"ಮನೆಯಲ್ಲಿ ಪೂಜೆ ಮಾಡ್ಕೊಂಡು, ಶೂಟಿಂಗ್ ಇದ್ದಾಗ ವ್ಯಾಯಾಮ ಮಾಡ್ಕೊಂಡು ಇದ್ಬಿಡಿ"
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಸಂಕಷ್ಟದಲ್ಲಿ ಸಿಕ್ಕಿಕೊಂಡಿದ್ದಾರೆ. ಆರೋಪ ಸಾಬೀತಾದರೆ , ಅವರನ್ನೇ ನಂಬಿರುವ ನಿರ್ಮಾಪಕರ ಗತಿಯೇನು? ಅನ್ನೋ ಪ್ರಶ್ನೆ ಕಾಡುತ್ತಿರುವುದಂತೂ ಸತ್ಯ. ಇಂತಹದ್ದೊಂದು ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕು ಅನ್ನೋದು ಗೊತ್ತಾಗದೇ ಕನ್ನಡ ಚಿತ್ರರಂಗ ಕಂಗಾಲಾಗಿದೆ. ಈಗಾಗಲೇ ಹಲವು ಮಂದಿ ದರ್ಶನ್ ನಂಬಿಕೊಂಡು ನೂರಾರು ಕೋಟಿ ಹೂಡಿಕೆ ಮಾಡಿದ್ದಾರೆ.
ಇನ್ನು ಕೆಲವು ನಿರ್ಮಾಪಕರು ದರ್ಶನ್ ಸಿನಿಮಾ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು. ಈಗ ಅವರಿಗೆಲ್ಲ ಸಿನಿಮಾ ಮಾಡಬೇಕೋ ಬೇಡವೋ ಅನ್ನೋ ಅನ್ನೋ ಗೊಂದಲ. ಈ ಮಧ್ಯೆ ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಆರ್ ಎಸ್ ಗೌಡರು ದರ್ಶನ್ ಬಂಧನದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ ಡೇಟ್ಸ್ ಇಟ್ಟುಕೊಂಡಿರುವ ನಿರ್ಮಾಪಕರಲ್ಲಿ ಆರ್ ಎಸ್ ಗೌಡರು ಕೂಡ ಒಬ್ಬರು.

ದರ್ಶನ್ ಬಂಧನ ಬಗ್ಗೆ ನಿರ್ಮಾಪಕ ಆರ್ ಎಸ್ ಗೌಡರು ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ದರ್ಶನ್ ಮೇಲೆ ಚಿತ್ರರಂಗದ ನಿರ್ಮಾಪಕರು ₹150 ಕೋಟಿ ಹೂಡಿಕೆ ಮಾಡಿದ್ದಾರೆ. ಅವರನ್ನು ಹೇಗಾದರೂ ಮಾಡಿ ಕರೆದುಕೊಂಡು ಬರುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಅಲ್ಲದೆ ದರ್ಶನ್ಗೆ ಈ ಸ್ಥಿತಿ ಬರುವುದಕ್ಕೆ ಅವರ ಜೊತೆಗಿದ್ದವ ಸಹವಾಸ ದೋಷವೇ ಕಾರಣ ಎಂದು ಹೇಳಿದ್ದಾರೆ.
ಸಹವಾಸ ಮಾಡಿ ಕೆಟ್ಟ ಸನ್ಯಾಸಿ
"ನಾನು 20 ವರ್ಷದಿಂದ ಜರ್ನಿ ಮಾಡುತ್ತಿದ್ದೇನೆ. ತುಂಬಾನೇ ಒಳ್ಳೆಯ ವ್ಯಕ್ತಿ. ಸನ್ಯಾಸಿ ಸಹವಾಸ ಬಿಟ್ಟು ಕೆಟ್ಟ ಅಂತಾರೆ ನಮ್ಮ ಹಳ್ಳಿಯೊಳಗೆ. ಅವರ ಸುತ್ತಲೂ ಇದ್ದಾರಲ್ಲ, ಅವರಿಂದ ದರ್ಶನ್ ಕೆಟ್ಟಿದ್ದಾರೆ ಅಷ್ಟೇ. 20 ವರ್ಷದಿಂದ ನಾನು ಜೊತೆಯಲ್ಲಿ ಇದ್ದೀನಿ. ಅವರ ಬಗ್ಗೆ ತಿಳಿದುಕೊಂಡಿದ್ದೇನೆ. ಜೊತೆಗಾರರಿಂದ ಏನೋ ಆಗಿದೆ, ಮೋಸ ನಡೆದಿದೆ ಅಂತ ನನಗೆ ಅನಿಸುತ್ತಿದೆ." ಎಂದು ನಿರ್ಮಾಪಕ ಆರ್ ಎಸ್ ಗೌಡ ಹೇಳಿದ್ದಾರೆ.

"90 ದಿನ ಆದ್ಮೇಲೆ ದರ್ಶನ್ ಬರುತ್ತಾರೆ"
"90 ದಿನ ಆದ್ಮೇಲೆ ದರ್ಶನ್ ಬರುತ್ತಾರೆ. ಶೂಟಿಂಗ್ಗೆ ಹೋಗುತ್ತಾರೆ. ಅದನ್ನು ನೀವೆಲ್ಲ ನೋಡುತ್ತೀರಾ. ನೀವೆಲ್ಲ ಸಂದರ್ಶನ ಮಾಡುತ್ತೀರ. ನಾವೆಲ್ಲ ಸಿನಿಮಾವನ್ನು ಮಾಡುತ್ತೇವೆ. ದರ್ಶನ್ ಸಿನಿಮಾಗೆ ನನ್ನ ಬಳಿ ಡೇಟ್ ಇದೆ. ನಾನು ದರ್ಶನ್ ಅವರ ಸಿನಿಮಾವನ್ನು ಮಾಡುತ್ತಿದ್ದೇನೆ. ದರ್ಶನ್ ಅವರನ್ನು ಎತ್ತಬೇಕು ಅನ್ನೋದೇ ಆಸೆ. ಬೀಳಿಸಬೇಕು ಅನ್ನೋ ಆಸೆನೇ ಇಲ್ಲ. ಅವರನ್ನು ಕರೆದುಕೊಂಡು ಬರುತ್ತೇವೆ. ಏನೋ ಮಾಡುತ್ತೇವೆ. ಕಾನೂನು ಇದೆ." ಎಂದು ನಿರ್ಮಾಪಕ ಆರ್ ಎಸ್ ಗೌಡ ಹೇಳಿದ್ದಾರೆ.
₹150 ಕೋಟಿ ಹೂಡಿಕೆ ಮಾಡಿದ್ದಾರೆ
"ನಮ್ಮ ನಿರ್ಮಾಪಕರು ಸುಮಾರು 150 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಅವರಿಗೆಲ್ಲ ಅನ್ಯಾಯ ಆಗಬಾರದು. ದರ್ಶನ್ ಅವರಿಗೆ ಒಂದು ಕಿವಿಮಾತು ಹೇಳಬೇಕು ಅಂದರೆ, ನಿಮ್ಮ ಸಹವಾಸವನ್ನೆಲ್ಲ ಬಿಟ್ಬಿಟ್ಟು. ಮನೆಯೊಳಗೆ ಆರಾಮಾಗಿ ಕೂತ್ಕೊಂಡು ದೇವರ ಪೂಜೆ ಮಾಡಿಕೊಂಡು, ವ್ಯಾಯಾಮ ಮಾಡಿಕೊಂಡು ಶೂಟಿಂಗ್ಗೆ ನಿಂತುಕೊಳ್ಳಿ ಸಾರ್ ಅಂತ ಹೇಳುತ್ತೇನೆ." ಎಂದು ಆರ್ ಎಸ್ ಗೌಡ ಹೇಳಿದ್ದಾರೆ.
ದರ್ಶನ್ ಸದ್ಯ ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ. ದರ್ಶನ್ ಸಾಲ ಪಡೆದಿದ್ದ ಹಣದ ಬಗ್ಗೆ ಹಾಗೂ ರೇಣುಕಾಸ್ವಾಮಿ ಫೋನ್ ವಿಚಾರವಾಗಿ ಪೊಲೀಸರು ಕಸ್ಟಡಿಗೆ ಪಡೆದಿದ್ದರು. ಹೀಗಾಗಿ ಇಂದು (ಜೂನ್ 22) ಮತ್ತೆ ಅವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸುತ್ತಾರೆ. ಬಳಿಕ ದರ್ಶನ್ ಮುಂದಿನ ಭವಿಷ್ಯ ಏನಾಗುತ್ತೆ ಅನ್ನೋ ಕುತೂಹಲವಿದೆ.


Click it and Unblock the Notifications











