'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಪಾತ್ರದಲ್ಲಿ ರಾಜವರ್ಧನ್? ವೈರಲ್ ಆಗ್ತಿರೋ ಫೋಟೊಗಳ ಗುಟ್ಟೇನು?
ಕೆಲವು ದಿನಗಳ ಹಿಂದಷ್ಟೇ ಕೆಂಪೇಗೌಡ ಸಿನಿಮಾಗೆ ಸಂಬಂಧಿಸಿದ ವಿಚಾರ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಯಾವಾಗ ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲ್ 'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದರು. ಈ ಬೆನ್ನಲ್ಲೇ ಹಿರಿಯ ನಿರ್ದೇಶಕ ನಾಗಭರಣ ಆಕ್ಷೇಪ ವ್ಯಕ್ತಪಡಿಸಿದ್ದರು.
ಕಿರಣ್ ತೋಟಂಬೈಲ್ ಅವರ 'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಸಿನಿಮಾಗೆ ಮತ್ತೊಬ್ಬ ಹಿರಿಯ ನಿರ್ದೇಶಕ ದಿನೇಶ್ ಬಾಬು ಆಕ್ಷನ್ ಕಟ್ ಹೇಳುವುದಕ್ಕೆ ಹೊರಟಿದ್ದರು. ಅಷ್ಟರಲ್ಲೇ ಕೆಂಪೇಗೌಡ ಸಿನಿಮಾ ನಿರ್ಮಾಣ ಮಾಡದೇ ಇರುವಂತೆ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ನಿಂದ 'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಸಿನಿಮಾಗೆ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದರು.

ಕೆಂಪೇಗೌಡ ಕುರಿತ ಸಿನಿಮಾಗೆ ಸಂಬಂಧಪಟ್ಟಂತೆ ಯಾವುದೇ ರೀತಿಯ ಸಿನಿಮಾ ನಿರ್ಮಾಣ ಮಾಡುವುದು, ಪ್ರಸಾರ ಮಾಡುವುದು, ಧ್ವನಿ ಮುದ್ರಣ, ಪ್ರಸಾರ, ಜಾಹೀರಾತು ಸೇರಿದಂತೆ ಯಾವುದೇ ಕೆಲಸ ಮಾಡದೇ ಇರುವಂತೆ ನಿರ್ಮಾಪಕ ಕಿರಣ್ ತೋಟಂಬೈಲ್, ಚೇತನ್ ರಾಜ್, ಧರ್ಮೇಂದ್ರ ಕುಮಾರ್ ಅರೇಹಳ್ಳಿ ಮತ್ತು ದಿನೇಶ್ ಬಾಬು ಸೇರಿದಂತೆ ಅವರ ತಂಡಕ್ಕೆ ತಾತ್ಕಾಲಿಕ ತಡೆಯಾಜ್ಞೆಯನ್ನು ತರಲಾಗಿತ್ತು.
ಈ ಬೆನ್ನಲ್ಲೇ ಸ್ಯಾಂಡಲ್ವುಡ್ನಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ದಿನೇಶ್ ಬಾಬು ನಿರ್ದೇಶಿಸಲು ರೆಡಿಯಾಗಿರುವ ಕೆಂಪೇಗೌಡ ಸಿನಿಮಾಗೆ ನಟ ರಾಜವರ್ಧನ್ರನ್ನು ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಅವರಿಗೆ ಈ ಅವಕಾಶ ವದಗಿ ಬಂದಿದೆ ಅನ್ನೋ ಮಾತು ಕೇಳಿ ಬರುತ್ತಿದೆ.
'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಸಿನಿಮಾ ವಿವಾದಕ್ಕೆ ಸಿಕ್ಕಿಕೊಂಡ ಹಿನ್ನೆಲೆಯಲ್ಲೇ ರಾಜವರ್ಧನ್ ಹೆಸರು ಹರಿದಾಡುತ್ತಿದ್ದು, ಕುತೂಹಲ ಹೆಚ್ಚಿಸಿದೆ. ಅಷ್ಟೇ ಅಲ್ಲದೆ, ಕೆಂಪೇಗೌಡ ಮುಖಚರ್ಯೆಗೆ ಹೋಲುವಂತೆ ನಟ ರಾಜವರ್ಧನ್ ಎಐ ಪೋಸ್ಟರ್ಗಳನ್ನು ಹರಿಬಿಡಲಾಗಿದೆ. ಇದು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಕೆಂಪೇಗೌಡರ ಅವತಾರದಲ್ಲಿ ರಾಜವರ್ಧನ್ ಬೇರೆ ಬೇರೆ ಲುಕ್ಗಳನ್ನು ಎ ಐ ತಂತ್ರಜ್ಞಾನದಲ್ಲಿ ಸೃಷ್ಟಿಸಲಾಗಿದೆ. ಆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಕೆಂಪೇಗೌಡ ಪಾತ್ರಕ್ಕೆ ರಾಜವರ್ಧನ್ ಸೂಟ್ ಆಗುತ್ತಾರೆ ಅಂತ ನೆಟ್ಟಿಗರು ಪ್ರಶಂಸೆಯ ಮಾತುಗಳನ್ನು ಹೇಳಿಕೊಂಡಿದ್ದಾರೆ. ಆದರೆ, ಚಿತ್ರತಂಡ ಮಾತ್ರ ವಿವಾದಗಳ ಬಳಿಕ ಸಿನಿಮಾ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಸದ್ಯ ನಾಡಪ್ರಭು ಕೆಂಪೇಗೌಡರ ಕುರಿತಾದ ಸಿನಿಮಾ ವಿವಾದಕ್ಕೆ ಸಿಕ್ಕಿಕೊಂಡಿದೆ. ಹೀಗಾಗಿ ದಿನೇಶ್ ಬಾಬು ನಿರ್ದೇಶಿಸಲು ಹೊರಟ ಸಿನಿಮಾ ಸೆಟ್ಟೇರುತ್ತಾ? ಇಲ್ವಾ? ಅನ್ನೋ ಪ್ರಶ್ನೆನೂ ಎದ್ದಿದೆ. ಅದೇ ನಾಗಾಭರಣ ನಿರ್ದೇಶನ ಮಾಡುವುದಕ್ಕೆ ಹೊರಟಿರೋ ಸಿನಿಮಾದಲ್ಲಿ ಕೆಂಪೇಗೌಡ ಪಾತ್ರಕ್ಕೆ ಡಾಲಿ ಧನಂಜಯ್ ಆಯ್ಕೆ ಮಾಡಲಾಗಿದೆ ಅಂತ ಗುಲ್ಲೆದ್ದಿದೆ. ಸದ್ಯ ನಾಯ್ಯಾಲಯದಿಂದ 'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಸಿನಿಮಾ ಸೆಟ್ಟೇರುತ್ತಾ? ಇಲ್ವಾ? ಅನ್ನೋ ಕುತೂಹಲವಿದೆ.


Click it and Unblock the Notifications











