ಸಂಚಾರಿ ವಿಜಯ್ ಮೆದುಳು ನಿಷ್ಕ್ರಿಯ, ಅಂಗಾಂಗ ದಾನ ಮಾಡಲು ಕುಟುಂಬ ನಿರ್ಧಾರ
ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ಸಂಚಾರಿ ವಿಜಯ್ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತಿಲ್ಲ ಎಂದು ವೈದ್ಯ ಡಾ ಅರುಣ್ ನಾಯಕ್ ಸೋಮವಾರ ಬೆಳಗ್ಗೆ ಮಾಹಿತಿ ನೀಡಿದ್ದಾರೆ. ಶಸ್ತ್ರ ಚಿಕಿತ್ಸೆ ಬಳಿಕ ಸುಮಾರು 36 ಗಂಟೆಗಳು ಆಗಿವೆ. ಇದುವರೆಗೂ ವಿಜಯ್ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಮೆದುಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಆಘಾತಕಾರಿ ವಿಷಯ ತಿಳಿಸಿದರು.
ವೈದ್ಯರು ಹೇಳಿಕೆ ಪ್ರಕಾರ ನಟ ಸಂಚಾರಿ ವಿಜಯ್ ಬದುಕುಳಿಯುವ ಸಾಧ್ಯತೆ ಬಹಳ ಕಡಿಮೆ ಇದೆ. ಈ ಬಗ್ಗೆ ವಿಜಯ್ ಸಹೋದರ ಸಿದ್ದೇಶ್ ಸಹ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, 'ವಿಜಯ್ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದೇವೆ'' ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
'ವೈದ್ಯರ ಹೇಳಿಕೆ ಪ್ರಕಾರ ವಿಜಯ್ ಬದುಕಿ ಬರುವ ಸಾಧ್ಯತೆ ಬಹಳ ಕಡಿಮೆ. ಒಂದು ವೇಳೆ ಏನಾದರು ಅನಾಹುತ ಆದರೆ ಸಹೋದರನ ಅಂಗಾಂಗಗಳನ್ನು ದಾನ ಮಾಡುತ್ತೇವೆ. ರಾಷ್ಟ್ರ ಪ್ರಶಸ್ತಿ, ರಾಜ್ಯಪ್ರಶಸ್ತಿ ಎಂಬ ಅಹಂ ಇಲ್ಲದೇ ಜನರ ಜೊತೆ ಇದ್ದ. ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದ. ಕೋವಿಡ್ ಸಂದರ್ಭದಲ್ಲಿ 24 ಗಂಟೆಗೂ ಕೆಲಸ ಮಾಡಿದ್ದ. ಹಾಗಾಗಿ, ಅವನ ದೇಹದ ಅಂಗಾಂಗಗಳು ಸಮಾಜಕ್ಕೆ ಬಳಕೆಯಾಗಲಿ'' ಎಂದು ಗದ್ಗದಿತರಾದರು.

'ವಿಜಯ್ ಬರ್ತಾರೆ ಎಂಬ ಭರವಸೆ ಬಹಳ ಕುಗ್ಗಿದೆ. ಇನ್ನು ತಡವಾದರೆ ಅಂಗಾಂಗಗಳು ದಾನ ಮಾಡಲು ಆಗಲ್ಲ. ವೈದ್ಯಕೀಯ ಕಾರಣಕ್ಕಾಗಿ ಅಂಗಾಂಗಳನ್ನು ದಾನ ಮಾಡುವ ಬಗ್ಗೆ ಬೇಗ ನಿರ್ಣಯ ಮಾಡಲಾಗಿದೆ' ಎಂದು ಸಹೋದರ ಕಣ್ಣೀರಿಟ್ಟಿದ್ದಾರೆ.
ಶನಿವಾರ ರಾತ್ರಿ ಬೈಕ್ನಲ್ಲಿ ತೆರಳುತ್ತಿದ್ದ ಸಮಯದಲ್ಲಿ ಅಪಘಾತವಾಗಿದೆ. ಚಾಲಕ ನವೀನ್ ಪ್ರಾಣಾಪಾಯದಿಂದ ಪಾರಾಗಿದ್ದು, ವಿಜಯ್ಗೆ ಮೆದುಳಿನ ಬಲ ಭಾಗದಲ್ಲಿ ಗಂಭೀರವಾಗಿ ಪೆಟ್ಟಾಗಿದೆ. ತಲೆಗೆ ಹೆಚ್ಚು ಗಾಯವಾದ ಪರಿಣಾಮ ಕೋಮಾ ತಲುಪಿದ್ದಾರೆ.


Click it and Unblock the Notifications











