ವೋಟ್ ಹಾಕಿ ಥಿಯೇಟರ್ಗೆ ಬಂದು ಸಿನಿಮಾ ನೋಡಿ ಎಂದ ರಿಷಬ್ ಶೆಟ್ಟಿ; ಕಾಂತಾರ ಬಗ್ಗೆ ಏನಿದೆ ಸುದ್ದಿ?
ಲೋಕಸಭೆ ಚುನಾವಣೆ 2024 ಮೂರನೇ ಹಂತದ ಮತದಾನ ನಡೆದಿದೆ. ಸುಮಾರು 11 ಕ್ಷೇತ್ರದಲ್ಲಿ ಇಂದು (ಮೇ 7) ಮತದಾನ ನಡೆದಿದ್ದು, ಶಿವಮೊಗ್ಗ ಲೋಕಸಭೆ ಕ್ಷೇತ್ರ ಕೂಡ ಒಂದು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರಿನ ಕೆರಾಡಿಯಲ್ಲಿ ಕಾಂತಾರ ಖ್ಯಾತಿಯ ನಿರ್ದೇಶಕ ಕಮ್ ನಟ ರಿಷಬ್ ಶೆಟ್ಟಿ ಮತ ಚಲಾಯಿಸಿದ್ದಾರೆ.
ಮಧ್ಯಾಹ್ನದ ವೇಳೆಗೆ ತಾವು ಓದಿದ ಶಾಲೆಯಲ್ಲಿಯೇ ರಿಷಬ್ ಶೆಟ್ಟಿ ಮತ ಚಲಾವಣೆ ಮಾಡಿದ್ದಾರೆ. ಇದೇ ಶಾಲೆಯನ್ನು ಸ್ವತ: ರಿಷಬ್ ಶೆಟ್ಟಿಯೇ ಡೆವೆಲಪ್ ಮಾಡುತ್ತಿದ್ದಾರೆ. ಚುನಾವಣೆ ಸಂಬಂಧ ಶಾಲೆಯ ಕೆಲಸ ಸ್ಥಗಿತಗೊಂಡಿತ್ತು. ಈಗ ಅದೇ ಶಾಲೆಗೆ ಬಂದು ಮತ ಚಲಾಯಿಸಿ, ಇತ್ತೀಚೆಗೆ ಸೆಟ್ಟೇರಿರುವ 'ಕಾಂತಾರ' ಸಿನಿಮಾದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

"ಮತದಾನ ನಮ್ಮ ಹಕ್ಕು ಪ್ರತಿಯೊಬ್ಬರ ಜವಾಬ್ದಾರಿ. ಮತವನ್ನು ಚಲಾಯಿಸಬೇಕಿತ್ತು ಅದನ್ನು ಮಾಡಿದ್ದೇನಷ್ಟೇ. ಈಗ ನಿರೀಕ್ಷೆ, ಡಿಮ್ಯಾಂಡ್ ಬಗ್ಗೆ ಎಲ್ಲಾ ಮಾತಾಡಿದರೆ ಅದು ರಾಜಕೀಯ ಆಗಿಬಿಡುತ್ತೆ. ಹಾಗಾಗಿ ಅದರ ಬಗ್ಗೆ ಏನೂ ಮಾತಾಡುವ ಹಾಗಿಲ್ಲ. ನಮ್ಮ ಜವಾಬ್ದಾರಿಯನ್ನು ನಾನು ಮಾಡಿದ್ದೇನಷ್ಟೇ. ಅದನ್ನು ಮಾಡುವುದು ಮುಖ್ಯ. ಅದನ್ನು ಮಾಡಿದ್ದೇನಷ್ಟೇ." ಎಂದು ವೋಟ್ ಹಾಕಿದ್ದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಬೈಂದೂರಿನ ಕೆರಾಡಿ ಶಾಲೆಯನ್ನು ದತ್ತು ಪಡೆದು, ಶಾಲೆಯನ್ನು ಡೆವೆಲಪ್ ಮಾಡುತ್ತಿದ್ದಾರೆ. ಇದೇ ವೇಳೆ ಶಾಲೆಯ ಕೆಲಸಗಳು ಏನೇನು ನಡೆದಿದೆ ಅನ್ನುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. "ಶಾಲೆಯ ಕೆಲಸ ಶುರು ಮಾಡಿದ್ದೇವೆ. ಚುನಾವಣೆ ಇದ್ದಿದ್ದರಿಂದ ಸಂಪೂರ್ಣ ಕೆಲಸ ಮಾಡುವುದಕ್ಕೆ ಆಗಲಿಲ್ಲ. ಮೊದಲ ಹಂತದಲ್ಲಿ ಗ್ರೌಂಡ್ ವರ್ಕ್ ಶುರು ಮಾಡಿದ್ದೇವೆ.
ಈಗ ಸ್ವಲ್ಪ ಸ್ಕೂಲ್ ಚೆಂದ ಕಾಣುತ್ತಿದೆ. ಮಕ್ಕಳಿಗೆ ಆಡುವುದಕ್ಕೆ ಗ್ರೌಂಡ್ ದೊಡ್ಡದಾಗಲಿ ಅನ್ನುವ ಕಾರಣಕ್ಕೆ ಮೇಲೊಂದು ಕೆಳಗೊಂದು ಗ್ರೌಂಡ್ ಇತ್ತು ಎರಡನ್ನು ಸೇರಿಸಿ ದೊಡ್ಡ ಗ್ರೌಂಡ್ ಮಾಡಿದ್ದೇವೆ. ಚುನಾವಣೆ ಮುಗೀತು. ನಾಳೆಯಿಂದ ಫರ್ನಿಚರ್, ಬಣ್ಣ ಹಚ್ಚುವ ಕೆಲಸ ಜೊತೆಗೆ ಬೇರೆ ಇನ್ನು ಏನೇನು ಬೇಕು ಅನ್ನುವ ಕೆಲಸದ ಬಗ್ಗೆ ಆಲೋಚನೆ ಮಾಡುತ್ತಿದ್ದೇವೆ." ಎಂದಿದ್ದಾರೆ.
ಇದೇ ವೇಳೆ ಜನರು ಸಿನಿಮಾವನ್ನು ಥಿಯೇಟರ್ನಲ್ಲಿ ನೋಡಿದರೆ ಒಳ್ಳೆಯದು. ಇತ್ತೀಚೆಗೆ ಜನರು ಥಿಯೇಟರ್ನಲ್ಲಿ ಸಿನಿಮಾ ನೋಡುವುದಕ್ಕಿಂತ ಹೆಚ್ಚಾಗಿ ನ್ಯೂಸ್ಗಳಲ್ಲಿ ನೋಡುವುದೇ ಹೆಚ್ಚಾಗಿದೆ ಎಂದಿದ್ದಾರೆ. ಹಾಗೆ 'ಕಾಂತಾರ ಚಾಪ್ಟರ್ 1' ಸಿನಿಮಾದ ಶೂಟಿಂಗ್ ಆರಂಭ ಆಗಿದ್ದರ ಬಗ್ಗೆನೂ ಹೇಳಿಕೊಂಡಿದ್ದಾರೆ.

"ಶೂಟಿಂಗ್ ಶುರುವಾಗಿ ಅದರ ಬಗ್ಗೆ ಮಾಹಿತಿ ಹೊಂಬಾಳೆ ಫಿಲ್ಮ್ಸ್ ಕೊಟ್ಟರೆ ಚಂದ. ಶೂಟಿಂಗ್ ಶುರುವಾಗಿದೆ. ಏನು ಅಂದುಕೊಂಡಿದ್ದೇವೆ. ಆ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಮೊದಲಿಗಿಂತ ದೊಡ್ಡ ಜವಾಬ್ದಾರಿ. ಹಾಗಾಗಿ ತುಂಬಾ ದೊಡ್ಡ ತಂಡ ಕೆಲಸ ಮಾಡುತ್ತಿದೆ. ಹೊಂಬಾಳೆ ಫಿಲ್ಮ್ಸ್ ನಮ್ಮಂತಹ ಫಿಲ್ಮ್ ಮೇಕರ್ಗೆ ಸಿಕ್ಕಿದ್ದು ಪುಣ್ಯ ಅಂತ ಭಾವಿಸುತ್ತೇನೆ. ನಮ್ಮ ಬೆನ್ನೆಲುಬಾಗಿ ನಿಂತು ಇಂತಹ ಪ್ರಾಜೆಕ್ಟ್ ಮಾಡುವುದಕ್ಕೆ ಸಹಾಯ ಮಾಡುತ್ತಿದೆ. ಎಲ್ಲಾ ತುಂಬಾ ದೊಡ್ಡ ಟೆಕ್ನಿಶಿಯನ್ಸ್ ಇದ್ದೇವೆ. ಭರದಿಂದ ಶೂಟಿಂಗ್ ನಡೆಯುತ್ತಿದೆ." ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
"ಅಂದು ಕೆಲಸ ಮಾಡುವಾಗಲೂ ಕಾಂತಾರ ನನಗೆ ತುಂಬಾನೇ ದೊಡ್ಡ ಸಿನಿಮಾ ಆಗಿತ್ತು. ಈ ಬಾರಿ ಕೂಡ ಅದೇ ಎಕ್ಸ್ಪೀರಿಯನ್ಸ್ ಮಾಡುತ್ತಿದ್ದೇವೆ. ಮತ್ತೆ ಸಿನಿಮಾ ಮೂಲಕ ಕಲಿಯುವ ಪ್ರಕ್ರಿಯೆ ಅಷ್ಟೇ. ಒಂದು ವರ್ಷದಿಂದ ಗಡ್ಡ ಬಿಟ್ಟಿದ್ದೇನೆ. ಅದರ ಬಗ್ಗೆ ಹೊಸ ವಿಚಾರವೇನಿಲ್ಲ. ಕಳೆದ ಬಾರಿ ಇಲ್ಲೇ ಸುತ್ತಮುತ್ತ ಶೂಟ್ ಮಾಡಿದ್ದೆವು. ಈ ಬಾರಿ ಕೂಡ ಇಲ್ಲೇ ಶೂಟಿಂಗ್ ಮಾಡುತ್ತೇವೆ." ಎಂದಿದ್ದಾರೆ.


Click it and Unblock the Notifications











