ಬೆಂಗಳೂರು ಚಲನ ಚಿತ್ರೋತ್ಸವಕ್ಕೆ ಪೆದ್ರೊ ಆಯ್ಕೆ ಆಗದೆ ಇರುವುದಕ್ಕೆ ರಿಷಬ್ ಶೆಟ್ಟಿ ಬೇಸರ: ಬಹಿರಂಗ ಪತ್ರ
ರಿಷಬ್ ಶೆಟ್ಟಿ ಫಿಲ್ಮ್ಸ್ನಿಂದ ನಿರ್ಮಾಣಗೊಂಡಿರುವ ಸಿನಿಮಾ 'ಪೆದ್ರೊ'. ಈ ಸಿನಿಮಾ ಕಳೆದ ಕೆಲವು ದಿನಗಳಿಂದ ಭಾರೀ ಸದ್ದು ಮಾಡುತ್ತಿದೆ. ಚಿತ್ರದ ಟ್ರೈಲರ್ ನೋಡಿದ ಸಿನಿಪ್ರಿಯರು ಪ್ರಶಂಸೆ ಮಾತುಗಳನ್ನು ಆಡಿದ್ದರು. ಇತ್ತೀಚೆಗೆ ಹಿರಿಯ ಸಿನಿಮಾ ನಿರ್ದೇಶಕ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತರಾದ ಗಿರೀಶ್ ಕಾಸರವಳ್ಳಿ ಕೂಡ 'ಪೆದ್ರೊ' ಸಿನಿಮಾವನ್ನು ಹೊಗಳಿ ಕೊಂಡಾಡಿದ್ದರು. ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿಯೂ ಈ ಸಿನಿಮಾ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದೆ. ಆದರೆ, ಕರ್ನಾಟಕದಲ್ಲಿ ಅದೂ ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಷ್ಟಿತ ಬೆಂಗಳೂರು ಚಲನ ಚಿತ್ರೋತ್ಸವಕ್ಕೆ 'ಪೆದ್ರೊ' ಆಯ್ಕೆಯಾಗಿಲ್ಲ. ಈ ವಿಚಾರಕ್ಕೆ ರಿಷಬ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರಿಯ ಚಲನ ಚಿತ್ರೋತ್ಸವಕ್ಕೆ 'ಪೆದ್ರೊ' ಆಯ್ಕೆ ಆಗದೆ ಇದ್ದಿದ್ದಕ್ಕೆ ರಿಷಬ್ ಬಹಿರಂಗ ಪತ್ರ ಬರೆದಿದ್ದಾರೆ. "ಜಗತ್ತಿನ ಹಲವು ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು, ಪ್ರಶಸ್ತಿ ಪಡೆದು, ವಿಮರ್ಶಕರಿಂದ ಪ್ರಶಂಸೆಗೆ ಒಳಗಾಗಿರುವ 'ಪೆದ್ರೊ' ನಮ್ಮ ಬೆಂಗಳೂರು ಚಲನಚಿತ್ರೋತ್ಸವಕ್ಕೆ ಯಾಕೋ ರುಚಿಸಿಲ್ಲ. ಕೆಲವೊಮ್ಮೆ ಕಹಿ ಗುಳಿಗೆಯನ್ನೂ ನುಂಗಬೇಕು ಆರೋಗ್ಯ ದೃಷ್ಟಿಯಿಂದ." ಎಂದು ಪತ್ರದಲ್ಲಿ ಬರೆದಿದ್ದಾರೆ. ಈ ಮೂಲಕ ಸಿನಿಮಾ ಎಲ್ಲಿ ನೋಡಬಹುದು ಎಂದು ಎಡೆಬಿಡದೆ ಕೇಳುತ್ತಿರುವ ಜನರಿಗೆ ಸಿನಿಮಾ ತಲುಪಿಸುವುದು ನಮ್ಮ ಬದ್ಧತೆ ಎಂದು ರಿಷಬ್ ಶೆಟ್ಟಿ ಕಿಡಿಕಾರಿದ್ದಾರೆ.

ಬೆಂಗಳೂರು ಚಿತ್ರೋತ್ಸವದ ವಿರುದ್ಧ ರಿಷಬ್ ಗರಂ
ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಮಾರ್ಚ್ 3ನೇ ತಾರೀಕಿನಿಂದ ಬೆಂಗಳೂರಿನಲ್ಲಿ ಆರಂಭ ಆಗಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಈ ಚಲನ ಚಿತ್ರೋತ್ಸವವನ್ನು ಉದ್ಘಾಟನೆ ಮಾಡಲಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಈ ಚಿತ್ರೋತ್ಸವದ ಪಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ದೇಶ-ವಿದೇಶದಿಂದ ಜನ ಮೆಚ್ಚುಗೆ ಪಡೆದಿರುವ ಸಿನಿಮಾಗಳನ್ನುಈ ಚಿತ್ರೋತ್ಸವದಲ್ಲಿ ಪ್ರದರ್ಶನ ಮಾಡಲಾಗುತ್ತೆ. ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಕನ್ನಡ ಸಿನಿಮಾ 'ಪೆದ್ರೊ' ಈ ಚಿತ್ರೋತ್ಸವಕ್ಕೆ ಆಯ್ಕೆ ಆಗಿಲ್ಲ. ಈ ಕಾರಣಕ್ಕೆ ರಿಷಬ್ ಬೇಸರ ಪಟ್ಟುಕೊಂಡಿದ್ದಾರೆ.

ರಿಷಬ್ ಬಹಿರಂಗ ಪತ್ರದಲ್ಲಿ ಏನಿದೆ?
"ವರ್ಷದ ಹಿಂದೆ ನಾನು ಈ ಕಥೆಯನ್ನು ಯೋಚಿಸಿದ್ದಾಗ ಅಥವಾ ಮಲೆನಾಡಿನ ಮಳೆಯಲ್ಲಿ ಚಿತ್ರೀಕರಿಸುತ್ತಿದ್ದಾಗ ಖಂಡಿತವಾಗಿ ಇದು ನಡೆಯುತ್ತಿರುವ ಅಂತಾರಾಷ್ಟ್ರೀಯ ಮಟ್ಟದ ಪ್ರಶಂಸೆಯ ಬಗ್ಗೆ ಯೋಚಿಸಿರಲಿಲ್ಲ. ಬೇರೆ ಬೇರೆ ಊರಿನಿಂದ ಬಂದ ನಾವು ನಮ್ಮದೇ ಕಥೆಯನ್ನು ನಮ್ಮದೇ ರೀತಿಯಲ್ಲಿ ಹೇಳಬೇಕು ಎಂಬುದಷ್ಟೇ ನಮಗಿದ್ದ ಗಟ್ಟಿ ನಿರ್ಧಾರ. ಮೊನ್ನೆ ಆಯೋಜಿಸಿದ್ದ ನಮ್ಮ ಸಿನಿಮಾದ ಪ್ರೈವೇಟ್ ಸ್ಕ್ರೀನಿಂಗ್ನಲ್ಲಿ ಆಗಮಿಸಿ, ಸಿನಿಮಾವನ್ನು ಬಹುತೇಕವಾಗಿ ಮೆಚ್ಚಿದ ಗಿರೀಶ್ ಕಾಸರವಳ್ಳಿ, ಎಂ. ಎಸ್ ಸತ್ಯು, ವಸಂತ ಮೋಕಾಶಿ, ವಿವೇಕ್ ಶಾನಭಾಗ್, ಕವಿತಾ ಲಂಕೇಶ್, ಇನ್ನಿತರು ತೋರಿದ ಪ್ರೀತಿ ನಮ್ಮ ಹೃದಯವನ್ನು ಆರ್ದ್ರಗೊಳಿಸಿದೆ. ನಮ್ಮ ಸಿನಿಮಾ ಚಲನಚಿತ್ರೋತ್ಸವದಿಂದ ಅವಕಾಶ ವಂಚಿತವಾಯಿತು ಎಂಬುದು ಎಷ್ಟು ಸತ್ಯವೋ, ನಮ್ಮದೇ ಊರಿನ ಜನ ನಮ್ಮದೇ ಸಿನಿಮಾವನ್ನು ವೀಕ್ಷಿಸಲು ವಂಚಿತರಾರದು ಎಂಬುದು ಅಷ್ಟೇ ಸತ್ಯ." ಎಂದು ರಿಷಬ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

ರಿಷಬ್ ಆರೋಪವೇನು?
ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನ ಮನ್ನಣೆ ಪಡೆದ ಅಪಟ್ಟ ಮಲೆನಾಡಿನ ಸಿನಿಮಾ 'ಪೆದ್ರೊ' ನಮ್ಮದೇ ಚಲನಚಿತ್ರೋತ್ಸವದಲ್ಲಿ ನಿರಾಸಕ್ತಿಗೆ ಒಳಗಾಗಿದ್ದಕ್ಕೆ ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಸಿನಿಮಾ ಎಂಬ ನದಿಗೆ ಎಲ್ಲಾ ತೊರೆಗಳೂ ಬಂದು ಸೇರಬೇಕು. ನಮ್ಮಲ್ಲಿಯ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅದಕ್ಕೆ ತಡೆಗಾಲು ಒಡ್ಡುವ ಪ್ರಯತ್ನ ಮಾಡಿದ್ದಾರೆ. ನಾವೆಲ್ಲಾ ಇವತ್ತು ಕುಳಿತಿರುವ ಜಾಗ ನಮಗೆ ಸಿನಿಮಾ ಎಂಬ ಮಾಧ್ಯಮ ನೀಡಿದ ಭಕ್ಷೀಸು. ಒಂದು ಸಿನಿಮಾವನ್ನು ಜನರಿಗೆ ತಲುಪುದನ್ನು ತಪ್ಪಿಸುತ್ತೇವೆ ಎಂದುಕೊಂಡರೆ ನೀರನ್ನು ಹಿಮ್ಮುಖ ಹರಿಸುತ್ತೇವೆ ಎಂದುಕೊಂಡಂತೆ. " ಎಂದು ಪರೋಕ್ಷವಾಗಿ ಅಡ್ಡಗಾಲು ಹಾಕಿದವರಿಗೆ ಎಚ್ಚರಿಕೆ ನೀಡಿದ್ದಾರೆ.

'ಪೆದ್ರೊ' ಬೂಸಾನ್ ಫೆಸ್ಟಿವಲ್ನಲ್ಲಿ ಪ್ರದರ್ಶನ
108 ನಿಮಿಷ ಕಾಲಾವದಿಯ 'ಪೆದ್ರೊ' ಸಿನಿಮಾ ಹಲವು ಅಂತಾರಾಷ್ಟ್ರಿಯ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. 26ನೇ ಬೂಸಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರದರ್ಶನ ಕಂಡು ಜನಮೆಚ್ಚುಗೆ ಗಳಿಸಿದೆ. BFI ಲಂಡನ್ ಫಿಲ್ಮ್ ಫೆಸ್ಟಿವಲ್ಗೆ ಈ ಸಿನಿಮಾ ಅಧಿಕೃತವಾಗಿ ಆಯ್ಕೆ ಆಗಿತ್ತು. ಆದರೆ, ಬೆಂಗಳೂರಿನ ಫಿಲ್ಮ್ ಫೆಸ್ಟಿವಲ್ನಲ್ಲಿ ಮಾತ್ರ ಈ ಸಿನಿಮಾ ಆಯ್ಕೆಯಾಗಿಲ್ಲ. ಈ ಕಾರಣಕ್ಕೆ ರಿಷಬ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.


Click it and Unblock the Notifications











