ಪ್ರಥಮ್ ಮೇಲೆ ಹಲ್ಲೆಗೆ ಯತ್ನಿಸಿದವರ ಜೊತೆ ರಕ್ಷಕ್ ಬುಲೆಟ್; ಒಳ್ಳೆಯ ಹುಡುಗನಿಗೆ ರಕ್ಷಕ್ ತಿರುಗೇಟು
ಒಂದ್ಕಡೆ ದರ್ಶನ್ ಜಾಮೀನು ರದ್ದಾಗುತ್ತಾ? ಅನ್ನೋ ಆತಂಕದಲ್ಲಿ ಕುಟುಂಬ, ಸಿನಿಮಾ ಮಂದಿ ಇದ್ದಾರೆ. ಕಳೆದೊಂದು ವಾರದಿಂದ ದರ್ಶನ್ ಜಾಮೀನು ವಿಚಾರವೇ ಸುದ್ದಿಯಲ್ಲಿತ್ತು. ಈ ಗ್ಯಾಪ್ನಲ್ಲಿ ಒಳ್ಳೆಯ ಹುಡುಗ ಪ್ರಥಮ್ ಸಿಡಿಸಿದ ಬಾಂಬ್ ಚಾಲೆಂಜಿಂಗ್ ಸ್ಟಾರ್ಗೆ ಮತ್ತೊಂದು ಸವಾಲು ಎದುರಾಗುವ ಎಲ್ಲಾ ಸಾಧ್ಯತೆಗಳು ಇವೆ. ಕಳೆದೆರಡು ದಿನಗಳಿಂದ ಪ್ರಥಮ್ ಹಾಗೂ ಲಾಯರ್ ಜಗದೀಶ್ ನಡುವಿನ ಸಂಭಾಷಣೆಯ ಆಡಿಯೋ ವೈರಲ್ ಆಗಿತ್ತು. ಈ ಆಡಿಯೋದಲ್ಲಿ ಪ್ರಥಮ್ ತಮ್ಮ ಮೇಲೆ ಆದ ಹಲ್ಲೆಯ ಬಗ್ಗೆ ಮಾತಾಡಿದ್ದರು.
ಈ ಆಡಿಯೋದಲ್ಲಿ ದರ್ಶನ್ ಕರೆಯವರ ತನ್ನ ಮೇಲೆ ಹಲ್ಲೆ ಮಾಡುವುದಕ್ಕೆ ಮುಂದಾಗಿದ್ದರೆಂದು ಪ್ರಥಮ್ ಹೇಳಿಕೊಂಡಿದ್ದಾರೆ. ದೊಡ್ಡಬಳ್ಳಾಪುರ ಮಾರಿಯಮ್ಮನ ದೇವಸ್ಥಾನದ ಪೂಜೆಗೆಂದು ಪ್ರಥಮ್ ಅವರನ್ನು ಆಹ್ವಾನಿಸಲಾಗಿತ್ತು. ಈ ಸಂಬಂಧ ಅಲ್ಲಿಗೆ ಹೋಗಿದ್ದಾಗ, ದರ್ಶನ್ ಕಡೆಯ ಹುಡುಗರು ತನ್ನ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದರು ಎಂದು ಲಾಯರ್ ಜಗದೀಶ್ ಜೊತೆ ಪ್ರಥಮ್ ಹೇಳಿಕೊಂಡಿದ್ದಾರೆ.

ಈ ಆಡಿಯೋವನ್ನು ಲಾಯರ್ ಜಗದೀಶ್ ವೈರಲ್ ಮಾಡುತ್ತಿದ್ದಂತೆ ಮತ್ತೊಂದು ಹೆಸರು ವಿವಾದಕ್ಕೆ ಸಿಕ್ಕಿಕೊಂಡಿತ್ತು. ದರ್ಶನ್ ಕಡೆಯ ಹುಡುಗರು ಎಂದು ಹೇಳುವುದರ ಜೊತೆಗೆ ರಕ್ಷಕ್ ಬುಲೆಟ್ ಕೂಡ ಅವರೊಂದಿಗೆ ಇದ್ದರು ಎಂದು ಪ್ರಥಮ್ ಹೇಳಿದ್ದರು. ಹೀಗಾಗಿ ಈ ಪ್ರಕರಣದಲ್ಲಿ ರಕ್ಷಕ್ ಬುಲೆಟ್ ಹೆಸರು ಕೂಡ ಸೇರಿಕೊಂಡಿದೆ. ಇದೇ ವಿಚಾರವಾಗಿ ರಕ್ಷಕ್ ಬುಲೆಟ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಸದಾ ವಿವಾದಗಳ ಸುಳಿಗೆ ಸಿಲುಕುವ ಎರಡು ಹೆಸರುಗಳಿವು. ಪ್ರಥಮ್ ಹಾಗೂ ರಕ್ಷಕ್ ಬುಲೆಟ್ ಇಬ್ಬರೂ ಒಂದಲ್ಲ ಒಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಲೇ ಇರುತ್ತಾರೆ. ಈಗ ಪ್ರಥಮ್ ಮೇಲೆ ಹಲ್ಲೆಗೆ ಯತ್ನ ಪ್ರಕರಣದಲ್ಲಿ ರಕ್ಷಕ್ ಬುಲೆಟ್ ಹೆಸರು ಕೂಡ ತಳುಕು ಹಾಕಿಕೊಂಡಿದೆ. ಈ ವಿವಾದ ಜೋರಾಗುತ್ತಿದ್ದಂತೆ ರಕ್ಷಕ್ ಬುಲೆಟ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ. ತನಗೂ ಈ ಪ್ರಕರಣಕ್ಕೂ ಸಂಬಂಧವೇ ಇಲ್ಲ ಎಂದಿದ್ದಾರೆ.
"ಸೆಲೆಬ್ರೆಟಿ ಆದ್ಮೇಲೆ ಪೂಜೆಗೆ ಕರೀತಾರೆ, ಓಪನಿಂಗ್ಗೆ ಕರೀತಾರೆ ಹೋಗಲೇಬೇಕು ಸಹಜ. ನಾನು ಹೋಗಿದ್ದೀನಿ. ಇಲ್ಲಾ ಅಂತ ಹೇಳುತ್ತಿಲ್ಲ. ಆ ಜಾಗದಲ್ಲಿ ನಾನು ಇದ್ದೆ ಸತ್ಯ. ಒಂದಿಷ್ಟು ಚಾನೆಲ್ಗಳಲ್ಲಿ ನೋಡಿದೆ, ನಾನು ಬೆದರಿಕೆ ಹಾಕಿಸಿದ್ದೀನಿ, ನಾನು ಸುಪಾರಿ ಕೊಟ್ಟಿದ್ದೀನಿ ಅಂತ ಹೇಳಿದ್ದಾರೆ. ನಾನು ರೌಡಿಸಂ ಮಾಡುವುದಕ್ಕೆ ಬಂದಿಲ್ಲ. ಬೇರೆ ವ್ಯವಹಾರ ಮಾಡುವುದಕ್ಕೆ ಬಂದಿಲ್ಲ. ಬೆಳ್ಳಗ್ಗೆ ಎದ್ದ ಕೂಡಲೇ ನಿಯತ್ತಾಗಿ ಮನೆಯಲ್ಲಿ ಪೂಜೆ ಮಾಡುತ್ತೇನೆ. ಆಚೆ ಹೋಗಿ ನಿಯತ್ತಾಗಿ ಕೆಲಸ ಮಾಡುತ್ತೇನೆ. ಅಷ್ಟೇ ನನ್ನ ಡ್ಯೂಟಿ. ಇಲ್ಲಿ ನಾನು ಬೇರೆಯವರಿಗೆ ಧಮ್ಕಿ ಹಾಕುವುದಾಗಲಿ, ರೌಡಿಸಂ ಮಾಡುವುದಾಗಲಿ ಬಂದಿಲ್ಲ. ನನಗೂ ಇದಕ್ಕೂ ಸಂಬಂಧವೇ ಇಲ್ಲ." ಎಂದು ರಕ್ಷಕ್ ಪ್ರತಿಕ್ರಿಯೆ ನೀಡಿದ್ದಾರೆ.

ಮಹೇಶಣ್ಣ ಎಂಬುವವರು ರಕ್ಷಕ್ ಬುಲೆಟ್ಗೆ ದೇವಸ್ಥಾನಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಅದೇ ರೀತಿ ಪ್ರಥಮ್ ಅವರಿಗೂ ಆಹ್ವಾನ ನೀಡಿ ಕರೆಸಿಕೊಂಡಿದ್ದರು. ಆ ದೇವಸ್ಥಾನಕ್ಕೆ ಹೋಗಿ ಅಲ್ಲಿ ಊಟ ಮಾಡಿಕೊಂಡು ಬಂದೆ. ಆ ದೇವಸ್ಥಾನದಲ್ಲಿ ಇಷ್ಟೇ ನಡೆದಿರೋದು. ತನಗೂ ಆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಅಲ್ಲಿ ರಕ್ಷಕ್ ಇದ್ದ ಅನ್ನೋದೊಂದು ಮ್ಯಾಟರ್ ಇಷ್ಟಕ್ಕೆಲ್ಲ ಕಾರಣವಾಗಿಬಿಟ್ಟಿದೆ ಎಂದು ರಕ್ಷಕ್ ಹೇಳಿದ್ದಾರೆ.
"ನಾನು ಇವತ್ತಿಗೂ ಪ್ರಥಮ್ ಅಣ್ಣ ಅಂತಾನೇ ಕರೆಯೋದು. ನಾನು ಅವರು ಫ್ಯಾಮಿಲಿ ಫ್ರೆಂಡ್ಸ್. ನಾನು ಇಲ್ಲಿ ಯಾರಿಗೂ ತೊಂದರೆ ಕೊಡಬೇಕು ಅಂತ ಬಂದಿಲ್ಲ. ನಾನು ಕಲಾವಿದರ ಮನೆಯಿಂದ ಬಂದಿದ್ದೀನಿ. ಇಲ್ಲಿ ಕೆಲಸ ಮಾಡಬೇಕು ಅಂತ ಬಂದಿದ್ದೀನಿ. ಕೆಲಸ ಮಾತ್ರ ಮಾಡುತ್ತೇನೆ. ರಕ್ಷಕ್ಗೆ ವಿವಾದ ಅನ್ನೋದು ಇದೇ ಮೊದಲೇನಲ್ಲ. ರಕ್ಷಕ್ ಯಾವಾಗ ಬೆಳಕಿಗೆ ಬಂದ್ನೋ, ನಾನು ಯಾವಾಗ ಇಂಡಸ್ಟ್ರಿಗೆ ಬರುತ್ತಿದ್ದೇನೆ ಅಂತ ಅನಿಸಿತೋ.. ಅವತ್ತಿಂದ ಒಂದೊಂದೇ ಕ್ರಿಯೇಟ್ ಆಗ್ತಾ ಬಂತು. ಅದಕ್ಕೆ ನಾನು ಎಲ್ಲೇ ಕರೆದರೂ ಹೋಗಿ ಇರೋದನ್ನು ಹೇಳುತ್ತೇನೆ ಅಷ್ಟೇ." ಎಂದು ರಕ್ಷಕ್ ಪ್ರತಿಕ್ರಿಯೆ ನೀಡಿದ್ದಾರೆ.


Click it and Unblock the Notifications











