RCB ಗೆಲ್ಬೇಕು ಮರ್ಯಾದೆ ಪ್ರಶ್ನೆ; ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡ ಸಾನ್ಯಾ ಅಯ್ಯರ್, ಶೈನ್ ಶೆಟ್ಟಿ, ದಿವ್ಯಾ ಉರುಡುಗ
2024ರ ಐಪಿಎಲ್ ಜ್ವರ ಜೋರಾಗಿದೆ. ಮಹಿಳೆಯರ ತಂಡ ಐಪಿಎಲ್ ಕಿರೀಟವನ್ನು ಗೆಲ್ಲುತ್ತಿದ್ದಂತೆ ಪುರುಷರ ತಂಡದ ಮೇಲೆ ಒತ್ತಡ ಹೆಚ್ಚಾಗಿದೆ. ಈ ಬಾರಿ ಆರ್ಸಿಬಿ ತಂಡ ಕಪ್ ಗೆಲ್ಲಲೇ ಬೇಕು ಅಂತ ಪಣ ತೊಟ್ಟು ನಿಂತಿದ್ದಾರೆ. ಇತ್ತ ಆರ್ಸಿಬಿ ಅಭಿಮಾನಿಗಳು ಕೂಡ ಐಪಿಎಲ್ 2024ರ ಕಪ್ ಅನ್ನು ಗೆಲ್ಲಲೇ ಬೇಕು ಅಂತ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದಾರೆ.
ಇನ್ನೇ 2024ರ ಐಪಿಎಲ್ನ ಮೊದಲ ಪಂದ್ಯ ಆರ್ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯಲಿದೆ. ಈ ಪಂದ್ಯ ಆರಂಭ ಆಗುವುದಕ್ಕೆ ಇನ್ನೇನು ಕೆಲವೇ ಕ್ಷಣಗಳು ಬಾಕಿ ಉಳಿದಿದೆ ಅನ್ನುವಾಗಲೇ ಸ್ಯಾಂಡಲ್ವುಡ್ ತಾರೆಯರು ಆರ್ಸಿಬಿ ತಂಡ ಕಪ್ ಗೆಲ್ಲಲೇ ಬೇಕು ಅಂತ ತಲೆ ಕೆಡಿಸಿಕೊಂಡಿದ್ದಾರೆ. ಈ ಬಾರಿ ಆರ್ಸಿಬಿ ಕಪ್ ಗೆಲ್ಲಲೇಬೇಕು ಮರ್ಯಾದೆ ಪ್ರಶ್ನೆ ಎನ್ನುತ್ತಿದ್ದಾರೆ.

ಸ್ಯಾಂಡಲ್ವುಡ್ನ ತಾರೆಯರಾದ ಸಾನ್ಯಾ ಅಯ್ಯರ್, ಶೈನ್ ಶೆಟ್ಟಿ, ಕಿಶನ್ ಬೆಳಗಲಿ, ದಿವ್ಯಾ ಉರುಡುಗ ಮತ್ತು ರಘು ಗೌಡ ಸೇರಿದಂತೆ ಹಲವರು ಆರ್ಸಿಬಿ ತಂಡ ಕಪ್ ಗೆಲ್ಲಲೇ ಬೇಕು ಅಂತ ಪಟ್ಟು ಹಿಡಿದು ಕೂತಿದ್ದಾರೆ. ಅದಕ್ಕೆ ಮೊದಲನೇ ಪಂದ್ಯ ಆರಂಭ ಆಗುವುದಕ್ಕೂ ಮುನ್ನ ಆರ್ಸಿಬಿ ತಂಡದ ಸದಸ್ಯರನ್ನು, ಅಭಿಮಾನಿಗಳನ್ನು ಹುರಿದುಂಬಿಸಲು ಹಾಡೊಂದನ್ನು ರೆಡಿ ಮಾಡಿದ್ದಾರೆ.
ಆರ್ಜೆ ಪ್ರದೀಪ ಅವರ ಸಖತ್ ಸ್ಟುಡಿಯೋ ಆರ್ಸಿಬಿಗಾಗಿ ಈ ವಿಶೇಷವಾದ ಹಾಡನ್ನು ನಿರ್ಮಾಣ ಮಾಡಿದೆ. ಆರ್ಸಿಬಿ ಕಪ್ ಗೆಲ್ಲಬೇಕು ಮರ್ಯಾದೆ ಪ್ರಶ್ನೆ ಅನ್ನುವ ಹಾಡನ್ನು ಶೂಟ್ ಮಾಡಿ ರಿಲೀಸ್ ಮಾಡಲಾಗಿದೆ. ಈ ಬೊಂಬಾಟ್ ಹಾಡಿಗೆ ಕಲ್ಯಾಣ್ ಸಖತ್ ಟ್ಯೂನ್ ಹಾಕಿದ್ದಾರೆ. ಕೀರ್ತಿ ನಾರಾಯಣ್ ಸಾಹಿತ್ಯ ರಚಿಸಿದ್ದರೆ, ಐಶ್ವರ್ಯಾ ರಂಗರಾಜನ್ ಹಾಡಿದ್ದಾರೆ. ಈ ಸದ್ಯ ಈ ಹಾಡು ಸೋಶಿಯಲ್ ಮೀಡಿಯಾ ಹಾಗೂ ಯೂಟ್ಯೂಬ್ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಆರ್ಸಿಬಿ ಟೀಮ್ಗೆ ಕ್ರೇಜ್ ಹೇಗಿದೆ ಅನ್ನೋದನ್ನು ವಿಶೇಷವಾಗಿ ಹೇಳಬೇಕಿಲ್ಲ. ಇದೂವರೆಗೂ ಕಪ್ ಗೆಲ್ಲದೇ ಹೋದರೂ, ಆರ್ಸಿಬಿ ತಂಡಕ್ಕೆ ಅಭಿಮಾನಿಗಳು ಎಲ್ಲಾ ತಂಡಕ್ಕಿಂತಲೂ ಹೆಚ್ಚಿದೆ. ಈ ಬಾರಿ ಕೂಡ ಆರ್ಸಿಬಿ ಕಪ್ ಗೆದ್ದೇ ಗೆಲ್ಲುತ್ತೆ ಅನ್ನೋ ಉತ್ಸಾಹದೊಂದಿಗೆ ಸ್ಯಾಂಡಲ್ವುಡ್ ತಾರೆಯರು ಹಾಡಿನ ಮೂಲಕ ಪ್ರೋತ್ಸಾಹ ನೀಡುತ್ತಿದ್ದಾರೆ. ಇದೇ ವೇಳೆ ಶೈನ್ ಶೆಟ್ಟಿ ಹಾಡಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಕ್ರಿಕೆಟ್ ಕೇವಲ ಒಂದು ಆಟವಲ್ಲ; ಇದು ಲಕ್ಷಾಂತರ ಅಭಿಮಾನಿಗಳನ್ನು ಒಗ್ಗೂಡಿಸುವ ಭಾವನೆಯಾಗಿದೆ. ನಮ್ಮ ಮಹಿಳಾ ತಂಡದ ಅದ್ಭುತ ಪ್ರದರ್ಶನಕ್ಕೆ ಸಾಕ್ಷಿಯಾದ ನಂತರ, ಪುರುಷರ ತಂಡಕ್ಕೆ ನಮ್ಮ ಹೃತ್ಪೂರ್ವಕ ಬೆಂಬಲವನ್ನು ನೀಡುವ ಸಮಯ ಬಂದಿದೆ. ಈ ಹಾಡಿನ ಮೂಲಕ, ನಾವು ಅವರ ಸಾಮರ್ಥ್ಯಗಳ ಮೇಲಿನ ನಮ್ಮ ನಂಬಿಕೆಯನ್ನು ತಿಳಿಸಲು ಬಯಸುತ್ತೇವೆ" ಎಂದಿದ್ದಾರೆ.
ಇನ್ನೊಂದು ಕಡೆ ಈ ಹಾಡಿನಲ್ಲಿ ನಟಿಸಿರುವ ಸಾನ್ಯಾ ಅಯ್ಯರ್ ಕೂಡ ಸಾಂಗ್ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. "ಎಲ್ಲಾ ವರ್ಗದ ಜನರನ್ನು ಪ್ರೇರೇಪಿಸುವ ಮತ್ತು ಒಗ್ಗೂಡಿಸುವ ಶಕ್ತಿ ಈ ಕ್ರೀಡೆಗೆ ಇದೆ. ಕಲಾವಿದರಾಗಿ, ನಮ್ಮ ತಂಡಗಳಿಗೆ ಸಕಾರಾತ್ಮಕತೆಯನ್ನು ಹರಡಲು ಮತ್ತು ಹುರಿದುಂಬಿಸಲು ನಮ್ಮ ವೇದಿಕೆಗಳನ್ನು ಬಳಸುವುದು ನಮ್ಮ ಜವಾಬ್ದಾರಿಯಾಗಿದೆ. ಬೆಂಗಳೂರು ಪುರುಷರ ಕ್ರಿಕೆಟ್ ತಂಡವು ಗೆಲ್ಲುವುದು ಎಂಬ ನಿರೀಕ್ಷೆಯಿದೆ ನಮಗೆ ವಿಶ್ವಾಸವಿದೆ "ಎಂದು ಸಾನ್ಯಾ ಅಯ್ಯರ್ ಹೇಳಿದ್ದಾರೆ.
ಸೋಷಿಯಲ್ ಮೀಡಿಯಾ ಸ್ಟಾರ್ ರಘು ಗೌಡ, ಡ್ಯಾನ್ಸರ್ ಕಿಶನ್ ಬೆಲಗಲಿ ಕೂಡ ಥ್ರಿಲ್ ಆಗಿದ್ದಾರೆ. ಸದ್ಯ ಸಖತ್ ಸ್ಟುಡಿಯೋ 'ಮರ್ಯಾದೆ ಪಶ್ನೆ' ಅನ್ನುವ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಆದರೆ, ಸಿನಿಮಾಗೂ ಈ ಹಾಡಿಗೂ ಸಂಬಂಧವಿಲ್ಲ ಎಂದಿರೋ ತಂಡ ಸಿನಿಮಾ ಪ್ರಚಾರಕ್ಕಿಂತ ನಮ್ಮ ಬೆಂಗಳೂರು ತಂಡ ಗೆಲ್ಲಲ್ಲಿ ಎಂಬುದು ಮರ್ಯಾದೆ ಪ್ರಶ್ನೆ ಎಂದು ಹೇಳಿದೆ.


Click it and Unblock the Notifications











