Rishab Shetty:ಕಾಡ್ಗಿಚ್ಚು, ಕಾಡಾನೆ ತೊಂದರೆ ಪರಿಹಾರಕ್ಕೆ ಮುಂದಾದ ಡಿವೈನ್ ಸ್ಟಾರ್: ಸಿಎಂಗೆ ಮಾಡಿದ ಮನವಿಯಲ್ಲೇನಿದೆ?
'ಕಾಂತಾರ' ಸಿನಿಮಾ ಮೂಲಕ ಇಡೀ ಇಂಡಿಯಾವನ್ನೇ ಗೆದ್ದ ಕನ್ನಡದ ನಟ ರಿಷಬ್ ಶೆಟ್ಟಿ. ಮೆಗಾ ಬ್ಲಾಕ್ಬಸ್ಟರ್ ಸಿನಿಮಾ ಕೊಟ್ಟ ಬಳಿಕ ರಿಷಬ್ ಶೆಟ್ಟಿ ಪ್ರೀಕ್ವೆಲ್ಗೆ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಸಮಾಜಮುಖಿ ಕೆಲಸಗಳಲ್ಲೂ ಭಾಗಿಯಾಗಿದ್ದಾರೆ. ಹೀಗಾಗಿ ಕಾಡಿನ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
'ಕಾಂತಾರ' ಸಿನಿಮಾ ಕೂಡ ಕಾಡಿನ ಜನರಿಗೆ ಸಂಬಂಧಿಸಿದ ಕಥೆಯೇ ಆಗಿದೆ. ಸಿನಿಮಾದಿಂದ ಜನಪ್ರಿಯತೆ ಹಾಗೂ ಯಶಸ್ಸು ಗಳಿಸಿದ ಬಳಿಕ ಕಾಡು ಹಾಗೂ ಕಾಡಿನ ಜನರಿಗಾಗಿ ಉತ್ತಮ ಕೆಲಸವನ್ನು ಮಾಡಲು ರಿಷಬ್ ಶೆಟ್ಟಿ ಮುಂದಾಗಿದ್ದಾರೆ. ಈ ಬೆನ್ನಲ್ಲೇ ರಾಜ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ,ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

ಕಾಡಂಚಿನ ಜನರ ಸಮಸ್ಯೆ ಬಗೆಹರಿಸುವಂತೆ ಮನವಿ
ರಾಜ್ಯದ ಬೇರೆ ಬೇರೆ ಭಾಗದಲ್ಲಿರುವ ಕಾಡಂಚಿನ ಜನರು ಹಾಗೂ ಅರಣ್ಯ ರಕ್ಷಣೆ ಮಾಡುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ರಿಷಬ್ ಶೆಟ್ಟಿ ಪಟ್ಟಿ ಮಾಡಿದ್ದಾರೆ. ಇದನ್ನು ಪರಿಹರಿಸುವಂತೆ ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ರಿಷಬ್ ಮನವಿ ಪತ್ರವನ್ನು ಸಲ್ಲಿಸಿದ್ದಾರೆ. ಡಿವೈನ್ ಸ್ಟಾರ್ ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರೋ ಸಿಎಂ ಶೀಘ್ರ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಆದೇಶಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
'ಕಾಂತಾರ' ಸಿನಿಮಾದ ಬಳಿಕ ರಿಷಬ್ ಶೆಟ್ಟಿ ಕಾಡು ಹಾಗೂ ಕಾಡಂಚಿನ ಪ್ರದೇಶಗಳಲ್ಲಿ ಹೆಚ್ಚು ಸುತ್ತಾಡಿದ್ದರು. ಈ ವೇಳೆ ಅರಣ್ಯ ರಕ್ಷಣೆಯ ಇಲಾಖೆಯ ಸಿಬ್ಬಂದಿಗಳು ಎದುರಿಸುವ ಸವಾಲುಗಳನ್ನು ಅರಿತುಕೊಂಡಿದ್ದಾರೆ. ಹಾಗೇ ಕಾಡಂಚಿನ ಪ್ರದೇಶಗಳಲ್ಲಿ ನೆಲೆಸಿರುವ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆನೂ ಅರಿತುಕೊಂಡಿರುವುದಾಗ ರಿಷಬ್ ಶೆಟ್ಟಿ ಹೇಳಿದ್ದಾರೆ.
ಸಿಎಂ ಭೇಟಿ ಬಳಿಕ ಟ್ವೀಟ್
ಕಾಡಿನ ಅಂಚಿನಲ್ಲಿರುವ ಕೃಷಿಕರು ಎದುರಿಸುತ್ತಿರುವ ಕಾಡಾನೆ ತೊಂದರೆ, ಬೇಸಿಗೆಯಲ್ಲಿ ಹಬ್ಬುವ ಕಾಡ್ಗಿಚ್ಚು, ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ವಾಚರ್ಗಳು ಎದುರಿಸುತ್ತಿರುವ ಅಡೆ-ತಡೆಗಳನ್ನು ಪಟ್ಟಿ ಮಾಡಿದ್ದಾರೆ. ಸುಮಾರು 20 ಅಂಶಗಳನ್ನು ಪಟ್ಟಿ ಮಾಡಿ, ಅದಕ್ಕೆ ವಿವರಣೆಯನ್ನೂ ನೀಡಿದ ಪತ್ರದೊಂದಿಗೆ ಸಿ ಎಂ ಬಸವರಾಜ್ ಬೊಮ್ಮಾಯಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಸಿಎಂ ಕೂಡ ಸಕರಾತ್ಮಕವಾಗಿ ಸ್ಪಂದಿಸಿದ್ದು ರಿಷಬ್ ಶೆಟ್ಟಿಗೆ ಸಮಾಧಾನ ತಂದಿದೆ,
ಅರಣ್ಯ ರಕ್ಷಣೆ ಹಾಗೂ ಹಾಗೂ ಅಲ್ಲಿನ ಜನರ ಭಾವನೆಗಳನ್ನು 'ಕಾಂತಾರ' ಸಿನಿಮಾ ಮೂಲಕ ಹೊರತಂದಿದ್ದರು. ಈ ಮೂಲಕ ಕಾಡಿನ ಸಂರಕ್ಷಣೆ ಬಗ್ಗೆ ಸಂದೇಶವನ್ನೂ ನೀಡಿದ್ದರು. ಹಾಗಂತ ಸಿನಿಮಾ ಮಾಡಿ ಸುಮ್ಮನಾಗಿರಲಿಲ್ಲ. ಈಗ ರಿಷಬ್ ಶೆಟ್ಟಿಯವರು ಅರಣ್ಯ ರಕ್ಷಣೆ ಮತ್ತು ಕಾಡಂಚಿನಲ್ಲಿರುವ ಜನರ ಹಿತಕ್ಕಾಗಿ ಒಂದೊಳ್ಳೆ ಕೆಲಸ ಮಾಡಲು ಮುಂದಾಗಿದ್ದಾರೆ. ಸಿಎಂ ಭೇಟಿ ಮೂಲಕ ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾರೆ.
"ಕಾಂತಾರ ಚಿತ್ರದ ನಂತರದ ದಿನಗಳಲ್ಲಿ ಕಾಡು ಸುತ್ತಿ, ಅಡವಿ ಅಂಚಿನ ಜನರ ಜತೆ ಮಾತಾಡಿ, ಅರಣ್ಯ ಇಲಾಖೆ ಸಿಬ್ಬಂದಿಗಳ ಜತೆ ಚರ್ಚಿಸಿ ಕಲೆಹಾಕಿದ ಅಂಶಗಳನ್ನು ಮಾನ್ಯ ಮುಖ್ಯಮಂತ್ರಿಗಳ ಮುಂದಿಟ್ಟಾಗ ಅವರು ತಕ್ಷಣವೇ ಪರಿಹರಿಸುವುದಾಗಿ ಹೇಳಿದ್ದಾರೆ. ಸಮಸ್ಯೆಗೆ ಸ್ಪಂದಿಸಿದ ಶ್ರೀ ಬಸವರಾಜ ಬೊಮ್ಮಾಯಿಯವರಿಗೆ ಧನ್ಯವಾದಗಳು." ಎಂದು ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.


Click it and Unblock the Notifications











