ಎಸ್ ಎಲ್ ಭೈರಪ್ಪ 'ಪರ್ವ'ಕ್ಕೆ ಸಿನಿಮಾ ಟಚ್: ಕಾಶ್ಮೀರ್ ಫೈಲ್ಸ್ ನಿರ್ದೇಶಕನಿಂದ ಆಕ್ಷನ್ ಕಟ್
ಎಸ್ ಎಲ್ ಭೈರಪ್ಪನವರ ಕಾದಂಬರಿಗಳಿಗೆ ದೊಡ್ಡ ಅಭಿಮಾನಿಗಳು ಬಳಗವೇ ಇದೆ. ಇವರು ಬರೆದ ಕಾದಂಬರಿಗಳು ಪ್ರತಿ ಚರ್ಚೆಗೆ ಒಳಪಡುತ್ತವೆ. ಹೀಗಾಗಿ ಓದುಗರನನ್ನು ಚರ್ಚೆಗೆ ಎಳೆದು ತಂದ ಜನಪ್ರಿಯ ಕಾದಂಬರಿ 'ಪರ್ವ'. ಈ ಕಾದಂಬರಿ ಈಗ ಸಿನಿಮಾ ರೂಪ ಪಡೆದುಕೊಳ್ಳುತ್ತಿದೆ.
ಕನ್ನಡಿಗರಿಗೆ ಎಸ್ ಎಲ್ ಭೈರಪ್ಪ ಚಿರಪರಿಚಿತರು. ಇವರ ಕಾದಂಬರಿಗಳಿಗೆ ರಾಜ್ಯ, ದೇಶ ಅಷ್ಟೇ ಅಲ್ಲ ವಿದೇಶದಲ್ಲೂ ಓದುಗರಿದ್ದಾರೆ. ಇವರ ಕಾದಂಬರಿಗೆ ಮರಾಠಿ, ಇಂಗ್ಲಿಷ್, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. ಇಂತಹ ಕಾದಂಬರಿಗಳಲ್ಲಿ 'ಪರ್ವ' ಕೂಡ ಒಂದು. ಈ ಕಾದಂಬರಿಯನ್ನು ಸಿನಿಮಾ ಮಾಡುವುದಕ್ಕೆ ನಿರ್ಧರಿಸಲಾಗಿದ್ದು, ಶೀಘ್ರವೇ ಸೆಟ್ಟೇರಲಿದೆ.

'ದಿ ಕಾಶ್ಮೀರ್ ಫೈಲ್ಸ್', 'ದಿ ವ್ಯಾಕ್ಸಿನ್ ವಾರ್' ಅಂತಹ ವಿವಾದಾತ್ಮಕ ಸಿನಿಮಾಗಳ ನಿರ್ದೇಶಕ ಬಾಲಿವುಡ್ನ ವಿವೇಕ್ ಅಗ್ನಿಹೋತ್ರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಾಳೆ (ಅಕ್ಟೋಬರ್ 21) ಈ ಸಿನಿಮಾದ ಘೋಷಣೆಯಾಗುತ್ತಿದೆ. ಎಸ್ ಎಲ್ ಭೈರಪ್ಪ, ವಿವೇಕ್ ಅಗ್ನಿಹೋತ್ರಿ, ಬಾಲಿವುಡ್ ನಟಿ ಪಲ್ಲವಿ ಜೋಷಿ ಹಾಗೂ ಪ್ರಕಾಶ್ ಬೆಳವಾಡಿ ಸಿನಿಮಾ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
'ಪರ್ವ' ಹಿನ್ನೆಲೆಯೇನು?
ಎಸ್ ಎಲ್ ಭೈರಪ್ಪ ಬರೆದ ಕಾದಂಬರಿಗೆ ಅತೀ ಹೆಚ್ಚು ಚರ್ಚೆಗೆ ಒಳಗಾಗಿದ್ದು 'ಪರ್ವ'. ಇದು ಮಹಾಭಾರತದ ಕಥೆ. ಹಾಗಿದ್ದರೂ, ಈ ಕಾದಂಬರಿ ಪಾಂಡವರ ಕೌರವರ ಬಗೆಗಿನ ಚಿತ್ರಣವನ್ನೇ ಬದಲಿಸುತ್ತದೆ. ಪ್ರತಿಯೊಂದು ಪಾತ್ರವನ್ನು ಸಾಮಾನ್ಯರಂತೆ ಕಾಣುತ್ತಾ, ಆ ಪಾತ್ರಗಳಲ್ಲಿರುವ ಕುಂದುಕೊರತೆಗಳನ್ನು ಮನದಟ್ಟು ಮಾಡಿಸುತ್ತಾ ಹೋಗುವ ವಿಶಿಷ್ಟ ಕಾದಂಬರಿ ಇದು ಎಂದು ಓದುಗರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ 'ಪರ್ವ' ಭೈರಪ್ಪನವರ ಅತೀ ಚರ್ಚಿತ ಕಾದಂಬರಿ ಎನ್ನಬಹುದು. ಈಗ ಇದೇ ಕಾದಂಬರಿಗೆ ಸಿನಿಮಾ ರೂಪ ಸಿಗಲಿದೆ.
'ಪರ್ವ' ಕಾದಂಬರಿಗೆ ಸಿನಿಮಾ ರೂಪ
ಎಸ್ ಎಲ್ ಭೈರಪ್ಪನವರ ಬಹುಚರ್ಚಿತ ಕಾದಂಬರಿಯನ್ನು ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡುತ್ತಿದ್ದಾರೆ. 'ಪರ್ವ' ಕಾದಂಬರಿಯ ಅಭಿಮಾನಿಗಳಿಗೆ ಇದು ಖುಷಿ ವಿಚಾರ. ಆದರೆ, ವಿವೇಕ್ ಅಗ್ನಿಹೋತ್ರಿ ಈ ಕಾದಂಬರಿಯನ್ನು ಯಾವ ಭಾಷೆಯಲ್ಲಿ ತೆರೆಗೆ ತರುತ್ತಾರೆ ಅನ್ನೋದು ಇನ್ನಷ್ಟು ಸ್ಪಷ್ಟವಾಗಬೇಕಿದೆ. ಇದಕ್ಕೆಲ್ಲ ಉತ್ತರ ನಾಳೆ (ಅಕ್ಟೋಬರ್ 21) ಸಿಗಲಿದೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನ
'ದಿ ಕಾಶ್ಮೀರ್ ಫೈಲ್ಸ್' ಅಂತಹ ವಿವಾದಾತ್ಮಕ ಸಿನಿಮಾವನ್ನು ನಿರ್ದೇಶಿಸಿರುವ ವಿವೇಕ್ ಅಗ್ನಿಹೋತ್ರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹೀಗಾಗಿ ಈ ಸಿನಿಮಾ ಕೂಡ ವಿವಾದಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇದರೊಂದಿಗೆ ಸಿನಿಮಾದಲ್ಲಿ ಯಾರು ನಟಿಸುತ್ತಾರೆ? ಸಿನಿಮಾದ ಸ್ವರೂಪ ಹೇಗಿರುತ್ತೆ? ಅನ್ನೋದನ್ನು ಬಹಿರಂಗಗೊಳ್ಳಬೇಕಿದೆ. ಹೀಗಾಗಿ 'ಪರ್ವ' ಸಿನಿಮಾ ಕುತೂಹಲವನ್ನಂತೂ ಕೆರಳಿಸಿದೆ.


Click it and Unblock the Notifications











