ರಿಯಲ್ ಲೈಫ್ನಲ್ಲಿ 'ಕಾಂತಾರ' ದೃಶ್ಯ; ಮಂಗಳೂರಿನ ಎಡಮಂಗಲದಲ್ಲಿ ನಡೆದಿದ್ದೇನು?
ಕರಾವಳಿ ಭಾಗದ ದೈವದ ಬಗ್ಗೆ ಜಗತ್ತಿಗೆ ಪರಿಚಯ ಮಾಡಿಕೊಟ್ಟ ಹೆಗ್ಗಳಿಕೆ ರಿಷಬ್ ಶೆಟ್ಟಿಗೆ ಸಲ್ಲಬೇಕು. 'ಕಾಂತಾರ' ಸಿನಿಮಾ ಮೂಲಕ ಅಲ್ಲಿನ ದೈವಗಳು, ಅವುಗಳ ನಿಯಮ, ಶಕ್ತಿ ಬಗ್ಗೆ ರಿಷಬ್ ಶೆಟ್ಟಿ ತಮ್ಮ ಸಿನಿಮಾದಲ್ಲಿ ಪರಿಣಾಮಕಾರಿಯಾಗಿ ತೋರಿಸಿದ್ದರು. ಹಾಗಾಗಿ ಸಿನಿಮಾಗೆ ಕೇವಲ ಕರಾವಳಿ, ಕರ್ನಾಟಕ ಅಷ್ಟೇ ಅಲ್ಲ. ಭಾರತದಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು.
ಇಂದಿಗೂ ಉತ್ತರ ಭಾರತದ ಮಂದಿ 'ಕಾಂತಾರ' ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಈ ಸಿನಿಮಾ ಮೂಲಕವೇ ರಿಷಬ್ ಶೆಟ್ಟಿಯನ್ನು ಗುರುತಿಸುತ್ತಾರೆ. ಅದೇ ಇನ್ನೊಂದು ಕಡೆ ಕರ್ನಾಟಕದಲ್ಲೂ ಕರಾವಳಿ ದೈವದ ಬಗ್ಗೆ ಆಸಕ್ತಿ ಹೆಚ್ಚಾಗಿದೆ. ರಾಜ್ಯದ ಮೂಲೆ ಮೂಲೆಯಲ್ಲಿರೋ ಜನರು 'ಪಂಜುರ್ಲಿ', 'ಗೂಳಿಗ' ಹಾಗೂ 'ಕೊರಗಜ್ಜ'ನ ಬಗ್ಗೆ ನಂಬಿಕೆ ಹೆಚ್ಚಿಸಿಕೊಂಡಿದ್ದಾರೆ.

ಇದೇ 'ಕಾಂತಾರ' ಸಿನಿಮಾದಲ್ಲೊಂದು ದೃಶ್ಯವಿದೆ. ದೈವ ನರ್ತನದ ಕಾರ್ಯವನ್ನು ತಂದೆಯ ಬಳಿಕ ಮಗ ಅಂದರೆ, ರಿಷಬ್ ಶೆಟ್ಟಿ ಮುಂದುವರೆಸಿಕೊಂಡು ಹೋಗುತ್ತಾರೆ. ಈ ದೃಶ್ಯ 'ಕಾಂತಾರ' ಸಿನಿಮಾ ಹೈಲೈಟ್ಗಳಲ್ಲಿ ಒಂದು. ದೈವ ನರ್ತಕರಾಗುವುದಕ್ಕೂ ಮುನ್ನ ಏನೆಲ್ಲ ನಡೆಯುತ್ತೆ. ದೈವ ನರ್ತನ ಮಾಡುವುದಕ್ಕೆ ಇರುವ ನಿಯಮಗಳೇನು? ದೈವ ನರ್ತನ ಹೇಗೆ ನಡೆಯುತ್ತೆ? ಅನ್ನೋದನ್ನು ಅತೀ ಸುಂದರವಾಗಿ ತೋರಿಸಿದ್ದರು.
ಇದೇ ದೃಶ್ಯವೀಗ ರಿಯಲ್ ಲೈಫ್ನಲ್ಲಿ ನಡೆದಿದೆ. ತುಳುನಾಡಿನ ದೈವಾರಾಧನೆಗೆ ಸಂಬಂಧಿಸಿದಂತೆ ವಾಸ್ತವಕ್ಕೆ ಅತ್ಯಂತ ಹತ್ತಿರದ ಸನ್ನಿವೇಶವಿದು. ಈ ದೃಶ್ಯವನ್ನೇ ನೆನಪಿಸುವ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಎಡಮಂಗಲದಲ್ಲಿ ನಡೆದಿದೆ. ಇದನ್ನು ಅಲ್ಲಿನ ಜನರಿಗೆ ಅಚ್ಚರಿ ಎನಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಎಡಮಂಗಲದ ಶಿರಾಡಿ ದೈವಸ್ಥಾನದಲ್ಲಿ ಈ ಘಟನೆ ನಡೆದಿದೆ. ಅಸಲಿಗೆ ನಡೆದಿದ್ದು ಏನು ಅಂತ ನೋಡುವುದಾದರೆ, ಶಿರಾಡಿ ದೈವಸ್ಥಾನಕ್ಕೆ ಸಂಬಂಧಪಟ್ಟ ದೈವ ನರ್ತಕ ಕಾಂತು ಅಜಿಲರು ದೈವ ನರ್ತನದಲ್ಲಿದ್ದ ವೇಳೆಯೇ ಮೃತಪಟ್ಟಿದ್ದರು. ಆ ಬಳಿಕ ಗ್ರಾಮದ ಜನತೆ ಹೊಸ ದೈವನರ್ತಕನ ಹುಡುಕಾಟದಲ್ಲಿದ್ದರು.
ಈ ಕಾರಣಕ್ಕೆ ದೈವಜ್ಞರಿಂದ ಪ್ರಶ್ನೆಯನ್ನು ಇರಿಸಿದ್ದರು. ಈ ವೇಳೆ ಕಾಂತು ಅಜಿಲರ ಮಕ್ಕಳನ್ನೇ ಮುಂದಿನ ದೈವ ನರ್ತಕರಾಗಿ ಮಾಡಬೇಕು ಎಂಬ ಆಜ್ಞೆ ಬಂದಿದೆ. ಆ ಆಜ್ಞೆಯಂತೆಯೇ ಕಾಂತು ಅಜಿಲರ ಮಕ್ಕಳಾದ ಮೋನಪ್ಪ ಹಾಗೂ ದಿನೇಶ್ ಇಬ್ಬರನ್ನು ಮುಂದಿನ ದೈವ ನರ್ತಕರನ್ನಾಗಿ ನೇಮಿಕ ಮಾಡಲಾಗಿದೆ. ಇದಕ್ಕೆ ಶಿರಾಡಿ ದೈವದ ಅನುಮತಿಯೂ ದೊರಕಿದ್ದು ವಿಶೇಷ.
ಶಿರಾಡಿ ದೈವದ ನೇಮೋತ್ಸವದ ದಿನ ಕಾಂತು ಅಜಿಲರ ಮಕ್ಕಳಾದ ಮೋನಪ್ಪ ಹಾಗೂ ದಿನೇಶ್ ಇಬ್ಬರನ್ನು ದೈವದ ಮುಂದೆ ನಿಲ್ಲಿಸಲಾಗಿತ್ತು. ದೈವ ಇಬ್ಬರಿಗೂ ಹೇಗೆ ದೈವದ ಸೇವೆ ಮಾಡಬೇಕು ಎಂಬುವುದನ್ನು ವಿವರವಾಗಿ ತಿಳಿಸುವ ಪ್ರಕ್ರಿಯೆ ಗ್ರಾಮದ ಜನರಲ್ಲಿ ರೋಮಾಂಚನ ಉಂಟು ಮಾಡಿದೆ. ಈ ವೇಳೆ ದೈವದ ನರ್ತಕರಾಗಿ ಸೇವೆ ಸಲ್ಲಿಸಲಿರುವ ಮೋನಪ್ಪ ಹಾಗೂ ದಿನೇಶ್ ಕಣ್ಣೀರು ಹಾಕಿದ್ದು ಜನರನ್ನು ಮೂಕವಿಸ್ಮಿತರನ್ನಾಗಿಸಿದೆ.
ಅಂದ್ಹಾಗೆ, ದೈವ ನರ್ತಕನದ ದೀಕ್ಷೆ ಪಡೆಯುವ ಮೊದಲು ಶುದ್ಧವಾಗಿ ಮಡಿ ಬಟ್ಟೆ ತೊಟ್ಟು ಸುತ್ತಿ ಮನೆಮಂದಿ ಹಾಗೂ ಗ್ರಾಮದ ಹಿರಿಯರ ಆಶೀರ್ವಾದ ಪಡೆಬೇಕು. ಆ ಬಳಿಕ ನಾಲ್ವರು, ಒಂಬತ್ತು ದಿಕ್ಕಿಗೆ ಸೇರಿದ ಜನರ ಸಮ್ಮುಖದಲ್ಲಿ ನರ್ತನ ದೀಕ್ಷೆಯನ್ನು ಯುವಕರಿಗೆ ನೀಡಲಾಗುತ್ತದೆ. ದೈವ ತನ್ನ ಅವಾಹನೆಯನ್ನು ಹೊಸದಾಗಿ ನೇಮಕವಾದ ದೈವ ನರ್ತಕರ ಮೂಲಕ ತೋರ್ಪಡಿಸಲಿದೆ ಎನ್ನುವುದು ದೀಕ್ಷೆ ಬೂಳ್ಯದ ಹಿಂದಿರುವ ತತ್ವ. ಈ ಅಪೂರ್ವ ಕ್ಷಣವನ್ನು ಎಡಮಂಗಲ ಹಾಗೂ ಸುತ್ತಮುತ್ತಲಿನ ಊರಿನ ಜನರು ನೆರೆದಿದ್ದರು.


Click it and Unblock the Notifications











