ಕೊಲೆಯಾದ ರೇಣುಕಾಸ್ವಾಮಿ ಹಿನ್ನೆಲೆಯೇನು? ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳಿಸೋಕೆ ಏನು ಕಾರಣ?
ಚಿತ್ರದುರ್ಗದ ರೇಣುಕಾ ಸ್ವಾಮಿ ಮರ್ಡರ್ ಕೇಸ್ ಕ್ಷಣದಿಂದ ಕ್ಷಣ ಬೇರೆ ಬೇರೆ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಕೊಲೆಯಾಗಿರುವ ರೇಣುಕಾ ಸ್ವಾಮಿ ಕೊಲೆಯಾಗಿದ್ದು ಯಾಕೆ? ನಟ ದರ್ಶನ್ ಕೈವಾಡವಿದೆಯೇ? ಪವಿತ್ರಾ ಗೌಡ ಈ ಕೊಲೆಗೆ ಪ್ರೇರೆಪಣೆ ನೀಡಿದರೆ? ಇಂತಹದ್ದೇ ಒಂದು ಪ್ರಶ್ನೆಗಳಿಗೆ ಪೊಲೀಸರ ತನಿಖೆಯಲ್ಲಿ ಉತ್ತರ ಸಿಗಲಿದೆ.
ಆದರೆ, ಪವಿತ್ರಾ ಗೌಡಗೆ ಕೊಲೆಯಾದ ರೇಣುಕಾ ಸ್ವಾಮಿ ಯಾಕೆ ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದ. ಚಿತ್ರದುರ್ಗದಲ್ಲಿ ನೆಲೆಸಿದ್ದ ರೇಣುಕಾಸ್ವಾಮಿಗೆ ಪವಿತ್ರಾ ಗೌಡ ಮೇಲೆ ದ್ವೇಷವಿತ್ತೇ? ಹಲವು ದಿನಗಳಿಂದ ಮೆಸೇಜ್ಗಳನ್ನು ಕಳುಹಿಸುವುದಕ್ಕೆ ಕಾರಣವೇನು? ಅನ್ನೋದನ್ನು ಪೊಲೀಸರು ತನಿಖೆ ಮೂಲಕ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ಈ ಬೆನ್ನಲ್ಲೇ ರೇಣುಕಾ ಸ್ವಾಮಿ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಯಾಗಿದ್ದ ಅಂತ ವರದಿಯಾಗಿವೆ. ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಡಿ ಬಾಸ್ ಅಭಿಮಾನಿ ಅಂತ ಗುರುತಿಸಿಕೊಂಡಿದ್ದ ಎನ್ನಲಾಗಿದೆ. ದರ್ಶನ್ ಜೊತೆ ಇರುವ ಫೋಟೊಗಳನ್ನು ಪವಿತ್ರಾ ಹಾಕಿಕೊಂಡಿದ್ದರಿಂದ ಇನ್ಸ್ಟಾಗ್ರಾಂ ಮೂಲಕ ಮೆಸೇಜ್ಗಳನ್ನು ಕಳುಹಿಸುತ್ತಿದ್ದ ಎನ್ನಲಾಗಿದೆ.
ಪವಿತ್ರಾ ಗೌಡ ಅವರಿಂದಲೇ ದರ್ಶನ್ ವೈವಾಹಿಕ ಜೀವನ ಹಾಳಾಗುತ್ತಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ನ್ಯಾಯ ಸಿಗಬೇಕು ಅಂತ ಮೆಸೇಜ್ ಮಾಡುತ್ತಿದ್ದ ಅಂತ ಕೆಲವು ಮಾಧ್ಯಮಗಳಲ್ಲಿ ವರದಿ ಮಾಡಲಾಗಿದೆ. ಇದು ಪವಿತ್ರಾ ಗೌಡಗೆ ಕಿರಿಕಿರಿಯಾಗಿತ್ತು. ಹೀಗಾಗಿ ಈ ವಿಷಯವನ್ನು ದರ್ಶನ್ಗೆ ಮುಟ್ಟಿಸಿದ್ದರು. ಒಂದಿಷ್ಟು ದಿನ ನೋಡಿದ ಬಳಿಕ ವಿಚಾರಿಸಿಕೊಳ್ಳಬೇಕು ಅಂತ ದರ್ಶನ್ ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆಸಿಕೊಂಡಿದ್ದರು ಅನ್ನೋ ಮಾತು ಕೇಳಿಬರುತ್ತಿದೆ.
ಅಂದ್ಹಾಗೆ, ರೇಣುಕಾ ಸ್ವಾಮಿ ಚಿತ್ರದುರ್ಗದ ಅಪೊಲೋ ಕ್ಲಿನಿಕ್ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಇತ್ತೀಚೆಗಷ್ಟೇ ರೇಣುಕಾ ಸ್ವಾಮಿ ಮದುವೆ ಕೂಡ ಆಗಿದ್ದ. ಈತನಿಗೆ ಪತ್ನಿ ಈಗ 5 ತಿಂಗಳ ಗರ್ಭಿಣಿ ಎಂದು ವರದಿಯಾಗಿದೆ. ಸಾಮಾನ್ಯ ಕುಟುಂಬಕ್ಕೆ ಸೇರಿದ ರೇಣುಕಾಸ್ವಾಮಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿ ಆಗಿದ್ದ ಅಂತನೂ ಹೇಳಲಾಗುತ್ತಿದೆ.

ದರ್ಶನ್ ತಮ್ಮ ಆಪ್ತರ ಸಹಾಯದಿಂದ ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದರು. ಬಳಿಕ ಆಪ್ತ ವಿನಯ್ ಅವರ ಶೇಡ್ನಲ್ಲಿ ರೇಣುಕಾಸ್ವಾಮಿಯ ಮೇಲೆ ಸಹಚರರು ಹಲ್ಲೆ ಮಾಡಿದ್ದಾರೆ. ಈ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ಕೂಡ ಜೊತೆಯಲ್ಲಿ ಇದ್ದರು ಅನ್ನೋದು ಅಂತಾನೂ ವರದಿಗಳಾಗಿವೆ.
ಆದರೆ, ರೇಣುಕಾಸ್ವಾಮಿ ಮರ್ಡರ್ ಹಿಂದಿನ ಉದ್ದೇಶ ಏನಿತ್ತು? ಈ ಕೊಲೆ ಪ್ರಕರಣದಲ್ಲಿ ದರ್ಶನ್ ನೇರವಾಗಿ ಭಾಗಿಯಾಗಿದ್ದರೆ? ಅಥವಾ ಪರೋಕ್ಷವಾಗಿ ಭಾಗಿಯಾಗಿದ್ದಾರೆಯೇ? ಇಲ್ಲ ಈ ಕೊಲೆ ಪ್ರಕರಣದಲ್ಲಿ ಇವರ ಕೈವಾಡ ಇಲ್ಲವೇ? ಅನ್ನೋದು ಪೊಲೀಸರ ತನಿಖೆಯಿಂದ ಹೊರಬರಲಿದೆ. ಸದ್ಯ ಪೊಲೀಸರು ದರ್ಶನ್ ಅವರನ್ನು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಒಂದು ವೇಳೆ ದರ್ಶನ್ ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ಸಾಬೀತಾದರೆ ಮತ್ತೆ ಜೈಲು ಸೇರುವುದು ಗ್ಯಾರಂಟಿ. ಆದರೆ, ಇನ್ನೂ ದರ್ಶನ್ ಅವರನ್ನು ವಿಚಾರಣೆ ಮಾಡುತ್ತಿದ್ದು, ಈ ವೇಳೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಏನೆಲ್ಲ ವಿಷಯಗಳು ಹೊರಬರುತ್ತವೆ ಅನ್ನೋದು ಕೆಲವು ಗಂಟೆಗಳಲ್ಲಿ ಹೊರಬೀಳಬಹುದು.


Click it and Unblock the Notifications











