ದರ್ಶನ್, ಕಿಚ್ಚ ಮತ್ತು ನನ್ನ ನಡುವೆ ತಂದಿಡಬೇಡಿ ಪ್ಲೀಸ್: ಯಶ್
ನಟನೊಬ್ಬನ ಸ್ಟಾರ್ ವ್ಯಾಲ್ಯೂ ಹೆಚ್ಚಾದಂತೆ ಅಂತೆ ಕಂತೆ ಕಥೆಗಳು ಹುಟ್ಟುತ್ತಲೇ ಇರುತ್ತವೆ, ಬೆಳೆಯುತ್ತಲ್ಲೇ ಇರುತ್ತವೆ. ಕಲಾವಿದರಿಗೆ ಬೇಡವಾಗುವ ಇಂತಹ ಸುದ್ದಿಗಳಿಗೆ ಅಭಿಮಾನಿಗಳಿಂದ ತುಪ್ಪ ಸುರಿಯುವ ಕೆಲಸಗಳೂ ನಡೆಯುತ್ತಲೇ ಇವೆ.
ರಾಕಿಂಗ್ ಸ್ಟಾರ್ ಯಶ್ ಈಗ ಬಹುಬೇಡಿಕೆಯ ನಟ. ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡುತ್ತಿರುವ ಯಶ್ ಬಗ್ಗೆ ಕೂಡಾ ತಲೆಬುಡವಿಲ್ಲದ ಸುದ್ದಿಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಲೇ ಇದೆ.
ಯಶ್, ರಮ್ಯಾ ಅಭಿನಯದ ಲಕ್ಕಿ ಚಿತ್ರದ ಶೂಟಿಂಗ್ ವೇಳೆ ಕೂಡಾ ಒಂದು ಸುದ್ದಿಯಾಗಿತ್ತು. ಶೂಟಿಂಗ್ ಸ್ಪಾಟಿನಲ್ಲಿ ಯಶ್ ಕಿರಿಕ್ ಮಾಡುತ್ತಿದ್ದರು. ಶೂಟಿಂಗ್ ಸ್ಪಾಟಿಗೆ ಸರಿಯಾದ ವೇಳೆಗೆ ಬರುತ್ತಿರಲಿಲ್ಲ. (ರಾಮಾಚಾರಿ ಬಾಕ್ಸಾಫೀಸ್ ಲೂಟಿ)
ತದನಂತರ ಮಾಜಿ ಸಿಎಂ ಮತ್ತು ನಿರ್ಮಾಪಕರೂ ಆಗಿರುವ ಕುಮಾರಸ್ವಾಮಿ ಅವರು ಯಶ್ ಅವರನ್ನು ಕರೆದು ಬೈಯ್ದು ಬುದ್ದಿ ಹೇಳಿ ಕಳುಹಿಸಿದರು ಎನ್ನುವ ಗಾಳಿಸುದ್ದಿಗಳು ಗಾಂಧಿನಗರದ ಜಗಲಿನಲ್ಲಿ ಎಲ್ಲೆ ಮೀರಿ ಹರಿದಾಡುತ್ತಿದ್ದವು.
ಆದರೆ ಯಶ್ ಅವರನ್ನು ಹತ್ತಿರದಿಂದ ಬಲ್ಲವರು ಈ ಎಲ್ಲಾ ಮಾತಿಗೆ ಬೇಸ್ ಲೆಸ್ ಅಂತಾರೆ. ಯಶ್ ಒಬ್ಬ ಡೌನ್ ಟು ಅರ್ಥ್ ನಟ, ಅದಕ್ಕಿಂತ ಹೆಚ್ಚಾಗಿ ಅವರು ನಿರ್ಮಾಪಕರ ನಟ. ಅಹಂ ಇಲ್ಲದ ಅವರ ಗುಣವೇ ಅವರನ್ನು ಇಂದು ಈ ಮಟ್ಟಕ್ಕೆ ಬೆಳೆಸಿದೆ ಎನ್ನುವುದು ಅವರ ಆಪ್ತವಲಯದಿಂದ ಕೇಳಿ ಬರುತ್ತಿರುವ ಮಾತು.
ಯಶ್ ಅವರು ಮೇಲಿನ ಮಾತು ಹೇಳಲು ಕಾರಣ ಇಲ್ಲದಿಲ್ಲ. ಮುಂದೆ ಓದಿ..

ಚಿತ್ರೋದ್ಯಮದ ಟಾಪ್ ಒನ್
ಸ್ಯಾಂಡಲ್ ವುಡ್ಡಿನ ಬಾಕ್ಸ್ ಆಫೀಸ್ ಕಿಂಗ್ ಯಾರು ಎನ್ನುವ ಹೆಸರಿಗೆ ಪ್ರಮುಖವಾಗಿ ಮೂರು ನಾಯಕ ನಟರ ನಡುವೆ ಪೈಪೋಟಿ ಚಾಲ್ತಿಯಲ್ಲಿದೆ. ಅದು ಪುನೀತ್, ದರ್ಶನ್ ಮತ್ತು ಸುದೀಪ್ ನಡುವೆ. ಈಗ ಇವರ ಚಿತ್ರಗಳನ್ನೆಲ್ಲಾ ಮೀರಿಸುವಂತೆ ಸಾಗುತ್ತಿವೆ ಯಶ್ ಚಿತ್ರಗಳ ಬಾಕ್ಸಾಫೀಸ್ ರಿಪೋರ್ಟುಗಳು.

ಸಮಸ್ಯೆಯಾಗಿದ್ದು ಏನು?
ಯಶ್ ಅವರ ಮಿಸ್ಟರ್ ಎಂಡ್ ಮಿಸಸ್ ಚಿತ್ರ 'ಬ್ಲಾಕ್ ಬಸ್ಟರ್' ಪಟ್ಟಿಗೆ ಸೇರುತ್ತಿದ್ದಂತೆಯೇ ಹೊಸ ಕಿರಿಕ್ ಆರಂಭವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳನ್ನು ಯಶ್ ತನ್ನತ್ತ ಸೆಳೆಯುತ್ತಿದ್ದಾರೆ ಎನ್ನುವುದು ಅವರವರ ಅಭಿಮಾನಿಗಳು ಅನಾವಶ್ಯಕವಾಗಿ ಹುಟ್ಟು ಹಾಕಿರುವ ಗದ್ದಲ.

ರಾಮಾಚಾರಿ ಚಿತ್ರದ ಒಂದು ಡೈಲಾಗು
ಕನ್ನಡ ಚಿತ್ರೋದ್ಯಮದ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಧೂಳೀಪಟಗೊಳಿಸಿ ಮುನ್ನುಗ್ಗುತ್ತಿರುವ 'ಮಿಸ್ಟರ್ ಎಂಡ್ ಮಿಸಸ್' ಚಿತ್ರದಲ್ಲಿನ ಒಂದು ಜನಪ್ರಿಯ ಡೈಲಾಗೇ ಅಭಿಮಾನಿಗಳಲ್ಲಿನ ಗದ್ದಲಕ್ಕೆ ಕಾರಣ ಎನ್ನಲಾಗುತ್ತಿದೆ.

ಏನಿದು ಡೈಲಾಗು
'ನಾನು ಬರೋ ತನಕ ಮಾತ್ರ ಬೇರೆಯವರ ಹವಾ.. ನಾನು ಬಂದ ಮೇಲೆ ನನ್ನದೇ ಹವಾ'ಎನ್ನುವ ಚಿತ್ರದಲ್ಲಿನ ಡೈಲಾಗನ್ನು ಅಭಿಮಾನಿಗಳು ತಮ್ಮ ತಮ್ಮ ಹಾವಭಾವಕ್ಕೆ ತಕ್ಕಂತೆ ತೆಗೆದುಕೊಂಡು ಹಲ್ಲಾಗುಲ್ಲಾ ಎಬ್ಬಿಸಿರುವುದೇ ಇದಕ್ಕೆಲ್ಲಾ ಕಾರಣ.

ಶಿವಣ್ಣ ಅವರನ್ನು ಯಶ್ ಭೇಟಿ ಮಾಡಿದ್ರಂತೆ
ಚಿತ್ರದಲ್ಲಿ ಈ ರೀತಿಯ ಡೈಲಾಗೊಂದು ಇದೆ ಎಂದು ಶಿವಣ್ಣ ಅವರನ್ನು ಅವರ ಮನೆಯಲ್ಲಿ ಯಶ್ ಭೇಟಿಯಾದಾಗ ಹೇಳಿದ್ರಂತೆ. ಇದು ಸಿನಿಮಾದ ಡೈಲಾಗು, ನಮ್ಮ ಅಭಿಮಾನಿಗಳನ್ನು ಖುಷಿಗೊಳಿಸುವುದು ಕಲಾವಿದರಾದ ನಮ್ಮ ಕರ್ತವ್ಯ. ಡೋಂಟ್ ವರಿ ಎಂದು ಶಿವಣ್ಣ, ಯಶ್ ಗೆ ಹೇಳಿ ಕಳುಹಿಸಿದ್ರು ಎನ್ನುವ ಸುದ್ದಿಯೂ ಹರಿದಾಡುತ್ತಿದೆ.

ಪತ್ರಕರ್ತರೊಬ್ಬರು ಯಶ್ ಬಳಿ ಈ ಪ್ರಶ್ನೆಯನ್ನು ಕೇಳಿದಾಗ..
ನೀವು ದರ್ಶನ್ ಮತ್ತು ಸುದೀಪ್ ಅಭಿಮಾನಿಗಳನ್ನು ತನ್ನತ್ತ ಸೆಳೆಯುತ್ತಿದ್ದಾರೆ ಎನ್ನುವ ಸಿನಿ ರಿಪೋರ್ಟರ್ ಒಬ್ಬರ ಪ್ರಶ್ನೆಗೆ ಯಶ್ ಉತ್ತರಿಸುತ್ತಾ, ಯಾರಪ್ಪಾ ನೀವು. ಯಾಕೆ ಇಂತಹ ಸುದ್ದಿಗಳು ಹರಿದಾಡುತ್ತಿದೆ ಎಂದು ಖಾರವಾಗಿ ಉತ್ತರಿಸಿದ್ದರು.

ನಮ್ಮ ನಮ್ಮಲಿ ತಂದಿಡಬೇಡಿ
ನಾವೆಲ್ಲಾ ಕಲಾವಿದರು. ದಯವಿಟ್ಟು ನಮ್ಮ ನಮ್ಮಲಿ ತಂದಿಡಬೇಡಿ. ಈ ಮೆಂಟಾಲಿಟಿಯೇ ಸರಿಯಲ್ಲ, ಇಲ್ಲಿ ಎಲ್ಲರೂ ಒಂದೇ, ಯಾರೂ ದೊಡ್ಡವರಲ್ಲ, ಸಣ್ಣವರಲ್ಲ. ನಾನು ಎಲ್ಲರ ಫ್ಯಾನ್. ಈ ಮೂಲಕ ನಾನು ಹೇಳೋಕೆ ಇಷ್ಟ ಪಡುವುದೇ ಇಷ್ಟೇ, ನಾನು ಎಲ್ಲರ ಚಿತ್ರವನ್ನು ನೋಡುತ್ತೇನೆ.

ಯಶ್ ಮಾತು ಮುಂದುವರಿಸುತ್ತಾ
ಇಂತಹ ಗಾಳಿಸುದ್ದಿಗಳಿಗೆ ಯಾರೂ ಸೊಪ್ಪು ಹಾಕಬೇಡಿ, ಕನ್ನಡ ಚಿತ್ರವೇ ನಮ್ಮೆಲ್ಲರ ಉಸಿರು. ಬಾವಿಯೊಳಗಿನ ಕಪ್ಪೆ ತರ ನಾವು ಆಗೋದು ಬೇಡ ಎಂದು ಯಶ್ ತನ್ನ ಹುಟ್ಟುಹಬ್ಬದ ದಿನವಾದ ಜನವರಿ ಎಂಟರಂದು ಪತ್ರಕರ್ತರ ಮೂಲಕ ಅಭಿಮಾನಿಗಳಲ್ಲಿ ವಿನಂತಿಸಿ ಕೊಂಡಿದ್ದಾರೆ ಎನ್ನುವ ವಿಡಿಯೋ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.


Click it and Unblock the Notifications











