ರಾಜನಹಳ್ಳಿ ಜಾತ್ರೆಗೆ ಸುದೀಪ್ ಗೈರು: "ಸುದೀಪ್ ಅಣ್ಣನದ್ದು ಎಳ್ಳು ಕಾಳಷ್ಟು ತಪ್ಪಿಲ್ಲ" ಎಂದು ರಾಜುಗೌಡ
ಈಗ ರಾಜ್ಯದ ಹಲವೆಡೆ ಸಾಲು ಸಾಲು ಜಾತ್ರೆಗಳು ನಡೆಯುತ್ತಿವೆ. ಕೆಲವು ಜಾತ್ರೆಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತೆ. ಇಂತಹ ಜಾತ್ರೆಗಳಲ್ಲಿ ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯ ವಾಲ್ಕೀಕಿ ಜಾತ್ರೆ ಕೂಡ ಒಂದು.
ಫೆಬ್ರವರಿ 9ರಿಂದ ಆರಂಭಗೊಂಡಿರೋ ಈ ಜಾತ್ರೆಗೆ ಅದ್ಧೂರಿ ಚಾಲನೆ ಸಿಕ್ಕಿತ್ತು. ರಾಜಕೀಯ ಮುಖಂಡರು ಹಾಗೂ ವಾಲ್ಮೀಕಿ ಸಮುದಾಯದ ಮುಖಂಡರು ಭಾಗವಹಿಸಿದ್ದರು. ಇದೇ ವೇಳೆ ಕಿಚ್ಚ ಸುದೀಪ್ ಅತಿಥಿಯಾಗಿ ಆಗಮಿಸುತ್ತಿದ್ದಾರೆ ಎಂದು ವಾಲ್ಮೀಕಿ ಪೀಠಾಧಿಪತಿ ಪ್ರಸನ್ನನಾಂದಪುರಿ ಸ್ವಾಮೀಜಿ ವೇದಿಕೆ ಮೇಲೆ ಅನೌನ್ಸ್ ಮಾಡಿದ್ದರು. ಹೀಗಾಗಿ ಸುದೀಪ್ ಬರುವಿಕೆಯನ್ನು ಅಭಿಮಾನಿಗಳು ಎದುರು ನೋಡುತ್ತಿದ್ದರು.
ವಾಲ್ಮೀಕಿ ಜಾತ್ರೆಗೆ ಸುದೀಪ್ ಬಾರದೆ ಇದ್ದಿದ್ದಕ್ಕೆ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ಈ ಘಟನೆಯ ಬಗ್ಗೆ ತಿಳಿದ ಬಳಿಕ ಸುದೀಪ್ ನನಗೆ ಆಹ್ವಾನ ನೀಡಿರಲಿಲ್ಲ ಎಂದು ಪ್ರತಿಕ್ರಿಯಿಸಿದ್ದರು. ಈಗ ಇದೇ ಘಟನೆ ಬಗ್ಗೆ ಸುರಪುರದ ಶಾಸಕ ರಾಜುಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಅದರ ಹೈಲೈಟ್ ಇಲ್ಲಿದೆ.

ಸುದೀಪಣ್ಣನಿಗೆ ಆಹ್ವಾನ ನೀಡಿರಲಿಲ್ಲ
"ರಾಜನಹಳ್ಳಿ ಜಾತ್ರೆಗೆ ನಾವೂ ಹೋಗಿದ್ದೆವು. ಮುಖ್ಯಮಂತ್ರಿ ಬಸರಾಜ್ ಬೊಮ್ಮಾಯಿ, ಹಲವಾರು ಗುರುಗಳು ಹಾಗೂ ಗಣ್ಯಾತೀಗಣ್ಯರು ಭಾಗವಹಿಸಿದ್ದರು. ವೇದಿಕೆ ಮೇಲೆ ಸುದೀಪ್ ಅಣ್ಣನವರು ಬರುತ್ತಾರೆಂದು ಅನೌನ್ಸ್ ಮಾಡುತ್ತಿದ್ದರು. ನಾನು ನೋಡಿದೆ ಬಹಳಷ್ಟು ಮಂದಿ ಸುದೀಪ್ ಅಣ್ಣನ ಅಭಿಮಾನಿಗಳು ಬಾವುಟ ಹಿಡ್ಕೊಂಡು ನಿಂತಿದ್ರು. ಆದರೆ, ಸುದೀಪ್ ಅಣ್ಣನ ಅಭಿಮಾನಿಗಳಲ್ಲಿ ಮನವಿ ಮಾಡಿಕೊಳ್ಳುವುದು ಇಷ್ಟೇ. ಅವರಿಗೆ ಸರಿಯಾದ ಮಾಹಿತಿ ಇರಲಿಲ್ಲ. ಹಾಗೇ ಅವರ ಗಮನಕ್ಕೂ ತಂದಿರಲಿಲ್ಲ. ಈ ಕಾರ್ಯಕ್ರಮಕ್ಕೆ ಬರಬೇಕೆಂದು ಸರಿಯಾಗಿ ಆಹ್ವಾನವನ್ನೂ ಕೊಟ್ಟಿರಲಿಲ್ಲ. ಹೀಗಾಗಿ ಸುದೀಪಣ್ಣ ಬರಲಾಗಿಲ್ಲ." ಎಂದು ಸುರಪುರದ ಶಾಸಕ ರಾಜುಗೌಡ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಮಾತು ಕೊಟ್ಟಾಗಲೆಲ್ಲ ಬಂದಿದ್ದಾರೆ
"ಪ್ರತಿಬಾರಿ ಸುದೀಪಣ್ಣ ಒಪ್ಪಿದ್ದಾರೆ. ಜಾತ್ರೆಗೆ ಬರುತ್ತೇನೆ ಎಂದು ಮಾತು ಕೊಟ್ಟಿದ್ದಾರೆ. ಯಾವತ್ತೆಲ್ಲಾ ಮಾತು ಕೊಟ್ಟಿದ್ದಾರೋ, ಅವತ್ತೆಲ್ಲಾ ಜಾತ್ರೆಗೆ ಬಂದಿದ್ದಾರೆ. ಜಾತ್ರೆಯನ್ನು ಯಶಸ್ವಿಗೊಳಿಸುವಂತಹ ಕೆಲಸ ಮಾಡಿದ್ದಾರೆ. ಈ ಬಾರಿ ಅವರಿಗೆ ಸರಿಯಾಗಿ ಅವರ ಗಮನಕ್ಕೆ ತಂದಿಲ್ಲ. ಹೈದರಾಬಾದ್ನಲ್ಲಿ ಶೂಟಿಂಗ್ ಇದ್ದಿದ್ದರಿಂದ ಅಲ್ಲಿಗೆ ಹೋಗಿದ್ದರು. ಹೀಗಾಗಿ ಬಂದಿಲ್ಲ. ಇದು ನಿಮ್ಮ ಮನಸ್ಸಿಗೆ ನೋವಾಗಿದೆ ಅಂತ ಗೊತ್ತು. ಈ ಬಗ್ಗೆ ಕ್ಷಮೆಯಾಚಿಸುತ್ತಾ, ಮುಂದಿನ ಜಾತ್ರೆಗೆ ಅವರನ್ನು ಕರೆಸಿ ಜಾತ್ರೆಯನ್ನು ಯಶಸ್ವಿ ಗೊಳಿಸುವ ಪ್ರಯತ್ನ ಮಾಡುತ್ತೇವೆ." ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.

'ರಾಜನಹಳ್ಳಿ ಜಾತ್ರೆಗೆ ಸುದೀಪ್ ತಪ್ಪಿಸಿಲ್ಲ'
"ಇದರಲ್ಲಿ ಸುದೀಪ್ ಅಣ್ಣನದ್ದು ಎಳ್ಳು ಕಾಳಷ್ಟು ತಪ್ಪಿಲ್ಲ. ಅವರ ಗಮನಕ್ಕೂ ಬಂದಿಲ್ಲ. ಬಂದರೆ ಯಾವತ್ತೂ ಸುದೀಪಣ್ಣ ನಮ್ಮ ಸಮಾಜದ ಕಾರ್ಯಕ್ರಮಗಳಿಗಾಗಲಿ, ರಾಜನಹಳ್ಳಿ ಜಾತ್ರೆಗಾಗಲಿ ತಪ್ಪಿಸಿಲ್ಲ. ಇಲ್ಲಿ ಎಲ್ಲೋ ಕಮ್ಯೂನಿಕೇಷನ್ ಗ್ಯಾಪ್ ಅಗಿದೆ. ವೇದಿಕೆ ಮೇಲೆ ಅನೌನ್ಸ್ ಮಾಡುವವರಿಗೂ ಗೊತ್ತಿಲ್ಲ ಅಂತ ಕಾಣುತ್ತೆ. ಅವರು ಸುದೀಪ್ ಅಣ್ಣ ಬರುತ್ತಾರೆ ಅಂತ ಅನೌನ್ಸ್ ಮಾಡಿ, ಅಭಿಮಾನಿಗಳ ಮನ ನೋಯಿಸಿದ್ದಾರೆ." ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ಕ್ರಿಕೆಟ್ ಪಂದ್ಯಗಳಲ್ಲಿ ಸುದೀಪ್ ಬ್ಯುಸಿ
'ವಿಕ್ರಾಂತ್ ರೋಣ' ಬಳಿಕ ಕಿಚ್ಚ ಸುದೀಪ್ ಹೊಸ ಸಿನಿಮಾ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಇದರೊಂದಿಗೆ ಸ್ಯಾಂಡಲ್ವುಡ್ನಲ್ಲಿ ಸಿಸಿಎಲ್ ಹಾಗೂ ಕೆಸಿಸಿ ಪಂದ್ಯಗಳು ನಡೆಯುತ್ತಿರೋದ್ರಿಂದ ತಂಡದೊಂದಿಗೆ ಅಭ್ಯಾಸ ಮಾಡುವುದರಲ್ಲಿ ನಿರತರಾಗಿದ್ದಾರೆ. ಜೊತೆ ಹೈದರಾಬಾದ್ನಲ್ಲಿ ಶೂಟಿಂಗ್ ಅಂತ ರಾಜುಗೌಡ ಹೇಳಿದ್ದಾರೆ. ಇದೇ ವೇಳೆ ಜಾತ್ರೆ ಬಂದಿದೆ. ಅಲ್ಲದೆ ಆಹ್ವಾನ ಬೇರೆ ಸಿಕ್ಕಿಲ್ಲ ಎಂದಿದ್ದಾರೆ. ಈ ಎಲ್ಲಾ ಕಾರಣಕ್ಕೆ ಸುದೀಪ್ ಜಾತ್ರೆಗೆ ಹೋಗಿಲ್ಲ ಅನ್ನೋದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ.


Click it and Unblock the Notifications











