ಹುಲಿಯಾ, ಯುದ್ಧಕಾಂಡ ಸಿನಿಮಾದ ರೆಬಲ್ ನಿರ್ದೇಶಕ ಕೆವಿ ರಾಜು
ಸ್ಯಾಂಡಲ್ವುಡ್ನ ಹಿರಿಯ ನಿರ್ದೇಶಕ ಕೆವಿ ರಾಜು ಇಂದು ( ಡಿಸೆಂಬರ್ 24) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗದ ರೆಬೆಲ್ ನಿರ್ದೇಶಕ ಎಂದೇ ಕರೆಸಿಕೊಳ್ಳುತ್ತಿದ್ದ ಕೆ ವಿ ರಾಜು ತನ್ನ ನೇರ ನುಡಿಗಳಿಂದಲೇ ಹೆಸರು ವಾಸಿಯಾಗಿದ್ದರು. ಕನ್ನಡ ಚಿತ್ರರಂಗದಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಕೆ ವಿ ರಾಜು ರಾಜಾಜಿನಗರದ ನಿವಾಸದಲ್ಲಿ ಬೆಳಗ್ಗೆ 8 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಹಿರಿಯ ನಿರ್ದೇಶಕ ಕೆ ವಿ ರಾಜು ಸಿನಿ ಪಯಣದ ಮೆಲುಕು ಇಲ್ಲಿದೆ..
ನಿರ್ದೇಶಕ ಕೆ.ವಿ.ರಾಜು. ಹುಲಿಯಾ, ನವಭಾರತ, ಸಂಗ್ರಾಮ, ಇಂದ್ರಜಿತ್, ಕದನ, ಯುದ್ಧಕಾಂಡ, ಓ ಗಂಡಸರೇ ನೀವೆಷ್ಟು ಒಳ್ಳೆಯವರು, ರಾಷ್ಟ್ರಗೀತೆ ಹಲವು ರೆಬೆಲ್ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಕೆವಿ ರಾಜು ನಿರ್ದೇಶಿಸಿದ ಬಹುತೇಕ ಸಿನಿಮಾಗಳನ್ನು ಯುವಕರು ಇಷ್ಟಪಟ್ಟು ನೋಡುತ್ತಿದ್ದರು. ಕ್ರಾಂತಿಕಾರಿ ಕತೆಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದ ಕೆ ವಿ ರಾಜು ಕನ್ನಡ ಚಿತ್ರರಂಗದ ಅಪ್ರತಿಮ ನಿರ್ದೇಶಕರಲ್ಲಿ ಒಬ್ಬರು. ಈಗ ಕನ್ನಡ ಚಿತ್ರರಂಗ ಹಿರಿಯ ನಿರ್ದೇಶಕನನ್ನು ಕಳೆದುಕೊಂಡಿದೆ.

ಕನ್ನಡ ಚಿತ್ರರಂಗದ ಮೈಲಿಗಲ್ಲು ಸಿನಿಮಾಗಳನ್ನು ನೀಡಿದವರು
ಕನ್ನಡ ಚಿತ್ರರಂಗದ ಮೈಲಿಗಲ್ಲು ಎನ್ನುವಂತಹ ಸಿನಿಮಾವನ್ನು ಕೆ ವಿ ರಾಜು ನಿರ್ದೇಶಿಸಿದ್ದಾರೆ. ದೇವರಾಜ್, ಅರ್ಚನಾ, ಅವಿನಾಶ್ 'ಹುಲಿಯಾ' ಸಿನಿಮಾದಲ್ಲಿ ನಟಿಸಿದ್ದರು. ಆದರೆ, ಕೆವಿ ರಾಜು ಇಷ್ಟ ಪಟ್ಟು ನಿರ್ದೇಶಿಸಿದ್ದ 'ಹುಲಿಯಾ' ಸಿನಿಮಾ ಬಾಕ್ಸಾಫೀಸ್ನಲ್ಲಿ ಸೋತು ನಿರಾಶೆ ಮೂಡಿಸಿತ್ತು. ಆದರೆ, ಬಿಡುಗಡೆ ಬಿಳಿಕ ಕೆ ವಿ ರಾಜು ನಿರ್ದೇಶಿಸಿದ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಕೆ ವಿ ರಾಜು ಒಬ್ಬ ಅದ್ಭುತ ತಂತ್ರಜ್ಞರಾಗಿದ್ದರು. ಸಿನಿಮಾದ ಭಾಷೆಗಳನ್ನು ಚೆನ್ನಾಗಿಯೇ ಅರಿತಿದ್ದರು.

ತಮ್ಮ ಶೈಲಿಗೆ ವಿರುದ್ಧವಾದ ಕೆಲವು ಚಿತ್ರಗಳನ್ನು ನಿರ್ದೇಶಿಸಿದ್ದರು
ರೆಬೆಲ್ ಸಿನಿಮಾಗಳ ಜೊತೆ ಬೆಳ್ಳಿ ಮೋಡಗಳು, ಬೆಳ್ಳಿಕಾಲುಂಗುರ, ಬೊಂಬಾಟ್ ಹುಡ್ಗದಂಥ ಸಿನಿಮಾಗಳನ್ನೂ ನಿರ್ದೇಶನ ಮಾಡಿದ್ದಾರೆ. ಕ್ರಾಂತಿಕಾರಿ ಸಿನಿಮಾಗಳನ್ನೇ ಹೆಚ್ಚಾಗಿ ನಿರ್ದೇಶಿಸುತ್ತಿದ್ದ ಕೆವಿ ರಾಜು ಅವರು ತಮ್ಮ ಶೈಲಿಗೆ ವಿರುದ್ಧವಾದ ಕೆಲವು ಚಿತ್ರಗಳನ್ನು ನಿರ್ದೇಶಿಸಿದ್ದರು. ಆದರೂ, ಕೆ ವಿ ರಾಜು ಅವರು ತಮ್ಮ ತನವನ್ನು ಬಿಟ್ಟುಕೊಟ್ಟಿರಲಿಲ್ಲ. ನೇರ ನುಡಿಗಳಿಂದಲೇ ಜನಪ್ರಿಯರಾಗಿದ್ದ ನಿರ್ದೇಶನ ನಂತರದ ದಿನಗಳಲ್ಲಿ ಕೇವಲ ಸಂಭಾಷಣೆ ಮಾತ್ರ ಬರೆಯುತ್ತಿದ್ದರು.

ರಾಕಿಂಗ್ ಸ್ಟಾರ್ ಯಶ್ ನಟನೆಯ ರಾಜಧಾನಿ
ರಾಕಿಂಗ್ ಸ್ಟಾರ್ ಯಶ್ ನಟನೆಯ ರಾಜಧಾನಿ ಸಿನಿಮಾದ ನಿರ್ದೇಶಕರು ಅರ್ಧಕ್ಕೆ ಸಿನಿಮಾದಿಂದ ಹೊರ ನಡೆದಿದ್ದರು. ಈ ವೇಳೆ ಆ ಸಿನಿಮಾವನ್ನು ಕೆವಿ ರಾಜು ಅವರು ಮುಗಿಸಿಕೊಟ್ಟಿದ್ದರು. ಈ ವೇಳೆ ಆ ಸಿನಿಮಾದ ನಿರ್ದೇಶಕನ ಕ್ರೆಡಿಟ್ ಅನ್ನೂ ಕೆ ವಿ ರಾಜು ತೆಗೆದುಕೊಳ್ಳಲಿಲ್ಲ. ಇತ್ತೀಚೆಗಿನ ದಿನಗಳಲ್ಲಿ ಕೆ ವಿ ರಾಜು ಸಿನಿಮಾರಂಗದಿಂದ ದೂರ ಉಳಿದಿದ್ದರು. ಚಿತ್ರರಂಗದಲ್ಲಿ ಹೆಚ್ಚಾಗಿ ಸಕ್ರಿಯರಾಗಿರಲಿಲ್ಲ. ಇಂದು( ಡಿಸೆಂಬರ್ 24) ಬೆಳಗ್ಗೆ ಕೆ ವಿ ರಾಜು ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಸುಗುಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಚಿತ್ರರಂಗದ ಮೂಲಗಳು ತಿಳಿಸಿವೆ.


Click it and Unblock the Notifications











