'ಕಾಂತಾರ ಚಾಪ್ಟರ್ 1' ರಿಂದ ರಾಜ್ ಬಿ ಶೆಟ್ಟಿ ಹೊರ ಬಂದಿದ್ದೇಕೆ? ಅಂತಹದ್ದೇನಾಯ್ತು?
'ಕಾಂತಾರ ಚಾಪ್ಟರ್ 1' ಈ ವರ್ಷ ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ. ಈ ಸಿನಿಮಾಗಾಗಿ ಸಿನಿಪ್ರಿಯರು ಎದುರು ನೋಡುತ್ತಿದ್ದಾರೆ. ರಿಷಬ್ ಶೆಟ್ಟಿ ಕಳೆದ ಎರಡು ವರ್ಷಗಳಿಂದ ಈ ಸಿನಿಮಾವನ್ನು ಮಾಡುತ್ತಿದ್ದು, ಇದೇ ಅಕ್ಟೋಬರ್ 2 ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾವನ್ನು ಬಿಗ್ ಬಜೆಟ್ನಲ್ಲಿ ನಿರ್ಮಾಣ ಮಾಡುತ್ತಿದೆ. ಜೊತೆಗೆ ಈ ಸಿನಿಮಾ ಏಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.
ಮೂರು ವರ್ಷಗಳ ಹಿಂದೆ 'ಕಾಂತಾರ' ಸಿನಿಮಾ ರಿಲೀಸ್ ಆಗಿ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸದ್ದು ಮಾಡಿತ್ತು. ಆ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ದೈವದ ಪ್ರಮುಖ ದೃಶ್ಯಗಳನ್ನು ನಿರ್ದೇಶಿಸಿದ್ದರು. ಆದರೆ, 'ಕಾಂತಾರ ಚಾಪ್ಟರ್ 1' ಒಂದರಿಂದ ರಾಜ್ ಬಿ ಶೆಟ್ಟಿ ಹೊರ ಬಂದಿದ್ದಾರೆ. ಆ ಸಿನಿಮಾದಲ್ಲಿ ಅವರು ಕೆಲಸ ಮಾಡದೇ ಇರುವ ನಿರ್ಧಾರ ತೆಗೆದುಕೊಂಡಿದ್ದರು.

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ಈ ಬಿಗ್ ಬಜೆಟ್ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಸಹಾಯ ಹಸ್ತ ಚಾಚುತ್ತಾರೆಂಬ ನಿರೀಕ್ಷೆಯಿತ್ತು. ಆದರೆ, ರಾಜ್ ಬಿ ಶೆಟ್ಟಿ 'ಕಾಂತಾರ ಚಾಪ್ಟರ್ 1'ರಲ್ಲಿ ಯಾವುದೇ ರೀತಿ ಭಾಗವಹಿಸಿಲ್ಲ. ಅಸಲಿಗೆ ಈ ನಿರ್ಧಾರ ತೆಗೆದುಕೊಂಡಿದ್ದೇಕೆ? ಎನ್ನುವುದನ್ನು ಫಸ್ಟ್ ಡೇ ಫಸ್ಟ್ ಶೋ ಯೂಟ್ಯೂಬ್ ಚಾನೆಲ್ನಲ್ಲಿ ರಿವೀಲ್ ಮಾಡಿದ್ದಾರೆ. ಅದೇನು ಅಂತ ನೋಡುವುದಾರೇ.
ರಿಷಬ್ ಶೆಟ್ಟಿ ಹುಟ್ಟುಹಬ್ಬದ ವೇಳೆ ಅವರಿಗೆ ರಾಜ್ ಬಿ ಶೆಟ್ಟಿ ಶುಭ ಕೋರಿದ್ದರು. ಆ ವೇಳೆ 'ಕಾಂತಾರ ಚಾಪ್ಟರ್ 1' ಸಿನಿಮಾದ ಬಗ್ಗೆ ಒಂದು ಮಾಹಿತಿಗಳನ್ನು ರಿಷಬ್ ಶೆಟ್ಟಿ ಹಂಚಿಕೊಂಡಿದ್ದರು. ಆ ವಿಷಯವನ್ನು ರಾಜ್ ಬಿ ಶೆಟ್ಟಿ ರಿವೀಲ್ ಮಾಡಿದ್ದಾರೆ. "ರಿಷಬ್ ಶೆಟ್ಟಿಯವರದ್ದೂ ನನ್ನದು ಒಂದೇ ದಿನ ಬರ್ತ್ಡೇ ಆಗಿದ್ದರಿಂದ ವಿಶ್ ಮಾಡಿದರು. ಸಿನಿಮಾ ಹೇಗೆ ಆಗುತ್ತಿದೆ ಅಂತ ಕೇಳಿದೆ. ಎಲ್ಲಾ ಚೆನ್ನಾಗಿ ಆಗುತ್ತಿದೆ. ಎಲ್ಲಾ ಕಂಟ್ರೋಲ್ನಲ್ಲಿ ಇದೆ. ಎಲ್ಲಾ ಚೆನ್ನಾಗಿ ಆಗುತ್ತಿದೆ ಅಂತ ಹೇಳಿದರು. ಅಷ್ಟು ಮಾತುಕತೆ ಆಗಿದೆ. ಶೂಟಿಂಗ್ ಮುಗಿದಿದೆ ಅಂತ ಹೇಳಿದರು. ಮ್ಯೂಸಿಕ್ ಕೆಲಸ ಕೂಡ ಮುಗಿದಿದೆ. ವಿಎಫ್ಎಕ್ಸ್ ಕೂಡ ಇಲ್ಲಿವರೆಗೂ ಏನು ಮಾಡಿದ್ದರೋ ಅದೆಲ್ಲವೂ ಆಗಿದೆ. ಆ ಕಾರಣದಿಂದ ಈ ಸಿನಿಮಾ ನಮ್ಮ ಚಿತ್ರರಂಗಕ್ಕೆ ಒಂದು ದೊಡ್ಡ ಚೇತರಿಕೆ ಆಗುತ್ತೆ." ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ.
ಇನ್ನು ರಿಷಬ್ ಶೆಟ್ಟಿ 'ಕಾಂತಾರ ಚಾಪ್ಟರ್ 1' ಸಿನಿಮಾವನ್ನು ಯಾವ ರೀತಿ ಚಿತ್ರೀಕರಣ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. ಅವರಿಗೆ ದೈವದ ಮೇಲೆ ತನಗಿಂತ ಹೆಚ್ಚು ನಂಬಿಕೆಯಿದೆ. ಆ ಶಕ್ತಿಯೇ ಅವರನ್ನು ಮುನ್ನೆಡೆಸುತ್ತಿದೆ ಎಂದು ಹೇಳಿದ್ದಾರೆ. "ಈ ಘಟನೆಗಳು ಯಾವ ರೀತಿ ಆಗಿದೆ? ಹೇಗೆ ಆಗಿದೆ? ಅನ್ನೋದು ಗೊತ್ತಿಲ್ಲ. ಹಾಗಾಗಿ ಮಾತಾಡುವುದು ತಪ್ಪಾಗಿ ಕಾಣಿಸುತ್ತೆ. ರಿಷಬ್ ಶೆಟ್ಟಿ ಕೂಡ ತುಂಬಾ ನಂಬಿಕೆ ಉಳ್ಳವರು. ಯಾವುದೇ ರೀತಿಯಲ್ಲಿ ತಪ್ಪು ಅಂತ ಕಾಣಿಸಿದರೆ, ಅದನ್ನು ಮಾಡದೇ ಇರೋರು. ಆ ನಂಬಿಕೆಯಲ್ಲಿ ಮಾಡುತ್ತಿದ್ದಾರೆ ಅಂದರೆ, ಆ ಶಕ್ತಿಯೇ ಅವರನ್ನು ನಡೆಸುತ್ತಿದೆ ಅಂತ ಅರ್ಥ. ಒಂದು ವೇಳೆ ಮಾಡಬಾರದು ಅಂದರೆ, ಆ ಶಕ್ತಿಗೆ ತಡೆಯುವುದಕ್ಕೆ ಹೆಚ್ಚು ಸಮಯ ಬೇಕಿಲ್ಲ. ನಾನು ಆ ವಿಷಯದಲ್ಲಿ ಚಿಕ್ಕವನು. ನಾನು ಆ ಶಕ್ತಿಯನ್ನು ನಂಬುವವನು ಆಗಿದ್ದ ಕಾರಣ ನಾನು ಅದರಿಂದ ಹೊರಗೆ ಬರಬೇಕಾಯ್ತು. ಅಂದರೆ, ನಾನು ಅದರಲ್ಲಿ ಕೆಲಸ ಮಾಡುವುದಿಲ್ಲ ಅಂತ. ನನಗೆ ನಂಬಿಕೆಯಿದೆ. ರಿಷಬ್ ಜಾಗರೂಕತೆಯಿಂದ ಮಾಡುತ್ತಾರೆ. ತಗ್ಗಿ ಬಗ್ಗಿ ನಡೆಯುವ ಮನುಷ್ಯನೇ ಅವರು." ಎಂದಿದ್ದಾರೆ.

'ಕಾಂತಾರ ಚಾಪ್ಟರ್ 1' ರಿಂದ ರಾಜ್ ಬಿ ಶೆಟ್ಟಿ ಯಾಕೆ ಹೊರ ಬಂದರು ಅನ್ನೋದನ್ನು ರಿವೀಲ್ ಮಾಡಿದ್ದಾರೆ. 'ಕಾಂತಾರ' ಸಿನಿಮಾ ಮಾಡಿದಾಗ, ಅಲ್ಲಿನ ಜನರು ಮಾಡಬೇಡಿ ಎಂದು ರಾಜ್ ಬಿ ಶೆಟ್ಟಿಗೆ ಹೇಳಿದ್ದರಂತೆ. ಹೀಗಾಗಿ ಆ ಸಿನಿಮಾದಿಂದ ಹೊರ ಬಂದಿದ್ದಾಗಿ ರಿವೀಲ್ ಮಾಡಿದ್ದಾರೆ. "ಮೊದಲನೇ ಸಿನಿಮಾ ಬಂದಾಗ ಇದನ್ನು ಮಾಡಬೇಡಿ ಅಂದರು. ನಾನು ಆಗಲೇ ಮನಸ್ಸಿನಲ್ಲಿ ಆಯ್ತು ಇನ್ಮುಂದೆ ಇದನ್ನು ಮಾಡುವುದಿಲ್ಲ ಅಂದುಕೊಂಡೆ. ಹೀಗೆ ಒಂದು ಸಲ ಅಂದ್ಕೊಂಡ ಮೇಲೆ ಮತ್ತೆ ಮಾಡುವುದಕ್ಕೆ ಮನಸ್ಸಾಗಲಿಲ್ಲ. ಆದ್ದರಿಂದ ಕಥೆ ಯಾವ ರೀತಿ ಆಗಿದೆ. ಸಿನಿಮಾದಲ್ಲಿ ದೈವ ಇದೆಯಾ? ಇಲ್ವಾ? ಅದೇನು ಗೊತ್ತಿಲ್ಲ. ಜೊತೆ ನಾನು ಪ್ರೊಡಕ್ಷನ್ನಲ್ಲಿ ಆಕ್ಟಿಂಗ್ನಲ್ಲಿ ತುಂಬಾನೇ ಬ್ಯುಸಿಯಾಗಿದ್ದ ಕಾರಣ ಆ ಕಡೆಗೆ ಹೋಗುವುದಕ್ಕೆ ಆಗಲಿಲ್ಲ." ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ.
ಅಲ್ಲಿನ ಜನರಿಗೆ ದೈವದ ಬಗ್ಗೆ ಸಿನಿಮಾ ಮಾಡಿದಾಗ ಧಕ್ಕೆಯಾಗಿತ್ತು. ಆವೇಳೆ ರಾಜ್ ಬಿ ಶೆಟ್ಟಿಗೆ ಕಮೆಂಟ್ ಹಾಗೂ ಟ್ಯಾಗ್ ಎಲ್ಲ ಮಾಡಿದ್ದರು. ಶೆಟ್ರೆ ಈ ರೀತಿ ಮಾಡಬಾರದು ಎಂದು ಹೇಳಿದ್ದರು. ಅಲ್ಲಿನ ಜನರು ಹೀಗೆ ಹೇಳಿದ ಮೇಲೆ ಸಿನಿಮಾ ಮಾಡದೇ ಇರುವುದಕ್ಕೆ ನಿರ್ಧರಿಸಿದೆ ಎಂದು ರಾಜ್ ಬಿ ಶೆಟ್ಟಿ ಹೇಳಿಕೊಂಡಿದ್ದಾರೆ. ರಿಷಬ್ ಶೆಟ್ಟಿ ನನಗಿಂತ ನಂಬಿಕಸ್ಥ. ಹೀಗಾಗಿ ಜನರ ನಂಬಿಕೆಗಳಿಗೆ ಏನೂ ನೋವು ಮಾಡಿರುವುದಿಲ್ಲ ಎಂಬ ನಂಬಿಕೆ." ಎಂದು ಹೇಳಿದ್ದಾರೆ.


Click it and Unblock the Notifications











