ಮತ್ತೆ ಒಂದಾದ ಕ್ರೇಜಿಸ್ಟಾರ್-ನಾದಬ್ರಹ್ಮ; "ನಮ್ಮಲ್ಲಿ ಬಿರುಕು ಬಿಟ್ಟಾಗ ಸಂಭ್ರಮಿಸಿದ್ದೇ ಹೆಚ್ಚು" ರವಿಚಂದ್ರನ್
ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ನಾದಬ್ರಹ್ಮ ಹಂಸಲೇಖ ಇಬ್ಬರ ಕಾಂಬಿನೇಷನ್ ಹಿಟ್ ಆದಷ್ಟು ಬೇರಾವುದೇ ಜೋಡಿ ನೋಡಿಲ್ಲ. ಇವರಿಬ್ಬರು ಇದರೂವರೆಗೂ ಒಟ್ಟಿಗೆ ಕ ಕೆಲಸ ಮಾಡಿದ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಕ್ರಾಂತಿಯನ್ನೇ ಮಾಡಿವೆ. 40 ವರ್ಷಗಳಿಂದ ಈ ಜೋಡಿ ನೀಡಿದ ಹಾಡುಗಳು ಇಂದಿನ ಪೀಳಿಗೆಯೂ ಗುನುಗುತ್ತಾರೆ. ಅಷ್ಟೊಂದು ಪ್ರಸ್ತುತ.
ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಹಾಗೂ ಹಂಸಲೇಖ ಇಬ್ಬರೂ ಬೇರೆಯಾದಾಗ ಅವರ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಮತ್ತೆ ಈ ಜೋಡಿ ಒಂದಾಗಬಾರದೇ. ಒಟ್ಟಿಗೆ ಸಿನಿಮಾ ಮಾಡಬಾರದೇ ಅಂತ ಅದೆಷ್ಟು ಬೇಡಿಕೊಂಡಿದ್ದರೋ ಗೊತ್ತಿಲ್ಲ. ಆದರೆ, ಸುಮಾರು ಒಂದೂವರೆ ಎರಡು ದಶಕಗಳಿಂದ ಈ ಜೋಡಿ ಒಟ್ಟಿಗೆ ಸಿನಿಮಾ ಮಾಡಿಯೇ ಇಲ್ಲ. ಒಂದೇ ಒಂದು ಹಾಡು ಬಂದಿಲ್ಲ. ಇಂದಿಗೂ ಇವರಿಬ್ಬರು ಒಟ್ಟಿಗೆ ಕೆಲಸ ಮಾಡಬೇಕು ಅನ್ನೋ ಆಸೆ ಅದೆಷ್ಟೊ ಮಂದಿಗೆ ಇದೆ.

ಕೊನೆಗೂ ರವಿಚಂದ್ರನ್ ಹಾಗೂ ಹಂಸಲೇಖ ಅಭಿಮಾನಿಗಳ ಆಸೆ ಈಡೇರಿದೆ. ಸಿನಿಮಾ ಅಲ್ಲದೇ ಹೋದರೂ, ಇಬ್ಬರೂ ಒಂದೇ ವೇದಿಕೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. 'ಕ್ರೇಜಿ ಬ್ರಹ್ಮ' ಕಾನ್ಸರ್ಟ್ ಮೂಲಕ ಮತ್ತೆ ಸಿನಿಪ್ರೇಮಿಗಳನ್ನ, ಸಂಗೀತ ಪ್ರಿಯರನ್ನು ರಂಜಿಸಲಿದ್ದಾರೆ. ಹಾಗಂತ ಇಲ್ಲಿ ಕೇವಲ ಹಾಡುಗಳಷ್ಟೇ ಇರೋದಿಲ್ಲ. ಒಂದೊಂದು ಹಾಡಿನ ಹಿಂದೆನೂ ಅದರದ್ದೊಂದು ಅನುಭವ ಇರುತ್ತೆ. ಈ ಬಗ್ಗೆ ಮಾಹಿತಿ ನೀಡುವ ವೇಳೆ ಇಬ್ಬರೂ ಕಾರ್ಯಕ್ರಮದ ಬಗ್ಗೆ, ತಮ್ಮಿಬ್ಬರ ಜರ್ನಿ ಬಗ್ಗೆ, ದೂರ ಆಗಿದ್ದರ ಬಗ್ಗೆ ಮನಸಾರೆ ಮಾತಾಡಿದ್ದಾರೆ. ಅದರ ಝಲಕ್ ಇಲ್ಲಿದೆ.
ನಾದ ಬ್ರಹ್ಮ ಹಂಸಲೇಖ ತಮ್ಮ ಹಾಗೂ ರವಿಚಂದ್ರನ್ ಅವರ ಜರ್ನಿಯ ಮೆಲುಕು ಹಾಕಿದ್ದಾರೆ. ಹಾಗೇ ಇಂತಹ ಕಾರ್ಯಕ್ರಮ ನಡೀತಿದ್ರೆ ಸಮಾಜದ ಆರೋಹ್ಯ "ಸುಮಾರು 15 ವರ್ಷಗಳಿಂದ ನೀವಿಬ್ಬರೂ ಯಾಕೆ ಸಿನಿಮಾ ಮಾಡುತ್ತಿಲ್ಲ ಅಂತ ಒಂದೇ ಪ್ರಶ್ನೆ. ಈಗ ಸಿನಿಮಾದಲ್ಲಿಯೇ ಬರಬೇಕೇನು.. ವೇದಿಕೆಯಲ್ಲಿಯೇ ಬರುತ್ತೇವೆ. ಒಟ್ಟಾಗಿ ನಾವು ಮಾಡಿದ ಕೆಲಸಗಳನ್ನು ನೆನಪಿಸಿಕೊಳ್ಳುತ್ತೇವೆ. ನಮ್ಮ ನೆನಪಿನ ದೋಣಿಯಲ್ಲಿ ಕನ್ನಡದ ಅಭಿಮಾನಿಗಳನ್ನು ತೇಲಿಸುತ್ತೇವೆ. ಸಾಂಸ್ಕೃತಿಕವಾಗಿ ಯಾವುದಾದರೂ ಒಂದು ಘಟನೆ ನಾಡಿನಲ್ಲಿ ಸಂಭವಿಸುತ್ತಾ ಇರಬೇಕು. ಅದು ಒಂದು ಚಳುವಳಿ ಆಗಬಹುದು. ಕ್ರಾಂತಿ ಆಗಬಹುದು. ಅದು ಆದ್ರೇನೆ ಸಮಾಜದ ಆರೋಗ್ಯ ನೆಟ್ಟಗಿರುತ್ತೆ." ಎಂದು ಹಂಸಲೇಖ ಹೇಳಿದ್ದಾರೆ.
ಹಾಗೇ ಕ್ರೇಜಿಸ್ಟಾರ್ ಈ ಕಾರ್ಯಕ್ರಮ ಕೇವಲ ಹಾಡುಗಳನ್ನು ಹಾಡೋದಷ್ಟೇ ಅಲ್ಲ. ಅನುಭವಗಳನ್ನು ಹೇಳೋದು ಎಂದಿದ್ದಾರೆ. "ಈ ಕಾರ್ಯಕ್ರಮದ ಉದ್ದೇಶ ಹಾಡುಗಳನ್ನು ಹಾಡಿಕೊಂಡು ಹೋಗೋದಲ್ಲ. ಇದರ ಹಿಂದಿನ ಅನುಭವಗಳನ್ನು ಹಂಚಿಕೊಳ್ಳಬೇಕು. ಈಗ ಚಿತ್ರರಂಗ ಏನು ಕಳೆದುಕೊಳ್ಳುತ್ತಿದೆಯೋ, 86 ಯಿಂದ ಇಲ್ಲಿವರೆಗೂ ಏನು ಮಾಡಿಕೊಂಡು ಬಂದಿದ್ದೇವೋ ಅದನ್ನು ಹಂಚಿಕೊಳ್ಳಬೇಕಿದೆ. ಹೇಗೆ ಸಿನಿಮಾ ಮಾಡಿದ್ವಿ? ಹೇಗೆ ಹಾಡುಗಳನ್ನು ಮಾಡಿದ್ವಿ? ಅದು ಹೇಗೆ ಯಶಸ್ಸು ಕಾಣ್ತು? ಅದು ಎಲ್ಲಿಗೆ ರೀಚ್ ಆಯ್ತು? ಅನ್ನೋದನ್ನು ಹೇಳಬೇಕಿದೆ." ಎಂದು ರವಿಚಂದ್ರನ್ ಹೇಳಿದ್ದಾರೆ.
"ನಮ್ಮಿಬ್ಬರ ಹಾಡುಗಳು ಯಾಕೆ ಹಿಟ್ ಆಯ್ತು ಅಂದ್ರೆ, ಆಡಿಯೋ ಹಾಗೂ ವಿಜ್ಯೂವಲ್. ಇವೆರಡೂ ಸಿಂಕ್ ಆಗುವುದಿಲ್ಲ. ನಮ್ಮ ಸಿನಿಮಾ ಹಾಡುಗಳು ಸಿಂಕ್ ಆದವು. ಅದಕ್ಕೆ ಈ ಹಾಡುಗಳು ಸಕ್ಸಸ್ಫುಲ್ ಆಯ್ತು. ನಮ್ಮ ಹಾಡುಗಳನ್ನು ಕೇಳಿದರೆ ಜನರು ಬಿಜಿಎಂ ಸಮೇತ ಹಾಡು ಹೇಳುತ್ಥಾರೆ" ಎನ್ನುತ್ತಾರೆ ಕ್ರೇಜಿಸ್ಟಾರ್ ರವಿಚಂದ್ರನ್.
ಇದೇ ವೇಳೆ ರವಿಚಂದ್ರನ್ ಹಾಗೂ ಹಂಸಲೇಖ ಇಬ್ಬರೂ ದೂರ ಆದಾಗ ಅಕ್ಕಪಕ್ಕದವರೇ ಸಂಭ್ರಮಿಸಿದ್ದರು ಎಂದೂ ಹೇಳಿದ್ದಾರೆ. "ಸುಮಾರು ಜನರು ನಮ್ಮಿಬ್ಬರನ್ನು ಕೇಳುತ್ತಿದ್ದಾರೆ. ನಮ್ಮ ಹೃದಯದಲ್ಲಿ ಬಿರುಕು ಬಿಟ್ಟಾಗ ಅಕ್ಕಪಕ್ಕದವರು ಸಂಭ್ರಮಿಸಿದ್ದೇ ಜಾಸ್ತಿ. ನಿಮ್ಮಲ್ಲಿ ಬಿರುಕು ಬೇಕು ಸೇರ್ಕೊಳ್ಳಿ ಅಂತ ಹೇಳೋದಕ್ಕೆ ಇಷ್ಟು ಜನ ಸೇರ್ಕೊಂಡಿದ್ದು ಇದೇ ಮೊದಲು. ಇವತ್ತಿಗೂ ನಮ್ಮಿಬ್ಬರ ಹಾಡುಗಳೇ ಹೆಚ್ಚು ರೀಲ್ಸ್ ಆಗುತ್ತಿವೆ. ಇವತ್ತಿಗೂ ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್, ಬೆಸ್ಟ್ ಲವರ್ಸ್. ಅದರಲ್ಲಿ ಎರಡು ಮಾತೇ ಇಲ್ಲ" ಎಂದಿದ್ದಾರೆ.
ಹಾಗೇ ಇಬ್ಬರೂ ಯಾವತ್ತೂ ಜಗಳ ಆಡಿಲ್ಲ. ಅಂತರ ಸೃಷ್ಟಿ ಆಯ್ತು ಎಂದಿದ್ದಾರೆ. "ನಾವಿಬ್ಬರೂ ಯಾವತ್ತೂ ಜಗಳ ಆಡಿಲ್ಲ. ನಮ್ಮಿಬ್ಬರ ನಡುವೆ ಅಂತರ ಸೃಷ್ಟಿ ಆಯ್ತು ಅದು ಬೇರೆ ವಿಚಾರ. ಆದರೆ, ನಾವು ಜಗಳ ಆಡಿಲ್ಲ. ಇವತ್ತು ಸಿಕ್ಕರೂ ನಾನು ಏನಾದರೂ ಜಾಸ್ತಿ ನಗುತ್ತೇನೆ ಅಂದರೆ, ಅದು ಹಂಸಲೇಖ ಜೊತೆ ಮಾತ್ರ. ಆ ನಗುನೇ ನಮ್ಮನ್ನು ಇಷ್ಟು ದೂರ ಕರೆದುಕೊಂಡು ಬಂದಿದೆ. ಆ ನಗುವಿನಿಂದಲೇ ಅಷ್ಟು ಸಿನಿಮಾ ಮಾಡಿದ್ವಿ. ಗೆದ್ದಾಗ ಸಕ್ಸಸ್ ಅನ್ನು ತಲೆ ಮೇಲೆ ಹಾಕೊಂಡು ಮರೆಯಲಿಲ್ಲ. ಸೋಲನ್ನು ಹೆಗಲ ಮೇಲಿಂದ ಬಿಟ್ಟಾಕೂ ಇಲ್ಲ." ಎಂದು ರವಿಚಂದ್ರನ್ ನಾದ ಬ್ರಹ್ಮ ಹಂಸಲೇಖ ಬಗ್ಗೆ ಹೇಳಿದ್ದಾರೆ.


Click it and Unblock the Notifications















