"ನಾಲ್ಕೈದು ಬಾರಿ ನಾನು ಹೋಗೇ ಬಿಡ್ತಿದ್ದೆ.. ನನ್ನ ಹಿಂದೆ ದೈವ ನಿಂತಿದೆ"; ರಿಷಬ್ ಶೆಟ್ಟಿ
ಕಳೆದ ಮೂರೂವರೆ ವರ್ಷಗಳಿಂದ ಕಾದು ಕೂತಿದ್ದ ಸಿನಿಮಾ ಕೊನೆಗೂ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ ಚಾಪ್ಟರ್ 1' ಸಿನಿಮಾವನ್ನು ಕಣ್ತುಂಬಿಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು. ಸಿನಿಮಾ ಬಿಡುಗಡೆ 10 ದಿನ ಇರುವವರೆಗೂ ರಿಷಬ್ ಶೆಟ್ಟಿ ಚಿಕ್ಕದೊಂದು ಸುಳಿವನ್ನು ಬಿಟ್ಟುಕೊಟ್ಟಿರಲಿಲ್ಲ. ಇಷ್ಟು ಕಾದು ಕೂತಿದ್ದಕ್ಕೆ ಇಂದು (ಸೆಪ್ಟೆಂಬರ್ 22) ಟ್ರೈಲರ್ ರಿಲೀಸ್ ಮಾಡಿದ್ದಾರೆ. ಈ ಮೂಲಕ ಸಿನಿಪ್ರಿಯರಲ್ಲಿ ಮತ್ತಷ್ಟು ಕುತೂಹಲವನ್ನು ಕೆರಳಿಸಿದ್ದಾರೆ.
'ಕಾಂತಾರ' ಮೆಗಾ ಬ್ಲಾಕ್ಬಸ್ಟರ್ ಲಿಸ್ಟ್ ಸೇರಿದ ಬಳಿಕ ರಿಷಬ್ ಶೆಟ್ಟಿ ಪ್ರೀಕ್ವೆಲ್ಗೆ ಕೈ ಹಾಕಿದ್ದರು. ದೊಡ್ಡ ಬಜೆಟ್ನಲ್ಲಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದರು. ಸುಮಾರು ಮೂರುವರೆ ವರ್ಷಗಳ ಕಾಲ ಚಿತ್ರೀಕರಣ ಮಾಡಲಾಗಿದೆ. 7ಕ್ಕೂ ಹೆಚ್ಚು ಭಾಷೆಗಳಲ್ಲಿ ಸಿನಿಮಾವನ್ನು ರಿಲೀಸ್ ಮಾಡಲಾಗುತ್ತಿದೆ. ಇದೂವರೆಗೂ 'ಕಾಂತಾರ ಚಾಪ್ಟರ್ 1'ರ ಬಗ್ಗೆ ಚಿಕ್ಕದೊಂದು ಸುಳಿವು ಬಿಟ್ಟುಕೊಡದ ರಿಷಬ್ ಶೆಟ್ಟಿ, ಇದೇ ಮೊದಲ ಬಾರಿಗೆ ಸಿನಿಮಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

'ಕಾಂತಾರ ಚಾಪ್ಟರ್ 1' ಇಡೀ ದೇಶವೇ ಎದುರು ನೋಡುತ್ತಿರುವ ಸಿನಿಮಾ. ಹೀಗಾಗಿ ಕಳೆದ ಮೂರು ತಿಂಗಳಿನಿಂದ ಇಡೀ ತಂಡ ಕೇವಲ ಎರಡು-ಮೂರು ಗಂಟೆ ಕೆಲಸ ಮಾಡಿದೆ. ನಾಲ್ಕೈದು ಬಾರಿ ಹೋಗಿ ಬಿಡಬೇಕಿತ್ತು. ಆದರೆ ಬದುಕಿ ಬಂದಿದ್ದೇನೆ. ಅದಕ್ಕೆ ದೈವ ನನ್ನ ಹಿಂದೆ ನಿಂತಿದೆ ಅನ್ನೋದೇ ಸಾಕ್ಷಿ ಎಂದು ರಿಷಬ್ ಶೆಟ್ಟಿ ವೇದಿಕೆ ಮೇಲೆ ಹೇಳಿದ್ದಾರೆ. ರಿಷಬ್ ಶೆಟ್ಟಿ ಆಡಿದ ಮಾತುಗಳ ಝಲಕ್ ಇಲ್ಲಿದೆ.
ಬಜೆಟ್ ಲೆಕ್ಕಾಚಾರ ಹಾಕಲೇ ಇಲ್ಲ
"ಒಂದು ಯೋಚನೆಯನ್ನು ತೆಗೆದುಕೊಂಡು ಬಂದಾಗ ಅದನ್ನು ಹೇಗೆಲ್ಲ ಚೆನ್ನಾಗಿ ತೋರಿಸಬಹುದು. ನನ್ನ ಕೋ ರೈಟರ್ ಅದನ್ನು ಎಷ್ಟು ಚೆನ್ನಾಗಿ ಬರೆಯಬಹುದು? ನಾನು ಕಂಡಿರುವಂತಹ ಒಂದು ವಿಷನ್ ಅನ್ನು ಕ್ಯಾಮರಾಮ್ಯಾನ್ ಎಷ್ಟು ಸುಂದರವಾಗಿ ತೋರಿಸಿದ್ದಾನೆ ಅನ್ನೋದನ್ನು ನಾನು ಮಾತಾಡಬೇಕಾಗಿಲ್ಲ. ಎಲ್ಲಾ ವಿಜ್ಯೂವಲ್ಸ್ ಹೇಳುತ್ತಿದೆ. ಅದಕ್ಕೆ ಏನು ಕೇಳುತ್ತೆ? ಎಷ್ಟು ಬಜೆಟ್ ಮಾಡುತ್ತೇವೆ. ಅದರ ಲೆಕ್ಕಾಚಾರವೇನು? ಇದನ್ನು ಯಾವತ್ತೂ ವಿಜಯಣ್ಣ ಕೇಳಲೇ ಇಲ್ಲ. ಕಥೆ ಮೇಲೆ ನಂಬಿಕೆ, ನನ್ನ ಮೇಲೆ ನಂಬಿಕೆ, ಇಡೀ ತಂಡದ ಮೇಲೆ ನಂಬಿಕೆ ಇಟ್ಟಿದ್ದೇ ಕಾರಣ" ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
"ಸರಿಯಾಗಿ ಮಲಗದೆ 3 ತಿಂಗಳಾಗಿದೆ"
"ನಾವ್ಯಾರೂ ಸರಿಯಾಗಿ ಮಲಗದೆ ಮೂರು ತಿಂಗಳಾಯ್ತು. ಒಂದು ಗಂಟೆ, ಎರಡು ಗಂಟೆ ನಿದ್ದೆ ಮಾಡಿರಬಹುದು. ಈ ಸಿನಿಮಾಗೆ ಕೆಲಸ ಮಾಡಿರುವವರು ನನ್ನ ಸಿನಿಮಾ ಅಂತ ಮಾಡಿಲ್ಲ. ಎಲ್ಲರೂ ನಮ್ಮ ಸಿನಿಮಾ ಅಂತ ಮಾಡಿದ್ದಾರೆ." ಎಂದು ಕಳೆದ ಮೂರು ತಿಂಗಳಿಂದ ಸಿನಿಮಾಗೆ ಮಾಡಿರುವ ಕೆಲಸ ಹೇಗಿತ್ತು ಅನ್ನೋದನ್ನು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ದೈವ ಬದುಕಿಸಿದೆ
"ಕಾಂತಾರ ಸಿನಿಮಾ ಶುರುವಾದ ಮೇಲೆ ಸೆಟ್ಟಿನಲ್ಲಿ ಹಾಗಾಯ್ತು, ಹೀಗಾಯ್ತು ಅಂತ ಕೇಳಿಬರುತ್ತಿತ್ತು. ಲೆಕ್ಕ ಹಾಕಿದರೆ, ನಾಲ್ಕು ಸಾರಿನೋ, ಐದು ಸಾರಿನೋ ನಾನು ಹೋಗೇ ಬಿಡುತ್ತಿದ್ದೆ. ಆದರೆ, ಇವತ್ತು ಬದುಕಿ ಬಂದು. ಇಡೀ ಸಿನಿಮಾವನ್ನು ನನ್ನ ಹೆಗಲ ಮೇಲೆ ಹಾಕಿಕೊಂಡು ಇವತ್ತು ನಿಮ್ಮ ಮುಂದೆ ನಿಂತಿದ್ದೀನಿ. ಎರಡನೇ ತಾರೀಕು ಈ ಸಿನಿಮಾವನ್ನು ನಿಮಗೆ ತೋರಿಸುತ್ತೇವೆ. ನನ್ನ ಹಿಂದೆ ನಿಂತಿರೋ ಆ ದೈವ ಅನ್ನೋದಷ್ಟೇ ನನ್ನ ನಂಬಿಕೆ. ಆ ದೈವದಿಂದನೇ ಇಡೀ ತಂಡಕ್ಕೆ ಆಶೀರ್ವಾದ ಮಾಡಿ, ಇವತ್ತು ತೆಗೆದುಕೊಂಡು ಬಂದು ಇಲ್ಲಿ ನಿಲ್ಲಿಸಿದೆ." ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
4.5 ಲಕ್ಷ ಮಂದಿಗೆ ಊಟ
"ರುಕ್ಷ್ಮಿಣಿಯವರಿಗೆ, ಗುಲ್ಶನ್ ದೇವಯ್ಯ ಅವರು ಇವತ್ತು ಬಂದಿಲ್ಲ. ಎಲ್ಲಾ ಬಾಲಿವುಡ್ನವರು ಅಂತಾರೆ, ಅವರು ಕನ್ನಡದವರು. ಜಯರಾಂ ಸರ್ ಆಗಿರಬಹುದು, ಕನ್ನಡ ಚಿತ್ರರಂಗದ ಎಷ್ಟೋ ಜನ ಥಿಯೇಟರ್ ಆರ್ಟಿಸ್ಟ್ಗಳು, ಸಿನಿಮಾದವರು ನಮ್ಮ ತಂಡ ಸೇರಿಕೊಂಡಿದ್ದಾರೆ. ಈ ಸಿನಿಮಾ ಮುಗಿಯುವ ವೇಳೆ ವಿಜಯಣ್ಣ ಎಲ್ಲರಿಗೂ ಊಟ ಹಾಕಿದರು. ಈ ಸಿನಿಮಾಗೆ ಕೆಲಸ ಮಾಡಿರುವವರನ್ನು ಲೆಕ್ಕ ಹಾಕಿದರೆ, ಕಳೆದ ಮೂರೂವರೆ ವರ್ಷದಲ್ಲಿ ನಾಲ್ಕೂವರೆ ಲಕ್ಷ ಮಂದಿಗೆ ಹೊಂಬಾಳೆ ಸಂಸ್ಥೆ ಊಟ ಹಾಕಿದೆ." ಎಂದು ರಿಷಬ್ ಶೆಟ್ಟಿ ವೇದಿಕೆ ಮೇಲೆ ಹೇಳಿದ್ದಾರೆ.


Click it and Unblock the Notifications











