ರಿಯಲ್ 'ಕೆಜಿಎಫ್'ನಲ್ಲಿ 'ಆಪರೇಷನ್ ಗೋಲ್ಡನ್ ಗ್ಯಾಂಗ್': ಚಿನ್ನದ ಗಣಿಯ ರಕ್ತಚರಿತ್ರೆ ರೂವಾರಿಗಳ್ಯಾರು?
ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ಮತ್ತೆ ವಿಶ್ವದ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಿದೆ. ಬಾಕ್ಸಾಫೀಸ್ನಲ್ಲಿ 'ಕೆಜಿಎಫ್ 2' ಸಿನಿಮಾದ ಕೊಳ್ಳೆ ಪ್ರತಿ ದಿನ ಕೊಳ್ಳೆ ಹೊಡೆಯುತ್ತಲೇ ಇದೆ. 'ಕೆಜಿಎಫ್ 2' ನಿರ್ಮಿಸಿದ ನಿರ್ಮಾಣ ಸಂಸ್ಥೆ ಕೋಟಿ ಕೋಟಿ ಲೂಟಿ ಮಾಡುತ್ತಲೇ ಇದೆ. ಇಷ್ಟೊಂದು ಯಶಸ್ಸು ಕಂಡ ಸಿನಿಮಾದ ಟೈಟಲ್ ಹಿಂದೊಂದು ರಕ್ಷಚರಿತ್ರೆಯಿದೆ. ಅದು ಗೊತ್ತಿರೋದು ಕೆಲವರಿಗೆ ಮಾತ್ರ.
Recommended Video

ರಿಯಲ್ 'ಕೆಜಿಎಫ್' ಹಿಂದೆ ದೊಡ್ಡ ಹಲವಾರು ರಕ್ತದ ಪುಟಗಳಿವೆ. ಚಿನ್ನ ಗಣಿಯ ಕಾರ್ಮಿಕರ ಸಾವು- ನೋವಿನ ಕಥೆಗಳಿವೆ. ಭಾರತದ ಸಂಪತ್ತನ್ನು ಪರಕೀಯರು ದೋಚಿದ ಕಹಾನಿಯಿದೆ. ಇಷ್ಟೆಲ್ಲ ಚರಿತ್ರೆ ಹೊಂದಿರುವ ಚಿನ್ನದ ನಗರದ ಮೇಲೆ ಮೊದಲು ಕಣ್ಣುಬಿದ್ದಿದ್ದು ಯಾವಾಗಾ? ಚಿನ್ನ ದೋಚಲು ಬಂದ 'ಆಪರೇಷನ್ ಗೋಲ್ಡನ್ ಗ್ಯಾಂಗ್'ನಲ್ಲಿ ಇದ್ದ ಆ ಮೂವರು ಯಾರು? ಎಷ್ಟು ವರ್ಷಗಳ ಸಂಶೋಧನೆ ಬಳಿಕ ಚಿನ್ನ ಸುಳಿವು ಸಿಕ್ಕಿತು ಅನ್ನುವುದೇ ಇಂಟ್ರೆಸ್ಟಿಂಗ್. ಈ ಎಲ್ಲಾ ಮಾಹಿತಿಯನ್ನು ಸ್ವಾರಸ್ಯಕರವಾಗಿ ಎಳೆ ಎಳೆಯಾಗಿ 'ಬಂಗಾರದ ಮನುಷ್ಯರು' ಕೃತಿಯಲ್ಲಿ ಬಿಚ್ಚಿದ್ದಾರೆ ಪತ್ರಕರ್ತ ಆರ್ ಕೇಶವಮೂರ್ತಿ.

ಆಪರೇಷನ್ ಗೋಲ್ಡನ್ ಗ್ಯಾಂಗ್ ಬಗ್ಗೆ ಗೊತ್ತಾ?
ಡಾ.ರಾಜ್ಕುಮಾರ್ ಅಭಿನಯದ 'ಆಪರೇಷನ್ ಡೈಮಂಡ್ ರಾಕೆಟ್' ಗೊತ್ತು. ಹಾಗೆ ರೆಬೆಲ್ ಸ್ಟಾರ್ ಅಂಬರೀಷ್ ಅವರ 'ಆಪರೇಷನ್ ಅಂತ'ನೂ ಗೊತ್ತು. ಇನ್ನೂ ಸಿಂಪಲ್ ಸುನಿ ನಿರ್ದೇಶನದ 'ಆಪರೇಷನ್ ಅಲಮೇಲಮ್ಮ' ಕೂಡ ನಮಗೆ ಗೊತ್ತಿದ್ದೆ. ಆದರೆ, ಈ ಆಪರೇಷನ್ ಗೋಲ್ಡನ್ ಗ್ಯಾಂಗ್ ಬಗ್ಗೆ ಗೊತ್ತೇ? ಅಚ್ಚರಿಯಾದರೂ ಈ ಗ್ಯಾಂಗ್ ಹುಟ್ಟಿಕೊಂಡಿದ್ದು ನಮ್ಮ ಎರ್ರಗೊಂಡ (KGF) ಪ್ರದೇಶದಲ್ಲಿ. ಈ ಗ್ಯಾಂಗ್ನ ಅಪ್ಪ ಐರೋಪ್ಯ ರಾಷ್ಟ್ರಗಳು. ಇದರ ಅಮ್ಮ ಈಸ್ಟ್ ಇಂಡಿಯ ಕಂಪನಿ. ಈ ಮೇಲೆ ಹೇಳಿದ ಸಿನಿಮಾ ಹೆಸರುಗಳನ್ನೇ ಮೀರಿಸುವ ಗ್ಯಾಂಗ್ ಇದು. ಮುಂದೆ 'ಕೆಜಿಎಫ್' ಎಂಬ ನಗರದ ಹುಟ್ಟಿಗೆ ಕಾರಣವಾಗಿ, ಕೋಲಾರ ಚಿನ್ನದ ಗಣಿಯ ನೂರಾರು ವರ್ಷಗಳ ಇತಿಹಾಸಕ್ಕೆ ಬುನಾದಿ ಹಾಕಿದ ಗ್ಯಾಂಗ್ ಇದು. ಇದರ ಆರಂಭದ ಸೂತ್ರದಾರರು ಮೂವರು. ವಾರನ್, ನಾವಲ್ ಹಾಗೂ ಜಾನ್ ಟೇಯ್ಲರ್.

ಟಿಪ್ಪು ಸಾವಿನ ಬಳಿಕ ಗಣಿಗಾರಿಕೆ ಅಧ್ಯಾಯ
ಕರ್ನಾಟಕದ ಮಟ್ಟಿಗೆ ಬ್ರಿಟಿಷರಿಗೆ ದೊಡ್ಡ ತಡೆಗೋಡೆಯಾಗಿದ್ದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಯಾವಾಗ ಮರಣ ಹೊಂದಿದನೋ ಆಗಲೇ ಪರಕೀಯರಿಗೆ ಕರ್ನಾಟಕದಲ್ಲಿ ಭದ್ರವಾಗಿ ನೆಲೆಯೂರುವ ಗಟ್ಟಿ ಭರವಸೆ ಸಿಕ್ಕಿತು. ಆ ನಂಬಿಕೆಯಲ್ಲಿ ಕರ್ನಾಟಕವನ್ನೂ ಒಳಗೊಂಡಂತೆ ಇಡೀ ದೇಶದಲ್ಲೇ ಲೋಹ ಸಂಪತ್ತಿನ ಸರ್ವೇ ಮಾಡುವಾಗ ಕಂಡ ಎರ್ರಗೊಂಡ ಎಂಬ ಪ್ರದೇಶದಲ್ಲಿ ಚಿನ್ನದ ಸಂಪತ್ತು ಅಡಗಿರುವ ಗುಟ್ಟು ಗೊತ್ತಾಯಿತು. ಅಂದರೆ 1802ರಲ್ಲಿ ಲೆಫ್ಟಿನೆಂಟ್ ವಾರನ್ ಸಾರಥ್ಯದಲ್ಲಿ ಸರ್ವೇ ಮಾಡುವಾಗ ಎರ್ರಗೊಂಡ ಗುಡ್ಡದ ಬಳಿ ಬಂಗಾರ ಸಿಗುತ್ತದೆಂಬ ವರ್ತಮಾನ ಬಂದಾಗ, ಎಚ್ಚೆತ್ತುಕೊಂಡ ಈಸ್ಟ್ ಇಂಡಿಯನ್ ಕಂಪನಿ 'ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದವರಿಗೆ ತಕ್ಕ ಬಹುಮಾನ ನೀಡಲಾಗುವುದು' ಎಂದು ಘೋಷಿಸಿತು. ಅದರಂತೆ ಖಚಿತ ಮಾಹಿತಿ ಪಡೆದುಕೊಂಡ ವಾರನ್, ಈ ಬಗ್ಗೆ ಲೇಖನ ಬರೆಯುವುದರ ಜೊತೆಗೆ 12 ಮಂದಿ ತಂಡದೊಂದಿಗೆ ಮೊದಲು ಗಣಿಗಾರಿಕೆ ಶುರು ಮಾಡಿದ. 'ಕೇವಲ 12 ಮಂದಿಯನ್ನು ಇಟ್ಟುಕೊಂಡು ಗಣಿಗಾರಿಕೆ ಮಾಡಿ ಯಶಸ್ಸು ಕಂಡವನು ನಾನು. ಆದರೆ, ಇದನ್ನೇ ಒಂದು ಉದ್ಯಮವಾಗಿ ದೊಡ್ಡ ಮಟ್ಟದಲ್ಲಿ ಮಾಡಿದರೆ ಎಷ್ಟರ ಮಟ್ಟಿಗೆ ಚಿನ್ನದ ಸಂಪತ್ತು ಇಲ್ಲಿ ಸಿಗುತ್ತದೆ?' ಎನ್ನುವ ಕುತೂಹಲಕಾರಿ ಅಂಶಗಳ ಜತೆಗೆ ತಮ್ಮ ಗಣಿಕಾರಿಕೆಯ ಅನುಭವದ ಬಗ್ಗೆ ಸ್ವತಃ ವಾರನ್ ಬರೆದುಕೊಂಡಿದ್ದ.

'ಕೆಜಿಎಫ್' ಚಿನ್ನದ ಬೇಟೆ
ಲೆಫ್ಟಿನೆಂಟ್ ವಾರನ್ ತಮ್ಮ ಗಣಿಗಾರಿಕೆಯ ಅನುಭವ ಮತ್ತು ಯಶಸ್ಸು ಹೇಳಿಕೊಂಡ ನಂತರ ಹಲವಾರು ಮಂದಿ ಬಂಗಾರ ಕದಿಯುವ ಕಸುಬಿನ ಯೋಚನೆಗಳನ್ನು ರೂಪಿಸಿ, ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು. ಆ ಸಾಲಿನಲ್ಲಿ ಬಂದವನೇ ಐರ್ಲೆಂಡ್ ದೇಶದ ಸೈನಿಕನಾದ ಮೈಕೇಲ್ ಲಾವಲ್ ಎಂಬಾತ. ವಾರನ್ ತೋರಿದ ದಾರಿಯಲ್ಲೇ 1871ರಲ್ಲಿ ಬಂದ ಮೈಕೇಲ್ ಲಾವಲ್, ಮತ್ತಷ್ಟು ಅಧ್ಯಯನಕ್ಕೆ ಮುಂದಾದ. ಆಗಲೇ ವಾರನ್ಗೂ ಗೊತ್ತಿರದ ಮಾಹಿತಿಗಳು ಈತನಿಗೆ ಸಿಕ್ಕವು. ಅವುಗಳನ್ನು ಮುಚ್ಚಿಟ್ಟ. ಆದರೆ, ಎರ್ರಗೊಂಡ ಪ್ರದೇಶದಲ್ಲಿ ತನ್ನ ಬೇಟೆ ಆರಂಭಿಸುವುದು ಹೇಗೆ ಎನ್ನುವ ಯೋಚನೆಯಲ್ಲಿದ್ದವನಿಗೆ ಹೊಳೆದಿದ್ದು ಕಲ್ಲಿದ್ದಲು. 'ಈ ಪ್ರದೇಶದಲ್ಲಿ ಕಲ್ಲಿದ್ದಲು ಇದೆ. ಅದರ ಸಂಶೋಧನೆ ಮಾಡುವುದಕ್ಕೆ ತಮಗೆ ಪರವಾನಿಗೆ ಕೊಡಬೇಕು' ಎಂದು ಆಗಿನ ಮೈಸೂರು ಸಂಸ್ಥಾನದ ಸರ್ಕಾರವನ್ನು ಕೋರಿಕೊಂಡ. 'ಅಧ್ಯಯನಕ್ಕೆ ತಾನೇ ಎಂದುಕೊಂಡು ಮೈಸೂರು ಸಂಸ್ಥಾನ ಅನುಮತಿ ನೀಡಿತು. ಕಲ್ಲಿದ್ದಲಿಗೆ ಅನುಮತಿ ಪಡೆದುಕೊಂಡ ಮೈಕೇಲ್ ಲಾವಲ್ ಮಾಡಿದ್ದು, ಚಿನ್ನದ ಗಣಿಗಾರಿಕೆ. ಹೊಸ ಹೊಸ ತಂತ್ರಜ್ಞಾನವನ್ನು ಬಳಸಿ ಅದೇ ಕೂಲಿಗಳಿಂದ ಎರ್ರಗೊಂಡ ಪ್ರದೇಶದಲ್ಲಿ ಚಿನ್ನದ ಬೇಟೆ ಆರಂಭಿಸಿದ. ತನ್ನ ಹೊಸ ಪ್ರಯತ್ನಗಳ ಮೂಲಕ ಯಶಸ್ಸು ಕಂಡ. ಮುಂದೆ ಎರ್ರಗೊಂಡ ಪ್ರದೇಶಕ್ಕೆ ಕೈಗಾರಿಕೆಗಳು ಬಂದವು. ಮೋಟಾರು ಸೈಕಲ್ಗಳು ಬಂದವು. ಕಾಲೋನಿಗಳು ನಿರ್ಮಾಣವಾಯಿತು. ಕಾರ್ಮಿಕರ ಸಂಖ್ಯೆ ಹೆಚ್ಚಾಯಿತು. ಹೊರ ದೇಶಗಳಿಂದ ಈ ಪ್ರದೇಶಕ್ಕೆ ಬಂದವರ ಸಂಖ್ಯೆ ದ್ವಿಗುಣಗೊಂಡಿತು ಎನ್ನುತ್ತಾರೆ ಲೇಖಕ, ಪತ್ರಕರ್ತ ಆರ್ ಕೇಶವಮೂರ್ತಿ.

ಜಾನ್ ಟೇಯ್ಲರ್ನಿಂದ ಗಣಿಗಾರಿಕೆ ಆರಂಭ
ಈ ಕ್ರಮದಲ್ಲೇ ಬಂದ ಮತ್ತೊಬ್ಬ ಜಾನ್ ಟೇಯ್ಲರ್. ವಾರನ್, ಲಾವಲ್ ಸೇರಿದಂತೆ ಹಲವು ಮಂದಿಯ ಸತತ ಪ್ರಯತ್ನದ ನಂತರ ಬಂದ ಜಾನ್ ಟೇಯ್ಲರ್, ಮೂಲತಃ ವ್ಯಾಪಾರಿ. ಉದ್ಯಮಿ. ತಾನು ಎಲ್ಲೇ ವ್ಯಾಪಾರ ಮಾಡಿದರೂ ಅಲ್ಲಿ ಒಂದಕ್ಕೆ ಹತ್ತುಪಟ್ಟು ಲಾಭ ಪಡೆಯುವ ಚಾಣಾಕ್ಷ. ಇಂಥ ನವ ವಸಾಹತುವಾದಿಗೆ ಕಂಡಿದ್ದು ಎರ್ರಗೊಂಡ ಪ್ರದೇಶದಲ್ಲಿ ಇದುವರೆಗೂ ಕಾಣದ ಚಿನ್ನದ ಸಂಪತ್ತು. ಈತ ಬೇರೆಯವರಂತೆ ಇಂತಿಷ್ಟೆ ಗಣಿಗಾರಿಕೆ ಎನ್ನುವ ಬೇಲಿ ಹಾಕಿಕೊಳ್ಳಲಿಲ್ಲ. ಒಂದಿಷ್ಟು ವರ್ಷಗಳ ಕಾಲ ಪೂರ್ವ ತಯಾರಿ ಮಾಡಿಕೊಂಡ. ಪಕ್ಕಾ ಒಂದು ವ್ಯಾಪಾರದ ಕಂಪನಿಯಂತೆ ಚಿನ್ನದ ಗಣಿಗಾರಿಕೆ ಶುರು ಮಾಡಿದ. ಈ ಕಾರಣದಿಂದಲೇ ಬ್ರಿಟಿಷರ ಹಾಗೂ 'ಭಾರತದ ಸರ್ಕಾರಿ ದಾಖಲೆಗಳಲ್ಲಿ ಜಾನ್ ಟೇಯ್ಲರ್ ನಂತರ ಅಂದರೆ 1880ರಿಂದ ಚಿನ್ನದ ಗಣಿಗಾರಿಕೆ ಶುರುವಾಯಿತು ಎಂದು ನಮೂದಿಸಲಾಗಿದೆ. ಅಷ್ಟರ ಮಟ್ಟಿಗೆ ಟೇಯ್ಲರ್, ನಿರ್ಧಿಷ್ಟ ಗುರಿಯೊಂದಿಗೆ ಕೆಲಸ ಶುರು ಮಾಡಿ ನೂತನ ವಸಾಹತುಶಾಹಿ ಕೋಲಾರ ಚಿನ್ನದ ಗಣಿಗಾರಿಕೆಯ ಹುಟ್ಟಿಗೆ ಮೂಲ ಕಾರಣಕರ್ತನಾದ.

80 ವರ್ಷಗಳ ಸಂಶೋಧನೆಯ ಫಲ
ಬ್ರಿಟಿಷರ 70 ರಿಂದ 80 ವರ್ಷಗಳ ಕಾಲ ಕೇವಲ ಸಂಶೋಧನೆಗಷ್ಟೇ ಮೀಸಲಾಗಿದ್ದ, ಚಿನ್ನದ ಬೇಟೆಗೆ ಸ್ಪಷ್ಟ ರೂಪ ಪಡೆದುಕೊಂಡು ಅದೊಂದು ಉದ್ಯಮವಾಗಿ ಬದಲಾಗಿದ್ದು 1880ರಲ್ಲಿ ಆಸ್ಟ್ರೇಲಿಯಾದ ಜಾನ್ ಟೇಯ್ಲರ್ ಎಂಬವನಿಂದ. ಹಬೆ ಶಕ್ತಿಯಿಂದ ಯಂತ್ರಗಳನ್ನು ನಡೆಸುವುದಕ್ಕೆ ಶುರು ಮಾಡಿ ಹೊಸ ಹೊಸ ತಂತ್ರಗಳ ಮೂಲಕ ಭೂಮಿ ಅಗೆಯುವ ಕೆಲಸ ಶುರು ಮಾಡಿದ ಜಾನ್ ಟೇಯ್ಲರ್. ಎರಡು ಕಾಲು ಲಕ್ಷ ಪೌಂಡ್ ಬಂಡವಾಳ ಹೂಡಿಕೆಯಿಂದಲೇ ಮೊದಲ ಬಾರಿಗೆ ಹೂಡಿಕೆದಾರರಿಗೆ 7 ಲಕ್ಷ ಪೌಂಡ್ ಲಾಭ ಗಳಿಸುವಂತೆ ಗಣಿಗಾರಿಕೆ ಮಾಡಿಸಿದ್ದ. ಆ ಮೂಲಕ ಲೆಫ್ಟಿನೆಂಟ್ ವಾರನ್, ಮೈಕೇಲ್ ಲಾವಲ್ ಹಾಗೂ ಜಾನ್ ಟೇಯ್ಲರ್ ಎಂಬ ಮೂವರು ಕೋಲಾರ ಚಿನ್ನದ ಗಣಿಯ ಮುಂದಿನ ನೆತ್ತರ ಪುಟಗಳಿಗೆ ಆರಂಭದ ಗೀತೆ ರಚನೆ ಮಾಡಿದರು. ಈ ಕಾರಣಕ್ಕೆ ಇವರನ್ನು ಕೆಜಿಎಫ್ ಚಿನ್ನದಂತಹ ಪುಟಗಳ ಸುದೀರ್ಘ ಇತಿಹಾಸದಲ್ಲಿ ಆಪರೇಷನ್ ಗೋಲ್ಡನ್ ಗ್ಯಾಂಗ್ ಎಂದು ಗುರುತಿಸಬಹುದು. ಆದರೆ, ಹೀಗೆ ಮೂವರು ಪರದೇಶಿಗರಿಂದ ನಮ್ಮ ರಾಜ್ಯದ ಒಂದೂರಿನಲ್ಲಿ ಚಿನ್ನದ ಬಯಲು ಹುಟ್ಟಿಕೊಳ್ಳುವ ಜೊತೆಗೆ ಮುಂದೆ ಏನೆಲ್ಲಾ ನಡೆಯಿತು ಎಂದು ಕೇಳಿ ತಿಳಿಯುವ ಮುನ್ನ ಎರ್ರಗೊಂಡ ಎಂಬ ಪ್ರದೇಶ ಕೆಜಿಎಫ್ ಆಗುವ ಜೊತೆಗೆ ಅದೊಂದು ಐತಿಹಾಸಿಕ ನಗರವೂ ಆಗಿತ್ತು ಎಂಬುದರ ಬ್ಯೂಟಿಪುಲ್ ಹೆಜ್ಜೆ ಗುರುತುಗಳನ್ನು ಕಣ್ಣು ತುಂಬಿಕೊಳ್ಳಬೇಕಿದೆ. ಯಾಕೆಂದರೆ ಭಾರತದ ಹೆಮ್ಮೆಯ ನಗರ ಎನಿಸಿಕೊಳ್ಳುವಲ್ಲಿ ಕೆಜಿಎಫ್ಗೆ ಐತಿಹಾಸಿಕ ಸಂಗತಿಗಳು ಬೆನ್ನಿಗೆ ನಿಲ್ಲುತ್ತವೆ ಎಂದು 'ಬಂಗಾರದ ಮನುಷ್ಯರು' ಪುಸ್ತಕದಲ್ಲಿ ಲೇಖಕ ಆರ್ ಕೇಶವಮೂರ್ತಿ ದಾಖಲಿಸಿದ್ದಾರೆ.


Click it and Unblock the Notifications











