ಅಲ್ಲು ಅರ್ಜುನ್ 'ಪುಷ್ಪ'ಗಿಂತಲೂ ಮೇಲು ಸಂಚಾರಿ ವಿಜಯ್ ಸಿನಿಮಾ 'ಮೇಲೊಬ್ಬ ಮಾಯಾವಿ': ಸಿನಿಮಾ ಗುಟ್ಟೇನು?
ಸಂಚಾರಿ ವಿಜಯ್ ಅಭಿನಯದ ಸಿನಿಮಾ 'ಮೇಲೊಬ್ಬ ಮಾಯಾವಿ' ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' ಸಿನಿಮಾವನ್ನೂ ಮೀರಿಸಲಿದೆ ಎಂದು ಚಿತ್ರತಂಡದ ಅಭಿಪ್ರಾಯ ಪಟ್ಟಿದೆ. ತೆಲುಗು ನಟ ಅಲ್ಲು ಅರ್ಜುನ್ ನಟನೆಯ ಸಿನಿಮಾ 'ಪುಷ್ಪ' ದೇಶಾದ್ಯಂತ ಸದ್ದು ಮಾಡಿತ್ತು. ರಕ್ತಚಂದನ ಕಳ್ಳಸಾಗಣೆಯನ್ನೇ ಕೇಂದ್ರ ವಿಷಯವನ್ನಾಗಿಟ್ಟುಕೊಂಡು ಕಥೆ ಹೆಣೆದಿದ್ದರು ನಿರ್ದೇಶಕ ಸುಕುಮಾರ್. ಈ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿ ಆಯಿತು. ಈ ಸಿನಿಮಾಗಿಂತಲೂ ಅದ್ಭುತವಾದ ಕಥೆಯನ್ನು ಹೊತ್ತು ಬರುತ್ತಿದೆಯಂತೆ 'ಮೇಲೊಬ್ಬ ಮಾಯಾವಿ'.
ಅಲ್ಲು ಅರ್ಜುನ್ ಸಿನಿಮಾ 'ಪುಷ್ಪ' ಎಲ್ಲಿ? ಸಂಚಾರಿ ವಿಜಯ್ ಅಭಿನಯದ 'ಮೇಲೊಬ್ಬ ಮಾಯಾವಿ' ಎಲ್ಲಿ? ಈ ಎರಡೂ ಸಿನಿಮಾಗಳಿಗೂ ಹೋಲಿಕೆ ಮಾಡಲು ಹೇಗೆ ಸಾಧ್ಯ? ಬ್ಲಾಕ್ ಬಸ್ಟರ್ ಸಿನಿಮಾ 'ಪುಷ್ಪ' ವನ್ನೇ ಮೀರಿಸುವ ಕಥೆ ಇದೆಯಾ? ಏನೀ ಗೊಂದಲ? ಅಸಲಿಗೆ 'ಮೇಲೊಬ್ಬ ಮಾಯಾವಿ' ಕತೆಯೇನು? ಅಂತ ತಿಳಿಯಲು ಮುಂದೆ ಓದಿ.

'ಮೇಲೊಬ್ಬ ಮಾಯಾವಿ' ಕಥೆಯೇನು?
ಸಂಚಾರಿ ವಿಜಯ್ ಅಭಿನಯದ 'ಮೇಲೊಬ್ಬ ಮಾಯಾವಿ' ಅಲ್ಲು ಅರ್ಜುನ್ ನಟಿಸಿದ 'ಪುಷ್ಪ' ಮಾದರಿಯ ಸಿನಿಮಾ. ರಾಜ್ಯದ ಪಶ್ಚಿಮ ಘಟ್ಟದಲ್ಲಿ ನಡೆಯುವ ಬಹುದೊಡ್ಡ ದಂಧೆಯನ್ನು ತೆರೆಮೇಲೆ ತರುತ್ತಿದೆ ಚಿತ್ರತಂಡ. ಈ ಮಾಫಿಯಾದ ಬ್ಯಾಕ್ಡ್ರಾಪ್ನಲ್ಲೇ ಸಂಚಾರಿ ವಿಜಯ್ ಅಭಿನಯದ ಮೇಲೊಬ್ಬ ಮಾಯಾವಿ'ಚಿತ್ರ ನಿರ್ಮಾಣ ಆಗಿದೆ. ಈ ಮಾಫಿಯಾವನ್ನೇ ಆಧಾರವಾಗಿಟ್ಟುಕೊಂಡ ಸಿನಿಮಾ 'ಪುಷ್ಪ' ಸಿನಿಮಾವನ್ನು ನಾಚಿಸುವಂತೆ ಮಾಡುತ್ತೆ ಎನ್ನಲಾಗಿದೆ.

ಪಶ್ಚಿಮ ಘಟ್ಟದಲ್ಲಿ ಏನು ನಡೆಯುತ್ತೆ?
ದಕ್ಷಿಣ ಕನ್ನಡ ಹಾಗೂ ಕೊಡಗು ಗಡಿಭಾಗಗಳಲ್ಲಿ ಪುಷ್ಪಗಿರಿ ಅಭಯಾರಣ್ಯವಿದೆ. ಈ ಭಾಗದಲ್ಲಿ ಹರಳು ಕಲ್ಲು ದಂಧೆ ನಡೆಯುತ್ತಿದೆ. ಕೊಡಗು-ದಕ್ಷಿಣ ಕನ್ನಡ ಜಿಲ್ಲೆಗೆ ಅಂಟಿಕೊಂಡಿರುವ ಪುಷ್ಪಗಿರಿ ಅರಣ್ಯದಲ್ಲಿ ಹರಳು ಕಲ್ಲಿನ ಗಣಿಗಾರಿಕೆ ನಡೆಯುತ್ತಿದ್ದು, ಆಭರಣಗಳಿಗೆ ಈ ಹರಳುಗಳನ್ನು ಬಳಸಲಾಗುತ್ತೆ. ಈ ಹರಳಿಗಾಗಿ ದಂಧೆಕೋರರು ಅಕ್ರಮವಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ನೈಜ ಸನ್ನಿವೇಶಗಳನ್ನು ಇಟ್ಟುಕೊಂಡೇ ಸಿನಿಮಾ ಮಾಡಿದ್ದಾಗಿ ಚಿತ್ರತಂಡ ಹೇಳಿಕೊಂಡಿದೆ.

ದಂಧೆ ನಡೆಯುವ ಸ್ಥಳದಲ್ಲೇ ಚಿತ್ರೀಕರಣ
ಸಂಚಾರಿ ವಿಜಯ್ ಅಭಿನಯದ ಸಿನಿಮಾ 'ಮೇಲೊಬ್ಬ ಮಾಯಾವಿ' ಇಂತಹ ಅಕ್ರಮ ದಂಧೆ ನಡೆಯುವ ಸ್ಥಳದಲ್ಲಿಯೇ ಚಿತ್ರೀಕರಣ ಮಾಡಿದೆಯಂತೆ. ಕೂಜಿಮಲೆ, ಸುಟ್ಟತ್ ಮಲೆ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣ ನಡೆದಿದೆ. ಅಂದಹಾಗೆ 1 ಕೆಜಿ ಹರಳಿಗೆ 30 ರಿಂದ 40 ಸಾವಿರ ರೂಪಾಯಿ ಬೆಲೆ ಇದೆಯಂತೆ. ಈ ಎಲ್ಲಾ ಅಂಶಗಳನ್ನು 'ಮೇಲೊಬ್ಬ ಮಾಯಾವಿ' ತಂಡ ಪ್ರೇಕ್ಷಕರ ಮುಂದಿಡಲು ನಿರ್ಧರಿಸಿದೆ.

ಈ ಚಿತ್ರದ ಸಂಚಾರಿ ವಿಜಯ್ 'ಇರುವೆ' ಪಾತ್ರ
'ಮೇಲೊಬ್ಬ ಮಾಯಾವಿ' ಸಿನಿಮಾದಲ್ಲಿ ದಿವಂಗತ ಸಂಚಾರಿ ವಿಜಯ್ ಇರುವೆ ಎನ್ನುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. ವಿಶಿಷ್ಟ ಮ್ಯಾನರಿಸಂ ಮೂಲಕ ಪ್ರೇಕ್ಷಕರನ್ನು ರಂಜಿಸಿದ ಸಂಚಾರಿ ವಿಜಯ್ ಪಾತ್ರದ ಝಲಕ್ ಈಗಾಗಲೇ ಪ್ರೇಕ್ಷಕರ ಮನಗೆದ್ದಿದೆ. ನಿರ್ದೇಶಕ ಬಿ.ನವೀನ್ಕೃಷ್ಣ, ಸಂಚಾರಿ ವಿಜಯ್ ನಟಿಸಿದ 'ಇರುವೆ' ಪಾತ್ರದ ಮೂಲಕ ಅಕ್ರಮ ದಂಧೆಯ ಅನಾವರಣ ಮಾಡಿದ್ದಾರೆ. ರಂಗಭೂಮಿ ಕಲಾವಿದೆ ಅನನ್ಯ ಶೆಟ್ಟಿ ನಾಯಕಿಯಾಗಿದ್ದು, ಚಕ್ರವರ್ತಿ ಚಂದ್ರಚೂಡ್ ಮೊಟ್ಟ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಖಳನಟನಾಗಿದ್ದಾರೆ. ಈ ಕಾರಣಕ್ಕೆ ಈ ಸಿನಿಮಾ ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾವನ್ನೇ ನಾಚಿಸುವಂತಿದೆ ಎಂದು ಹೇಳಿಕೊಂಡಿದೆ.


Click it and Unblock the Notifications











