"ಒಬ್ಬ ದರ್ಶನ್ ಇದ್ದಿದ್ದರೆ ಎಷ್ಟು ಫ್ಯಾಮಿಲಿಗಳು ಊಟ ಮಾಡುತ್ತಿದ್ದವು"; ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು
ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್ ಸೆಟ್ಟರ್ ಸಿನಿಮಾಗಳನ್ನು ಕೊಟ್ಟಿರುವ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು. ಇವರು ನಿರ್ದೇಶಿಸಿದ ಸಿನಿಮಾಗಳು ಇಂದಿಗೂ ಚರ್ಚೆಯನ್ನು ಹುಟ್ಟಾಕುತ್ತವೆ. ಕಳೆದ ಮೂರು ನಾಲ್ಕು ವರ್ಷಗಳಿಂದ ಗ್ರಹಣ ಕವಿದಿರುವ ಚಿತ್ರರಂಗದ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಚಿತ್ರರಂಗವನ್ನು ಉಳಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ.
ದರ್ಶನ್ ಜೈಲು ಸೇರಿದ್ದರಿಂದ ಕನ್ನಡ ಚಿತ್ರರಂಗದಲ್ಲಿ ದುಡಿಯುವ ಅದೆಷ್ಟೋ ಮಂದಿ ಕೆಲಸ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಚಿತ್ರರಂಗದಲ್ಲಿ ದುಡಿಯುವ ಲೈಟ್ಮ್ಯಾನ್ಗಳು, ಕಾರ್ಪೆಂಟರ್ಗಳು, ಟೈಲರ್ಗಳು, ಪೇಂಟರ್ಗಳು, ಡ್ರೈವರ್ಗಳು, ಊಟ ಕೊಡುವವರು, ಪ್ರೊಡಕ್ಷನ್ ವಿಭಾಗದಲ್ಲಿ ಕೆಲಸ ಮಾಡುವವರ ಬದುಕಿನ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

"ಕನ್ನಡ ಚಿತ್ರರಂಗಕ್ಕೆ ಗ್ರಹಣ ಹಿಡಿದುಕೊಂಡಿದೆ. ಎಲ್ಲಾ ಗ್ರಹಣಗಳು ಮೂರು ನಾಲ್ಕು ಗಂಟೆಗೆ ಬಿಟ್ಟು ಹೋಗುತ್ತೆ. ಆದರೆ, ಈ ಗ್ರಹಣ ಮೂರು ನಾಲ್ಕು ವರ್ಷಗಳಿಂದ ಹಿಡಿದುಕೊಂಡೇ ಇದೆ. ಇದು ಯಾವತ್ತು ಬಿಡುತ್ತೋ ಗೊತ್ತಿಲ್ಲ. ಚಿತ್ರರಂಗಕ್ಕೆ ಒಂದಲ್ಲ ಒಂದು ಗಂಡಾಂತರಗಳು ಎದುರಾಗುತ್ತಿವೆ. ಯಾಕಂದ್ರೆ ದೊಡ್ಡ ಹೀರೋಗಳಲ್ಲಿ ಪುನೀತ್ ಒಬ್ಬರು ಕೈ ಬಿಟ್ಟು ಹೋದರು ದೂರ. ಇನ್ನೊಬ್ಬರದ್ದು ನಿಮಗೆಲ್ಲ ಗೊತ್ತೇ ಇದೆ." ಎಂದು ದರ್ಶನ್ ಜೈಲು ಸೇರಿದ ಬಗ್ಗೆ ಹೇಳಿದ್ದಾರೆ.
ಒಂದು ಸಿನಿಮಾ ಮಾಡುವಾಗ ಹೀರೋ, ಡೈರೆಕ್ಟರ್ ಅಷ್ಟೇ ಅಲ್ಲ. ಕಾರ್ಮಿಕರು ಕೂಡ ಕೆಲಸ ಮಾಡುತ್ತಿರುತ್ತಾರೆ. ಅವರ ಬದುಕನ್ನು ನೋಡಬೇಕಿದೆ ಎಂದು ಹೇಳಿದ್ದಾರೆ. "ಒಂದು ಚಿತ್ರರಂಗ ನಡೆಯ ಬೇಕಾದರೆ, ಒಬ್ಬ ಹೀರೋ, ಪ್ರಡ್ಯೂಸರ್ ಡೈರೆಕ್ಟರ್ ಅನ್ನು ನೋಡುತ್ತೇವೆ. ಇದರ ಹಿಂದೆ ಕೆಲಸ ಮಾಡುತ್ತಾರಲ್ಲ. ಲೈಟ್ಮ್ಯಾನ್ಗಳು, ಕಾರ್ಪೆಂಟರ್ಗಳು, ಟೈಲರ್ಗಳು, ಪೇಂಟರ್ಗಳು, ಡ್ರೈವರ್ಗಳು, ಊಟ ಕೊಡುವವರು, ಪ್ರೊಡಕ್ಷನ್ನವರು ಅವರೆಲ್ಲರನ್ನು ನೋಡಿದರೆ ಭಯ ಆಗುತ್ತೆ. ಅವರಿಗೆ ಪ್ರತಿ ದಿನ ಸಿನಿಮಾ ಸಿಕ್ಕರೇ ಜೀವನ. ಅವರಿಗೆ ಸರ್ಕಾರದಿಂದ ಆಗಲಿ ಯಾವುದೇ ಸಹಾಯನೂ ಇಲ್ಲ." ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ತಮ್ಮ ನೆಚ್ಚಿನ ನಟ ದರ್ಶನ್ ಬಗ್ಗೆನೂ ಮಾತಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಜೈಲು ಸೇರಿದ್ದಾರೆ. ಹೀಗಾಗಿ ಕೆಲವು ಸಿನಿಮಾಗಳು ನಿಂತಿರುವುದು ಗೊತ್ತೇ ಇದೆ. ಅದರಿಂದ ಆದ ಎಫೆಕ್ಟ್ಗಳು ಏನು ಅನ್ನೋದನ್ನು ರಾಜೇಂದ್ರ ಸಿಂಗ್ ಬಾಬು ಈ ವೇದಿಕೆ ಮೇಲೆ ಹೇಳಿದ್ದಾರೆ.
"ಇವತ್ತು ದರ್ಶನ್ ಅವರು ಇಲ್ಲ. ಒಬ್ಬ ದರ್ಶನ್ ಇದ್ದಿದ್ದರೆ ಎಷ್ಟು ಫ್ಯಾಮಿಲಿಗಳು ಊಟ ಮಾಡುತ್ತಿದ್ದವು. ನಾವು ನೋಡಿದ್ದೇವೆ. ಅವೆಲ್ಲ ಬಂಪರ್ ಪಿಕ್ಚರ್ಗಳು. ಒಂದು ದಿನ ಶೂಟಿಂಗ್ ಅಂದ್ರೆ, 250 ರಿಂದ 300 ಜನ ಶೂಟಿಂಗ್ನಲ್ಲಿ ಕೆಲಸ ಮಾಡುತ್ತಿದ್ದರು. ಇವತ್ತು ದರ್ಶನ್ ಸಿನಿಮಾ ಮಾಡದೇ ಇರೋದು ಇಂಡಸ್ಟ್ರೀಗೆ ಲಾಸ್. ಒಂದು ಕಡೆ ಫೈನಾನ್ಷಿಯಲ್ ಟರ್ನ್ ಓವರ್ ಕಷ್ಟ. ಇನ್ನೊಂದು ಕಡೆ ಥಿಯೇಟರ್ಗೆ ಪಿಕ್ಚರ್ ಇಲ್ಲ. ಮತ್ತೊಂದು ಕಡೆ ಅವರೊಂದಿಗೆ ಕೆಲಸ ಮಾಡುತ್ತಿದ್ದ ಸಾವಿರ ಮಂದಿಗೆ ಕೆಲಸವಿಲ್ಲ. "


Click it and Unblock the Notifications











