"ದರ್ಶನ್ಗೋಸ್ಕರ ಪೂಜೆ ಮಾಡ್ಬೇಕು ಅಂದರೆ, 100 ದೇವಸ್ಥಾನದಲ್ಲಿ ಮಾಡಿಸ್ತೀನಿ"; ರಾಕ್ಲೈನ್ ವೆಂಕಟೇಶ್
ಆಗಸ್ಟ್ 14ರಂದು ಕನ್ನಡ ಕಲಾವಿದರ ಸಂಘದಲ್ಲಿ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ. ಹೋಮ ಹವನಗಳನ್ನು ಮಾಡುವುದಕ್ಕೆ ಈ ಸಂಘ ನಿರ್ಧರಿಸಿದೆ. ಆದರೆ, ಪೂಜೆ ಮಾಡುತ್ತಿರುವ ವಿಷಯ ಹೊರ ಬೀಳುತ್ತಿದ್ದಂತೆ ಕೆಲವು ಆರೋಪಗಳನ್ನು ಮಾಡುವುದಕ್ಕೆ ಶುರು ಮಾಡಿದ್ದರು. ದರ್ಶನ್ ಬಿಡುಗಡೆಯಾಗಲಿ ಅಂತಲೇ ಈ ಹೋಮ ಹವನಗಳನ್ನು ಮಾಡಿಸುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದವು.
ದರ್ಶನ್ ರಿಲೀಸ್ಗಾಗಿ ಪೂಜೆ ಮಾಡುತ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿರುವ ಬೆನ್ನಲ್ಲೇ ರಾಕ್ಲೈನ್ ವೆಂಕಟೇಶ್ ಹಾಗೂ ದೊಡ್ಡಣ್ಣ ಸ್ಪಷ್ಟನೆ ನೀಡಿದ್ದಾರೆ. ಕಲಾವಿದರ ಸಂಘದಲ್ಲಿ ಪೂಜೆ ಹಾಗೂ ಹೋಮವನ್ನು ಯಾಕೆ ಮಾಡುತ್ತಿದ್ದೇವೆ ಅನ್ನೋದಕ್ಕೆ ಕ್ಲಾರಿಟಿ ಕೊಟ್ಟಿದ್ದಾರೆ. ಅಲ್ಲದೆ ದರ್ಶನ್ ಬಿಡುಗಡೆಗಾಗಿ ಮಾಡುತ್ತಿರುವ ಹೋಮ ಅಲ್ಲ ಎಂದಿದ್ದಾರೆ.

ದರ್ಶನ್ ರಿಲೀಸ್ ಆಗಲಿ ಅಂತ ಹೋಮ ಮಾಡಿಸುವುದೇ ಆಗಿದ್ದರೆ, ಅವರ ಮನೆಯಲ್ಲಿ ಮಾಡಿಸುತ್ತಿದ್ದೆ. 100 ದೇವಸ್ಥಾನಗಳಲ್ಲಿ ಮಾಡಿಸುತ್ತಿದ್ದೆ ಎಂದು ರಾಕ್ಲೈನ್ ವೆಂಕಟೇಶ್ ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟಿದ್ದಾರೆ. ದಿಡೀರನೇ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಹಾಗೂ ಹಿರಿಯ ನಟ ದೊಡ್ಡಣ್ಣ ಆಡಿರುವ ಮಾತಿನ ಝಲಕ್ ಹೀಗಿದೆ.
"ದೊಡ್ಡಣ್ಣ ಪೂಜೆ ಮಾಡಿಸ್ಬೇಕು ಅಂದ್ರು"
ರಾಕ್ಲೈನ್ ವೆಂಕಟೇಶ್ ಕಲಾವಿದರ ಸಂಘದಲ್ಲಿ ಈ ಪೂಜೆ ಹವನ ಯಾಕೆ ಅನ್ನೋದಕ್ಕೆ ಮಾಹಿತಿ ಕೊಟ್ಟಿದ್ದಾರೆ. "ರಾಜ್ಕುಮಾರ್ ಭವನದಲ್ಲಿ ಆಗಸ್ಟ್ 14ರಂದು ಏನು ಪೂಜೆ ಹೋಮ ನಡೆಯುತ್ತಿದೆಯಲ್ಲ ಏನು ಅಂತ ಸುಮಾರು ಜನ ಫೋನ್ ಮಾಡಿ ಕೇಳುತ್ತಿದ್ದರು. ಹೋಮ ಹವನ ಪೂಜೆ ಮಾಡೋದು ಅಷ್ಟೇ. ಕೋವಿಡ್ ಆದ್ಮೇಲೆ ಮಾಡ್ಬೇಕು ಅಂತ ಪ್ಲ್ಯಾನ್ ಮಾಡಿಕೊಂಡಿದ್ವಿ. ಕೋವಿಡ್ ಆದ್ಮೇಲೆ ಸುಮಾರು ಜನರನ್ನು ಕಳೆದುಕೊಂಡ್ವಿ. ಮತ್ತೆ ಎರಡನೇ ಅಲೆ ಎಲ್ಲಾ ಬಂತು. ಮೊನ್ನೆ ದೊಡ್ಡಣ್ಣ ಪೂಜೆ ಮಾಡಿಸಬೇಕು ಅಂತ ಹೇಳುತ್ತಿದ್ದರು. ನೋಡಿ ಅಣ್ಣ ಮಾಡಿಸಿ ಅಂತ ಹೇಳಿದೆ." ಎಂದಿದ್ದಾರೆ.
"ಈಗ ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ"
"ಸತ್ಯ ಹೇಳಬೇಕು ಅಂದರೆ, ಹಿಂದೆ ನಮ್ಮ ಹಿರಿಯರಲ್ಲಿ ಇದ್ದಂತಹ ಒಗ್ಗಟ್ಟು ಇತ್ತು. ಈಗ ಇಲ್ಲ ಅನ್ನೋದನ್ನು ಓಪನ್ ಆಗಿ ಹೇಳುತ್ತೇನೆ. ಅವರವರು ಅವರ ಕೆಲಸವನ್ನು ಮಾಡಿಕೊಂಡು ಹೋಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ಯಾರ ಮೊರೆ ಹೋಗಬೇಕು? ದೇವರ ಮೊರೆಯನ್ನೇ ಹೋಗಬೇಕು. ನೂರಾರು ಮೀಟಿಂಗ್ ಮಾಡಿದ್ದೀವಿ ಫಿಲ್ಮ್ ಚೇಂಬರ್ನಲ್ಲಿ ಏನೂ ಪ್ರಯೋಜನ ಆಗಿಲ್ಲ. ಅವತ್ತು ಒಳ್ಳೆಯ ದಿನ ಅಂದರು. ಒಳ್ಳೆಯದಾಗುತ್ತೆ ಅನ್ನುವ ಭರವಸೆಯಿಂದ ಈ ಪೂಜೆ ಹೋಮ ಮಾಡುತ್ತಿದ್ದೇವೆ." ಎಂದು ರಾಕ್ಲೈನ್ ವೆಂಕಟೇಶ್ ಹೇಳಿದ್ದಾರೆ.

"ದರ್ಶನ್ಗೋಸ್ಕರ ಪೂಜೆ ಅಂದ್ಕೊಂಡಿದ್ರೆ ಕ್ಷಮಿಸಿ"
"ದರ್ಶನ್ಗೋಸ್ಕರ ಪೂಜೆ ಮಾಡಬೇಕು ಅಂದರೆ, ಅವರ ಮೇಲಿನ ಅಭಿಮಾನಕ್ಕೋ ಏನಕ್ಕೋ ನಾನು 100 ದೇವಸ್ಥಾನದಲ್ಲಿ ಪೂಜೆ ಮಾಡಿಸುತ್ತೇನೆ. ಇಲ್ಲೇ ಬಂದು ಪೂಜೆ ಮಾಡಬೇಕು ಅಂತೇನೂ ಇಲ್ಲ. ದರ್ಶನ್ಗೋಸ್ಕರ ಪೂಜೆ ಮಾಡುತ್ತಿದ್ದೇವೆ ಅಂತ ನೀವೇನಾದರೂ ಅಂದುಕೊಂಡಿದ್ದರೆ ದಯವಿಟ್ಟು ಕ್ಷಮಿಸಿ ಅದಕ್ಕೆ ಅಲ್ಲ." ಎಂದಿದ್ದಾರೆ.
"ಸಮಗ್ರ ಚಿತ್ರರಂಗದ ಉಳಿವಿಗಾಗಿ ಹೋಮ"
"ನೀವು ನೋಡ್ತಾ ಇದ್ದೀರ ಶಾಂತಾಲಾ ಥಿಯೇಟರ್ ಒಡೆದರು. ಸಿಂಗಲ್ ಸ್ಕ್ರೀನ್ನವರು ಬಾಗಿಲು ಹಾಕಿದ್ರು. ಬೇರೆ ಉದ್ಯೋಗ ಗೊತ್ತಿಲ್ಲ. ಮಾಡುವುದಕ್ಕೆ ವಯಸ್ಸು ಇಲ್ಲ. ಸತ್ಯವಾಗಲೂ ನಮ್ಮ ತಾಯಿ ಮೇಲೆ ಆಣೆ ಮಾಡಿ ಹೇಳುತ್ತೇನೆ. ನಾವು ಯಾರ ಮೇಲಿನ ಸ್ವಾರ್ಥಕ್ಕಾಗಿಯೋ ಈ ಕಾರ್ಯ ಮಾಡುತ್ತಿಲ್ಲ. ಇಡೀ ಸಮಗ್ರ ಚಿತ್ರರಂಗದ ಉಳಿವಿಗಾಗಿ ಮಾಡುತ್ತಿದ್ದೇವೆ." ಎಂದು ದೊಡ್ಡಣ್ಣ ಹೇಳಿದ್ದಾರೆ.


Click it and Unblock the Notifications











