'ಕಾಂತಾರ 2' ಅನೌನ್ಸ್ ಆಗುತ್ತಿದ್ದಂತೆ ಅಭಿಮಾನಿಗಳನ್ನು ಭೇಟಿಗೆ ಮುಂದಾದ ರಿಷಬ್: ಭೇಟಿ ಎಲ್ಲಿ? ಕಾರಣವೇನು?
'ಕಾಂತಾರ' ಸಿನಿಮಾ ರಿಷಬ್ ಶೆಟ್ಟಿಯ ಬದುಕನ್ನೇ ಬದಲಾಯಿಸಿದೆ. ವೃತ್ತಿ ಬದುಕಿನಲ್ಲಿ ಹೊಸ ಇಮೇಜ್ ಬಂದಿದೆ. ರಿಷಬ್ ಈಗ ಕೇವಲ ಕನ್ನಡದ ನಟನಷ್ಟೇ ಅಲ್ಲ, ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ರಿಷಬ್ ಎಲ್ಲೇ ಹೋದರು ಅಭಿಮಾನಿಗಳು ಅವರನ್ನು ಗುರುತು ಹಿಡಿಯುತ್ತಾರೆ.
ರಿಷಬ್ ಶೆಟ್ಟಿಗೆ ದೇಶ-ವಿದೇಶದಿಂದೆಲ್ಲಾ ಆಹ್ವಾನಗಳು ಬರುತ್ತಿವೆ. ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ನಿರಂತರವಾಗಿ ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದೆಲ್ಲವೂ 'ಕಾಂತಾರ'ದ ಬಳಿಕವೇ ಆಗಿದೆ. ಆದರೆ, ಬ್ಯುಸಿ ಲೈಫ್ನಲ್ಲಿ ಅಭಿಮಾನಿಗಳನ್ನು ಭೇಟಿ ಮಾಡುವುದಕ್ಕೆ ಆಗಿರಲಿಲ್ಲ.

ಕೊನೆಗೂ ತಮ್ಮ ಕೆಲಸದಿಂದ ಬಿಡುವು ಮಾಡಿಕೊಂಡು ಅಭಿಮಾನಿಗಳನ್ನು ಭೇಟಿ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಅದಕ್ಕೆಂದೇ ಒಂದು ವಿಡಿಯೋವನ್ನು ಹೊರಬಿಟ್ಟಿದ್ದು. ಅಭಿಮಾನಿಗಳನ್ನು ಭೇಟಿ ಮಾಡುತ್ತಿರುವ ಉದ್ದೇಶ, ಎಲ್ಲಿ? ಯಾವಾಗ? ಭೇಟಿ ಮಾಡುತ್ತೇನೆಂದು ಹೇಳಿದ್ದಾರೆ.
ರಿಷಬ್ ಫ್ಯಾನ್ಸ್ ಭೇಟಿಯ ಹಿನ್ನೆಲೆಯೇನು?
ರಿಷಬ್ ಶೆಟ್ಟಿ 'ಕಾಂತಾರ' ಸಕ್ಸಸ್ ಬಳಿಕ 'ಕಾಂತಾರ' ಪ್ರೀಕ್ವೆಲ್ಗೆ ಕಥೆ ಹೆಣೆಯುವುದರಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಇತ್ತೀಚೆಗೆ ಯಾರ ಕೈಗೂ ಸಿಕ್ಕಿರಲಿಲ್ಲ. ಆಗಾಗ ಒಂದೊಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ, ಅಪರೂಪಕ್ಕೆ ಕಾಣಿಸಿಕೊಳ್ಳುತ್ತಿದ್ದರು. ಹೀಗಾಗಿ ಈಗ ಅಭಿಮಾನಿಗಳನ್ನು ಭೇಟಿ ಮಾಡುವುದಕ್ಕೆ ನಿರ್ಧರಿಸಿದ್ದಾರೆ.

ಜುಲೈ 7ರಂದು ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್ನಲ್ಲಿ ಅಭಿಮಾನಿಗಳನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ. ಇಷ್ಟು ದಿನ ರಿಷಬ್ ಶೆಟ್ಟಿಯನ್ನು ಭೇಟಿ ಮಾಡುವುದಕ್ಕಾಗಿ ಕಾದು ಕೂತಿದ್ದ ಅಭಿಮಾನಿಗಳನ್ನು ಅಂದು ಭೇಟಿಯಾಗುವುದಾಗಿ ಹೇಳಿದ್ದಾರೆ. ಅದರ ವಿವರನ್ನು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
ರಿಷಬ್ ವಿಡಿಯೋದಲ್ಲಿ ಏನಿದೆ?
ಹೌದು.. ಜುಲೈ 7ರಂದು ರಿಷಬ್ ಶೆಟ್ಟಿ ಹುಟ್ಟುಹಬ್ಬ. ಈ ಸುಸಂದರ್ಭದಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ಇದೇ ಮೊದಲ ಬಾರಿಗೆ ಈ ಮಟ್ಟಿಗೆ ತಮ್ಮ ಹುಟ್ಟುಹಬ್ಬವನ್ಉ ರಿಷಬ್ ಶೆಟ್ಟಿ ಆಚರಿಸಿಕೊಂಡಿದ್ದಾರೆ. ಅದಕ್ಕೆಂದೇ ವಿಡಿಯೋ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ.
"ಎಲ್ಲರಿಗೂ ನಮಸ್ಕಾರ.. ಕೆರಾಡಿ ಎಂಬ ಸಣ್ಣ ಹಳ್ಳಿಯಿಂದ ಸಿನಿಮಾ ಕನಸು ಕಟ್ಟಿಕೊಂಡು ಬಂದ ನನಗೆ ಇಷ್ಟೆಲ್ಲಾ ಪ್ರೀತಿ ತೋರಿಸಿ, ಇಲ್ಲಿವರೆಗೂ ಕರೆದುಕೊಂಡು ಬಂದು ನಿಲ್ಲಿಸಿದ್ದೀರಿ. ನೀವು ಇಷ್ಟೆಲ್ಲಾ ಪ್ರೀತಿ ತೋರಿಸಿದಾಗ ನನಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ಆಗ ತಿಳಿಯಲಿಲ್ಲ. ಅದೂ, ಕಾಂತಾರ ಬಿಡುಗಡೆ ಆದ ಮೇಲೆ ತುಂಬಾ ಜನ ನನ್ನ ಮನೆ ಹತ್ತಿರ ಬಂದಿದ್ದೀರಾ, ನಾನು ಹೋದ ಕಡೆಯೆಲ್ಲಾ ನನ್ನ ಭೇಟಿಯಾಗಾಗಿ ಕಾದಿದ್ದೀರ. ಎಷ್ಟೋ ಜನರನ್ನು ನಾನು ಭೇಟಿಯಾಗುವುದಕ್ಕೆ ಆಗಲಿಲ್ಲ. ಆದ್ದರಿಂದ ಜುಲೈ 7, ಮಧ್ಯಾಹ್ನ 3ಕ್ಕೆ ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್ಸ್ನಲ್ಲಿ ಬನ್ನಿ ಸಿಗೋಣ." ಎಂದು ವಿಡಿಯೋದಲ್ಲಿ ಕರೆ ನೀಡಿದ್ದಾರೆ.
'ಕಾಂತಾರ' ಪ್ರಿಕ್ವೆಲ್ನಲ್ಲಿ ಬ್ಯುಸಿ
ರಿಷಬ್ ಶೆಟ್ಟಿ 'ಕಾಂತಾರ' ಸಿನಿಮಾದ ಮೆಗಾ ಹಿಟ್ ಆಗುತ್ತಿದ್ದಂತೆ ಪ್ರೀಕ್ವೆಲ್ನಲ್ಲಿ ಬ್ಯುಸಿಯಾಗಿದ್ದಾರೆ. ಜವಾಬ್ದಾರಿ ಹೆಚ್ಚಾಗಿರುವುದರಿಂದ ಚಿತ್ರಕಥೆ ಹೆಣೆಯುವುದರಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ತಮ್ಮ ಹುಟ್ಟುಹಬ್ಬದಂದು ಅಭಿಮಾನಿಗಳನ್ನೂ ಭೇಟಿ ಮಾಡುತ್ತಿದ್ದಾರೆ.
ರಿಷಬ್ ಶೆಟ್ಟಿ ಇತ್ತೀಚೆಗೆ ಅಮೆರಿಕದಲ್ಲಿ ಕನ್ನಡರ ಸಮಾರಂಭದಲ್ಲಿ ಭಾಗಿಯಾಗಿದ್ದರು. ಆ ವೇಳೆ 'ಕಾಂತಾರ' ಚಿಕ್ಕದಾಗಿ ಸುಳಿವು ನೀಡಿದ್ದರು. ನೀವು ನೋಡಿದ್ದು 'ಕಾಂತಾರ 2' ಮುಂದೆ ನೋಡಲಿರುವುದು 'ಕಾಂತಾರ' ಪಾರ್ಟ್ 1 ಎಂದು ಹೇಳಿದ್ದರು. ಅಲ್ಲಿಂದ ಸಿನಿಪ್ರಿಯರಲ್ಲಿ ಸಿನಿಮಾ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.


Click it and Unblock the Notifications











