ಹಳ್ಳಿಗಳನ್ನು ಉಳಿಸುವ ಹುಡುಗರ ಕಥೆ 'ಸಂಭವಾಮಿ ಯುಗೇ ಯುಗೇ'
ಚಿತ್ರಮಂದಿರಗಳಿಗೆ ಜನರು ಬರುತ್ತಿಲ್ಲ ಅನ್ನೋ ಕೂಗು ಹಲವು ದಿನಗಳಿಂದ ಕೇಳಿಬರುತ್ತಲೇ ಇದೆ. ಹೀಗಿದ್ದರೂ ಯುವ ಪ್ರತಿಭೆಗಳು ಹೊಸ ಪ್ರಯತ್ನಕ್ಕೆ ಮುಂದಾಗುತ್ತಲೇ ಇವೆ. ಜನರನ್ನು ಥಿಯೇಟರ್ಗೆ ಕರೆದುಕೊಂಡು ಬರುವುದಕ್ಕೆ ಹೊಸ ಪರಿಕಲ್ಪನೆಯೊಂದಿಗೆ ಸಿನಿಮಾ ನಿರ್ಮಾಣ ಮಾಡುತ್ತಿವೆ. ಇದರಲ್ಲಿ 'ಸಂಭವಾಮಿ ಯುಗೇ ಯುಗೇ' ಕೂಡ ಒಂದು.
ಇಂದಿನ ಆಧುನಿಕತೆಯ ಭರಾಟೆಯಲ್ಲಿ ಹಳ್ಳಿಗಳಲ್ಲಿ ಇದ್ದ ವೈಭವ ಕಡಿಮೆಯಾಗುತ್ತಿದೆ. ಹಳ್ಳಿಯ ಹುಡುಗರು ಶಿಕ್ಷಣ ಪಡೆದ ಬಳಿಕ ಪಟ್ಟಣ ಸೇರುತ್ತಿದ್ದಾರೆ. ಹೀಗೆ ಆದರೆ, ಹಳ್ಳಿಗಳ ಕಥೆ ಏನಾಗುತ್ತೆ? ಅನ್ನುವ ಗಂಭೀರ ಸಮಸ್ಯೆಯನ್ನು ಇಟ್ಟುಕೊಂಡು 'ಸಂಭವಾಮಿ ಯುಗೇ ಯುಗೇ' ಸಿನಿಮಾ ಮಾಡಿದ್ದಾರೆ.

ಈ ಸಿನಿಮಾವನ್ನು ಚೇತನ್ ಚಂದ್ರಶೇಖರ್ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಅಡಿಯಲ್ಲಿ ಶ್ರೀಮತಿ ಪ್ರತಿಭಾ ಅವರು ನಿರ್ಮಾಣ ಮಾಡಿದ್ದಾರೆ. ಇದೇ ಜೂನ್ ತಿಂಗಳ 21ರಂದು ಈ ಸಿನಿಮಾ ಬಿಡುಗಡೆಯಾಗಲಿದೆ. ಯುವ ಪ್ರತಿಭೆಗಳಾದ ಜಯ್ ಶೆಟ್ಟಿ-ನಿಶಾ ರಜಪೂತ್ ಹಾಗೂ ಮಧುರಾಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇತ್ತೀಚೆಗೆ ಇಡಿ ತಂಡ ಅರಮನೆ ನಗರಿ ಮೈಸೂರಿಗೆ ಭೇಟಿ ಕೊಟ್ಟು ತಮ್ಮ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದೆ. "ನಾನು ಕಳೆದ ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿದ್ದು, ಸೋಷಿಯಲ್ ಕಂಟೆಂಟ್ ಇಟ್ಟುಕೊಂಡು ಈ ಸಿನಿಮಾ ನಿರ್ದೇಶನ ಮಾಡಿದ್ದೇನೆ. ಫ್ಯಾಮಿಲಿ ಆಡಿಯನ್ಸ್ ಕೂತು ನೋಡುವಂಥ ವಿಭಿನ್ನ ಕಮರ್ಷಿಯಲ್ ಕಾನ್ಸೆಪ್ಟ್ ಇರುವ ಈ ಚಿತ್ರಕ್ಕೆ ಸಿನಿಮಾದಲ್ಲಿ ಕೃಷ್ಣನ ಪಾತ್ರ ಹಾಗೂ ಅರ್ಜುನನನ್ನು ಹೋಲುವ ಪಾತ್ರಗಳೂ ಇವೆ. ಮಂಡ್ಯ, ಚನ್ನಪಟ್ಟಣ, ರಾಮನಗರ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ. ಈಗಾಗಲೇ ಚಿತ್ರದ ಟೀಸರ್, ಸಾಂಗ್ಸ್ ವೈರಲ್ ಆಗಿದ್ದು, ಸದ್ಯದಲ್ಲೇ ಟ್ರೈಲರ್ ಬಿಡುಗಡೆ ಮಾಡುತ್ತಿದ್ದೇವೆ." ಎಂದು ನಿರ್ದೇಶಕ ಚೇತನ್ ಚಂದ್ರಶೇಖರ್ ಶೆಟ್ಟಿ ಹೇಳಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿರುವ ಹುಡುಗರು ಶಿಕ್ಷಣ ಪಡೆದ ಮೇಲೆ ಪಟ್ಟಣ ಸೇರುತ್ತಾರೆ. ಆ ಬಳಿಕ ಅಲ್ಲಿಯೇ ನೆಲೆಸುತ್ತಾರೆ. ಇದರಿಂದ ಮುಂದಿನ ತಲೆಮಾರಿನ ಕಥೆ ಏನಾಗುತ್ತೆ? ನಮ್ಮ ಹಳ್ಳಿಗಳು ಉಳಿಯುವುದಾದರೂ ಹೇಗೆ? ಮುಂದಿನ ದಿನಗಳಲ್ಲಿ ಇಂತಹದ್ದೊಂದು ಗಂಭೀರ ಸಮಸ್ಯೆ ಎದುರಾಗುತ್ತೆ. ಯುವಕರು ಹಳ್ಳಿಯಲ್ಲೇ ನೆಲೆಸಬೇಕು, ಹಳ್ಳಿಗಳನ್ನು ಬೆಳೆಸಬೇಕು ಎಂಬ ಕಾನ್ಸೆಪ್ಟ್ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಜೂನ್ 21ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ.

"ಈ ಹಿಂದೆ 1975 ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದೆ. ಕೃಷಿ ಮತ್ತು ರೈತರ ಮೇಲೆ ಮಾಡಿದ ಚಿತ್ರವಿದು. ತನಗೆ ಆಶ್ರಯ ಕೊಟ್ಟ ಊರಿಗೆ ಏನಾದರೂ ಮಾಡಬೇಕು ಎಂದು ನಾಯಕ ಮುಂದಾಗುತ್ತಾನೆ. ಮುಂದೇನಾಗುತ್ತದೆ ಎನ್ನುವುದೇ ಈ ಚಿತ್ರದ ಕಾನ್ಸೆಪ್ಟ್" ಎಂದು ನಾಯಕ ಜಯ್ಶೆಟ್ಟಿ ಮಾಹಿತಿ ಹಂಚಿಕೊಂಡಿದ್ದಾರೆ.
ನಾಯಕಿ ನಿಶಾ ರಜಪೂತ್ ಮೂಲತ: ಬಿಜಾಪುರದವರು. ಆದರೆ ಬೆಳೆದಿದ್ದು ಮುಂಬೈನಲ್ಲಿ. ಹೀಗಾಗಿ ಕನ್ನಡ ಸಿನಿಮಾ ನಟಿಸಬೇಕು ಎಂಬ ಆಸೆ ಇವರಿಗೆ ಇತ್ತಂತೆ. "ಕನ್ನಡದಲ್ಲಿ ನಟಿಸಬೇಕು ಎಂಬ ಆಸೆ ಇತ್ತು. ಈ ಚಿತ್ರದಲ್ಲಿ ಸ್ವಾತಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ." ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ನು ನಾಯಕನ ತಂಗಯಾಗಿ ನಟಿಸಿರುವ ಮಧುರಾಗೌಡ "ಈ ಸಿನಿಮಾದಲ್ಲಿ ಸುಧಾರಾಣಿ ಅವರ ಮಗಳಾಗಿ ನಟಿಸಿದ್ದು ನನ್ನ ಅದೃಷ್ಟ" ಎಂದು ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.


Click it and Unblock the Notifications











