ಕ್ರೇಜಿಸ್ಟಾರ್ 'ದ ಜಡ್ಜ್ಮೆಂಟ್' ಸಿನಿಮಾದಲ್ಲಿ ದಿಗಂತ್ ಧನ್ಯಾ: ಮತ್ತೆ ಬಂದ 'ಆಪ್ತರಕ್ಷಕ' ನಟಿ!
ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾ ಬಗ್ಗೆ ಕ್ರೇಜ್ ಇನ್ನೂ ಕಮ್ಮಿಯಾಗಿಲ್ಲ. ರವಿಚಂದ್ರನ್ ಸದಾ ವಿಭಿನ್ನ ಕಥೆಯ ಹುಡುಕಾಟದಲ್ಲಿ ಇರುತ್ತಾರೆ. ಈಗ 'ದ ಜಡ್ಜ್ಮೆಂಟ್' ಅನ್ನೋ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಸಿನಿಮಾದ ಕಥೆ ಕೇಳಿ ರವಿಚಂದ್ರನ್ ಥ್ರಿಲ್ ಆಗಿದ್ದಾರೆ. ಈಗಾಗಲೇ ಈ ಸಿನಿಮಾ ಒಪ್ಪಿಕೊಂಡು ಮುಹೂರ್ತನೂ ನೆರವೇರಿದೆ.
ಅಂದ್ಹಾಗೆ, ಕ್ರೇಜಿ ಸ್ಟಾರ್ ರವಿಚಂದ್ರನ್ ಒಪ್ಪಿಕೊಂಡಿರೋ ಹೊಸ ಸಿನಿಮಾ ಲೀಗಲ್-ಥ್ರಿಲ್ಲರ್ ಶೈಲಿಯಲ್ಲಿದೆ. ಗುರುರಾಜ ಕುಲಕರ್ಣಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದು, ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾ.

ಈ ಹಿಂದೆ ಕೌಟುಂಬಿಕ-ಥ್ರಿಲ್ಲರ್ ಸಿನಿಮಾ 'ಅಮೃತ್ ಅಪಾರ್ಟ್ಮೆಂಟ್ಸ್'ಗೆ ಅವರೇ ಸ್ವತಃ ಕಥೆ-ಚಿತ್ರಕಥೆಯನ್ನು ಬರೆದು ಪ್ರಶಂಸೆ ಗಳಿಸಿದ್ದರು. ಈ ಹಿಂದೆ 'ಆಕ್ಸಿಡೆಂಟ್', 'ಲಾಸ್ಟ್ ಬಸ್', 'ಅಮೃತ ಅಪಾರ್ಟ್ಮೆಂಟ್ಸ್' ಸಿನಿಮಾವನ್ನು ಈ ಸಂಸ್ಥೆ ಮೂಲಕ ನಿರ್ಮಿಸಲಾಗಿತ್ತು. ಇದೇ ಸಂಸ್ಥೆಯ ನಾಲ್ಕನೇ ಸಿನಿಮಾ 'ದ ಜಡ್ಜ್ ಮೆಂಟ್' ಸಿನಿಮಾ ನಿರ್ಮಾಣವಾಗುತ್ತಿದೆ.
ಇದೊಂದು ಲಿಗಲ್ ಸಿಸ್ಟಮ್ ಕುರಿತಾದ ಸಿನಿಮಾ. ಇದೇ ಏಪ್ರಿಲ್ 24ರಿಂದ ಈ ಸಿನಿಮಾದ ಶೂಟಿಂಗ್ ಆರಂಭ ಆಗುತ್ತಿದೆ. ಬಹುತೇಕ ಇಡೀ ಸಿನಿಮಾ ಬೆಂಗಳೂರಿನಲ್ಲೇ ಶೂಟಿಂಗ್ ನಡೆಯುತ್ತಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ದಿಗಂತ್, ಧನ್ಯಾ ರಾಮಕುಮಾರ್, ಲಕ್ಷ್ಮೀಗೋಪಾಲಸ್ವಾಮಿ, ಟಿ.ಎಸ್.ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರೂಪ ರಾಯಪ್ಪ, ರಾಜೇಂದ್ರ ಕಾರಂತ್ ಅಂತ ದೊಡ್ಡ ತಾರಾಗಣವೇ ಇದೆ.
'ದ ಜಡ್ಜ್ ಮೆಂಟ್' ಸಿನಿಮಾಗೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಶಿವು ಬಿ.ಕೆ.ಕುಮಾರ್ ಕ್ಯಾಮರಾ ವರ್ಕ್, ಬಿ.ಎಸ್ ಕೆಂಪರಾಜು ಎಡಿಟಿಂಗ್, ಎಂ.ಎಸ್ ರಮೇಶ್ ಈ ಸಿನಿಮಾಗೆ ಸಂಭಾಷಣೆ ಬರೆಯುತ್ತಿದ್ದಾರೆ.

"ನಿರ್ದೇಶಕರು 'ಆಕ್ಸಿಡೆಂಟ್' ಮಾಡಿ 'ಲಾಸ್ಟ್ ಬಸ್' ಹತ್ತಿ 'ಅಮೃತ ಅಪಾರ್ಟ್ಮೆಂಟ್ಸ್'ಗೆ ಹೋಗಿ ಈಗ 'ಜಡ್ಜ್ ಮೆಂಟ್' ನೀಡಲು ಬಂದಿದ್ದಾರೆ. ಈ ಸಿನಿಮಾದ ಕಥೆ ಚೆನ್ನಾಗಿದೆ. ನನಗೆ ಈ ತಂಡ ಹಾಗೂ ಜಾನರ್ ಎರಡು ಹೊಸತು. ಆರು ಜನ ಸ್ನೇಹಿತರು ಸೇರಿ ಈ ಸಿನಿಮಾದ ನಿರ್ಮಾಣ ಮಾಡುತ್ತಿದ್ದಾರೆ. ಒಳ್ಳೆಯ ತಂಡದ ಜೊತೆ ಸಿನಿಮಾ ಮಾಡುತ್ತಿರುವ ಖುಷಿಯಿದೆ" ಎಂದಿದ್ದಾರೆ ಕ್ರೇಜಿಸ್ಟಾರ್ ರವಿಚಂದ್ರನ್.
"ನಾವೆಲ್ಲ ಸದ್ಯದಲ್ಲೇ ಮತ್ತೊಂದು 'ಜಡ್ಜ್ ಮೆಂಟ್'ಗಾಗಿ ಕಾಯುತ್ತಿದ್ದೇವೆ. ಅಷ್ಟರಲ್ಲಿ ಗುರುರಾಜ್ ಕುಲಕರ್ಣಿ ಮತ್ತು ತಂಡದವರ 'ದ ಜಡ್ಜ್ ಮೆಂಟ್' ಶುರುವಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ." ಎಂದು ನಾಗಾಭರಣ ಹಾರೈಸಿದ್ದಾರೆ.
ಶರದ್ ಬಿ ನಾಡಗೌಡ, ವಿಶ್ವನಾಥ ಗುಪ್ತ, ರಾಮು ರಾಯಚೂರು, ರಾಜಶೇಖರ ಆರ್ ಪಾಟೀಲ, ರಾಜೇಶ್ವರಿ ಆರ್ ಸುನೀಲ ಹಾಗೂ ಪ್ರತಿಮ ಬಿರಾದಾರ 'ದ ಜಡ್ಜ್ ಮೆಂಟ್' ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.


Click it and Unblock the Notifications











