70th National Film Awards:ರಿಷಬ್ ಶೆಟ್ಟಿಗೆ ರಾಷ್ಟ್ರ ಪ್ರಶಸ್ತಿ; ಶುಭ ಕೋರಿದವರು ಯಾರ್ಯಾರು?
70ನೇ ರಾಷ್ಟ್ರ ಪ್ರಶಸ್ತಿ ವಿಜೇತರ ಪಟ್ಟಿ ಅನೌನ್ಸ್ ಆಗಿದೆ. 2022ನೇ ಸಾಲಿನ ರಾಷ್ಟ್ರ ಪ್ರಶಸ್ತಿಯನ್ನು ಈ ಬಾರಿ ಘೋಷಣೆ ಮಾಡಲಾಗಿದೆ. ಕೋವಿಡ್ ಕಾರಣದಿಂದ ಕೆಲವು ವರ್ಷ ರಾಷ್ಟ್ರ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಮುಂದೂಡಲಾಗಿತ್ತು. ಹೀಗಾಗಿ 2022ರಲ್ಲಿ ತೆರೆಕಂಡು ಜನಮನ್ನಣೆ ಪಡೆದ ಸಿನಿಮಾಗಳಿಗೆ ರಾಷ್ಟ್ರಿ ಪ್ರಶಸ್ತಿಯನ್ನು ಘೋಷಿಸಲಾಗಿದೆ.
2022ನೇ ಸಾಲಿನ ರಾಷ್ಟ್ರ ಪ್ರಶಸ್ತಿಯಲ್ಲಿ ಕನ್ನಡದ ಎರಡು ಸಿನಿಮಾಗಳಿಗೆ ಪ್ರಶಸ್ತಿಯನ್ನು ಬಾಚಿಕೊಂಡಿದೆ. 'ಕೆಜಿಎಫ್ 2' ಹಾಗೂ 'ಕಾಂತಾರ' ಸಿನಿಮಾಗಳಿಗೆ ಪ್ರಶಸ್ತಿ ಲಭಿಸಿದೆ. 'ಕಾಂತಾರ' ಸಿನಿಮಾದ ನಟನೆಗಾಗಿ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿದೆ. ಬಹಳ ದಿನಗಳ ಬಳಿಕ ಕನ್ನಡದ ನಟನಿಗೆ ರಾಷ್ಟ್ರ ಪ್ರಶಸ್ತಿ ಬಂದಿದ್ದು ಕನ್ನಡಿಗರಿಗೆ ಖುಷಿಕೊಟ್ಟಿದೆ.

ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಬರುತ್ತಿದ್ದಂತೆ ಕೆಲ ಸೂಪರ್ಸ್ಟಾರ್ಗಳು ಫೋನ್ ಮೂಲಕ ವಿಶ್ ಮಾಡುತ್ತಿದ್ದಾರೆ. ಇದೇ ಖುಷಿಯಲ್ಲಿ ಪ್ರೆಸ್ಮೀಟ್ ಮಾಡಿ ಆ ಖುಷಿಯನ್ನು ಹಂಚಿಕೊಂಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಗೆದ್ದಿದ್ದಕ್ಕೆ ಯಾರೆಲ್ಲ ಶುಭ ಕೋರಿದರು ಅನ್ನೋದನ್ನು ಇದೇ ವೇಳೆ ರಿವೀಲ್ ಮಾಡಿದ್ದಾರೆ.
"ನನಗೆ ಮೊದಲು ವಿಶ್ ಮಾಡಿದ್ದೇ ನನ್ನ ಪತ್ನಿ. ಬಳಿಕ ಯಶ್ ಸರ್ ವಿಶ್ ಮಾಡಿದರು. ತಮಿಳಿನ ವಿಕ್ರಮ್ ಸರ್ ವಿಶ್ ಮಾಡಿದ್ರು. ನಾನು ಪದೇ ಪದೆ ಫೋನ್ ನಂಬರ್ ಅನ್ನು ಬದಲಾಯಿಸುತ್ತಿರುತ್ತೇನೆ. ನನ್ನ ನಂಬರ್ ಬಹಳಷ್ಟು ಮಂದಿಗೆ ಸಿಕ್ಕಿರಲಿಕ್ಕಿಲ್ಲ. ಹೀಗಾಗಿ ಬಹಳ ಮಂದಿಗೆ ನಂಬರ್ ಸಿಕ್ಕಿರಲ್ಲ. ಆನ್ಲೈನ್, ಅಲ್ಲಿ ಇಲ್ಲಿ ಎಲ್ಲಾ ಕಡೆ ವಿಶ್ ಮಾಡುತ್ತಿದ್ದಾರೆ." ಎಂದು ರಿಷಬ್ ಶೆಟ್ಟಿ ಹೇಳಿಕೊಂಡಿದ್ದಾರೆ.

ಕರಾವಳಿ ಭಾಗದ ದೈವವನ್ನು 'ಕಾಂತಾರ' ಸಿನಿಮಾದಲ್ಲಿ ತೋರಿಸಲಾಗಿದೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುವುದಕ್ಕೆ ದೈವವೇ ಕಾರಣ ಎಂದು ರಿಷಬ್ ಶೆಟ್ಟಿ ನಂಬುತ್ತಾರೆ. ಇಷ್ಟೆಲ್ಲ ಯಶಸ್ಸನ್ನು ಕೊಟ್ಟಿರುವುದಕ್ಕೆ ದೈವವೇ ಕಾರಣ ಎಂದು ಹಲವು ಬಾರಿ ಹೇಳಿದ್ದಾರೆ. ಈಗ ಈ ರಾಷ್ಟ್ರ ಪ್ರಶಸ್ತಿಯನ್ನು ದೈವಕ್ಕೆ ಅರ್ಪಿಸಿದ್ದಾರೆ. "ಈ ಪ್ರಶಸ್ತಿ ಆ ದೈವಕ್ಕೆ ಸಲ್ಲಬೇಕು. ಈ ಪ್ರಶಸ್ತಿಯನ್ನು ಆ ದೈವಕ್ಕೆ ಅರ್ಪಿಸುವುದಕ್ಕೆ ಇಷ್ಟ ಪಡುತ್ತೇನೆ." ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ಜನರಿಗಿಂತ ದೊಡ್ಡವರಿಲ್ಲ. ಯಾವುದೇ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಾಗ ನಟರಿಗಾಗಲಿ, ನಿರ್ದೇಶಕ, ನಿರ್ಮಾಪಕರಿಗಾಗಲಿ ಜನರು ಸಿನಿಮಾ ನೋಡಿ ಮೆಚ್ಚಿಕೊಳ್ಳುವುದು ತುಂಬಾನೇ ಮುಖ್ಯ ಆಗುತ್ತೆ. ಜನ ಒಂದು ಕಿರೀಟ ಕೊಟ್ಟಿರುತ್ತಾರೆ. ಅದ ಮೇಲೊಂದು ಗರಿ ದೊಡ್ಡ ಪ್ರಶಸ್ತಿಯಾಗುತ್ತೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ತಮ್ಮ ಪತ್ನಿಗೂ ಥ್ಯಾಂಕ್ಸ್ ಹೇಳಿದ್ದಾರೆ. ಅವರ ಒತ್ತಾಯದ ಮೇಲೆ 'ಕಾಂತಾರ' ಸಿನಿಮಾದಲ್ಲಿ ನಟಿಸಿದ್ದಾಗಿ ಹೇಳಿದ್ದಾರೆ. "ನಾನು ನನ್ನ ಹೆಂಡ್ತಿಗೆ, ಬೇರೆ ಯಾರಾದರೂ ಆಕ್ಟರ್ ಇದ್ದರೆ ಅರಾಮಾಗಿ ಡೈರೆಕ್ಷನ್ ಮಾಡುತ್ತಿದ್ದೆ ಅಂದಾಗ, ಇಲ್ಲಾ ಈ ಕ್ಯಾರೆಕ್ಟರ್ ಮಾಡಲೇಬೇಕು ಅಂತ ಪೋರ್ಸ್ ಮಾಡಿದ್ದೇ ನನ್ನ ಹೆಂಡ್ತಿ. ನನ್ನ ಮಗಳು ಹೊಟ್ಟೆಯಲ್ಲಿ ಇದ್ದಳು. ಹೊಟ್ಟೆಯಲ್ಲಿಇಟ್ಟಿಕೊಂಡ ಕೆಲಸ ಮಾಡಿದ್ದಳು. " ಎಂದು ಪತ್ನಿಯನ್ನು ಹೊಗಳಿದ್ದಾರೆ.
ಹಾಗೇ ಅಜನೀಶ್ ಲೋಕನಾಥ್ಗೆ ಪ್ರಶಸ್ತಿ ಬರುತ್ತೆ ಅಂತ ಅನ್ನು ನಿರೀಕ್ಷೆಯಿತ್ತು. ಬೇರೆ ಬೇರೆ ಮ್ಯೂಸಿಕ್ ಡೈರೆಕ್ಟರ್ ಜೊತೆ ಕೆಲಸ ಮಾಡಿದ್ದೇನೆ. ಆದರೆ, ಅವರು ಹೇಗೆ ಕೆಲಸ ಮಾಡುತ್ತಾರೆ ಅನ್ನೋದು ಗೊತ್ತಾಗಿದೆ. ಕಾಂತಾರಕ್ಕೆ ಅವರದ್ದೊಂದು ದೊಡ್ಡ ಕಾಂಟ್ರಿಬ್ಯೂಷನ್ ಇದೆ. ಇಡೀ ತಂಡದ ಪರಿಶ್ರಮದಿಂದ ಸಿನಿಮಾ ಈ ಹಂತಕ್ಕೆ ಬಂದಿದೆ. ಹೊಂಬಾಳೆ ಫಿಲ್ಮ್ಸ್ಗೆ ಥ್ಯಾಂಕ್ಸ್ ಹೇಳುವುದಕ್ಕೆ ಇಷ್ಟ ಪಡುತ್ತೇನೆ ಎಂದಿದ್ದಾರೆ.


Click it and Unblock the Notifications











