32 ವರ್ಷಗಳ ಬಳಿಕ ಒಂದಾಗುತ್ತಾ 'ರಣಧೀರ' ಜೋಡಿ? ಕ್ರೇಜಿಸ್ಟಾರ್ ಜೊತೆ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ರಾ ಖುಷ್ಬೂ?
ಕೆಲವು ಜೋಡಿಗಳೇ ಹಾಗೇ.. ನೂರು ಕಾಲ ನೆನಪಿನಲ್ಲಿ ಉಳಿದು ಬಿಡುತ್ತವೆ. ಈ ಜೋಡಿ ನಟಿಸಿದ ಪ್ರತಿಯೊಂದು ಸಿನಿಮಾನೂ ಸದಾ ಸುದ್ದಿ ಮಾಡುತ್ತಲೇ ಇರುತ್ತೆ. ಕನ್ನಡ ಚಿತ್ರರಂಗದಲ್ಲಿರೋ ಇಂತಹ ಎವರ್ಗ್ರೀನ್ ಜೋಡಿಗಳಲ್ಲಿ ರವಿಚಂದ್ರನ್ ಹಾಗೂ ಖುಷ್ಬೂ ಜೋಡಿ ಕೂಡ ಒಂದು. ಕ್ರೇಜಿಸ್ಟಾರ್ ಜೊತೆ ಖುಷ್ಬೂ ನಟಿಸಿದ ಸಿನಿಮಾಗಳು ಸಿನಿಪ್ರಿಯರ ಮನದಲ್ಲಿ ಉಳಿದಿದೆ. ಮುದ್ದಾಗಿ ಕಂಡು ಪ್ರೇಮಿಗಳ ಹೃದಯ ತಟ್ಟಿದ ಈ ಜೋಡಿ ಇಂದಿಗೂ ಒಟ್ಟಿಗೆ ಕಾಣಿಸಿಕೊಳ್ಳಬೇಕು ಅನ್ನೋ ಹಂಬಲ ಅದೆಷ್ಟೋ ಸಿನಿರಸಿಕರಲ್ಲಿ ಇದೆ. ಆದರೆ, ಆ ಆಸೆ ಈಡೇರುತ್ತಾ? ಅನ್ನೋ ಆಸೆಗೆ ಚಿಕ್ಕದೊಂದು ಸುಳಿವು ಸಿಕ್ಕಿದೆ.
ಖುಷ್ಬೂ ಈಗ ಸಿನಿಮಾಗಿಂತ ಹೆಚ್ಚು ರಾಜಕೀಯದಲ್ಲಿ ಸಕ್ರೀಯರಾಗಿದ್ದಾರೆ. ಹೀಗಾಗಿ, ಸಿನಿಮಾ ಮಾಡುವಷ್ಟು ಟೈಮ್ ಇದೆಯಾ? ಅದರಲ್ಲೂ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಾರಾ? ಇಂತಹದ್ದೇ ಒಂದಿಷ್ಟು ಅನುಮಾನಗಳಿತ್ತು. ಆದ್ರೀಗ ನಿರ್ದೇಶಕರೊಬ್ಬರು ಕ್ರೇಜಿಸ್ಟಾರ್ ಸಿನಿಮಾಗೆ ನಟಿ ಖುಷ್ಬೂ ಕರೆ ತರೋ ಪ್ರಯತ್ನ ಮಾಡುತ್ತಿದ್ದಾರೆ. ಅಸಲಿಗೆ ಖುಷ್ಬೂ ಒಪ್ಪಿದ್ದಾರಾ? ಆ ನಿರ್ದೇಶಕ ಯಾರು? ಅನ್ನೋದರ ಡಿಟೈಲ್ಸ್ ಇಲ್ಲಿದೆ.

ಮತ್ತೆ ಕ್ರೇಜಿಸ್ಟಾರ್ ಜೊತೆ ನಟಿಸ್ತಾರಾ ಖುಷ್ಬೂ?
ಕ್ರೇಜಿಸ್ಟಾರ್ ರವಿಚಂದ್ರನ್ ಹೊಸ ಸಿನಿಮಾ ಸೆಟ್ಟೇರುತ್ತಿದೆ. ಲೀಗಲ್ ಥ್ರಿಲ್ಲರ್ ಕಥೆಯಿರುವ ಸಿನಿಮಾದಲ್ಲಿ ಕ್ರೇಜಿಸ್ಟಾರ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾವನ್ನು ಗುರುರಾಜ್ ಕುಲಕರ್ಣಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಇದೇ ಏಪ್ರಿಲ್ 21ರಂದು ಅಧಿಕೃತವಾಗಿ ಲಾಂಚ್ ಆಗುತ್ತಿದೆ.
ಇದೇ ಸಿನಿಮಾಗೆ ನಟಿ ಕಮ್ ಪೊಲಿಟಿಷಿಯನ್ ಖುಷ್ಬೂ ಅವರನ್ನು ಕರೆದುಕೊಂಡು ಬರೆಬೇಕು ತಂಡ ಚಿತ್ರತಂಡ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಖುಷ್ಬೂ ಜೊತೆ ನಿರ್ದೇಶಕರು ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರೆ. ಈ ಸಿನಿಮಾದ ಲೀಡ್ ರೋಲ್ಗೆ ಖುಷ್ಬೂ ಅವರನ್ನು ಕೇಳಲಾಗಿದೆ ಎನ್ನಲಾಗುತ್ತಿದೆ.

32 ವರ್ಷಗಳ ಬಳಿಕ ಕ್ರೇಜಿ ಸಿನಿಮಾದಲ್ಲಿ ನಟಿಸ್ತಾರಾ?
ಖುಷ್ಬೂ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಜೋಡಿಯಾಗಿ ನಟಿಸಿದ ಸಿನಿಮಾಗಳು ಒಂದೂ ಸೋತಿಲ್ಲ. ಮೂರೂ ಸಿನಿಮಾಗಳೂ ಸಿನಿಪ್ರೇಮಿಗಳ ಮನಗೆದ್ದಿತ್ತು. ನಾಲ್ಕನೇ ಸಿನಿಮಾ 'ಶಾಂತ್ರಿ ಕ್ರಾಂತಿ' ರವಿಚಂದ್ರನ್ ಸಿನಿಮಾನೇ ಆಗಿದ್ದರೂ, ಜೋಡಿಯಾಗಿ ಮಾತ್ರ ನಟಿಸಿರಲಿಲ್ಲ. ಆದರೆ, 'ಶಾಂತಿ ಕ್ರಾಂತಿ' ಹೀನಾತವಾಗಿ ಸೋತಿತ್ತು. ಇದೇ ಕೊನೆ ಮತ್ತೆ ಈ ಜೋಡಿ ಒಟ್ಟಿಗೆ ನಟಿಸಲಿಲ್ಲ.
1991ರಲ್ಲಿ 'ಶಾಂತಿ ಕ್ರಾಂತಿ' ಸಿನಿಮಾ ರಿಲೀಸ್ ಆಗಿತ್ತು. ಅಲ್ಲಿಂದ ಇಲ್ಲಿವರೆಗೂ ಈ ಜೋಡಿ ಮತ್ತೆ ಕಾಣಿಸಿಕೊಂಡಿರಲಿಲ್ಲ. ಒಂದ್ವೇಳೆ ಗುರುರಾಜ್ ಕುಲಕರ್ಣಿ ಹೇಳಿದ ಕಥೆ ಇಷ್ಟ ಆಗಿ ಒಪ್ಪಿಕೊಂಡರೆ, 32 ವರ್ಷಗಳ ಬಳಿಕ ಕ್ರೇಜಿಸ್ಟಾರ್ ಸಿನಿಮಾದಲ್ಲಿ ಖುಷ್ಬೂ ನಟಿಸಿದಂತಾಗುತ್ತೆ.
ಗ್ರೀನ್ ಸಿಗ್ನಲ್ ಕೊಟ್ರಾ ಖುಷ್ಬೂ?
'ರಣಧೀರ','ಅಂಜದ ಗಂಡು','ಯುಗಪುರುಷ' ಸಿನಿಮಾದಲ್ಲಿ ಈ ಜೋಡಿ ಪ್ರೇಮಿಗಳಾಗಿ ಕಾಣಿಸಿಕೊಂಡಿತ್ತು. ಆ ಮೂರು ಸಿನಿಮಾಗಳೂ ಸೂಪರ್ ಹಿಟ್ ಆಗಿತ್ತು. 2011ರಲ್ಲಿ ತೆರೆಕಂಡಿದ್ದ 'ನಾನಲ್ಲ' ಖುಷ್ಬೂ ಕೊನೆಯದಾಗಿ ಕನ್ನಡದಲ್ಲಿ ನಟಿಸಿದ ಸಿನಿಮಾ. ಈಗ ಮತ್ತೆ ಕನ್ನಡದಲ್ಲಿ ನಟಿಸುತ್ತಾರಾ? ಅನ್ನೋ ಕುತೂಹಲ ಅಭಿಮಾನಿಗಳಲ್ಲಿದೆ.
"ಖುಷ್ಬೂ ಜೊತೆ ಆರಂಭಿಕ ಮಾತುಕತೆ ನಡೆದಿದೆ. ಸದ್ಯ ಡೇಟ್ಸ್ ಬಗ್ಗೆ ಮಾತುಕತೆ ನಡೆಯುತ್ತಿದೆ. ಖುಷ್ಬೂ ಈ ಪ್ರಾಜೆಕ್ಟ್ ಗ್ರೀನ್ ಸಿಗ್ನಲ್ ಕೊಡುತ್ತಿದ್ದಂತೆ ಅಧಿಕೃತವಾಗಿ ಮಾಹಿತಿ ನೀಡಲಾಗುತ್ತೆ" ಎಂದು ನಿರ್ದೇಶಕ ಗುರುರಾಜ್ ಕುಲಕರ್ಣಿ ಸಿನಿಮಾ ಎಕ್ಸ್ಪ್ರೆಸ್ಗೆ ಮಾಹಿತಿಯನ್ನು ನೀಡಿದ್ದಾರೆ. ಒಂದ್ವೇಳೆ ಈ ಜೋಡಿ ಮತ್ತೆ ತೆರೆಮೇಲೆ ಬಂದರೆ, ಬಾಕ್ಸಾಫೀಸ್ನಲ್ಲಿ ಸದ್ದು ಮಾಡೋದ್ರಲ್ಲಿ ಡೌಟೇ ಇಲ್ಲ.


Click it and Unblock the Notifications











