ರಿಷಬ್ ಶೆಟ್ಟಿಗೂ, ಮಂತ್ರಾಲಯಕ್ಕೂ.. ಶ್ರೀ ರಾಘವೇಂದ್ರ ಸ್ವಾಮಿಗಳಿಗೂ ಇರುವ ನಂಟೇನು? ಜನ್ಮ ರಹಸ್ಯ ಬಿಚ್ಚಿಟ್ಟ
ನಿನ್ನೆ (ಫೆಬ್ರವರಿ 24) ಶ್ರೀ ರಾಘವೇಂದ್ರ ಸ್ವಾಮಿಗಳ 431ನೇ ಜನ್ಮದಿನ. ಈ ವಿಶೇಷ ದಿನದಂದು ರಾಜ್ಯದ ಮೂಲೆ ಮೂಲೆಯಿಂದ ರಾಘವೇಂದ್ರ ಸ್ವಾಮಿಗಳ ಭಕ್ತರು ಆಗಮಿಸಿ ದರ್ಶನ ಪಡೆದಿದ್ದಾರೆ. ಕನ್ನಡ ಚಿತ್ರರಂಗದಲ್ಲಿಯೂ ಬಹಳಷ್ಟು ಮಂದಿ ರಾಯರ ಭಕ್ತರು ಇದ್ದಾರೆ. ಡಾ. ರಾಜ್ಕುಮಾರ್ ಅವರಿಂದ ಹಿಡಿದು ನವರಸ ನಾಯಕ ಜಗ್ಗೇಶ್ವರೆಗೂ ರಾಘವೇಂದ್ರ ಸ್ವಾಮಿಗಳನ್ನು ನಂಬುವ ಭಕ್ತರ ದೊಡ್ಡ ಬಣವೇ ಇದೆ.
ಈ ಸಾಲಿಗೆ ಈಗ ರಿಷಬ್ ಶೆಟ್ಟಿ ಕೂಡ ಸೇರಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಹಾಗೂ ಕುಟುಂಬಕ್ಕೆ ದೇವರ ಮೇಲೆ ಅಪಾರವಾದ ನಂಬಿಕೆಯಿದೆ. ಸಿನಿಮಾದಿಂದ ಬಿಡುವು ಸಿಕ್ಕಾಗಲೆಲ್ಲ ದೇವಸ್ಥಾನಗಳಿಗೆ ಪ್ರದಕ್ಷಿಣೆ ಹಾಕಿ ಬರುತ್ತಾರೆ. ಅದರಲ್ಲೂ ಶ್ರೀ ರಾಘವೇಂದ್ರ ಸ್ವಾಮಿಗಳೂ ಹಾಗೂ ಮಂತ್ರಾಲಯ ವಿಶೇಷವಾದ ಸ್ಥಾನವನ್ನು ಪಡೆದುಕೊಂಡಿದೆ.

ಇನ್ನು ಶ್ರೀ ರಾಘವೇಂದ್ರ ಸ್ವಾಮಿಗಳ 431ನೇ ಜನ್ಮದಿನದಂದು ನವರಸ ನಾಯಕ ಜಗ್ಗೇಶ್ ಹಾಗೂ ರಿಷಬ್ ಶೆಟ್ಟಿ ಮಂತ್ರಾಲಯಕ್ಕೆ ಆಗಮಿಸಿದ್ದರು. ಈ ವೇಳೆ ರಿಷಬ್ ಶೆಟ್ಟಿ ತನಗೂ ಹಾಗೂ ಮಂತ್ರಾಲಯಕ್ಕೂ ಇರುವ ನಂಟಿನ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೇ ರಾಘವೇಂದ್ರ ಸ್ವಾಮಿಗಳ ಹರಕೆ ಹೊತ್ತುಕೊಂಡು ಹುಟ್ಟಿದ ಸಂಗತಿಯನ್ನು ರಿವೀಲ್ ಮಾಡಿದ್ದಾರೆ.
ಮಂತ್ರಾಲಯದಲ್ಲಿ ರಾಘವೇಂದ್ರ ರಾಯ ಜನ್ಮ ದಿನದಂದು ಅವರ ತಾಯಿ ರಾಯರು ಹಾಗೂ ಡಾ.ರಾಜ್ಕುಮಾರ್ ಅವರ ಭಕ್ತೆ ಅನ್ನೋದನ್ನು ಹೇಳಿಕೊಂಡಿದ್ದಾರೆ. "ಇಲ್ಲಿ ಮೌನ ತುಂಬಾನೇ ಮುಖ್ಯ ಆಗುತ್ತೆ. ರಾಯರ ಎನರ್ಜಿಯನ್ನು ನಾವು ಫೀಲ್ ಮಾಡಬಹುದು. ನನ್ನ ತಾಯಿ ರಾಯರ ತುಂಬಾ ದೊಡ್ಡ ಭಕ್ತೆ. ನನ್ನ ತಾಯಿ ಹೇಳಿದ ಎರಡು ವಿಷಯಗಳು ನನ್ನ ಜೀವನದಲ್ಲಿ ತುಂಬಾನೇ ಮುಖ್ಯ ವಿಷಯವಾಗಿತ್ತು. ನನ್ನ ತಾಯಿ ರಾಘವೇಂದ್ರ ರಾಯರ ಭಕ್ತೆ ಹೇಗೋ ಹಾಗೆ ಡಾ.ರಾಜ್ಕುಮಾರ್ ಅಂದರೆ ಅಷ್ಟು ಇಷ್ಟ. ಹಾಗಾಗಿ ಈ ಎರಡೂ ವಿಷಯಗಳನ್ನು ನನ್ನ ತಾಯಿ ಹಾಕಿಕೊಟ್ಟ ಹೆಜ್ಜೆಯನ್ನು ಫಾಲೋ ಮಾಡಿಕೊಂಡು ಬರುತ್ತಿದ್ದೇನೆ." ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ಹಾಗೇ ತನ್ನ ಬದುಕಿನ ಬಗ್ಗೆ ಎಲ್ಲೂ ಹೇಳಿಕೊಳ್ಳದ ಒಂದು ಸಂಗತಿಯನ್ನು ಈ ಪವಿತ್ರ ಸ್ಥಳದಲ್ಲಿ ರಿವೀಲ್ ಮಾಡಿದ್ದಾರೆ. "ಇದು ನಾನು ಎಲ್ಲೂ ಹಂಚಿಕೊಳ್ಳದೇ ಇರುವ ವಿಚಾರ. ಮನೆಯಲ್ಲಿ ತುಂಬಾ ಕಷ್ಟದಲ್ಲಿ ಇದ್ದಂತಹ ಕಾಲ. ಆಗ ನಾನು ಇನ್ನೂ ಹುಟ್ಟಿರಲಿಲ್ಲ. ಆಗ ನನ್ನ ತಾಯಿ ರಾಯರ ಹರಕೆ ಹೊತ್ತುಕೊಂಡು ನನಗೊಬ್ಬ ಮಗ ಹುಟ್ಟಲಿ, ಅವನು ಹುಟ್ಟಿದ ಮೇಲೆ ಜೀವನದಲ್ಲಿ ಒಳ್ಳೆಯದಾಗಲಿ ಎಂಬ ಹರಕೆಯನ್ನು ಹೊತ್ತುಕೊಂಡಿದ್ರು. ಅದಾದ್ಮೇಲೆ ನಾನು ಹುಟ್ಟಿದ್ದಂತೆ. ಅದು ನಾನು ಗುರುವಾರವೇ ಹುಟ್ಟಿದ್ದೇನೆ." ಎಂದು ರಾಘವೇಂದ್ರ ರಾಯರ ನಂಟಿನ ಬಗ್ಗೆ ಮಾತಾಡಿದ್ದಾರೆ.

ಏನೇ ಕಷ್ಟ ಬಂದರೂ ರಾಘವೇಂದ್ರ ಸ್ವಾಮಿಗಳನ್ನು ನೆನಪಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. "ನನಗೆ ಏನೇ ಕಷ್ಟ ಬಂದರೂ ನನ್ನ ತಾಯಿಯ ಹತ್ತಿರ ಹೇಳಿದಾಗ ರಾಯರ ಹರಕೆ ಹೊತ್ತುಕೊಂಡು ಗುರುವಾರ ಹುಟ್ಟಿದವನು ನೀನು. ರಾಯರ ನೆನೆಸಿಕೊಂಡು ಮುಂದಕ್ಕೆ ಹೋಗು ಎಲ್ಲಾ ಸರಿ ಹೋಗುತ್ತೆ ಎನ್ನುತ್ತಾರೆ. ಇವತ್ತಿನವರೆಗೂ ಜೀವನದಲ್ಲಿ ಏನೇ ಬಂದರೂ ರಾಯರನ್ನು ಸ್ಮರಿಸಿಕೊಳ್ಳುತ್ತೇನೆ. ಎಷ್ಟೋ ಬಾರಿ ಶೂಟಿಂಗ್ನಲ್ಲಿ ತೊಂದರೆ ಆದಾಗ ರಾಯರನ್ನು ಸ್ಮರಿಸಿಕೊಂಡರೆ, ಕಣ್ಮುಚ್ಚಿ ಕಣ್ಣು ತೆರೆಯುವುದರೊಳಗೆ ಕಷ್ಟಗಳು ಪಾರಾಗಿ ಹೋಗಿದ್ದು ನನ್ನ ಅನುಭವಕ್ಕೆ ಬಂದಿದೆ." ಎಂದಿದ್ದಾರೆ.
ಹಾಗೇ "ಸಿನಿಮಾ ನಿನ್ನೆಯಷ್ಟೇ ಮುಹೂರ್ತ ಮಾಡಿದ್ದೀವಿ. ಇನ್ನೂ ಶೂಟಿಂಗ್ ಆಗಬೇಕು. ಹೋಗ್ತಾ ಹೋಗ್ತಾ ಜನರಿಗೆ ಎಲ್ಲವೂ ಗೊತ್ತಾಗುತ್ತಾ ಹೋಗುತ್ತೆ. ಹನುಮನ ಬಗ್ಗೆ ಒಂದು ಸಿನಿಮಾ ಮಾಡುತ್ತೇವೆ ಅಂದರೆ, ಕರಾವಳಿಯ ಆಚಾರ-ವಿಚಾರ ಸೇರಿದಂತೆ ಎಲ್ಲವೂ ಒಂದಿಷ್ಟು ವಿಚಾರಗಳು ಇರುತ್ತವೆ. ಅವರಿಗೆ ಇಷ್ಟ ಆಗುವಂತಹ ಸಿನಿಮಾ ಆಗುತ್ತೆ ಅಂತ ಹೇಳಬಹುದು." ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.


Click it and Unblock the Notifications











