ಮುಂಬೈ ನಟಿಗೆ ಕಥೆ ಹೇಳದಿದ್ದಕ್ಕೆ ನಿರ್ದೇಶಕನಿಗೆ ಗನ್ ತೋರಿಸಿದರೇ ತಾಂಡವ್ ರಾಮ್? ಏನಿದು ಗುಂಡೇಟಿನ ಘಟನೆ?
'ಜೋಡಿ ಹಕ್ಕಿ' 'ಭೂಮಿಗೆ ಬಂದ ಭಗವಂತ' ದಂತಹ ಧಾರಾವಾಹಿಗಳಲ್ಲಿ ನಟಿಸಿ ವೀಕ್ಷಕರ ಮೆಚ್ಚುಗೆ ಗಳಿಸಿದ್ದ ನಟ ತಾಂಡವ್ ರಾಮ್. ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಬೇಕೆಂಬ ಕನಸು ಕಾಣುತ್ತಿದ್ದ ಈ ನಟ ಈಗ ಅರೆಸ್ಟ್ ಆಗಿದ್ದಾರೆ. ತಮ್ಮ ಸಿನಿಮಾದ ನಿರ್ದೇಶಕನ ಮೇಲೆ ಗುಂಡು ಹಾರಿಸಿ ಸಂಕಷ್ಟಕ್ಕೆ ಸಿಕ್ಕಿಕೊಂಡಿದ್ದಾರೆ. ಅದೃಷ್ಟವಶಾತ್ ಈ ನಟ ಅಪಾಯದಿಂದ ಪಾರಾಗಿದ್ದಾರೆ.
ಸಿನಿಮಾ ಅರ್ಧಕ್ಕೆ ನಿಲ್ಲಿಸಿದ್ದಕ್ಕೆ ನಿರ್ದೇಶಕನ ಮೇಲೆ ತಾಂಡವ್ ರಾಮ್ ಗುಂಡು ಹಾರಿಸಿದ್ದಾರೆ ಅನ್ನೋದು ಸದ್ಯದ ಮಾಹಿತಿ. ಆದರೆ, ಸಿನಿಮಾರಂಗದಲ್ಲಿ ಈ ಘಟನೆಯ ಬಗ್ಗೆ ಚರ್ಚೆ ಆಗುತ್ತಿರುವುದೇ ಬೇರೆ. ಆಪ್ತ ಮೂಲಗಳು ಫಿಲ್ಮಿಬೀಟ್ಗೆ ನೀಡಿದ ಇಂಚಿಂಚು ಮಾಹಿತಿ ಇಲ್ಲಿದೆ.

ಅಸಲಿಗೆ ಇವರಿಬ್ಬರ ನಡುವೆ ನಡೆದ ಘಟನೆ ಏನು? ಅನ್ನುವ ಬಗ್ಗೆ ಬಗ್ಗೆ ಚಿತ್ರರಂಗದಲ್ಲಿ ಬೇರೆಯದ್ದೇ ಕಥೆಯಿದೆ. ತಾಂಡವ್ ರಾಮ್ ಹಾಗೂ ನಿರ್ದೇಶಕ ಭರತ್ ನಾವುಂಡ 'ದೇವನಾಂಪ್ರಿಯ' ಅನ್ನುವ ಸಿನಿಮಾ ಮಾಡುತ್ತಿದ್ದರು. ನಟ ತಾಂಡವ್ ರಾಮ್ ಈ ಸಿನಿಮಾದ ನಾಯಕ. ಈ ಚಿತ್ರಕ್ಕೆ ನಿರ್ಮಾಪಕರನ್ನು ಕರೆದುಕೊಂಡು ಬಂದು ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದು ಕೂಡ ಇದೇ ತಾಂಡವ್ ರಾಮ್. ಹೀಗಾಗಿ ಸಿನಿಮಾ ತಂಡ ಹಾಗೂ ನಿರ್ಮಾಪಕರ ಮಧ್ಯೆ ತಾಂಡವ್ ರಾವ್ ಬ್ರಿಡ್ಜ್ ಆಗಿ ನಿಂತಿದ್ದರು.
ಸುಮಾರು ನಾಲ್ಕು ತಿಂಗಳಿಂದ 'ದೇವನಾಂಪ್ರಿಯ' ಸಿನಿಮಾ ನಿರ್ಮಾಪಕರು ತಂಡ ಕೈ ಸಿಕ್ಕಿರಲಿಲ್ಲ. ನಿನ್ನೆ (ನವೆಂಬರ್ 18) ನಿರ್ಮಾಪಕರು ಬಂದು ಪೇಮೆಂಟ್ ಮಾಡುವುದಕ್ಕೆ ಮುಂದಾಗಿದ್ದರು. ಈ ವೇಳೆ ತಾಂಡವ್ ರಾವ್, ನಿರ್ದೇಶಕ ಭರತ್, ಎಡಿಟರ್, ನಿರ್ಮಾಪಕರು ಎಲ್ಲರೂ ಜೊತೆಯಲ್ಲಿ ಇದ್ದರು. ಈ ವೇಳೆ ಪೇಮೆಂಟ್ ಬಗ್ಗೆ ಮಾತು ಬಂದಿದೆ. ನಿರ್ದೇಶಕ ಭರತ್ ಅವರ ಪೇಮೆಂಟ್ ಕೇಳಿದ್ದಾರೆ. ಆ ವೇಳೆ ತಾಂಡವ್ ರಾಮ್ ಕೋಪ ನೆತ್ತಿಗೆ ಹತ್ತಿತ್ತು ಎನ್ನಲಾಗಿದೆ.

ಹಾಗಂತ ಇದೊಂದೇ ಕಾರಣ ಅಲ್ಲ. ಈ ಘಟನೆ ನಡೆಯುವ ಕೆಲವು ದಿನಗಳ ಹಿಂದಷ್ಟೇ ತಾಂಡವ್ ರಾಮ್ ಮುಂಬೈನಿಂದ ನಾಯಕಿಯೊಬ್ಬರನ್ನು ಕರೆದುಕೊಂಡು ಬಂದಿದ್ದರು. ಅವರಿಗೆ ಬಂದು ಕಥೆ ಹೇಳುವಂತೆ ನಿರ್ದೇಶಕ ಭರತ್ ನಾವುಂಡ ಅವರಿಗೆ ಹೇಳಿದ್ದರಂತೆ. ಆದರೆ, ನಿರ್ದೇಶಕ ಭರತ್ ನಾವುಂಡಗೆ ಮುಂಬೈನಿಂದ ನಾಯಕಿಯನ್ನು ಕರೆಸಿದ ವಿಷಯ ಗೊತ್ತಿರಲಿಲ್ಲ. ಅವರ ಮಗನ ಹುಟ್ಟುಹಬ್ಬ ಇದ್ದಿದ್ದರಿಂದ ಆ ಕಾರ್ಯಕ್ರಮದಲ್ಲಿ ಬ್ಯುಸಿಯಿದ್ದು, ಬರಲು ಅಸಾಧ್ಯ ಎಂದು ಹೇಳಿದ್ದರಂತೆ.
ಇದು ತಾಂಡವ್ ರಾಮ್ ಕೋಪಕ್ಕೆ ಕಾರಣವಾಗಿತ್ತು. ಈ ಘಟನೆ ನಡೆದ ಕೆಲವು ದಿನಗಳ ಬಳಿಕ ನಿರ್ಮಾಪಕರ ಬಂದಾಗ ಚಿತ್ರತಂಡಕ್ಕೆ ಪೇಮೆಂಟ್ ಮಾಡುವುದಕ್ಕೆ ಮುಂದಾಗಿದ್ದಾರೆ. ಆ ವೇಳೆ ನಿರ್ದೇಶಕ ಭರತ್ ನಾವುಂಡ ಕೂಡ ಹೋಗಿದ್ದರು. ಹಳೇ ಕೋಪವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಿರ್ದೇಶಕ ಭರತ್ ಮೇಲೆ ಸಿಡಿಮಿಡಿಗೊಂಡಿದ್ದರು. ಮಾತಿಗೆ ಮಾತು ಬೆಳೆದು ನಿರ್ದೇಶಕನ ಗುಂಡು ಹಾರಿಸುವುದಕ್ಕೆ ಮುಂದಾಗಿದ್ದರು ಎನ್ನಲಾಗಿದೆ.
ಇನ್ನು ತಾಂಡವ್ ರಾಮ್ ಹಾಸನ ಮೂಲದವರು ಎನ್ನಲಾಗಿದ್ದು, ಅವರ ಜಮೀನಿಗೆ ಬರುವ ಮಂಗಗಳಿಕೆ ಹೆದರಿಸಲು ಲೈಸೆನ್ಸ್ ಪಡೆದಿದ್ದ ಕೋವಿಯನ್ನು ತಂದಿದ್ದರು ಎನ್ನಲಾಗಿದೆ. ಇದು ಕೇವಲ ಹಾಸನ ಜಿಲ್ಲೆಗಷ್ಟೇ ಪರ್ಮಿಟ್ ಇದ್ದು, ಅದನ್ನು ಬೆಂಗಳೂರಿನವರೆಗೂ ತರುವುದಕ್ಕೆ ಅವಕಾಶವಿಲ್ಲ ಎಂದು ಹೇಳಲಾಗುತ್ತಿದೆ. ಇದನ್ನು ಭರತ್ ವಿರುದ್ಧ ಗುಂಡು ಹಾರಿಸುವುದಕ್ಕೆ ತಂದಿದ್ದರು ಅನ್ನುವುದು ಆಪ್ತರು ಕೊಟ್ಟ ಮಾಹಿತಿ.
ಚಂದ್ರಾ ಲೇಔಟ್ನಲ್ಲಿ ನಡೆದ ಘಟನೆಯಲ್ಲಿ ತಾಂಡವ್ ರಾಮ್ ನಿರ್ದೇಶಕ ಭರತ್ ಹಣೆಯ ಮೇಲೆ ಬಂದೂಕು ಇಟ್ಟಿದ್ದರು. ಫೈಯರ್ ಆಗುವಾಗ ಸಿನಿಮಾದ ಎಡಿಟರ್ ಸಮಯ ಪ್ರಜ್ಞೆಯಿಂದ ಅದನ್ನು ತಪ್ಪಿಸಿದ್ದರು ಎಂದೂ ಮೂಲಗಳು ಹೇಳುತ್ತಿವೆ. ಅಸಲಿಗೆ ಪೊಲೀಸರು ತಾಂಡವ್ ರಾವ್ ಅವರನ್ನು ಬಂಧಿಸಿ ವಿಚಾರಣೆಯನ್ನು ಆರಂಭಿಸಿದ್ದಾರೆ. ನಿರ್ದೇಶಕ ಭರತ್ ನಾವುಂಡ ಅವರ ಮೇಲೆ ಗುಂಡು ಹಾರಿಸಿದ್ದನ್ನು ಒಪ್ಪಿಕೊಂಡಿರುವ ಬಗ್ಗೆ ಮಾಹಿತಿಯೂ ಕೂಡ ವರದಿಯಾಗಿದೆ.
'ಜೋಡಿ ಹಕ್ಕಿ' ನಟ ತಾಂಡವ್ ರಾಮ್ ಹಾಗೂ ನಿರ್ದೇಶಕ ಭರತ್ ರಾವ್ ನಡುವಿನ ಗಲಾಟೆ ಚಿತ್ರರಂಗವನ್ನು ಬೆಚ್ಚಿ ಬೀಳಿಸಿದೆ. ಕನ್ನಡ ಚಿತ್ರರಂಗದಲ್ಲಿ ಇಂತಹ ಘಟನೆ ನಡೆದಿದ್ದು ತೀರಾ ವಿರಳ. ಅದೆಷ್ಟೇ ಭಿನ್ನಾಭಿಪ್ರಾಯವಿದ್ದರೂ ಸಹಿಸಿಕೊಂಡು ಸಿನಿಮಾ ಮುಗಿಸುವ ಕಡೆಗೆ ಗಮನ ಹರಿಸುತ್ತಾರೆ. ಆದರೆ, ಇತ್ತೀಚೆಗೆ ಸಿನಿಮಾ ಮಂದಿ ಹಿಂಸೆಯ ಹಾದಿ ಹಿಡಿದಿರುವುದು ಆತಂಕಕ್ಕೆ ಕಾರಣವಾಗಿದೆ.


Click it and Unblock the Notifications











