ರಶ್ಮಿಕಾ ಹೇಳಿಕೆಗೆ ರೊಚ್ಚಿಗೆದ್ದ ಚಿತ್ರರಂಗ 'ಪುಷ್ಪ 2', 'ವಾರಿಸು' ಬ್ಯಾನ್ ಮಾಡುತ್ತಾ? ಚೇಂಬರ್ ಅಧ್ಯಕ್ಷರ ಹೇಳಿದ್ದೇನು?
ರಶ್ಮಿಕಾ ಮಂದಣ್ಣ ಏನಾದರೂ ಒಂದು ವಿಷಯಕ್ಕೆ ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ಕನ್ನಡ ಬಿಟ್ಟು ಬೇರೆ ಭಾಷೆಯ ಸಿನಿಮಾಗಳಲ್ಲಿಯೇ ಬ್ಯುಸಿಯಿರುವ ರಶ್ಮಿಕಾ ಮತ್ತೆ ಸಂಕಷ್ಟ ಸಿಲುಕಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಶ್ಮಿಕಾ ನೀಡಿದ ಹೇಳಿಕೆ ವಿರುದ್ಧ ಕನ್ನಡ ಚಿತ್ರರಂಗ ಕೆಂಡಾಮಂಡಲವಾಗಿದೆ ಎನ್ನಲಾಗಿದೆ.
ರಶ್ಮಿಕಾ ಮಂದಣ್ಣ ಸಂದರ್ಶನವೊಂದರಲ್ಲಿ ತಮ್ಮ ಮೊದಲ ಸಿನಿಮಾದ ನಿರ್ಮಾಣ ಸಂಸ್ಥೆಯ ಹೆಸರನ್ನು ಹೇಳಲು ಹಿಂದೇಟು ಹಾಕಿದ್ದರು. ಕೈ ಸನ್ನೆ ಮಾಡಿ ನಿರ್ಮಾಣ ಸಂಸ್ಥೆ ಬಗ್ಗೆ ರಶ್ಮಿಕಾ ಮಾತಾಡಿದ್ದರು. ಅದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು.
ಬದುಕು ಕೊಟ್ಟ ಮೊದಲ ನಿರ್ಮಾಣ ಸಂಸ್ಥೆಯ ಹೆಸರನ್ನು ಹೇಳಲು ಹಿಂದೇಟು ಹಾಕಿದ್ದರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ ಕರ್ನಾಟಕದಲ್ಲಿ ರಶ್ಮಿಕಾ ಅಭಿನಯದ ಸಿನಿಮಾಗಳನ್ನು ಬಿಡುಗಡೆ ಮಾಡದೆ ಇರಲು ನಿರ್ಧರಿಸಿದ್ದಾರೆ ಅನ್ನೋ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಈ ಬಗ್ಗೆ ಕರ್ನಾಟಕ ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ ಮಾ ಹರೀಶ್ ಫಿಲ್ಮಿಬೀಟ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ರಶ್ಮಿಕಾ ವಿರುದ್ಧ ಈ ಅಸಮಧಾನ ಯಾಕೆ?
ರಶ್ಮಿಕಾ ಒಂದಲ್ಲ ಒಂದು ಕಾರಣಕ್ಕೆ ಕನ್ನಡ ಚಿತ್ರರಂಗ ಹಾಗೂ ಕನ್ನಡಿಗರ ಅಸಮಧಾನಕ್ಕೆ ಕಾರಣವಾಗುತ್ತಲೇ ಇದ್ದಾರೆ. ಇತ್ತೀಚೆಗೆ ಸಂದರ್ಶನದ ವೇಳೆನೂ ತನ್ನ ಹೇಳಿಕೆಯಿಂದ ಸಂಕಷ್ಟಕ್ಕೆ ಸಿಕ್ಕಿಕೊಂಡಿದ್ದಾರೆ. ತನ್ನ ಮೊದಲ ಸಿನಿಮಾ 'ಕಿರಿಕ್ ಪಾರ್ಟಿ' ಸಿನಿಮಾದ ನಿರ್ಮಾಣ ಸಂಸ್ಥೆಯ ಹೆಸರನ್ನು ಹೇಳುವುದಕ್ಕೆ ಹಿಂದೇಟು ಹಾಕಿದ್ದರು. ಅಲ್ಲದೆ ಕೈ ಸನ್ನೆಯ ಮೂಲಕ ಕೋಟ್ ಮಾಡಿ ತೋರಿಸಿದ್ದು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿತ್ತು. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಮುಂಬರುವ ರಶ್ಮಿಕಾ ಸಿನಿಮಾ ಕರ್ನಾಟಕದಲ್ಲಿ ಬ್ಯಾನ್ ಆಗುತ್ತೆ ಅನ್ನೋ ಸುದ್ದಿ ಹಬ್ಬಿದೆ.

ಸೋಶಿಯಲ್ ಮೀಡಿಯಾದಲ್ಲಿ ಹೇಳ್ತಿರೋದೇನು?
ಅಷ್ಟಕ್ಕೂ ಸೋಶಿಯಲ್ ಮೀಡಿಯಾದಲ್ಲಿ ಕೆಲವು ಸುದ್ದಿಗಳು ಹರಿದಾಡುತ್ತಿವೆ. ಕನ್ನಡ ಚಿತ್ರಮಂದಿರದ ಮಾಲೀಕರು ಹಾಗೂ ಕನ್ನಡ ಚಿತ್ರರಂಗ ರಶ್ಮಿಕಾ ಮಂದಣ್ಣ ವಿರುದ್ಧ ಕ್ರಮ ಕೈಗೊಳ್ಳಲಿದೆ. ಅವರು ರಶ್ಮಿಕಾ ಮಂದಣ್ಣರನ್ನು ಪರ್ಮನೆಂಟ್ ಆಗಿ ಬ್ಯಾನ್ ಮಾಡಲು ಮುಂದಾಗಿದ್ದಾರೆ. 'ಪುಷ್ಪ 2' ಹಾಗೂ 'ವಾರಿಸು' ಸಿನಿಮಾ ತಂಡಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ.

ಫಿಲ್ಮ್ ಚೇಂಬರ್ ಪ್ರತಿಕ್ರಿಯೆ ಏನು?
ರಶ್ಮಿಕಾ ಬ್ಯಾನ್ ಮಾಡುವ ವಿಚಾರವಾಗಿ ಕರ್ನಾಟಕ ಫಿಲ್ಮ್ ಚೇಂಬರ್ ಅಧ್ಯಕ್ಷರು ಭಾ ಮಾ ಹರೀಶ್ ಫಿಲ್ಮಿ ಬೀಟ್ಗೆ ಪ್ರತಿಕ್ರಿಯೆ ನೀಡಿದ್ದಾರೆ. " ಇದೂವರೆಗೂ ರಶ್ಮಿಕಾ ಮಂದಣ್ಣ ವಿಚಾರವಾಗಿ ಯಾರಿಂದಲೂ ದೂರು ಬಂದಿಲ್ಲ. ಹಾಗೆಲ್ಲಾ ಬ್ಯಾನ್ ಮಾಡುವುದಕ್ಕೆ ಕಾನೂನಿನ ಅಡಿಯಲ್ಲಿ ಅವಕಾಶವಿಲ್ಲ. ಯಾರು ಬೇಕಾದರೂ ಅಸಹಕಾರ ನೀಡಬಹುದಷ್ಟೇ. ಹಾಗೇನಾದರೂ ಆದರಲ್ಲಿ ಎಲ್ಲರನ್ನೂ ಕೂರಿಸಿ ಸಮಸ್ಯೆಯನ್ನು ಬಗೆಹರಿಸಲಾಗುವುದು. ಸದ್ಯಕ್ಕೆ ಯಾರಿಂದಲೂ ರಶ್ಮಿಕಾ ಮಂದಣ್ಣ ಬಗ್ಗೆ ದೂರು ಬಂದಿಲ್ಲ." ಎಂದು ಭಾ. ಮಾ. ಹರೀಶ್ ಮಾಹಿತಿ ನೀಡಿದ್ದಾರೆ.

ರಿಷಬ್ ಶೆಟ್ಟಿ ತಿರುಗೇಟು
ರಶ್ಮಿಕಾ ಮಂದಣ್ಣ ಸಂದರ್ಶನದಲ್ಲಿ ನೀಡಿದ ಹೇಳಿಕೆಗೆ ರಿಷಬ್ ಶೆಟ್ಟಿ ಕೂಡ ಹಾಗೇ ತಿರುಗೇಟು ನೀಡಿದ್ದರು. 'ಕಾಂತಾರ' ಸಿನಿಮಾ ಪ್ರಚಾರದ ವೇಳೆ ರಶ್ಮಿಕಾ ಮಂದಣ್ಣ ನೀಡಿದ ಶೈಲಿಯಲ್ಲಿಯೇ ರಿಷಬ್ ಶೆಟ್ಟಿ ಕೂಡ ತಿರುಗೇಟು ನೀಡಿದ್ದರು. ಕೈ ಸನ್ನೆ ತೋರಿಸುವವರೊಂದಿಗೆ ಸಿನಿಮಾ ಮಾಡುವುದಿಲ್ಲ ಎಂದಿದ್ದರು. ಈ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.


Click it and Unblock the Notifications











