ದರ್ಶನ್ಗೆ ಹಾಸಿಗೆ ಇಲ್ಲ.. ಮನೆಯೂಟನೂ ಇಲ್ಲ.. ಪುಸ್ತಕನೂ ಇಲ್ಲ: ಏನಿದು ಮ್ಯಾಟರ್?
ಬೆಂಗಳೂರು, ಜುಲೈ 10: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಜುಲೈ 18ರವರೆಗೂ ದರ್ಶನ್ಗೆ ನ್ಯಾಯಾಂಗ ಬಂಧನ ಮುಂದುವರೆದಿದೆ. ಇದೇ ವೇಳೆ ದರ್ಶನ್ ಪರ ವಕೀಲರು ದರ್ಶನ್ಗೆ ಮನೆ ಊಟ, ಹಾಸಿಗೆ ಹಾಗೂ ಪುಸ್ತಕವನ್ನು ನೀಡುವಂತೆ ಮನವಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು.
ನಟ ದರ್ಶನ್ ಪರ ವಕೀಲರು ಕರ್ನಾಟಕ ಹೈಕೋರ್ಟ್ಗೆ ಈ ಮೂರು ಬೇಡಿಕೆಗಳನ್ನು ಮುಂದಿಟ್ಟು ರಿಟ್ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ದರ್ಶನ್ಗೆ ಮನೆಯ ಊಟ ಸವಿಯುವುದಕ್ಕೆ ಅವಕಾಶ ಕೊಡಬೇಕು. ಮಲಗಲು ಹಾಸಿಗೆ ಹಾಗೂ ಪುಸ್ತಕವನ್ನು ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಸಲ್ಲಿಸಲಾಗಿತ್ತು. ದರ್ಶನ್ ಕೇಳಿದ ಈ ಮೂರು ಬೇಡಿಕೆಗಳಿಗೆ ಒಪ್ಪಿಗೆ ನೀಡಲು ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್ಗೆ ಮನವಿ ಮಾಡಿಕೊಂಡಿದ್ದರು.

ದರ್ಶನ್ ರಿಟ್ ಅರ್ಜಿಯ ವಿಚಾರಣೆ ಇಂದು (ಜುಲೈ 10) ನಡೆದಿದ್ದು, ವಕೀಲರ ವಾದ ವಿವಾದವನ್ನು ಆಲಿಸಿದ ಬಳಿಕ ಹೈಕೋರ್ಟ್ ನ್ಯಾಯಾಧೀಶರು ಜುಲೈ 18ಕ್ಕೆ ಈ ರಿಟ್ ಅರ್ಜಿಯ ವಿಚಾರಣೆಯನ್ನು ಮುಂದೂಡಿದ್ದಾರೆ. ಈ ಕಾರಣಕ್ಕೆ ದರ್ಶನ್ ಮೂರು ಬೇಡಿಕೆಗಳು ಜುಲೈ 18ರವರೆಗೂ ಈಡೇರುವುದಿಲ್ಲ. ಹೀಗಾಗಿ ಅಲ್ಲಿವರೆಗೂ ದರ್ಶನ್ ಜೈಲು ಊಟವನ್ನೇ ಮಾಡಬೇಕಿದೆ. ದರ್ಶನ್ಗೆ ಜೈಲಿನ ಊಟ ಜೀರ್ಣವಾಗುತ್ತಿಲ್ಲ. ವಾಂತಿ, ಅತಿಸಾರ ಉಂಟಾಗುತ್ತಿದೆಂದು ವೈದ್ಯರು ವರದಿ ನೀಡಿದ್ದಾರೆ. ಈ ಕಾರಣಕ್ಕೆ ಜೈಲಿಗೆ ಮನೆಯ ಊಟ ತರಿಸಿಕೊಳ್ಳಲು ಅವಕಾಶ ಕೊಡಬೇಕೆಂದು ರಿಟ್ ಅರ್ಜಿಯಲ್ಲಿ ಮನವಿ ಸಲ್ಲಿಸಲಾಗಿದೆ.
ದರ್ಶನ್ ರಿಟ್ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ನ್ಯಾಯಾಧೀಶರು ಜೈಲಿನ ನಿಯಮಗಳ ಬಗ್ಗೆ ತಿಳಿದುಕೊಂಡು, ಕಾನೂನಿನ ಪ್ರಕಾರವೇ ಎಲ್ಲವನ್ನೂ ಪರಿಶೀಲನೆ ಮಾಡಬೇಕು ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಆ ನಂತರ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳಿಗೆ ನೋಟಿಸ್ ಅನ್ನು ಜಾರಿಗೊಳಿಸಲಾಯಿತು.

ಇನ್ನು ನಟ ದರ್ಶನ್ ಎರಡನೇ ನ್ಯಾಯಾಂಗ ಬಂಧನದ ಅವಧಿ ಕೂಡ ಜುಲೈ 18ಕ್ಕೆ ಅಂತ್ಯಗೊಳ್ಳಲಿದೆ. ಹೀಗಾಗಿ ಅದೇ ದಿನ ದರ್ಶನ್ ನ್ಯಾಯಾಂಗ ಬಂಧನ ವಿಸ್ತರಣೆ ಹಾಗೂ ಬೇಡಿಕೆಗಳ ಬಗ್ಗೆ ನ್ಯಾಯಾಧೀಶರು ಸೂಕ್ತ ತೀರ್ಮಾನ ತೆಗೆದುಕೊಂಡು ಆದೇಶ ಹೊರಡಿಸುವ ಸಾಧ್ಯತೆಯಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 'ಡೆವಿಲ್' ಸಿನಿಮಾ ಶೂಟಿಂಗ್ಗೆ ತಯಾರಿ ನಡೆಸುತ್ತಿದ್ದ ದರ್ಶನ್ರನ್ನು ಮೈಸೂರಿನಲ್ಲಿ ಬಂಧಿಸಲಾಗಿತ್ತು.
ಜೂನ್ 11ರಂದು ದರ್ಶನ್ರನ್ನು ಮೈಸೂರಿನಲ್ಲಿ ಬಂಧಿಸಿದ ಬಳಿಕ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಆ ಬಳಿಕ ನ್ಯಾಯಾಲಯ ದರ್ಶನ್ರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಮೊದಲ ನ್ಯಾಯಾಂಗ ಬಂಧನದ ಬಳಿಕ ದರ್ಶನ್ ಪರ ವಕೀಲರು ಮನೆ ಊಟ ಮಾಡಲು ಅವಕಾಶ, ಮಲಗಲು ಹಾಸಿಗೆ ಹಾಗೂ ಓದಲು ಪುಸ್ತಕ ತರಿಸಿಕೊಳ್ಳಲು ಜೈಲಿನ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ರಿಟ್ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಅಂದ್ಹಾಗೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಅದರಲ್ಲಿ 13 ಮಂದಿಯನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರೆ, ಇನ್ನು ಉಳಿದ ನಾಲ್ಕು ಮಂದಿಯನ್ನು ತುಮಕೂರು ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ.


Click it and Unblock the Notifications











