"ಗಂಡ ಹೆಂಡತಿ ಮಧ್ಯೆ ಚಿಕ್ಕ ಜಗಳ.. ಸಾಯ್ತಿನಿ ಅಂತ ಹೆದರಿಸೋಕೆ ಹೋಗಿ ಕತ್ತು ಲಾಕ್ ಆಗಿದೆ":ಗೆಳೆಯನ ಸಾವಿಗೆ ಸ್ಪಷ್ಟನೆ!
ನಿನ್ನೆ(ಏಪ್ರಿಲ್ 23) ಕನ್ನಡ ಕಿರುತೆರೆಗೆ ದೊಡ್ಡ ಶಾಕ್ ಕಾದಿತ್ತು. 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಟಿಸಿದ್ದ ಸಂಪತ್ ಜಯರಾಂ ಆತ್ಮಹತ್ಯೆಗೆ ಶರಣಾಗಿದ್ದರು. 35 ವರ್ಷದ ನಟ ದಿಢೀರನೇ ಇಂತಹ ದುಡುಕಿನ ನಿರ್ಧಾರಕ್ಕೆ ಎಲ್ಲರೂ ಮರುಗಿದ್ದರು.
ಸಿನಿಮಾ ಹಾಗೂ ಕಿರುತೆರೆಯಲ್ಲಿ ಅವಕಾಶ ಸಿಕ್ಕಿರಲಿಲ್ಲ. ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಂಪತ್ ಜಯರಾಂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದ್ಯಾವುದೂ ಅಲ್ಲ ಅಂತ ಸಂಪತ್ ಜಯರಾಂ ಅವರ ಆತ್ಮೀಯ ಗೆಳೆಯ ಹಾಗೂ ನಟ ರಾಜೇಶ್ ಧ್ರುವ ಸ್ಪಷ್ಟಪಡಿಸಿದ್ದಾರೆ.

ಯೂಟ್ಯೂಬ್ ಚಾನೆಲ್ನಲ್ಲಿ ಸಂಪತ್ ಜಯರಾಂ ಬಗ್ಗೆ ಇಲ್ಲಸಲ್ಲದ ವರದಿಗಳನ್ನು ಮಾಡುತ್ತಿದ್ದಾರೆ. ಇದರಿಂದ ಸ್ನೇಹಿತರಿಗೆ ಹಾಗೂ ಕುಟುಂಬಕ್ಕೆ ನೋವುಂಟಾಗಿದೆ. ಇಂತಹ ಸುಳ್ಳು ವರದಿಗಳನ್ನು ಮಾಡಬೇಡಿ ಅಂತ ವಿಡಿಯೋ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಸಂಪತ್ ಜಯರಾಂ ಸಾವು ಹೇಗೆ ಸಂಭವಿಸಿತು ಅನ್ನೋದನ್ನೂ ವಿವರಿಸಿದ್ದಾರೆ.
ನಿಜಾಂಶ ತಿಳಿಸೋ ಪ್ರಯತ್ನ ಆಗಲಿ
ಸಂಪತ್ ಜಯರಾಂ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರು. ಗಂಡ ಹೆಂಡತಿ ನಡುವೆ ಸಮಸ್ಯೆಯಿತ್ತು ಅಂತ ಯೂಟ್ಯೂನ್ಗಳಲ್ಲಿ ಆಗಿರೋ ವರದಿ ಬಗ್ಗೆ ಸಂಪತ್ ಗೆಳೆಯ ಹಾಗೂ ನಟ ರಾಜೇಶ್ ಧ್ರುವ ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೇ ಹಿನ್ನೆಲೆ ಗೊತ್ತಿಲ್ಲದೆ ಏನೇನೋ ಹೇಳಬೇಡಿ ಎಂದು ಹೇಳಿದ್ದಾರೆ.
"ಸಂಪತ್ ಸಾವಿನ ಬಗ್ಗೆ ತುಂಬಾ ಊಹಾಪೋಹ ಹರಿದಾಡುತ್ತಿದೆ. ನನ್ನ ಕಣ್ಣಿಗೂ ಒಂದೆರಡು ವಿಡಿಯೋಗಳು ಬಿದ್ದವು. ನಿಮ್ಮ ನಿಮ್ಮ ದೃಷ್ಟಿಕೋನದಲ್ಲಿ ಏನೋ ಅಂದುಕೊಂಡರೆ ಅದು ಸತ್ಯ ಆಗೋದಿಲ್ಲ. ಅವನು ಇಲ್ಲ ಅನ್ನೋ ಲಿಬರ್ಟಿ ತಗೊಂಡು ಮಾತಾಡಬೇಡಿ ಅನ್ನೋದು ನನ್ನ ವಿನಂತಿ. ಅವನದ್ದೇ ಆದ ಒಂದು ಫ್ಯಾಮಿಲಿ ಇದೆ. ಅವನಿಗೆ ನಮ್ಮತರ ತುಂಬಾ ಜನ ಫ್ರೆಂಡ್ಸ್ ಇದ್ದಾರೆ. ನೀವು ನಮ್ಮ ಭಾವನೆಗಳಿಗೆ ನೋವುಂಟು ಮಾಡುತ್ತಿದ್ದೀರಾ. ಅದು ಆಗೋದು ಬೇಡ. ನಿಜಾಂಶ ಏನಿದೆ? ಅದು ನಿಮ್ಮಿಂದ ತಿಳಿಸೋ ಪ್ರಯತ್ನ ಆಗಲಿ." ಎಂದು ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪತ್ನಿ 5 ತಿಂಗಳ ಗರ್ಭಿಣಿ
"ನಿನ್ನೆ ರಾತ್ರಿ 2 ಗಂಟೆಗೆ ರವಿ ಅವರಿಂದ ನನಗೆ ಕರೆ ಬರುತ್ತೆ. ನಾನು ಕೂಡ ನಿದ್ರೆಯಲ್ಲಿದ್ದೆ. ಏನು ಅಂತ ಕೇಳಿದಾಗ, ಸಂಪತ್ಗೆ ಸೀರಿಯಸ್ ಅಂತ ಗೊತ್ತಾಯ್ತು. ಎದ್ದೋ ಬಿದ್ನೋ ಅಂತ ಓಡಿ ಹೋದೆ. ಅಲ್ಲಿ ಹೋಗಿ ನೋಡಿದಾಗ ಆತನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಅದಕ್ಕೆ ಕಾರಣ ಏನು ಅಂತ ತಿಳಿದುಕೊಂಡಾಗ, ಅಲ್ಲಿ ಬಂದಿದ್ದ ಕಾಮನ್ ಉತ್ತರ ಏನಂದರೆ, ಇತ್ತೀಚೆಗೆ ಮದುವೆ ಆಗಿದ್ದ. ಇನ್ನೂ ಒಂದು ವರ್ಷ ಕೂಡ ಆಗಿರಲಿಲ್ಲ. ಅಪ್ಪ ಆಗಿದ್ದ." ಎಂದು ಕಾರಣ ಕೊಡುತ್ತಿದ್ದರು ಎಂದು ರಾಜೇಶ್ ಧ್ರುವ ಹೇಳಿದ್ದಾರೆ.
"ಪತ್ನಿ ಚೈತನ್ಯ 5 ತಿಂಗಳ ಗರ್ಭಿಣಿ. ಇಬ್ಬರೂ ತುಂಬಾನೇ ಇಷ್ಟ ಪಟ್ಟು 11 ಅಥವಾ 12 ವರ್ಷಗಳ ಕಾಲ ಪ್ರೀತಿಸಿ ಮದುವೆ ಆಗಿ, ಅಂತರ ಜಾತೀಯ ವಿವಾಹವಾಗಿದ್ದರೂ ಅದ್ಬುತವಾಗಿ ಜೀವನ ನಡೆಸುತ್ತಿದ್ದರು. ಅವರ ಜೀವನದಲ್ಲಿ ಹುಳುಕು ಇರಲಿಲ್ಲ. ಅವರ ಮದುವೆ ಪ್ರೀ-ವೆಡ್ಡಿಂಗ್ ಶೂಟ್ನ ನಾನೇ, ಇದೇ ಟಿ ಶರ್ಟ್ನಲ್ಲಿ ಮಾಡಿಕೊಟ್ಟಿದ್ದೇನೆ. ಮದುವೆಗೆ ಹೋಗಿದ್ದೀವಿ. ಅವರ ಲವ್ ಸ್ಟೋರಿ ಮುಂಚೆಯಿಂದಾನೂ ಗೊತ್ತು. ಅವನು ಅಷ್ಟೊಂದು ವೀಕ್ ಮೈಂಡೆಡ್ ಹುಡುಗ ಅಲ್ಲವೇ ಅಲ್ಲ. ಆತ್ಮಹತ್ಯೆ ಮಾಡಿಕೊಳ್ಳುವಂತಹ ಕೆಟ್ಟ ಮನಸ್ಥಿತಿಯವನಲ್ಲ. ಯಾಕಂದ್ರೆ, ಅವನೇ ತಿದ್ದಿ ಬುದ್ದಿ ಹೇಳಿದಂತಹ ಒಬ್ಬ ಹುಡುಗ." ಎಂದು ಸಂಪತ್ ಜಯರಾಂ ಫ್ಯಾಮಿಲಿ ಲೈಫ್ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ.
ಸಾಯ್ತಿನಿ ಅಂತ ಹೆದರಿಸೋಕೆ ಹೋಗಿ ಕತ್ತು ಲಾಕ್ ಆಗಿದೆ
"ಕೆಲವು ಯೂಟ್ಯೂನ್ ಚಾನೆಲ್ನಲ್ಲಿ ನೋಡಿದೆ. ಆರ್ಥಿಕ ಸಮಸ್ಯೆ ಇತ್ತು. ಮಾನಸಿಕ ಸ್ಥಿತಿ ಸರಿಯಿರಲಿಲ್ಲ. ಗಂಡ ಹೆಂಡತಿ ಸಂಬಂಧ ಸರಿಯಿರಲಿಲ್ಲ. ಇನ್ನೊಂದೇನೋ ಇತ್ತು. ಮತ್ತೊಂದು ಏನೋ ಇತ್ತು. ಚಾನ್ಸ್ ಸಿಗಲಿಲ್ಲ ಅಂತ ಡಿಪ್ರೆಷನ್ನಲ್ಲಿ ಇದ್ದ. ತುಂಬಾ ತಪ್ಪಾಗಿ ಮಾತಾಡುತ್ತಿದ್ದೀರ. ಹೌದು, ಅವಕಾಶಗಳು ಇರಲಿಲ್ಲ. ಆದರೆ, ನಮ್ಮ ಟೀಮ್ ನಾವೇ ಅವಕಾಶಗಳನ್ನು ಸೃಷ್ಟಿ ಮಾಡಿಕೊಳ್ಳುತ್ತಿದ್ದೆವು. ಶ್ರೀ ಬಾಲಾಜಿ ಸ್ಟುಡಿಯೊ ಅನ್ನೋ ಸಿನಿಮಾ ಅವನಿಗೆ ತುಂಬಾನೇ ಬ್ರೇಕ್ ಕೊಟ್ಟಂತಹ ಸಿನಿಮಾ. ತುಂಬಾ ಜನ ನೋಡಿಲ್ಲ. ಅದು ನಿಮ್ಮ ತಪ್ಪು. ಆದರೆ, ನೋಡಿರೋರಿಗೆ ಅವನ ತಾಕತ್ತು ಗೊತ್ತಿತ್ತು. ಇನ್ನು ಸ್ವಲ್ಪ ದಿನದಲ್ಲಿ ದೊಡ್ಡ ಅಂತ ಅನಿಸಿಕೊಳ್ಳುತ್ತಾನೆ ಅನ್ನೋ ನಂಬಿಕೆ ಎಲ್ಲರಲ್ಲೂ ಇತ್ತು. ಅಗ್ನಿಸಾಕ್ಷಿ ನೋಡಿದವರಿಗೂ ಅವನ ಪರಿಚಯವಿತ್ತು." ಎಂದು ರಾಜೇಶ್ ಧ್ರುವ ಬೇಸರ ವ್ಯಕ್ತಪಡಿಸಿದ್ದಾರೆ.
"ಸಂಸಾರದಲ್ಲಿ ಸಣ್ಣ ಪುಟ್ಟ ಮಾತುಕತೆ ಅಂತ ಬಂದಾಗ, ಹುಡುಗಾಟಿಕೆ ಮಾಡಿಕೊಳ್ಳೋಕೆ ಹೋಗಿ ಈತರ ಪರಿಣಾಮ ಆಗಿದೆ. ಗಂಡ ಹೆಂಡತಿ ಮಧ್ಯೆ ನಡೆದ ಚಿಕ್ಕ ಜಗಳಕ್ಕೆ ಸುಮ್ನೆ ಸತ್ತು ಹೋಗ್ತಿನಿ ಅಂತ ಹೆದರಿಸೋಕೆ ಹೋಗಿದ್ದಾನೆ. ಅದು ಲಾಕ್ ಆಗಿದೆ ಅಷ್ಟೇ. ಇನ್ನೇನೂ ಇಲ್ಲ." ಎಂದು ಸಂಪತ್ ಜಯರಾಂ ಸಾವಿನ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.


Click it and Unblock the Notifications











