುಮಾರನ್ ಒಬ್ಬರಾದರೆ, ಇನ್ನೊಬ್ಬರು ರಾಜ್ ಬಿ ಶೆಟ್ಟಿ. ಇಲ್ಲಿ ರಾಜ್ ಪಾತ್ರ 'ಗರುಡ ಗಮನ ವೃಷಭ ವಾಹನ'ವನ್ನೇ ನೆನಪಿಸುತ್ತಿರೋದು ವಿಶೇಷ.

'ಬಂದರ್' ಸಿನಿಮಾವನ್ನು ಅನುರಾಗ್ ಕಶ್ಯಪ್ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ 'ಗರುಡ ಗಮನ ವೃಷಭ ವಾಹನ' ಸಿನಿಮಾ ಬಂದಾಗ ರಾಜ್ ಬಿ ಶೆಟ್ಟಿಯನ್ನು ಹಾಡಿ ಹೊಗಳಿದ್ದರು. ರಾಜ್ ಬಿ ಶೆಟ್ಟಿಯ ನಿರ್ದೇಶನ ಹಾಗೂ ಅವರ ಪಾತ್ರ ಅನುರಾಗ್ ಕಶ್ಯಪ್ ಅವರನ್ನು ಇನ್ನಿಲ್ಲದಂತೆ ಕಾಡಿತ್ತು. ಹೀಗಾಗಿ ಅವರು ನಿರ್ದೇಶಿಸುತ್ತಿರುವ 'ಬಂದರ್' ಸಿನಿಮಾದಲ್ಲಿ ರಾಜ್ಗೆ ವಿಶೇಷ ಪಾತ್ರವನ್ನು ನೀಡಿದಂತೆ ಕಾಣುತ್ತಿದೆ. 'ಗರುಡ ಗಮನ ವೃಷಭ ವಾಹನ'ವನ್ನು ತಲೆಯಲ್ಲೇ ಇಟ್ಕೊಂಡು ಪಾತ್ರವನ್ನು ಸೃಷ್ಟಿಸಿದಂತೆ ಇದೆ.
ಸೆಲೆಬ್ರಿಟಿಯಾಗಿರುವ ಬಾಬಿ ಡಿಯೋಲ್ ಡೇಟಿಂಗ್ ಆಪ್ನಿಂದಾಗಿ ಜೈಲು ಸೇರುವ ಕತೆಯಿದು. ನೋಡುವುದಕ್ಕೆ ಡಾರ್ಕ್ ಹ್ಯೂಮರ್ ಶೈಲಿಯ ಸಿನಿಮಾ ಎನಿಸುತ್ತಿದ್ದು, ರಾಜ್ ಪಾತ್ರ ಕುತೂಹಲವನ್ನು ಕೆರಳಿಸಿದೆ. ಸುದೀಪ್ ಶರ್ಮಾ, ಅಭಿಷೇಕ್ ಬ್ಯಾನರ್ಜಿ ಬರೆದಿರೋ ಕಥೆಯನ್ನು ಅನುರಾಗ್ ಕಶ್ಯಪ್ ಆಕ್ಷನ್ ಕಟ್ ಹೇಳಿದ್ದಾರೆ. ಬಾಬಿ ಡಿಯೋಲ ಜೊತೆ ರಾಜ್ ಬಿ ಶೆಟ್ಟಿ, ಸಾನ್ಯಾ ಮಲ್ಹೋತ್ರಾ, ಮಲಯಾಳಂ ನಟ ಇಂದ್ರಜಿತ್ ಸುಕುಮಾರನ್ ಸೇರಿದಂತೆ ಹಲವು ಜನಪ್ರಿಯ ಕಲಾವಿದರು ನಟಿಸಿದ್ದಾರೆ. ಈ ಸಿನಿಮಾ ಜೂನ್ 5ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ.


Click it and Unblock the Notifications
