2012ರ ಹಿಟ್ ನಿರ್ದೇಶಕ ನಾಗಣ್ಣ: ಓದುಗರ ಅಭಿಮತ
2012ರ ಸೂಪರ್ ಹಿಟ್ ಚಿತ್ರಗಳ ಕ್ರೆಡಿಟ್ ನ ಸಿಂಹಪಾಲು ಪಡೆಯುವ ನಾಯಕರ ನಡುವೆ ಎದ್ದು ನಿಂತ ಹತ್ತು ನಿರ್ದೇಶಕರ ಪೈಕಿ ಸರ್ವಶ್ರೇಷ್ಠ ನಿರ್ದೇಶಕರನ್ನು ಒನ್ ಇಂಡಿಯಾ ಕನ್ನಡ ಓದುಗರು ಆಯ್ಕೆ ಮಾಡಿದ್ದಾರೆ.
ನಿರೀಕ್ಷೆಯಂತೆ ದರ್ಶನ್ ಅಭಿನಯದ ಅದ್ದೂರಿ ಬಜೆಟ್ ಚಿತ್ರ ಸಂಗೊಳ್ಳಿ ರಾಯಣ್ಣ ಚಿತ್ರದ ನಿರ್ದೇಶಕ ನಾಗಣ್ಣ ಅವರಿಗೆ ಮೊದಲ ಸ್ಥಾನ ದೊರೆತಿದೆ.
ಒಟ್ಟಾರೆ 1735 ಮತಗಳ ಪೈಕಿ ನಾಗಣ್ಣ ಅವರ ಪರ 872 ಮತಗಳು ಸಿಕ್ಕಿದೆ. ಡ್ರಾಮಾದ ಯೋಗರಾಜ ಭಟ್ಟರು ಹಾಗೂ ಅದ್ದೂರಿ ಚಿತ್ರದ ಅರ್ಜುನ್ ನಡುವೆ ತೀವ್ರ ಪೈಪೋಟಿ ನಡೆದರೂ ಓದುಗರು ಅರ್ಜುನ್ ಗೆ ಓದುಗರು ಮಣೆ ಹಾಕಿದ್ದಾರೆ.
ಅರ್ಜುನ್ ಗೆ 201 ಮತಗಳು ಸಿಕ್ಕರೆ, ಭಟ್ಟರಿಗೆ 186 ಮತ ಸಿಕ್ಕಿದೆ.
ದಂಡುಪಾಳ್ಯ ಕೊನೆ ಸ್ಥಾನದಲ್ಲಿದ್ದರೆ, ಅಣ್ಣಾಬಾಂಡ್ ನಿರ್ದೇಶಕ ಸೂರಿ ಅವರು 5ಕ್ಕೆ ಸ್ಥಾನಕ್ಕೆ ಇಳಿದಿದ್ದಾರೆ. ಎದೆಗಾರಿಕೆ ನಿರ್ದೇಶಕಿ ಸುಮನಾ ಅವರು 4ನೇ ಸ್ಥಾನ ಗಳಿಸಿದ್ದಾರೆ.
ನಿರ್ದೇಶಕ ಯಾರು ಎಂದು ನೋಡಿಕೊಂಡು ಥೇಟರ್ ಗೆ ಜನ ಬರೋದಿಕ್ಕೆ ಶುರುವಾಗಿರೋ ಟ್ರೆಂಡ್ ಕನ್ನಡದ ಪಾಲಿಗೆ ಒಳ್ಳೆ ಬೆಳವಣಿಗೆ. 2012 ಸುಮಾರು 90 ಕ್ಕೂ ಅಧಿಕ ಚಿತ್ರಗಳು ತೆರೆಗೆ ಅಪ್ಪಳಿಸಿದೆ. ಇದರಲ್ಲಿ ಸುಮಾರು 16 ಚಿತ್ರಗಳು ಗೆದ್ದಿದೆ.
[2012ರ ಕನ್ನಡದ ಶ್ರೇಷ್ಠ ಚಿತ್ರ ಯಾವುದು?: ಫಲಿತಾಂಶ ನೋಡಿ]
ಗಲ್ಲಾ ಪೆಟ್ಟಿಗೆಯಲ್ಲಿ ಸೋತ ಚಿತ್ರದ ನಿರ್ದೇಶಕನನ್ನು ಕೂಡಾ ಮೆಚ್ಚಿದ ಉದಾಹರಣೆಗಳಿದೆ. ಒಟ್ಟಾರೆ 2012ರ ಯಶಸ್ಸು ಕಂಡ ಚಿತ್ರಗಳ ಪಟ್ಟಿಯಲ್ಲಿ ನಿಮ್ಮ ಆಯ್ಕೆ ತಿಳಿಸಿದ್ದಕ್ಕೆ ಧನ್ಯವಾದಗಳು.
2012ರ ಶ್ರೇಷ್ಠ ಚಿತ್ರ ನಿರ್ದೇಶಕ: ಒನ್ ಇಂಡಿಯಾ ಓದುಗರ ಅಭಿಮತ

ನಾಗಣ್ಣ ಚಿತ್ರ :ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ
872 ಶೇ 50.3 ಮತ ಗಳಿಕೆ
ಬಿಗ್ ಬಜೆಟ್ ಚಿತ್ರ, ದೊಡ್ಡ ಸ್ಟಾರ್ ಪಡೆಯನ್ನು ಕಟ್ಟಿಕೊಂಡು ಚಿತ್ರ ನಿಭಾಯಿಸುವುದು ತುಂಬಾ ಕಷ್ಟ. ಉತ್ತರ ಕರ್ನಾಟಕ ಭಾಷೆ ಅರಿವಿಲ್ಲದಿದ್ದರೂ ಸಮರ್ಥವಾಗಿ ದರ್ಶನ್ ಸೇರಿದಂತೆ ಎಲ್ಲರಿಂದಲೂ ಉತ್ತಮ ಅಭಿನಯ ಹೊರ ತೆಗೆದ ನಾಗಣ್ಣ ಅವರಿಗೆ ಪ್ರೇಕ್ಷಕರ ಸಲಾಂ. ಹಾಡುಗಳ ಆಯ್ಕೆ ಮಾತ್ರ ನಾಗಣ್ಣ ಫೇಲಾಗಿದ್ದಾರೆ.

ಎ.ಪಿ. ಅರ್ಜುನ್ ಚಿತ್ರ: ಅದ್ದೂರಿ
201 ಶೇ 11.6 ಮತ ಗಳಿಕೆ
ಹೊಸ ನಟ, ಲವಲವಿಕೆಯ ಪ್ರೇಮ ಕಥೆ, ಪ್ರಬುದ್ಧ ನಟಿ ಜೊತೆಗೆ ಉತ್ತಮ ಸಂಗೀತ ಆಯ್ಕೆ ಮೂಲಕ ಬಹು ದಿನಗಳ ನಂತರ ಅರ್ಜುನ್ ಬಂಪರ್ ಹಿಟ್ ನೀಡಿದ್ದಾರೆ. ಧ್ರುವ ಸರ್ಜಾ ಹಾಗೂ ರಾಧಿಕಾ ಪಂಡಿತ್ ಜೋಡಿಯನ್ನು ಸಮರ್ಥವಾಗಿ ನಿಭಾಯಿಸಿದ ಅರ್ಜುನ್ ಗೆದ್ದಿದ್ದಾರೆ.

ಯೋಗರಾಜ ಭಟ್ ಚಿತ್ರ: ಡ್ರಾಮಾ
186 ಶೇ 10.7 ಮತ ಗಳಿಕೆ
ವರ್ಷದ ಕೊನೆ ಒಳ್ಳೆ ಬೆಳೆ ತೆಗೆಯುವುದು ಭಟ್ಟರ ಅಭ್ಯಾಸ. ಕಥೆ ಇಲ್ಲದೆ ರೀಲು ಸುತ್ತಿ ಮನರಂಜನೆ ಫಾರ್ಮ್ಯೂಲಾವೇ ಬಂಡವಾಳ ಹಾಕಿಕೊಂಡಿರುವ ಭಟ್ಟರು, ಹೊಸ ನಟ, ನಟಿಯರ ತಂಡ, ಉದ್ದುದ್ದಾದ ಡೈಲಾಗ್ಸ್ ಗೆ ಕಟ್, ಬೇರೆ ಪ್ರಾಂತ್ಯ, ಭಾಷೆ ಬಳಕೆ ಮಾಡಿದ ಪರಿಣಾಮ ಯಶಸ್ವಿ ನಿರ್ದೇಶಕರ ಪಟ್ಟಿ ಸೇರಿದ್ದಾರೆ.

ಸುಮನಾ ಕಿತ್ತೂರು ಚಿತ್ರ: ಎದೆಗಾರಿಕೆ
140 ಶೇ 8.1 ಮತ ಗಳಿಕೆ
ವಿಮರ್ಶಕರು, ಪ್ರೇಕ್ಷಕರು ಒಕ್ಕೊರಲಿನಿಂದ ಮೆಚ್ಚುಗೆ ಸೂಸಿರುವ ಎದೆಗಾರಿಕೆ ಚಿತ್ರ ದಿನದಿಂದ ದಿನಕ್ಕೆ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ. ಆ ದಿನಗಳು ಶೈಲಿಯ ಚಿತ್ರಕ್ಕೆ ಹಾತೊರೆಯುತ್ತಿದ್ದ ಪ್ರೇಕ್ಷಕರಿಗೆ ಕಾಸಿಗೆ ತಕ್ಕ ಕಜ್ಜಾಯ ನೀಡುವಲ್ಲಿ ಅಗ್ನಿ ಶ್ರೀಧರ್ ಹಾಗೂ ಸುಮನಾ ಕಿತ್ತೂರು ಅವರ ತಂಡ ಯಶಸ್ವಿಯಾಗಿದೆ. ಆದಿತ್ಯ ಅವರಿಗೂ ಉತ್ತಮ ಬ್ರೇಕ್ ನೀಡುವ ಚಿತ್ರ ಇದಾಗಲಿದೆ.

ದುನಿಯಾ ಸೂರಿ ಚಿತ್ರ: ಅಣ್ಣಾ ಬಾಂಡ್
105 ಶೇ 6.1 ಮತ ಗಳಿಕೆ
ನಿರೀಕ್ಷೆಗೂ ಮೀರಿ ಚಿತ್ರ ಹಿಟ್ ಆಗದಿದ್ದರೂ ದುನಿಯಾ ಸೂರಿ ಎಂದಿನ ನಿರೂಪಣಾ ಶೈಲಿ, ಪವರ್ ಸ್ಟಾರ್ ಅಪ್ಪು ಅಭಿನಯ, ಖಳನಾಗಿ ಜಾಕಿ ಶ್ರಾಫ್ ಕರೆ ತಂದಿದ್ದು ವರ್ಕ್ ಔಟ್ ಆಗಿದೆ. ಸೂಪರ್ ಡೂಪರ್ ಹಿಟ್ ಲಿಸ್ಟ್ ನಿಂದ ಕೆಳಗೆ ಜಾರಿದ್ದರೂ ಯಶಸ್ವಿ ಚಿತ್ರವಾಗಿಸುವಲ್ಲಿ ಸೂರಿ ಶ್ರಮ ಎದ್ದು ಕಾಣುತ್ತದೆ.

ವಿಜಯ ಪ್ರಸಾದ್ ಚಿತ್ರ: ಸಿದ್ಲಿಂಗು
74 ಶೇ 4.3 ಮತ ಗಳಿಕೆ
ಸಂಭಾಷಣೆಯನ್ನೇ ಬಂಡವಾಳ ಮಾಡಿಕೊಂಡಿರುವ ದ್ವಂದ್ವಾರ್ಥ, ಅನಗತ್ಯ ಸನ್ನಿವೇಶಗಳನ್ನು ಒಳಗೊಂಡಿರುವ ಸಿದ್ಲಿಂಗು ಯಾಕೋ ಯುವ ಜನಾಂಗಕ್ಕೆ ಭಾರಿ ಇಷ್ಟವಾಗಿದೆ. ವಿಜಯ ಪ್ರಸಾದ್ ಅವರ ಸ್ಟೋರಿ ಐಡಿಯಾ ಹಾಗೂ ಕಥಾ ವಿಸ್ತರಣೆಗೆ ಫುಲ್ ಮಾರ್ಕ್ಸ್ ಆದರೆ, ಬೆಳ್ಳಿತೆರೆಗೂ ಕಿರುತೆರೆಗೂ ಇನ್ನೂ ವ್ಯತ್ಯಾಸ ಕಾಣಬೇಕು.

ಓಂ ಪ್ರಕಾಶ್ ರಾವ್ ಚಿತ್ರ : ಭೀಮಾತೀರದಲ್ಲಿ
51 ಶೇ 2.9 ಮತ ಗಳಿಕೆ
ವಿವಾದಗಳಿಂದಲೇ ಚಿತ್ರ ಜನರ ಕಿವಿಗೆ ಬಿದ್ದರೂ, ಥೇಟರ್ ಗೆ ಹೋದವರಿಗೆ ಮೋಸವಾಗುವುದಿಲ್ಲ. ಒಂದು ಪ್ರದೇಶದ ಕಥೆಯಾದರೂ ಅದನ್ನು ಸಮರ್ಥವಾಗಿ ಓಂ ಪ್ರೇಕ್ಷಕರಿಗೆ ತೋರಿಸಿದ್ದಾರೆ. ಸಾಹಸ ದೃಶ್ಯಗಳು, ಸಂಭಾಷಣೆ ಮೂಲಕ ವಿಜಯ್ ಹಾಗೂ ಪ್ರಣೀತಾ ಚಿತ್ರ ಹಿಟ್ ಆಗುವಲ್ಲಿ ಓಂ ಹಾಗೂ ಅಣಜಿ ಅವರ ಶ್ರಮ ಎದ್ದು ಕಾಣುತ್ತದೆ.

ಪವನ್ ಒಡೆಯರ್ ಚಿತ್ರ : ಗೋವಿಂದಾಯ ನಮಃ
50 ಶೇ 2.9 ಮತ ಗಳಿಕೆ
ಯೋಗರಾಜ ಭಟ್ಟರ ಶಿಷ್ಯ ಪವನ್ ಒಡೆಯರ್ ಮೊದಲ ಚಿತ್ರದಲ್ಲೇ ಗೆದ್ದಿದ್ದಾರೆ. ಕೋಮಲ್ ಕಾಮಿಡಿ ಟೈಂ, ವಿನೂತನ ಶೈಲಿಯಲ್ಲಿ ಹಾಡುಗಳ ಚಿತ್ರೀಕರಣ, ಸಂಭಾಷಣೆಯಲ್ಲಿ ದ್ವಂದ್ವಾರ್ಥ ಎಲ್ಲವನ್ನು ಸರಿಯಾದ ಪ್ರಮಾಣದಲ್ಲಿ ನೀಡಿರುವ ಪವನ್, ಕನ್ನಡ ಪಾಲಿಗೆ ಸಿಕ್ಕಿರುವ ಭರವಸೆಯ ಯುವ ನಿರ್ದೇಶಕ.

ಸುರೇಶ್ ಕೃಷ್ಣ ಚಿತ್ರ : ಕಠಾರಿ ವೀರ ಸುರಸುಂದರಾಂಗಿ
37 ಶೇ 2.1 ಮತ ಗಳಿಕೆ
ಮತ್ತೊಂದು ಭಾರಿ ತಾರಾಗಣವಿದ್ದ, ಕನ್ನಡದ ಮಟ್ಟಿಗೆ ಹೊಸ ಬಗೆಯ ಕಥೆ ಇದ್ದ ಈ ಚಿತ್ರವನ್ನು ಆಮದು ನಿರ್ದೇಶಕ ಸುರೇಶ್ ಕೃಷ್ಣ ಹಾಗೂ ಹೀಗೂ ನಿಭಾಯಿಸಿದ್ದಾರೆ. ಹಲವು ಸಿನಿಮಾಗಳ ರೀಮಿಕ್ಸ್ ನಂತಿದ್ದರೂ ಕನ್ನಡದಲ್ಲಿ 3ಡಿ ಚಿತ್ರ, ಉಪೇಂದ್ರ ಹಾಗೂ ರಮ್ಯಾ ಜೋಡಿ ಚಿತ್ರ ನಿರ್ದೇಶಿಸಿದ ಕೀರ್ತಿ ಸುರೇಶ್ ಕೃಷ್ಣಗೆ ಸಲ್ಲುತ್ತದೆ.

ಶ್ರೀನಿವಾಸ ರಾಜು ಚಿತ್ರ : ದಂಡುಪಾಳ್ಯ
19 ಶೇ 1.1 ಮತ ಗಳಿಕೆ
ಈ ಚಿತ್ರ ಗೆಲ್ಲುವಲ್ಲಿ ನಿರ್ದೇಶಕ ಪಾತ್ರ ಅಷ್ಟೇನು ಇಲ್ಲ ಎಂದೆನಿಸಿದರೂ ದೊಡ್ಡ ಸ್ಟಾರ್ ಪಡೆಯನ್ನು ನಿಭಾಯಿಸಿ, ವಿವಾದಗಳ ನಡುವೆ ಯಶಸ್ವಿ ಇತ್ರ ಕೊಟ್ಟ ಶ್ರೀನಿವಾಸ ರಾಜುಗೂ ಪ್ರೇಕ್ಷಕರ ಮೆಚ್ಚುಗೆ ಇದೆ. ಪೂಜಾ ಗಾಂಧಿ ಈ ರೇಂಜ್ ಗೆ ನಟನೆ ಮಾಡಿದ್ದಾರೆ ಎಂದರೆ ನಿರ್ದೇಶಕರ ಶ್ರಮ ಎದ್ದು ಕಾಣುತ್ತದೆ ಎಂದು ಪ್ರೇಕ್ಷಕರು ಹೇಳೋದು ನಿಜ.


Click it and Unblock the Notifications











