ಭಾವನಾತ್ಮಕ ವಿಡಿಯೋ ಹಂಚಿಕೊಂಡ ರಾಕಿಂಗ್ ಸ್ಟಾರ್ ಯಶ್
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಕೆಜಿಎಫ್ ಚಾಪ್ಟರ್ 2' ಚಿತ್ರ ಯಾವಾಗ ತೆರೆಗೆ ಬರುವುದೋ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಅತ್ತ ಬಾಕಿ ಉಳಿದಿರುವ ಚಿತ್ರೀಕರಣ ಇನ್ನೂ ಶುರುವಾಗಿಲ್ಲ. ಕೊರೊನಾ ಹಾವಳಿ ಕಡಿಮೆಯಾಗಲಿ ಎಂದು ಚಿತ್ರತಂಡವೂ ಚಿತ್ರೀಕರಣವನ್ನು ಮುಂದೂಡುತ್ತಾ ಬಂದಿತ್ತು. ಈಗ ಮಿನರ್ವ ಮಿಲ್ನಲ್ಲಿ ಹಾಕಿರುವ ಬೃಹತ್ ಸೆಟ್ನಲ್ಲಿ ಆಗಸ್ಟ್ 15ರಿಂದ ಚಿತ್ರೀಕರಣ ಮತ್ತೆ ಶುರುವಾಗಲಿದೆ ಎಂದು ಹೇಳಲಾಗಿದೆ.
Recommended Video
ಇನ್ನೂ ಎರಡು ಹಂತಗಳ ಚಿತ್ರೀಕರಣ ಬಾಕಿ ಇದೆ. ಮೊದಲ ಹಂತದಲ್ಲಿ 15 ದಿನ ಹಾಗೂ ನಂತರ 10 ದಿನಗಳ ಶೂಟಿಂಗ್ ನಡೆಸಲಾಗುತ್ತದೆ. ಕೊರೊನಾ ವೈರಸ್ ಸೋಂಕಿನ ಭೀತಿ ಇರುವುದರಿಂದ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಚಿತ್ರೀಕರಣ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಈ ನಡುವೆ ನಟ ಯಶ್ ಭಾವನಾತ್ಮಕ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ.

ತಂಗಿಗಾಗಿ ತೆರಳಿದ್ದ ಯಶ್
ಸೋಮವಾರ ರಕ್ಷಾ ಬಂಧನದ ಸಂದರ್ಭದಲ್ಲಿ ಯಶ್, ಹಾಸನದಲ್ಲಿರುವ ತಂಗಿ ನಂದಿನಿ ಅರುಣ್ ಕುಮಾರ್ ಅವರನ್ನು ಭೇಟಿ ಮಾಡಿ ರಾಖಿ ಕಟ್ಟಿಸಿಕೊಂಡಿದ್ದಾರೆ. ರಕ್ಷಾಬಂಧನ ಸಹೋದರ-ಸಹೋದರಿಯರ ನಡುವಿನ ಬಾಂಧವ್ಯದ ಸಂಕೇತ. ಪ್ರತಿ ವರ್ಷ ಈ ಗಳಿಗೆಯನ್ನು ಮಿಸ್ ಮಾಡಿಕೊಳ್ಳದ ಯಶ್, ಈ ಬಾರಿ ಕೂಡ ತಂಗಿ ಮನೆಗೆ ಹೋಗಿದ್ದಾರೆ.

ಹೃದಯಸ್ಪರ್ಶಿ ವಿಡಿಯೋ
ಯಶ್ ಅವರಿಗೆ ಆರತಿ ಎತ್ತಿ, ಹಣೆಗೆ ತಿಲಕವಿಟ್ಟು, ರಾಖಿ ಕಟ್ಟಿರುವ ಸಹೋದರಿ ನಂದಿನಿ, ಕೇಸರಿಬಾತ್ ತಿನ್ನಿಸಿದ್ದಾರೆ. ಯಶ್ ಕೂಡ ಅವರಿಗೆ ಕೇಸರಿಬಾತ್ ತಿನ್ನಿಸುವ ಮೂಲಕ ಸಿಹಿ ವಿನಿಮಯ ಮಾಡಿಕೊಂಡಿದ್ದಾರೆ. ಹಿತವಾದ ಸಂಗೀತದ ಹಿನ್ನೆಲೆ ಇರುವ ಈ ವಿಡಿಯೋ ಹೃದಯಸ್ಪರ್ಶಿಯಾಗಿದೆ.
ಶುಭಾಶಯ ತಿಳಿಸಿದ ಯಶ್
ರಕ್ಷಾ ಬಂಧನದ ಶುಭಾಶಯಗಳು ನಂದು ಎಂದು ತಂಗಿಗೆ ಶುಭಾಶಯ ಕೋರಿರುವ ಯಶ್, ಎಲ್ಲ ಸಹೋದರ- ಸಹೋದರಿಯರಿಗೂ ರಕ್ಷಾ ಬಂಧನದ ಶುಭಾಶಯ ತಿಳಿಸಿದ್ದಾರೆ. ಹಾಸನದ ಫಾರ್ಮ್ ಹೌಸ್ನಲ್ಲಿ ನಡೆದ ರಕ್ಷಾ ಬಂಧನದ ಸಂಭ್ರಮಾಚರಣೆಯ ಫೋಟೊಗಳನ್ನು ನಂದಿನಿ ಹಂಚಿಕೊಂಡಿದ್ದಾರೆ.

ಶಿವಾನಂದ ಕಳವೆ ಭೇಟಿ
ಸಿನಿಮಾದಾಚೆಗೆ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿರುವ ಯಶ್, ಶಿರಸಿಯ ಪರಿಸರವಾದಿ, ಕೃಷಿಕ ಮತ್ತು ಬರಹಗಾರ ಶಿವಾನಂದ ಕಳವೆ ಅವರನ್ನೂ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ರಚನೆಯ 'ಮಧ್ಯ ಘಟ್ಟ' ಕಾದಂಬರಿ ಹಾಗೂ ಪಶ್ಚಿಮ ಘಟ್ಟದ ವಿಶೇಷ ಸತ್ಯ ಸೀತಾ ಅಶೋಕವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಐರಾ-ತಮ್ಮನ ರಾಖಿ ಹಬ್ಬ
ಅಮೆರಿಕದಲ್ಲಿರುವ ಸಹೋದರ ಗೌರಂಗ್ಗೆ ರಾಖಿ ಕಟ್ಟಲಾಗದ ಬೇಸರ ಹಂಚಿಕೊಂಡಿದ್ದ ನಟಿ ರಾಧಿಕಾ ಪಂಡಿತ್, ತಮ್ಮ ಇಬ್ಬರು ಮಕ್ಕಳ ಮೊದಲ ರಕ್ಷಾಬಂಧನದ ಸಂಭ್ರಮವನ್ನು ತೋರಿಸಿದ್ದರು. ಐರಾ ಮುದ್ದು ತಮ್ಮನಿಗೆ ಮೊದಲ ಬಾರಿ ರಾಖಿ ಕಟ್ಟಿ, ಆರತಿ ಮಾಡುತ್ತಿರುವ ಫೋಟೊಗಳು ವೈರಲ್ ಆಗಿವೆ.


Click it and Unblock the Notifications











