ಕೋರ್ಟ್ನಲ್ಲೇ ಮಾತಾಡಬೇಕು.. ಇಲ್ಲಿ ಮಾತಾಡಬಾರದು': ವರಾಹ ರೂಪಂ ವಿವಾದ ಬಗ್ಗೆ ರಿಷಬ್ ಪ್ರತಿಕ್ರಿಯೆ!
ರಿಷಬ್ ಶೆಟ್ಟಿಯ 'ಕಾಂತಾರ' ಸಿನಿಮಾ ವಿಶ್ವದ ಉದ್ದಗಲಕ್ಕೂ ಗಮನ ಸೆಳೆದಿದೆ. ಕನ್ನಡ ಮಣ್ಣಿನ ಕಥೆಯನ್ನು ತೆರೆಮೇಲೆ ನೋಡಿ ಸಿನಿಪ್ರಿಯರು ಥ್ರಿಲ್ ಆಗಿದ್ದರು. ಬಾಕ್ಸಾಫೀಸ್ನಲ್ಲೂ ಹೊಸ ಹೊಸ ದಾಖಲೆಗಳನ್ನು 'ಕಾಂತಾರ' ಸಿನಿಮಾ ಸೃಷ್ಟಿ ಮಾಡಿತ್ತು.
ರಿಷಬ್ ಶೆಟ್ಟಿಯ ನಟನೆ, ನಿರ್ದೇಶನಕ್ಕೆ ಇಡೀ ದೇಶವೇ ಚಪ್ಪಾಳೆ ತಟ್ಟಿದ್ದರು. ಇಷ್ಟೆಲ್ಲಾ ಸಾಧನೆ ಮಾಡಿದ್ದರೂ, 'ಕಾಂತಾರ' ಸಿನಿಮಾದ ಹಾಡು 'ವರಾಹ ರೂಪಂ' ವಿವಾದಗಳಲ್ಲಿ ಸಿಕ್ಕಿಕೊಂಡಿತ್ತು. ಈ ಹಾಡಿನ ಬಗ್ಗೆ ರಿಷಬ್ ಶೆಟ್ಟಿ ಕಲಬುರಗಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
'ಕಾಂತಾರ' ಮೂಲಕ ದೇಶದಲ್ಲೆಡೆ ಜನಪ್ರಿಯರಾಗಿರುವ ರಿಷಬ್ ಶೆಟ್ಟಿಗೆ ಇಂದು (ಡಿಸೆಂಬರ್ 02) ಕಲಬುರಗಿಯಲ್ಲಿ ಸಿದ್ದಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ವೇಳೆ ರಿಷಬ್ ಶೆಟ್ಟಿ ಮಲಯಾಳಂನ ಥೈಕ್ಕುಡಂ ಬ್ರಿಡ್ಜ್ ಬ್ಯಾಂಡ್ ಮಾಡಿದ ಕೃತಿಚೌರ್ಯ ಆರೋಪಕ್ಕೆ ರಿಯಾಕ್ಷನ್ ನೀಡಿದ್ದಾರೆ. ಅದೇನು ಅಂತ ತಿಳಿಯಲು ಮುಂದೆ ಓದಿ.

'ಜನರಿಗೆ ಥ್ಯಾಂಕ್ಸ್ ಹೇಳಲು ಇಷ್ಟ ಪಡುತ್ತೇನೆ'
'ಕಾಂತಾರ' ಜನರ ಮನಗೆದ್ದಿದೆ. ವಿಶ್ವದಾದ್ಯಂತ ಈ ಮಟ್ಟಕ್ಕೆ ಧೂಳೆಬ್ಬಿಸಬಹುದು ಅನ್ನೋದನ್ನು ಯಾರೂ ನಿರೀಕ್ಷೆ ಕೂಡ ಮಾಡಿಲ್ಲ. ರಿಷಬ್ ಶೆಟ್ಟಿ ವೃತ್ತಿ ಬದುಕಿನಲ್ಲಿ ಈ ಸಿನಿಮಾ ದೊಡ್ಡ ತಿರುವು ಕೊಟ್ಟಿದೆ. ಅದಕ್ಕಾಗಿ ಈ ಗೆಲುವು ಜನರಿಗೆ ಸೇರಬೇಕು ಅಂತ ಕಲಬುರಗಿಯಲ್ಲಿ ಹೇಳಿದ್ದಾರೆ. "ಜನರಿಗೆ ಥ್ಯಾಂಕ್ಸ್ ಹೇಳಲು ಇಷ್ಟ ಪಡುತ್ತೇನೆ. ಯಾರಿಗೆ ಎಷ್ಟು ಸೇರಿದೆ. ಎಲ್ಲಿ ಸೇರಿದೆ ಎಲ್ಲಾ ಜನರು ಸೇರಿಸಿರೋದು. ಅವರಿಗೆ ಥ್ಯಾಂಕ್ಸ್ ಹೇಳಬೇಕು ಅಷ್ಟೇ. ಜನರಿಗೆ ಥ್ಯಾಂಕ್ಸ್ ಹೇಳಬೇಕು ಅಷ್ಟೇ. ಅವರಿಂದನೇ ಈ ಸಿನಿಮಾ ಇಷ್ಟು ದೊಡ್ಡದಾಗಿ ರೀಚ್ ಆಗಿದೆ. ಎಲ್ಲರಿಗೂ ಥ್ಯಾಂಕ್ಸ್." ಎಂದಿದ್ದಾರೆ.

ಕೋರ್ಟ್ನಲ್ಲಿ ಮಾತಾಡಬೇಕು
ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದ 'ವರಾಹ ರೂಪಂ..' ಹಾಡು ಮಲಯಾಳಂನ 'ನವರಸಂ' ಸಾಂಗಿನ ಕಾಫಿ ಎಂದು ವಿವಾದ ಎದ್ದಿದೆ. 'ನವರಸಂ' ಹಾಡನ್ನು ಕಂಪೋಸ್ ಮಾಡಿರೋ ಥೈಕ್ಕುಡಂ ಬ್ರಿಡ್ಜ್ ಬ್ರ್ಯಾಂಡ್ 'ವರಾಹ ರೂಪಂ..' ತಮ್ಮದೇ ಹಾಡಿನ ಯತಾರೂಪವೆಂದು ಕೋರ್ಟ್ ಮೆಟ್ಟಿಲೇರಿದೆ. ಈ ಬಗ್ಗೆ ರಿಷಬ್ ಶೆಟ್ಟಿ ಕಲಬುರಗಿಯಲ್ಲಿಯೇ ಪ್ರತಿಕ್ರಿಯೆ ನೀಡಿದ್ದಾರೆ. "ಅದು ಕೋರ್ಟ್ನಿಂದ ಬಂದಿದ್ದು ಅಲ್ಲೇ ಮಾತಾಡಬೇಕು. ಅದನ್ನು ಇಲ್ಲಿ ಮಾತಾಡಬಾರದು. ಅಲ್ಲಿಂದ ಬಂದಾಗ ಅಲ್ಲೇ ಮಾತಾಡುತ್ತೇವೆ." ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.

'ಕಾಂತಾರ 2' ಬಗ್ಗೆ ರಿಷಬ್ ಶೆಟ್ಟಿ ರಿಯಾಕ್ಷನ್
'ಕಾಂತಾರ' ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ಮುಂದಿನ ಸಿನಿಮಾ ಯಾವುದು ಅನ್ನೋದು ಕುತೂಹಲ ಕೆರಳಿಸಿದೆ. ರಿಷಬ್ ಶೆಟ್ಟಿ 'ಕಾಂತಾರ 2' ಕಡೆ ಹೆಚ್ಚು ಗಮನ ಹರಿಸಿದ್ದಾರೆ ಅನ್ನೋ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಆದರೆ, 'ಕಾಂತಾರ 2' ಮಾಡುತ್ತಾರಾ ಎಂಬ ಸೀಕ್ರೆಟ್ ಅನ್ನು ರಿಷಬ್ ಶೆಟ್ಟಿ ಬಿಟ್ಟು ಕೊಡಲಿಲ್ಲ. "ಅದೆಲ್ಲಾ ಬರೋ ಸಮಯಕ್ಕೆ ಬರುತ್ತೆ. ಅದರ ಬಗ್ಗೆ ಆಗಲೇ ಹೇಳುತ್ತೇವೆ. ಸದ್ಯಕ್ಕೆ ಅದರ ಬಗ್ಗೆ ಯೋಚನೆ ಇಲ್ಲ. ಇವತ್ತು ಕಾರ್ಯಕ್ರಮಕ್ಕೆ ಬಂದಿದ್ದೆ. ಸ್ವಾಮಿಗಳನ್ನು ಭೇಟಿಯಾಗಬೇಕು. ಅಷ್ಟೇ ವಿಚಾರ ಬಿಟ್ಟರೆ, ಬೇರೆ ವಿಚಾರವಿಲ್ಲ. " ಎಂದು ಹೇಳಿದ್ದಾರೆ.

ರಿಷಬ್ ಶೆಟ್ಟಿಗೆ ಸಿದ್ಧಶ್ರೀ ಪ್ರಶಸ್ತಿ
'ಕಾಂತಾರ' ಮೂಲಕ ವಿಶ್ವದ ಗಮನ ಸೆಳೆದ ರಿಷಬ್ ಶೆಟ್ಟಿಯನ್ನು ಕಲಬುರಗಿಯಲ್ಲಿ ಸನ್ಮಾನ ಮಾಡಲಾಗಿದೆ. ಅವರಿಗೆ ಸಿದ್ಧಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಸಂದರ್ಭದಲ್ಲಿ ಪ್ರಶಸ್ತಿ ಸಿಕ್ಕಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಅವಾರ್ಡ್ ಸಿಕ್ಕಿದ್ದಕ್ಕೆ ತುಂಬಾನೇ ಖುಷಿಯಿದೆ. ಎಷ್ಟರ ಮಟ್ಟಿಗೆ ಅರ್ಹರು ಅನ್ನೋದು ಗೊತ್ತಿಲ್ಲ. ಆದರೆ ಕರೆಸಿದ್ದಾರೆ. ಸ್ವಾಮಿಗಳ ದರ್ಶನ ಪಡೆದುಕೊಳ್ಳುವುದೇ ಒಂದು ವಿಶೇಷ." ಎಂದಿದ್ದಾರೆ.


Click it and Unblock the Notifications











