ಮಧ್ಯವರ್ತಿ, ಚಮಚಾಗಿರಿ ವಿರುದ್ಧ ಉಪೇಂದ್ರ ಬ್ರಹ್ಮಾಸ್ತ್ರ
ಕನ್ನಡ ಚಿತ್ರರಂಗದಲ್ಲಿ ಕೆಲವೊಂದು ಸರಿಯಿಲ್ಲ ಎನ್ನುವುದಕ್ಕಿಂತ ಏನೂ ಸರಿಯಿಲ್ಲ ಎನ್ನುವ ನೋವು ರಿಯಲ್ ಸ್ಟಾರ್ ಉಪೇಂದ್ರ ಮಾತಿನಲ್ಲಿ ವ್ಯಕ್ತವಾಗುತ್ತಿತ್ತು. ಕನ್ನಡ ಚಿತ್ರರಂಗದಲ್ಲಿ ಮಧ್ಯವರ್ತಿಗಳು ಮತ್ತು ಚಮಚಾಗಳಿಂದ ನಮ್ಮ ಚಿತ್ರರಂಗ ಈ ಸ್ಥಿತಿಗೆ ಬಂದು ನಿಂತಿದೆ ಎಂದು ಉಪೇಂದ್ರ ಬೇಸರದ ಮಾತನ್ನಾಡಿದ್ದಾರೆ.
ಪಬ್ಲಿಕ್ ಟಿವಿಯಲ್ಲಿ ಸೋಮವಾರ (ಫೆ 11) ಮಾತನಾಡುತ್ತಿದ್ದ ಉಪೇಂದ್ರ, ನಮ್ಮ ಚಿತ್ರರಂಗ ಆರಕ್ಕೇರದೆ ಮೂರಕ್ಕಿಳಿಯದೇ ಇರಲು ನಮ್ಮ ಚಿತ್ರೋದ್ಯಮದಲ್ಲಿರುವ ಕೆಲವು ಚಮಚಾಗಳೇ ಕಾರಣ. ನಮ್ಮದು ಸೀಮಿತ ಮಾರುಕಟ್ಟೆಯಾದರೂ ವ್ಯವಸ್ಥಿತ ಪ್ರಚಾರ ನಡೆಸಿದರೆ ನಮ್ಮ ನಿರ್ಮಾಪಕರೂ ಲಾಭಗಳಿಸಲು ಸಾಧ್ಯ.
ಯಾವುದೇ ಚಿತ್ರ ಬಿಡುಗಡೆಯಾದರೂ ಕೆಲವರು ನಕಾರಾತ್ಮಕ ಹೇಳಿಕೆ ನೀಡುವುದರಿಂದ ಚಿತ್ರಕ್ಕೆ ಕೆಲವೊಮ್ಮೆ ಹಿನ್ನಡೆಯಾಗುತ್ತಿದೆ. ಆ ಚಿತ್ರದಲ್ಲಿ ಏನೂ ಇಲ್ಲ ಎಂದು ಟಿವಿ ಮೂಲಕ ರಾಂಗ್ ಪಬ್ಲಿಸಿಟಿ ಕೊಡುವುದರಿಂದ ಪ್ರೇಕ್ಷಕ ಚಿತ್ರಮಂದಿರಕ್ಕೆ ಹೋಗುವುದಕ್ಕೆ ಹಿಂದೇಟು ಹಾಕುತ್ತಾನೆ ಎಂದು ಉಪೇಂದ್ರ ಹೇಳಿದ್ದಾರೆ.
ನಮ್ಮ ಚಿತ್ರಗಳಿಗೆ ನಮ್ಮದೇ ಚಿತ್ರಗಳು ಪೈಪೋಟಿ ನಡೆಯುತ್ತಿರುವುದು ನೋವಿನ ವಿಚಾರ. ನಮ್ಮ ಚಿತ್ರರಂಗ ಇನ್ನೂ ಬೆಳೆಯಬೇಕು. ಅದಕ್ಕೆ ಚಿತ್ರರಂಗದ ಪ್ರತಿಯೊಬ್ಬರ ಸಹಕಾರ ಅತ್ಯವಶ್ಯಕ ಎಂದು ಉಪ್ಪಿ ಹೇಳಿದ್ದಾರೆ. (ಊರ್ವಶಿಯಲ್ಲಿ ಚಿತ್ರ ಬಿಡುಗಡೆ ಮಾಡಿ ತೋರಿಸ್ರೀ)
ರಾಜಕೀಯಕ್ಕೆ ಉಪ್ಪಿ ಎಂಟ್ರಿ ಆಗ್ತಾರಾ? ಮುಂದೆ ಓದಿ..

ರಾಜಕೀಯಕ್ಕೂ ಸಿನಿಮಾಕ್ಕೂ ಬಹಳ ವ್ಯತ್ಯಾಸವಿದೆ
ತೆರೆ ಮೇಲೆ ನಾವು ಮಾಡುವ ಪಾತ್ರಕ್ಕೂ ವೈಯಕ್ತಿಕ ಜೀವನಕ್ಕೂ ಬಹಳ ವ್ಯತ್ಯಾಸವಿದೆ. ಅದು ಸಿನಿಮಾ, ಇದು ಜೀವನ. ಸೂಪರ್ ಚಿತ್ರದ ಸ್ಕ್ರಿಪ್ಟ್ ನಂತರ ಚಿತ್ರೀಕರಣ ಮುಗಿಸಲು ಒಂದು ವರ್ಷ ಬೇಕಾಯಿತು. ಇನ್ನು ರಾಜಕೀಯ ಎಂಟ್ರಿ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಕನಿಷ್ಠ ಐದು ವರ್ಷವಾದರೂ ಬೇಡವೇ? - ಉಪೇಂದ್ರ

ನನ್ನ ಹಿಂದಿನ ಚಿತ್ರಗಳಲ್ಲಿ ರಾಜಕೀಯದ ಟಚ್ ಇತ್ತು
ಸೂಪರ್, ಟೋಪಿವಾಲ, ಬ್ರಹ್ಮ ಚಿತ್ರಕಥೆಯಲ್ಲೂ ರಾಜಕೀಯದ ಟಚ್ ಇತ್ತು. ರಾಜಕೀಯಕ್ಕೆ ಬರಬೇಕೆನ್ನುವ ಆಸೆ ಏನೋ ಇದೆ. ಆದರೆ ಸದ್ಯಕ್ಕೆ ಈ ಬಗ್ಗೆ ನಾನು ನಿರ್ಧಾರ ತೆಗೆದುಕೊಂಡಿಲ್ಲ. ಸೂಕ್ತವಾದ ಸಮಯದಲ್ಲಿ ಸೂಕ್ತವಾದ ನಿರ್ಧಾರ ತೆಗೆದು ಕೊಳ್ಳುತ್ತೇನೆ - ಉಪೇಂದ್ರ

ಗ್ರೌಂಡ್ ವರ್ಕ್ ಅಗತ್ಯ
ಬೆಳ್ಳಿ ಪರದೆಯ ಮೇಲೆ ನಾವು ನಿರ್ದೇಶಕರು ಹೇಳಿದಂತೆ ನಟಿಸುತ್ತೇವೆ. ಆದರೆ ರಾಜಕೀಯ ಹಾಗಲ್ಲ, ಅದಕ್ಕೆ ಬಹಳಷ್ಟು ಗ್ರೌಂಡ್ ವರ್ಕ್ ಮಾಡಬೇಕಾಗುತ್ತದೆ. ಗಡಿಬಿಡಿಯಲ್ಲಿ ರಾಜಕೀಯದ ಬಗ್ಗೆ ನಿರ್ಧರಿಸಲಾಗುವುದಿಲ್ಲ - ಉಪೇಂದ್ರ

ಈ ಹಿಂದೆ ಕೂಡಾ ಸುದ್ದಿಯಾಗಿತ್ತು
ಸೂಪರ್ ಚಿತ್ರ ಬಿಡುಗಡೆಯಾದಗಲೂ ಉಪೇಂದ್ರ ರಾಜಕೀಯಕ್ಕೆ ಧುಮುಕುತ್ತಾರೆ ಎನ್ನುವ ಸುದ್ದಿ ಹರಡಿತ್ತು. ಆಗ ಉಪೇಂದ್ರ ಸ್ಪಷ್ಟೀಕರಣ ನೀಡಿ, ರಾಜಕೀಯಕ್ಕೆ ಸದ್ಯ ಧುಮುಕುವುದಿಲ್ಲ ಎಂದಿದ್ದರು.

ಮಂಡ್ಯದಿಂದ ಉಪ್ಪಿ
ಮಂಡ್ಯದಿಂದ ಉಪೇಂದ್ರ ಅವರನ್ನು ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸುವಂತೆ ಕೋರಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದರು. (ಮಂಡ್ಯ: ಬಿಜೆಪಿಯಿಂದ ಕನ್ನಡದ ಹೆಸರಾಂತ ನಟ ಕಣಕ್ಕೆ)


Click it and Unblock the Notifications











