ಇದೇ ಮೊದಲ ಬಾರಿ ಜಾಮೀನಿ ಕೋರಿ ಕೋರ್ಟ್ ಮೊರೆ ಹೋದ ಪವಿತ್ರಾ ಗೌಡ: ಬೇಲ್ ಸಿಗುತ್ತಾ?
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪವಿತ್ರಾಗೌಡ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 11ರಂದು ದರ್ಶನ್ರನ್ನು ಮೈಸೂರಿನಲ್ಲಿ ಅರೆಸ್ಟ್ ಮಾಡಿ ಬೆಂಗಳೂರಿಗೆ ಕರೆ ತಂದಿದ್ದರು. ಅದೇ ದಿನ ದರ್ಶನ್ ಗೆಳತಿ ಹಾಗೂ ನಟಿ ಪವಿತ್ರಾ ಗೌಡರನ್ನು ಅರೆಸ್ಟ್ ಮಾಡಿ ಕರೆತಂದಿದ್ದರು.
ಪೊಲೀಸರು ಕಸ್ಟಡಿಗೆ ಪಡೆದ ಬಳಿಕ ಕೋರ್ಟ್ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಉಳಿದ ಆರೋಪಿಗಳಿಗೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿತ್ತು. ಅದರಂತೆ ದರ್ಶನ್ ಹಾಗೂ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಆಗಸ್ಟ್ 28ರವರೆಗೂ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ನ್ಯಾಯಾಲಯ ವಿಸ್ತರಣೆ ಮಾಡಿದೆ.

ಇಲ್ಲಿವರೆಗೂ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್ಯಲ್ಲಿ ಪ್ರಮುಖ ಆರೋಪಿಗಳಾಗಿರುವ ಪವಿತ್ರಾ ಗೌಡ ಹಾಗೂ ದರ್ಶನ್ ಜಾಮೀನು ಅರ್ಜಿಯನ್ನು ಸಲ್ಲಿಕೆ ಮಾಡಿರಲಿಲ್ಲ. ಈಗ ದಿಢೀರನೇ ಪವಿತ್ರಾ ಗೌಡ ಪರ ವಕೀಲರು ಬೆಂಗಳೂರಿನ ಸಿಹೆಚ್ 57ನೇ ಕೋರ್ಟ್ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಪೊಲೀಸರಿಗೆ ನೋಟಿಸ್ ಅನ್ನು ಜಾರಿ ಮಾಡಿದೆ.
ನಟಿ ಪವಿತ್ರಾ ಗೌಡ ಜೊತೆಗೆ ಇದೇ ಪ್ರಕರಣದ ಮತ್ತೊಬ್ಬ ಆರೋಪಿ ಅನುಕುಮಾರ್ ಸಹ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಪವಿತ್ರಾ ಗೌಡ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರೂ, ದರ್ಶನ್ ಮಾತ್ರ ಇನ್ನೂ ಬೇಲ್ಗೆ ಕೋರಿಕೆ ಸಲ್ಲಿಸದೇ ಇರುವುದು ಅಚ್ಚರಿಗೆ ಕಾರಣವಾಗಿದೆ. ಪವಿತ್ರಾ ಗೌಡ ಹಾಗೂ ಅನುಕುಮಾರ್ ಮಾತ್ರ ಜಾಮೀನು ಅರ್ಜಿ ಸಲ್ಲಿಸಿದ್ದರ ಹಿನ್ನೆಲೆಯೇನು ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.
ನಟಿ ಪವಿತ್ರಾ ಗೌಡ ಪರ ವಕೀಲರು ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆಯನ್ನು ಕೋರ್ಟ್ ಆಗಸ್ಟ್ 22ಕ್ಕೆ ಮುಂದೂಡಿದೆ. ಪೊಲೀಸರು ಜಾರ್ಜ್ಶೀಟ್ ಸಲ್ಲಿಸುವ ಮುನ್ನವೇ ಪವಿತ್ರಾ ಗೌಡಗೆ ಜಾಮೀನು ಸಿಗುತ್ತಾ ಅನ್ನೋದು ಕುತೂಹಲದ ವಿಷಯವಾಗಿದೆ. ಇಷ್ಟೇ ಅಲ್ಲದೆ ದರ್ಶನ್ ಯಾಕೆ? ಜಾಮೀನು ಅರ್ಜಿಯನ್ನು ಸಲ್ಲಿಸಿಲ್ಲ ಅನ್ನೋ ವಿಷಯ ಕೂಡ ಚರ್ಚೆಯಾಗುತ್ತಿದೆ.
ರೇಣುಕಾಸ್ವಾಮಿ ಹತ್ಯೆ ಕೇಸ್ಗೆ ಸಂಬಂಧಿಸಿದಂತೆ ದರ್ಶನ್, ಪವಿತ್ರಾ ಗೌಡ ಸೇರಿದಂತೆ ನೆರವಾದವರು ಪೊಲೀಸರ ಬಲೆಗೆ ಬಿದ್ದು 72 ದಿನಗಳಿಗೂ ಅಧಿಕ ದಿನಗಳಾಗಿವೆ. ಇನ್ನೂ ಇವರ ಭವಿಷ್ಯ ಏನು ಅನ್ನೋದು ಗೊತ್ತಾಗಿಲ್ಲ. ಅಲ್ಲದೆ ಜಾರ್ಜ್ಶೀಟ್ ಸಲ್ಲಿಸಿದ ಬಳಿಕ ಪೊಲೀಸರಿಗೆ ಯಾವೆಲ್ಲ ಸಾಕ್ಷಿಗಳು ಸಿಕ್ಕಿವೆ? ದರ್ಶನ್ ವಿರುದ್ಧ ಸಿಕ್ಕಿರೋ ಕುರುಹುಗಳೇನು? ಅನ್ನೋದು ರಿವೀಲ್ ಆಗಬೇಕಿದೆ.
ಇನ್ನು ದರ್ಶನ್ ಗೆಳತಿ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ದರ್ಶನ್ ಹಾಗೂ ಅವರ ಆಪ್ತರು ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಿಕೊಂಡು ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆಂಬ ಆರೋಪವಿದೆ. ಇದೊಂದು ಹೈ ಪ್ರೊಫೈಲ್ ಕೇಸ್ ಆಗಿದ್ದರಿಂದ ಮುಂದಿನ ದಿನಗಳಲ್ಲಿ ಯಾವ ಹಾದಿ ಹಿಡಿಯಬಹುದು ಅನ್ನೋ ಕುತೂಹಲವಿದೆ.


Click it and Unblock the Notifications










