"ಸ್ಯಾಂಡಲ್ವುಡ್ ಡ್ರಗ್ ಕೇಸ್ ಅಂದ್ರೆ ಇಬ್ಬರೆ ಇರೋದಾ? ಗಂಡಸರು ಯಾರೂ ಇಲ್ವಾ?"; ಸಂಜನಾ ಗಲ್ರಾನಿ
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ದರ್ಶನ್ ಜೈಲು ಸೇರುತ್ತಿದ್ದಂತೆ ಮೊದಲ ಧ್ವನಿ ಎತ್ತಿದವರು ಸಂಜನಾ ಗಲ್ರಾನಿ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಪರ ನಿಂತಿದ್ದರು. ಅಲ್ಲಿಂದ ಇಲ್ಲಿವರೆಗೂ ದರ್ಶನ್ ಅವರನ್ನು ಬೆಂಬಲಿಸುತ್ತಲೇ ಬಂದಿದ್ದಾರೆ. ಇದರೊಂದಿಗೆ ತಮಗೂ ಹೀಗೆ ಅನ್ಯಾಯ ಆಗಿದೆ ಎಂದು ಅಳಲನ್ನು ತೋಡಿಕೊಂಡಿದ್ದಾರೆ.
ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾನಿ ಡ್ರಗ್ ಕೇಸ್ನಲ್ಲಿ ಜೈಲಿಗೆ ಹೋಗಿದ್ದರು. ಈ ಸುದ್ದಿ ಆ ವೇಳೆ ದೇಶಾದ್ಯಂತ ಸಿಕ್ಕಾಪಟ್ಟೆ ಸಂಚಲನವನ್ನೂ ಸೃಷ್ಟಿಸಿತ್ತು. ಸಂಜನಾ ಹಾಗೂ ರಾಗಿಣಿ ಇಬ್ಬರ ಹೆಸರು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈಗ ಅವರಿಗೆ ಡ್ರಗ್ಸ್ ಕೇಸ್ನಲ್ಲಿ ಕ್ಲೀನ್ ಚಿಟ್ ಸಿಕ್ಕಿದೆ. ಈ ವೇಳೆ ಆ ದಿನದ ಕಹಿ ಘಟನೆಯನ್ನು ಫಿಲ್ಮಿಬೀಟ್ ಜೊತೆ ನೆನಪಿಸಿಕೊಂಡಿದ್ದಾರೆ.

ಸಂಜನಾ ಗಲ್ರಾನಿಯವರನ್ನು ಅರೆಸ್ಟ್ ಮಾಡಿದಾಗ ಎಲ್ಲರೂ ತಮ್ಮನ್ನು ತಪ್ಪಾಗಿಯೇ ನೋಡುತ್ತಿದ್ದರು ಎಂದು ಅಳಲನ್ನು ತೋಡಿಕೊಂಡಿದ್ದಾರೆ. "ಒಂದ್ಕಡೆ ಅಳಬೇಕಾ? ಇನ್ನೊಂದು ಕಡೆ ನಗಬೇಕಾ? ಭಗವಂತ ನನ್ನ ಜೊತೆನೇ ಯಾಕೆ ಹೀಗೆ ಮಾಡುತ್ತಿದ್ದಾನೆ ಅಂತ ಅನಿಸಿತ್ತು. ಮೂರು ನಾಲ್ಕು ತಿಂಗಳು ಬರೀ ಸ್ಯಾಂಡಲ್ವುಡ್ ಡ್ರಗ್ ಕೇಸ್ ಪರದಾಡುತ್ತಿತ್ತು. ಎಲ್ಲೇ ಹೋದರೂ ಜನರು ತಪ್ಪು ಕಣ್ಣುಗಳಿಂದಲೇ ನೋಡುತ್ತಿದ್ದರು. ಇವರ ಮೇಲೆ ಕೇಸ್ ಇದೆ. ಇವರು ಅಪರಾಧಿ ಅಂತ ನೋಡುತ್ತಿದ್ದರು. ನಮ್ಮ ಭಾರತದಲ್ಲಿ ಇವರು ಜೈಲಿಗೆ ಹೋಗಿ ಬಂದರೆ, ಇವರು ಅಪರಾಧಿ ಅಂತ ಡಿಕ್ಲೇರ್ ಮಾಡಿಬಿಡುತ್ತಾರೆ. ಆರೋಪಿ ಹಾಗೂ ಅಪರಾಧಿ ಮಧ್ಯೆ ಜನರಿಗೆ ವ್ಯತ್ಯಾಸ ಗೊತ್ತಿಲ್ಲ." ಎಂದು ಸಂಜನಾ ಫಿಲ್ಮಿಬೀಟ್ ಜೊತೆ ಅಳಲು ತೋಡಿಕೊಂಡಿದ್ದಾರೆ.
ಇದೇ ವೇಳೆ ಪೊಲೀಸರು ಯಾವ ಕಾರಣಕ್ಕೆ ನನ್ನನ್ನು ಅರೆಸ್ಟ್ ಮಾಡಿದ್ದರೋ ಗೊತ್ತಿಲ್ಲ. ಹೆಚ್ಚು ಕಡಿಮೆ ಎರಡು ದಶಕಗಳಿಂದ ಚಿತ್ರರಂಗದಲ್ಲಿ ಇದ್ದೇನೆ. ಇಂತಹ ಯಾವುದೇ ತಪ್ಪನ್ನೂ ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ. "ನನ್ನ ಕೈಯಲ್ಲಿ ಒಂದು ಬಿಯರ್ ಬಾಟಲ್ ಆದರೂ ನೋಡಿದ್ದೀರಾ? ಒಂದು ಸಿಗರೇಟ್ ನೋಡಿದ್ದೀರಾ? ಯಾವ ಡ್ರಗ್ ನೋಡಿದ್ದೀರಾ? 2006ರಿಂದ ಮೀಡಿಯಾ ರಂಗದಲ್ಲಿ ಇದ್ದೀನಿ. ನನ್ನ ಬಗ್ಗೆ ಏನಾದರೂ ಕೆಟ್ಟದನ್ನು ನೋಡಿದ್ದೀರಾ? ಅಂತ ಕೇಳುವುದಕ್ಕೆ ಇಷ್ಟ ಪಡುತ್ತೇನೆ." ಎಂದು ನಟಿ ಸಂಜನಾ ಗಲ್ರಾನಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಇದೇ ಸಂದರ್ಶನದಲ್ಲಿ ಪೊಲೀಸರು ಮನೆಗೆ ಬಂದು ತಪಾಸಣೆ ಮಾಡಿದ್ದರು. ಕಬೋರ್ಡ್, ಸೋಫಾಗಳನ್ನು ಹರಿದು ಹಾಕಿದ್ದರು. ಆ ಮಟ್ಟಿಗೆ ಹುಡುಕಿದ್ದಾರೆ. ಒಂದು ಬಿಯರ್ ಬಾಟಲ್, ಸಿಗರೇಟ್ ಕೂಡ ಸಿಕ್ಕಿಲ್ಲ. ತನ್ನ ಐಫೋನ್ನ ಕ್ಲೌಡ್ ಮೂಲಕ 10 ವರ್ಷದ ಡಾಟಾವನ್ನು ತೆಗೆದಿದ್ದಾರೆ. ಹೀಗೆ 10 ವರ್ಷದ ಪ್ರತಿ ರೆಕಾರ್ಡ್ ಅನ್ನೂ ಇವರು ತೆಗೆದರೂ ಏನೂ ಸಿಗಲಿಲ್ಲ ಎಂದು ನಟಿ ಸಂಜನಾ ಗಲ್ರಾನಿ ಹೇಳಿಕೊಂಡಿದ್ದಾರೆ.
ಹಾಗೇ, "ಕರೆದುಕೊಂಡು ಹೋದ ದಿನದಿಂದ ನನಗೆ ಯಾಕೆ ಅರೆಸ್ಟ್ ಮಾಡಿದ್ದೀರಾ? ಅಂತ ಪೊಲೀಸ್ ಕಸ್ಟಡಿಯಲ್ಲಿರುವ 10 ದಿನವೂ ಕೇಳಿದ್ದೇನೆ. ಹೆಂಗಮ್ಮ ಮನೆಗೆ ಹೋಗುವುದಕ್ಕೆ ಬಿಡೋದು. ಆಚೆ ನೋಡಿದ್ದೀಯಾ ಪರಿಸ್ಥಿತಿ ಹೇಗಿದೆ ಅಂತ ಹೇಳಿಕೊಂಡು ನಗಾಡುತ್ತಿದ್ದರು. ಇಷ್ಟೆಲ್ಲ ನೋವು ಆಗಿದೆಯಲ್ಲ ಇದಕ್ಕೆಲ್ಲ ಯಾರು ಹೊಣೆ? ನಡೆದ ಮೂರು ತಿಂಗಳೂ ಮೀಡಿಯಾದಲ್ಲಿ ಸಂಜನಾ, ರಾಗಿಣಿ ಹೆಸರೇ ಓಡಾಡುತ್ತಿತ್ತು" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಶನದಲ್ಲಿ ಪೊಲೀಸರು ಕಸ್ಟಡಿಯಲ್ಲಿ ಇರಿಸಿದ್ದಾಗ ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂತ ಅನಿಸಿತ್ತು ಎಂದು ಸಂಜನಾ ಹೇಳಿಕೊಂಡಿದ್ದಾರೆ. "ಆ ರಾತ್ರಿ ನನಗೆ ಏನು ಅನಿಸಿತ್ತು ಅಂದ್ರೆ, ಭಗವಂತ ನನಗ್ಯಾಕೆ ಜೀವಂತವಾಗಿ ಇಟ್ಟಿದ್ದೀಯ. ನಾನಂತೂ ಅಕ್ಕ ಪಕ್ಕದಲ್ಲಿ ಚೂರಿ ಏನಾದರೂ ಸಿಗುತ್ತಾ? ಕೈ ಕತ್ತರಿಸಿಕೊಂಡು ಬಿಡೋಣ. ನನ್ನ ಜೊತೆನೇ ಯಾಕೆ ಹೀಗಾಗುತ್ತಿದೆ ಅಂತ ಹುಡುಕುತ್ತಿದ್ದ ಸಮಯ ಕೂಡ ಇದೆ. ಪೊಲೀಸರು ನಮ್ಮನ್ನು ಇಟ್ಟಿದ್ದಲ್ಲಿ ಒಂದೇ ಒಂದು ಶಾಂಪೂ ಬಾಟಲ್ ಕೂಡ ಇಟ್ಟಿರಲಿಲ್ಲ. ನನ್ನನ್ನು ನೋಡಿದರೆ, ಇವರು ಮೆಂಟಲ್ ಆಗಿ ಹೋಗಿದ್ದಾರೆ ಅಂತ ಅನಿಸುತ್ತಿತ್ತು. ಯಾಕಂದ್ರೆ, 19 ವರ್ಷ ಹೆಸರು ಮಾಡುವುದಕ್ಕೆ ಕಷ್ಟ ಪಟ್ಟಿದ್ದೀವಿ" ಎಂದಿದ್ದಾರೆ.


Click it and Unblock the Notifications











