ಬೆಳಿಗ್ಗೆಯಿಂದಲೇ ರಜನಿಕಾಂತ್ ಮನೆ ಮುಂದೆ ಜನಸಾಗರ: ಹೊಸ ಸುದ್ದಿ ಕೊಡ್ತಾರಾ ತಲೈವಾ?
ಸೂಪರ್ ಸ್ಟಾರ್ ರಜನಿಕಾಂತ್ ಮನೆ ಮುಂದೆ ಗುರುವಾರ ಬೆಳಿಗ್ಗೆಯಿಂದಲೇ ಅವರ ಅಭಿಮಾನಿಗಳು ಸೇರಿದ್ದಾರೆ. ಜನರು ಕಿಕ್ಕಿರಿದು ಸೇರಿರುವುದಕ್ಕೆ ಕಾರಣ ರಜನಿಕಾಂತ್ ಹೊಸ ಘೋಷಣೆಯೊಂದನ್ನು ಮಾಡಲಿದ್ದಾರೆ ಎಂಬ ಸಲುವಾಗಿ. ಆ ಘೋಷಣೆ ಏನು ಎಂದು ಅಭಿಮಾನಿಗಳು ಕಾತರದಿಂದ ಕಾದಿದ್ದಾರೆ.
Recommended Video
ರಜನಿ ನಟನೆಯಿಂದ ರಾಜಕೀಯದ ಅಖಾಡಕ್ಕೆ ಇಳಿದು ವರ್ಷವೇ ಕಳೆದಿದೆ. ಆದರೆ ಯಾವ ಪಕ್ಷದೊಂದಿಗೂ ಅವರು ಗುರುತಿಸಿಕೊಂಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಹಲವು ಬಾರಿ ಅವರು ಮಾತನ್ನಾಡಿದ್ದು, ಅವರು ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ಹರಡಿಸಿತ್ತು. ಆದರೆ ರಜನಿ ಅದನ್ನು ನಿರಾಕರಿಸಿದ್ದರು. ಆಗಾಗ್ಗೆ ಬಿಜೆಪಿಯನ್ನೂ ಟೀಕಿಸಿದ್ದರು. ಈ ಕಾರಣದಿಂದ ಅವರ ರಾಜಕೀಯ ನಡೆ ಸಾಕಷ್ಟು ಕುತೂಹಲಗಳಿಗೆ ಕಾರಣವಾಗಿದೆ. ಗುರುವಾರ ಬೆಳಿಗ್ಗೆ 10.30ಕ್ಕೆ ಅವರು ಸುದ್ದಿಗೋಷ್ಠಿ ಆಯೋಜಿಸಿದ್ದು, ಅವರು ಹೊಸ ರಾಜಕೀಯ ಪಕ್ಷ ಘೋಷಣೆ ಮಾಡಲಿದ್ದಾರೆ ಎಂಬ ನಿರೀಕ್ಷೆ ಮೂಡಿಸಿದೆ.

ಆರ್ಎಂಎಂ ಕಾರ್ಯದರ್ಶಿಗಳ ಜತೆ ಸಭೆ
ರಜನಿ ಮಕ್ಕಳ್ ಮಂಡ್ರಮ್ನ (ಆರ್ಎಂಎಂ) ಜಿಲ್ಲಾ ಕಾರ್ಯದರ್ಶಿಗಳ ಜತೆಗೆ ಮಾರ್ಚ್ 5ರಂದು ರಜನಿಕಾಂತ್ ಚೆನ್ನೈನಲ್ಲಿ ಸಭೆ ನಡೆಸಿದ್ದರು. ಈಗ ಅವರು ಸುದ್ದಿಗೋಷ್ಠಿ ಆಯೋಜಿಸಿರುವುದು ತಮ್ಮ ರಾಜಕೀಯ ಪಕ್ಷ ಸ್ಥಾಪನೆಯನ್ನು ಅಧಿಕೃತವಾಗಿ ಘೋಷಣೆ ಮಾಡುವ ಅನುಮಾನಗಳನ್ನು ಹುಟ್ಟುಹಾಕಿದೆ.

ವಿಧಾನಸಭೆ ಚುನಾವಣೆಗೆ ಸಿದ್ಧತೆ
2021ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ಪಕ್ಷ ಸ್ಥಾಪನೆ ಮಾಡಿದರೆ ಸಂಘಟನೆಗೆ ಅನುಕೂಲವಾಗಲಿದೆ ಎನ್ನುವುದು ರಜನಿ ಲೆಕ್ಕಾಚಾರ. ಪಕ್ಷ ಘೋಷಣೆಗೂ ಮುನ್ನ ರಜನಿ ಗುರುವಾರ ಬೆಳಿಗ್ಗೆ ಆರ್ಎಂಎಂನ ಜಿಲ್ಲಾ ಕಾರ್ಯದರ್ಶಿಗಳೊಂದಿಗೆ ಮತ್ತೊಂದು ಸಭೆ ನಡೆಸಲಿದ್ದಾರೆ.

ಒಂದು ವಿಚಾರದ ಬಗ್ಗೆ ರಜನಿ ಅಸಮಾಧಾನ
ಕಳೆದ ವಾರ ಆರ್ಎಂಎಂ ಜಿಲ್ಲಾ ಕಾರ್ಯದರ್ಶಿಗಳ ಜತೆಗೆ ನಡೆಸಿದ ಸಭೆಯಲ್ಲಿ ರಜನಿಕಾಂತ್ ಅಸಮಾಧಾನ ಹಂಚಿಕೊಂಡಿದ್ದರು ಎನ್ನಲಾಗಿದೆ. 'ಪಕ್ಷದ ವ್ಯವಹಾರಗಳ ಸ್ಥಿತಿಗತಿ ಬಗ್ಗೆ ಪರಿಶೀಲಿಸಲು ಸುಮಾರು ಒಂದು ವರ್ಷದ ಬಳಿಕ ಜಿಲ್ಲಾ ಕಾರ್ಯದರ್ಶಿಗಳನ್ನು ಭೇಟಿ ಮಾಡಿದ್ದೆ. ಅವರಲ್ಲಿ ಕೆಲವು ಪ್ರಶ್ನೆಗಳಿದ್ದು, ನಾನು ಅವುಗಳಿಗೆ ಉತ್ತರ ನೀಡಿದ್ದೇನೆ. ನಾವು ಅನೇಕ ಸಂಗತಿಗಳನ್ನು ಚರ್ಚಿಸಿದ್ದೇವೆ. ಆದರೆ ಒಂದು ವಿಚಾರದ ಬಗ್ಗೆ ನಾನು ಅಸಮಾಧಾನಗೊಂಡಿದ್ದೇನೆ. ಅದರ ಬಗ್ಗೆ ಸೂಕ್ತ ಸಮಯದಲ್ಲಿ ತಿಳಿಸುತ್ತೇನೆ' ಎಂದು ರಜನಿ ಹೇಳಿದ್ದರು.
ಸಿಎಂ ಅಭ್ಯರ್ಥಿಯಾಗಲು ಒಪ್ಪದ ರಜನಿ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಾವು ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಬಯಸುವುದಿಲ್ಲ ಎಂದು ರಜನಿ ಹೇಳಿದ್ದರು. ಆದರೆ ಪಕ್ಷವನ್ನು ಮುನ್ನಡೆಸುವುದಾಗಿ ತಿಳಿಸಿದ್ದರು. ಹೀಗಿದ್ದರೂ ಜಿಲ್ಲಾ ಕಾರ್ಯದರ್ಶಿಗಳು ಅದಕ್ಕೆ ಒಪ್ಪಲಿಲ್ಲ. ರಜನಿ ಅವರೇ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಬೇಕು ಎಂದು ಬಯಸಿದ್ದರು ಎಂಬುದಾಗಿ ಮೂಲಗಳು ಹೇಳಿದ್ದಾರೆ.
12ರ ವಿಶೇಷವೇನು?
ಮಾರ್ಚ್ 12ರಂದು ರಜನಿ ತಮ್ಮ ಹೊಸ ಪಕ್ಷದ ಘೋಷಣೆ ಮಾಡಲಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಅಭಿಮಾನಿಗಳು ಈ ದಿನದ ವಿಶೇಷಗಳನ್ನು ಕೆದಕಿದ್ದಾರೆ. ರಜನಿ ಅವರ 'ಥಾಲಿಕಟ್ಟು ರಾಜಾ' ಚಿತ್ರ 1982ರ ಮಾರ್ಚ್ 12ರಂದು ಬಿಡುಗಡೆಯಾಗಿತ್ತು. ಅಲ್ಲದೆ, 'ಬಾಬಾ' ಚಿತ್ರದ ದೃಶ್ಯದಲ್ಲಿ ಮಾರ್ಚ್ 12ರ ದಿನಾಂಕದ ಕ್ಯಾಲೆಂಡರ್ ತೋರಿಸಿದ್ದನ್ನು ಅನೇಕರು ನೆನಪಿಸಿಕೊಂಡಿದ್ದಾರೆ. ರಜನಿಕಾಂತ್ ಅವರ ಜನ್ಮದಿನ ಡಿಸೆಂಬರ್ 12. ಹೀಗಾಗಿ 12 ಅವರ ಪಾಲಿಗೆ ವಿಶೇಷ ಸಂಖ್ಯೆ ಎನ್ನಲಾಗಿದೆ.


Click it and Unblock the Notifications











