'ನನ್ನ ಅಚ್ಚುಮೆಚ್ಚಿನ ನಟ ಜೂ.ಎನ್ಟಿಆರ್.. ಯಾಕಂದ್ರೆ ಅವರ ಅಮ್ಮನ ಊರು ನನ್ನೂರು'-ರಿಷಬ್ ಶೆಟ್ಟಿ!
ಸ್ಯಾಂಡಲ್ವುಡ್ನಲ್ಲಿ 'ಕಾಂತಾರ' ಅಬ್ಬರಿಸುತ್ತಿರೋದು ಇನ್ನೂ ನಿಂತಿಲ್ಲ. ಎರಡು ವಾರದ ಬಳಿಕವೂ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆ ಎರಡೂ ಪ್ರೇಕ್ಷಕರ ನಿದ್ದೆಗೆಡಿಸಿದೆ.
ಬಾಕ್ಸಾಫೀಸ್ನಲ್ಲಿ 'ಕಾಂತಾರ' ಕೇವಲ ಕರ್ನಾಟಕದಲ್ಲಿಯೇ 50 ಕೋಟಿ ರೂ. ಕಲೆಕ್ಷನ್ ದಾಟಿದೆ ಎನ್ನಲಾಗಿದೆ. ಅಲ್ಲದೆ ವೀಕ್ಡೇಸ್ನಲ್ಲೂ 'ಕಾಂತಾರ' ಸಿನಿಮಾದ ಕಲೆಕ್ಷನ್ ಭರ್ಜರಿಯಾಗಿಯೇ ಇದೆ. ಈ ಬೆನ್ನಲ್ಲೇ ಸಿನಿಮಾ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗುತ್ತಿದೆ.
'ಕಾಂತಾರ' ಈಗಾಗಲೇ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗೆ ಡಬ್ ಆಗುತ್ತಿದೆ. ಅದರಲ್ಲೂ ಸಿನಿಮಾ ಇದೇ ವಾರ ಬಿಡುಗಡೆಯಾಗುತ್ತಿರುವುದರಿಂದ ತೆಲುಗಿನಲ್ಲಿ ಪ್ರಚಾರ ಆರಂಭಿಸಿದ್ದಾರೆ. ಈ ವೇಳೆ ರಿಷಬ್ ಶೆಟ್ಟಿ ಜೂ.ಎನ್ಟಿಆರ್ ಹಾಗೂ ಅವರ ತಾಯಿಯ ಹುಟ್ಟೂರಿನ ಬಗ್ಗೆ ಮಾತಾಡಿದ್ದಾರೆ. ಅದೇನು ಅಂತ ತಿಳಿಯಲು ಮುಂದೆ ಓದಿ.

'ಜೂ.ಎನ್ಟಿಆರ್ ನನಗೆ ಇಷ್ಟ'
'ಕಾಂತಾರ' ತೆಲುಗು ಸಿನಿಮಾದ ಪ್ರಚಾರದಲ್ಲಿ ರಿಷಬ್ ಶೆಟ್ಟಿ ತೊಡಗಿದ್ದಾರೆ. ಈ ವೇಳೆ ಸಂದರ್ಶನವೊಂದರಲ್ಲಿ ನಿರೂಪಕಿ ತೆಲುಗು ಸ್ಟಾರ್ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ವೇಳೆ ರಿಷಬ್ ಶೆಟ್ಟಿ ಟಾಲಿವುಡ್ ಸ್ಟಾರ್ ನಟ ಜೂ.ಎನ್ಟಿಆರ್ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. "ಎನ್ಟಿಆರ್, ಕೃಷ್ಣಗಾರು, ಬಾಲಯ್ಯ ಬಾಬು ಸಿನಿಮಾಗಳನ್ನು ನೋಡುತ್ತೇನೆ. ಆದರೆ ನನ್ನ ಅಚ್ಚುಮೆಚ್ಚಿನ ನಟ ಜೂ.ಎನ್ಟಿಆರ್. ಯಾಕಂದ್ರೆ, ಅವರ ಅಮ್ಮನ ಹುಟ್ಟೂರು ನನ್ನ ಊರು. ಕುಂದಾಪುರದವರು. ತುಂಬಾ ಅದ್ಭುತ ನಟ." ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

'ನಾನು ತುಂಬಾ ಪ್ಲ್ಯಾನ್ ಮಾಡುವುದಿಲ್ಲ'
"ನಾನು ತುಂಬಾ ಪ್ಲ್ಯಾನ್ ಮಾಡುವುದಿಲ್ಲ. ನಾನು ಯಾವಾಗಲೂ ಫ್ಲೋನಲ್ಲಿ ಮುಂದಕ್ಕೆ ಸಾಗುತ್ತೇನೆ. ಆ ದಿನ ನನಗೆ ತುಂಬಾನೇ ಮುಖ್ಯ ಆಗುತ್ತೆ. ಎಲ್ಲಾ ಹೀರೊಗಳ ಜೊತೆನೂ ಕೆಲಸ ಮಾಡುವುದಕ್ಕೆ ಇಷ್ಟ." ಎಂದಿದ್ದಾರೆ ರಿಷಬ್ ಶೆಟ್ಟಿ. ಹಾಗೇ ನಿರೂಪಕಿ ಎನ್ಟಿಆರ್ ಜೊತೆ ಕೆಲಸ ಮಾಡುತ್ತೀರಾ ಅನ್ನೋ ಪ್ರಶ್ನೆ ಹೌದು ಎಂದಿದ್ದಾರೆ.

ಜೂ.ಎನ್ಟಿಆರ್ ಊರು ಕುಂದಾಪುರ
ಜೂ.ಎನ್ಟಿಆರ್ ಅಮ್ಮ ಶಾಲಿನಿ ಹುಟ್ಟಿ ಬೆಳೆದ ಊರು ಕುಂದಾಪುರ. ಹಲವು ಬಾರಿ ಸ್ವತ: ಜೂ.ಎನ್ಟಿಆರ್ ಈ ಮಾತನ್ನು ಹೇಳಿದ್ದಾರೆ. ಸ್ವತಃ ಜೂ.ಎನ್ಟಿಆರ್ ಪ್ರಶಸ್ತಿ ಸಮಾರಂಭವೊಂದರಲ್ಲಿ ಈ ಮಾತನ್ನು ಹೇಳಿದ್ದರು. "ನನ್ನ ತಾಯಿ ಕುಂದಾಪುರ ಮೂಲದವರು. ನನ್ನ ತಾತ ಎನ್ಟಿಆರ್ ಕುಟುಂಬದಂತೆ, ನನ್ನ ಅಮ್ಮನ ಕುಟುಂಬ ಕೂಡ ತುಂಬಾನೇ ದೊಡ್ಡದು. ನಾನು ಕುಂದಾಪುರಕ್ಕೆ ಆಗಾಗ ಬರುತ್ತೇನೆ. ಕರ್ನಾಟಕ ಮತ್ತು ಕನ್ನಡ ನನ್ನ ಜೀವನದ ಬಹು ಮುಖ್ಯ ಅಂಗ." ಎಂದು ಜೂ.ಎನ್ಟಿಆರ್ ಹೇಳಿದ್ದರು.

ಜಾನಪದ ವಾದ್ಯ ಬಳಸಿದ್ದೇವೆ
"ನಾನು ತುಂಬಾ ಯೋಚನೆ ಮಾಡುವುದಿಲ್ಲ. ನನಗೆ ಸಿನಿಮಾ ಮಾಡುವ ಬಗ್ಗೆ ಒಂದು ಐಡಿಯಾ ಬಂದರೆ, ಹಾಗೇ ಅದನ್ನು ಶೂಟ್ ಮಾಡುತ್ತೇನೆ. ಹಾಗೇ ಫ್ಲೋ ಜೊತೆ ಸಿನಿಮಾ ಮಾಡೋಕೆ ಮುಂದಾಗುತ್ತೇನೆ. ಕಾಂತಾರ ಸಿನಿಮಾ ಮಾಡುವಾಗಲೂ ನಾವು ಸಂಗೀತಕ್ಕೆ ಹೆಚ್ಚು ಮಹತ್ವ ಕೊಟ್ಟಿದ್ದೇವೆ. ಕರಾವಳಿ ಕಡೆಯ ಜಾನಪದ ವಾದ್ಯಗಳನ್ನುತಂದು, ಅದನ್ನು ಹಾಡುಗಳಲ್ಲಿ ಅಳವಡಿಸುವ ಪ್ರಯತ್ನ ಮಾಡಿದ್ದೇನೆ." ಎಂದು ರಿಷಬ್ ಶೆಟ್ಟಿ ನಿರೂಪಕಿಗೆ ಹೇಳಿದ್ದಾರೆ.


Click it and Unblock the Notifications











