ಓ ಅಪ್ಪು ಮರಳಿ ಬಾ.. ಪುನೀತ್ಗೆ 'ಸಖತ್' ಸಿನಿಮಾ ತಂಡದಿಂದ ಶ್ರದ್ಧಾಂಜಲಿ
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿಕೆ ಇಂದಿಗೂ ನಂಬಲಾಗುತ್ತಿಲ್ಲ. ಪುನೀತ್ ನಿಧನದಿಂದ ಕನ್ನಡ ಚಿತ್ರರಂಗ ಹೊರಬರಲು ಇನ್ನೆಷ್ಟು ದಿನ ಬೇಕೋ ಗೊತ್ತಿಲ್ಲ. ಆದರೆ, ಪ್ರತಿಯೊಂದು ತಂಡವೂ ಅಪ್ಪು ನೆನೆದು ಮುಂದಿನ ಕಾರ್ಯಕ್ಕೆ ಕೈ ಹಾಕುತ್ತಿದೆ. ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿದ 'ಸಖತ್' ಸಿನಿಮಾ ಬಿಡುಗಡೆಗೂ ಮುನ್ನ ಅಪ್ಪುಗೆ ಗೌರವ ಸೂಚಿಸಲು ಹಾಡೊಂದನ್ನು ಸಿನಿಮಾದಲ್ಲಿ ಸೇರಿಸಿತ್ತು. ಆ ಹಾಡು ಇಂದು( ಡಿಸೆಂಬರ್ 17) ಬಿಡುಗಡೆಯಾಗಿದೆ.
ಪುನೀತ್ ರಾಜ್ಕುಮಾರ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಇಬ್ಬರೂ ಉತ್ತಮ ಸ್ನೇಹಿತರಾಗಿದ್ದರು. ಅಪ್ಪು ಅಗಲುವ ಒಂದು ದಿನ ಮುನ್ನ ಇಬ್ಬರೂ ಒಟ್ಟಿಗೆ ಸೇರಿದ್ದರು. ಸಂಗೀತ ನಿರ್ದೇಶಕ ಗುರುಕಿರಣ್ ಬರ್ತ್ಡೇ ಪಾರ್ಟಿಯಲ್ಲಿ ಭೇಟಿಯಾಗಿದ್ದರು. ಇದೇ ನೋವಿನಲ್ಲಿ ನವೆಂಬರ್ 10ರಂದು ಬಿಡುಗಡೆಯಾಗಬೇಕಿದ್ದ 'ಸಖತ್' ಸಿನಿಮಾವನ್ನು ಮುಂದೂಡಿದ್ದರು. ಆದರೆ, ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ಗೆ ಗೌರವ ಸೂಚಿಸುವುದನ್ನು ಮಾತ್ರ ಮರೆತಿಲ್ಲ.

ಓ ಅಪ್ಪು ಮರಳಿ ಬಾ.. ಹಾಡು ರಿಲೀಸ್
"ಓ ಅಪ್ಪು ಮರಳಿ ಬಾ.. ಅರಳಿ ಬಾ.. ನಗುತಲೇ ನಗಿಸು ಬಾ.. ಲೋಕವೇ ಕಾದಿದೆ. ಪರದೆಯ ಸಿಂಗರಿಸು ಬಾ..'' ಎಂಬ ಲಿರಿಕಲ್ ಸಾಂಗ್ ಅನ್ನು'ಸಖತ್' ಚಿತ್ರತಂಡ ಬಿಡುಗಡೆ ಮಾಡಿದೆ. ಒಂದೂವರೆ ನಿಮಿಷದ ಈ ಹಾಡಿನ ಬಗ್ಗೆ ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪ್ರಮೋದ್ ಮರವಂತೆ ಓ ಅಪ್ಪು ಮರಳಿ ಬಾ.. ಹಾಡಿನ ಸಾಹಿತ್ಯ ರಚಿಸಿದ್ದರೆ, ಪಂಚಮ್ ಜೀವ ಈ ಹಾಡಿಗೆ ಧ್ವನಿಯಾಗಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ. ಈ ಹಾಡು ಅಪ್ಪು ಅಭಿಮಾನಿಗಳಿಗೆ ಹೊಸ ಚೈತನ್ಯ ನೀಡಿದೆ.

25ನೇ ದಿನ ಸಮೀಪಿಸುತ್ತಿದೆ 'ಸಖತ್'
'ಚಮಕ್' ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಸಿಂಪಲ್ ಸುನಿ ಕಾಂಬಿನೇಷನ್ ಮತ್ತೆ ಇಷ್ಟ ಆಗಿದೆ. ನೂರೆಂಟು ಅಡೆತಡೆಗಳ ಮಧ್ಯೆ 'ಸಖತ್' 25ನೇ ದಿನದತ್ತ ಮುನ್ನುಗ್ಗುತ್ತಿದೆ. ಮೂರು ವಾರದ ಹಿಂದಷ್ಟೇ ರಿಲೀಸ್ ಆಗಿದ್ದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದೀಗ ಮತ್ತೊಮ್ಮೆ ಗಣಿ-ಸುನಿ ಕಾಂಬಿನೇಷನ್ ವರ್ಕ್ ಆಗಿದೆ. 'ಸಖತ್' ಸಿನಿಮಾವನ್ನು ಫ್ಯಾಮಿಲಿ ಆಡಿಯನ್ಸ್ ಕೈ ಹಿಡಿದಿದ್ದಾಗಿ ಸ್ವತ: ಗೋಲ್ಡನ್ ಸ್ಟಾರ್ ಗಣೇಶ್ ಹೇಳಿಕೊಂಡಿದ್ದಾರೆ. ಕೋವಿಡ್ ಭಯದಿಂದ ನಮಗೆ ತುಸು ಹೊಡೆತ ಬಿದ್ದಿದ್ದು, ಸಿನಿಮಾ ಬಗ್ಗೆ ಬಂದ ಮೌತ್ ಪಬ್ಲಿಸಿಟಿಯಿಂದ ಸಿನಿಮಾ ಮೂರು ವಾರ ಚೆನ್ನಾಗಿ ಓಡಿದೆ ಎಂದಿದ್ದಾರೆ.

ನೆಟ್ಫ್ಲಿಕ್ಸ್ನಲ್ಲಿ 'ಸಖತ್' ರಿಲೀಸ್
ಫ್ಯಾಮಿಲಿ ಆಡಿಯನ್ಸ್ ಮನಗೆದ್ದಿರುವ ಸಿನಿಮಾ OTTಯ ದೈತ್ಯ ವೇದಿಕೆ ನೆಟ್ಫ್ಲಿಕ್ಸ್ಗೆ ಮಾರಾಟವಾಗಿದೆ. ಸಾಮಾನ್ಯವಾಗಿ ಕ್ವಾಲಿಟಿ ಇಲ್ಲದ ಸಿನಿಮಾಗಳನ್ನು ನೆಟ್ಫ್ಲಿಕ್ಸ್ ಖರೀದಿ ಮಾಡುವುದಿಲ್ಲ. ಹೀಗಾಗಿ ಕನ್ನಡಕ್ಕೆ ತಡವಾಗಿ ಎಂಟ್ರಿಕೊಟ್ಟಿರುವ ನೆಟ್ಫ್ಲಿಕ್ಸ್ ನಿಧಾನವಾಗಿ ಒಂದೊಂದೇ ಸಿನಿಮಾವನ್ನು ಖರೀದಿ ಮಾಡುತ್ತಿದೆ. ಈಗ 'ಸಖತ್' ಸಿನಿಮಾವನ್ನೂ ಖರೀದಿ ಮಾಡಿದ್ದು, ಉದಯ ಟಿವಿಗೆ ಸ್ಯಾಟಲೈಟ್ ರೈಟ್ಸ್ ಮಾರಾಟ ಮಾಡಲಾಗಿದೆ.

2ನೇ ವಾರಕ್ಕೆ ಬಂತು 'ಸಖತ್' ಬಂಡವಾಳ
ಸಖತ್ ಸಿನಿಮಾಗೆ ಬೇರೆ ಸಿನಿಮಾಗಳ ಪೈಪೋಟಿ ಎದುರಾಗಿತ್ತು. ಈ ಮಧ್ಯೆ ಓಮಿಕ್ರಾನ್ ಹಾವಳಿ ಭಯ ಬೇರೆ ಇತ್ತು. ಹೀಗಿದ್ದರೂ, ಸಖತ್ ಸಿನಿಮಾ ನೋಡಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದಿದ್ದು, 2ನೇ ವಾರಕ್ಕೆ ಹಾಕಿದ ಬಂಡವಾಳ ವಾಪಾಸ್ ಬಂದಿದೆ ಎಂದು ನಿರ್ದೇಶಕ ಸುನಿ ಹೇಳಿದ್ದಾರೆ. 3ನೇ ವಾರ ಬರುವುದೆಲ್ಲವೂ ಲಾಭ ಎನ್ನಲಾಗಿದೆ. ಕೆವಿಎನ್ ಪ್ರೊಡಕ್ಷನ್ ಹೌಸ್ ಸಖತ್ ಸಿನಿಮಾ ನಿರ್ಮಿಸಿದ್ದು, ಗಣಿಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ಹಾಗೂ ಸುರಭಿ ನಟಿಸಿದ್ದಾರೆ.


Click it and Unblock the Notifications











