"ಗೌಡ್ರು ಹುಡುಗ ಸಿಗ್ತಾರಾ ನೋಡಿ.. ನನಗೂ ನೋಡಿ ನೋಡಿ ಸಾಕಾಯ್ತು": ಸ್ವಯಂವರಕ್ಕೂ ರೆಡಿ ರಮ್ಯಾ!
ರಾಜ್ಯ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಅದಕ್ಕಾಗಿ ರಾಜಕೀಯ ಪಕ್ಷಗಳು ಬಿರುಸಿನಿಂದ ಪ್ರಚಾರ ಮಾಡುತ್ತಿವೆ. ಕಾಂಗ್ರೆಸ್ ಪರವಾಗಿ ರಮ್ಯಾ ಕೂಡ ಪ್ರಚಾರ ಕಣಕ್ಕೆ ಇಳಿಸಿದ್ದಾರೆ. ಇಂದು (ಮೇ 2) ಮೋಹಕತಾರೆ ಮಂಡ್ಯ ವಿಧಾನ ಸಭಾ ಕ್ಷೇತ್ರದ ಪ್ರಚಾರಕ್ಕೆ ಹೋಗಿದ್ದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತಾಡುವಾಗ ಹಲವು ಪ್ರಶ್ನೆಗಳಿಗೆ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ವಿಚಾರದಿಂದ ಹಿಡಿದು, ಮದುವೆವರೆಗೂ ಪ್ರಶ್ನೆ ಮಾಡಿದ್ದರು. ಅದಕ್ಕೆ ರಮ್ಯಾ ನಗು ನಗುತ್ತಲೇ ಪ್ರತಿಕ್ರಿಯೆ ನೀಡಿದ್ದಾರೆ.

ಚುನಾವಣಾ ಪ್ರಚಾರದ ವೇಳೆನೇ ಮಂಡ್ಯದಲ್ಲಿ ಪತ್ರಕರ್ತರು ರಮ್ಯಾ ಮದುವೆ ಯಾವಾಗ? ಅಂತ ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೆ ರಮ್ಯಾ ಕೊಟ್ಟ ಉತ್ತರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ರಮ್ಯಾ ಕೊಟ್ಟ ಉತ್ತರವೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ರಮ್ಯಾ ಮದುವೆ ಯಾವಾಗ?
ಮೋಹಕತಾರೆ ರಮ್ಯಾ ಮದುವೆ ಯಾವಾಗ ಆಗುತ್ತಾರೆ ಅನ್ನೋದು ಕುತೂಹಲ ಅವರ ಅಭಿಮಾನಿಗಳಲ್ಲಿದೆ. ಅಲ್ಲದೆ ಇತ್ತೀಚೆಗೆ ರಾಜಕೀಯಕ್ಕೆ ಕೊಂಚ ಬ್ರೇಕ್ ಕೊಟ್ಟು ಮತ್ತೆ ಸಿನಿಮಾ ಕಡೆ ವಾಲಿದ್ದಾರೆ. ಹೀಗಾಗಿ ಮದುವೆ ಆಗುತ್ತಾರಾ? ಅನ್ನೋ ಬಗ್ಗೆ ಅಭಿಮಾನಿಗಳಲ್ಲೇ ಅನುಮಾನ ಮೂಡಿದೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ರಮ್ಯಾಗೆ ಕಾಮನ್ ಆಗಿ ಮದುವೆ ಯಾವಾಗ? ಅಂತ ಪ್ರಶ್ನೆ ಮಾಡುತ್ತಲೇ ಇರುತ್ತಾರೆ. ಅದನ್ನೇ ಪತ್ರಕರ್ತರು ರಮ್ಯಾಗೆ ಕೇಳಿದ್ದರು.
ಮೋಹಕತಾರೆ ಎಲ್ಲಿಗೆ ಹೋದರೂ, ಮದುವೆ ಬಗ್ಗೆ ಪ್ರಸ್ತಾಪ ಆಗುತ್ತಲೇ ಇರುತ್ತೆ. ಪ್ರತಿ ಬಾರಿನೂ ಏನಾದರೂ ಒಂದು ಹೇಳಿ ರಮ್ಯಾ ತಪ್ಪಿಸಿಕೊಳ್ಳುತ್ತಾರೆ. ಈ ಬಾರಿ ಕೂಡ ಮಾಧ್ಯಮಗಳಿಗೆ ತಮಾಷೆಯಾಗಿಯೇ ಪ್ರತಿಕ್ರಿಯೆ ನೀಡಿ ನುಣುಚಿಕೊಂಡಿದ್ದಾರೆ.
ಗೌಡ್ರು ಹುಡುಗ ಸಿಗ್ತಾರಾ ನೋಡಿ
ಮದುವೆ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ಹುಡುಗನೇ ಸಿಗುತ್ತಿಲ್ಲ ಅಂತ ಹೇಳಿದ್ದಾರೆ. ಅದರಲ್ಲೂ ಮದುವೆ ಆಗೋಕೆ ಗೌಡ್ರು ಹುಡುಗನೇ ಬೇಕಂತೆ. ಆದರೆ, ಅವರಿಗೆ ಯಾರೂ ಕಾಣಿಸುತ್ತಿಲ್ಲ ಅಂತ ಹೇಳಿದ್ದಾರೆ. ಹೀಗಾಗಿ ಹುಡುಗನನ್ನು ಹುಡುಕಿ ಕೊಡಿ ಮದುವೆ ಆಗುತ್ತೇನೆ ಅಂತ ನನಗುತ್ತಲೇ ಪ್ರತಿಕ್ರಿಯಿಸಿದ್ದಾರೆ.
"ಮೊದಲು ನನಗೆ ಹುಡುಗ ಹುಡುಕಿ. ಗೌಡ್ರು ಹುಡುಗ ಸಿಗ್ತಾರೆ ಅಂದ್ರೆ ನೋಡಿ. ಹುಡುಕಿ. ಎಲ್ಲಿದ್ದಾರೆ? ಒಬ್ಬರೂ ಕಾಣಿಸುತ್ತಿಲ್ಲ. ಹುಡುಕಿ ಮತ್ತೆ ನೀವೆ ಹುಡುಕಿ. ನನಗೂ ನೋಡಿ ನೋಡಿ ಸಾಕಾಗಿ ಹೋಯ್ತು. ನೀವೇ ನೋಡಿ. ಆಯ್ತು ಸ್ವಯಂವರನೇ ಮಾಡಿ." ಎಂದು ರಮ್ಯಾ ಹಾಸ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬ್ಯೂಸಿ
ರಮ್ಯಾ ರಾಜಕೀಯಕ್ಕಾಗಿ ಸಿನಿಮಾದಿಂದ ದೂರು ಉಳಿದಿದ್ದರು. ಆದರೆ, ಇತ್ತೀಚೆಗೆ ಸಿನಿಮಾಗಾಗಿ ರಾಜಕೀಯದಿಂದ ದೂರ ಉಳಿದಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ರಮ್ಯಾ ಪ್ರಚಾರಕ್ಕೆ ಇಳಿದಿದ್ದಾರೆ. ಸದ್ಯ ಸಿನಿಮಾ ನಿರ್ಮಾಣ ಹಾಗೂ ನಟನೆಯತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ.
ತಮ್ಮದೇ ಬ್ಯಾನರ್ ಮೂಲಕ ರಮ್ಯಾ ನಿರ್ಮಾಣಕ್ಕೆ ಇಳಿದಿದ್ದಾರೆ. ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿ, ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸದ್ಯ ಈ ಸಿನಿಮಾದ ಟೈಟಲ್ ವಿವಾದಕ್ಕೆ ಸಿಲುಕಿದೆ. ಚುನಾವಣೆ ಮುಗಿದ ಬಳಿಕ ಈ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ.
ಇನ್ನು ಡಾಲಿ ಧನಂಜಯ್ ನಟಿಸುತ್ತಿರುವ 'ಉತ್ತರಕಾಂಡ' ಸಿನಿಮಾ ಮೂಲಕ ಮತ್ತೆ ನಟನೆಗೆ ಕಮ್ಬ್ಯಾಕ್ ಮಾಡುತ್ತಿದ್ದಾರೆ. ಕೆಆರ್ಜಿ ಸ್ಟುಡಿಯೋ ಈ ಸಿನಿಮಾವನ್ನು ನಿರ್ಮಾಣ ಮಾಡಲು ಮುಂದಾಗಿದೆ. ಸದ್ಯ ಸಿನಿಮಾಗೆ ಕೊಂಚ ಬ್ರೇಕ್ ಕೊಟ್ಟು, ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಮುಂದಾಗಿದ್ದಾರೆ.


Click it and Unblock the Notifications











