ದರ್ಶನ್ ಮಾತು ಕೇಳದೆ 'ಸಾರಥಿ' ರಿಲೀಸ್ ಮಾಡಿದ್ದ ನಿರ್ಮಾಪಕರು; ಅಂದು ಮಾಡಿಕೊಂಡಿದ್ದ ಎಡವಟ್ಟು ಏನು?
ದರ್ಶನ್ ಸಿನಿ ಜರ್ನಿಯೇ ಚಾಲೆಂಜಿಂಗ್ ಆಗಿತ್ತು ಅನ್ನೋದು ಗೊತ್ತಿದೆ. ಚೊಚ್ಚಲ ಸಿನಿಮಾದಿಂದ ಹಿಡಿದು 'ಡೆವಿಲ್'ವರೆಗೂ ಒಂದಲ್ಲ ಒಂದು ಚಾಲೆಂಜ್ ಅನ್ನು ಎದುರಿಸಿ ಮುಂದೆ ಬಂದಿದ್ದಾರೆ. ಹೀಗಾಗಿ ಅಭಿಮಾನಿಗಳು ಕೊಟ್ಟಿರುವ ಚಾಲೆಂಜಿಂಗ್ ಸ್ಟಾರ್ ಅನ್ನೋ ಬಿರುದು ನಿಜಕ್ಕೂ ಸೂಕ್ತ ಅಂತಲೇ ಅನಿಸುತ್ತೆ. 'ಡೆವಿಲ್' ಅಂತೆಯೇ 'ಸಾರಥಿ' ಸಿನಿಮಾ ಕೂಡ ಸಾಕಷ್ಟು ಸವಾಲುಗಳನ್ನು ಎದುರಿಸಿತ್ತು. ಅದೇನು ಅನ್ನೋದನ್ನು ಕೆ.ವಿ ಸತ್ಯಾ ಪ್ರಕಾಶ್ ರಿವೀಲ್ ಮಾಡಿದ್ದಾರೆ.
'ಸಾರಥಿ' ಸಿನಿಮಾ ಬಗ್ಗೆ ನಿರ್ಮಾಪಕ ಕೆ.ವಿ ಸತ್ಯ ಪ್ರಕಾಶ್ ಹಲವು ಸಂಗತಿಗಳನ್ನು ಹೇಳಿಕೊಂಡಿದ್ದಾರೆ. 'ಸಾರಥಿ' ಕೇವಲ ದರ್ಶನ್ಗಷ್ಟೇ ಅಲ್ಲ, ನಿರ್ಮಪಕರ ಜೇಬು ತುಂಬಿಸಿತ್ತು. ಕನ್ನಡ ಚಿತ್ರರಂಗಕ್ಕೆ ಮೆಗಾ ಬ್ಲಾಕ್ಬಸ್ಟರ್ ಸಿನಿಮಾ ಎನಿಸಿಕೊಂಡಿತ್ತು. 'ಸಾರಥಿ'ಯಿಂದ ನಿರ್ಮಾಪಕ ಜೇಬು ತುಂಬಿರುವುದೇನೋ ನಿಜ. ಆದರೂ ಒಂದು ದರ್ಶನ್ ಮಾತು ಕೇಳದೆ ರಿಲೀಸ್ ಮಾಡಿ ಎಡವಟ್ಟು ಮಾಡಿಕೊಂಡೆ ಎಂದು ನಿರ್ಮಾಪಕ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

'ಸಾರಥಿ' ತೆರೆಕಂಡ 14 ವರ್ಷಗಳ ಬಳಿಕ ಮತ್ತೆ 'ಲ್ಯಾಂಡ್ಲಾರ್ಡ್' ಮೂಲಕ ಮತ್ತೆ ಕಬ್ಬ್ಯಾಕ್ ಮಾಡುತ್ತಿದ್ದಾರೆ. ದುನಿಯಾ ವಿಜಯ್, ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಪ್ರಚಾರದಲ್ಲಿರು ನಿರ್ಮಾಪಕ ಕೆ ವಿ ಸತ್ಯ ಪ್ರಕಾಶ್ 'ಸಾರಥಿ' ರಿಲೀಸ್ ಮಾಡುವಾಗ ದರ್ಶನ್ ಅವರ ಮಾತು ಕೇಳದೆ ಎಡವಟ್ಟು ಮಾಡಿಕೊಂಡಿದ್ದೆ ಎಂದಿದ್ದಾರೆ. 'ಸಾರಥಿ' ಮೆಗಾ ಹಿಟ್ ಆಗಿದ್ದರೂ, ಇವರು ಮಾಡಿಕೊಂಡಿದ್ದ ಎಡವಟ್ಟೇನು? ತಿಳಿಯುವುದಕ್ಕೆ ಮುಂದೆ ಓದಿ.
ನಿರ್ಮಾಪಕ ಕೆ.ವಿ.ಸತ್ಯ ಪ್ರಕಾಶ್ ನಿರ್ಮಿಸುತ್ತಿರುವ ಎರಡನೇ ಸಿನಿಮಾ 'ಲ್ಯಾಂಡ್ಲಾರ್ಡ್'. ಈ ಸಿನಿಮಾ ಮೂಡಿಬಂದಿರುವ ಬಗ್ಗೆ ನಿರ್ಮಾಪಕರು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಇಡೀ ಕುಟುಂಬ ಕೂತು ನೋಡುವ ಸಿನಿಮಾ ಇದು ಆಗುತ್ತೆ ಎಂದಿದ್ದಾರೆ.
"ಸಾರಥಿ ಆದ್ಮೇಲೆ 14 ವರ್ಷಗಳ ಬಳಿಕ ಲ್ಯಾಂಡ್ಲಾರ್ಡ್ ಸಿನಿಮಾ ಮಾಡಿದ್ದಕ್ಕೂ ಸಾರ್ಥಕತೆ ಅಂತ ಅನಿಸುತ್ತಿದೆ. ಈ ಸಿನಿಮಾದ ಪ್ರತಿಯೊಂದು ಸೀನ್ ಕೂಡ ಅದ್ಭುತವಾಗಿ ಮೂಡಿ ಬಂದಿದೆ. ಇದೂವರೆಗೂ ದುನಿಯಾ ವಿಜಯ್ ಸರ್ಗೆ ಯುವಕರು ಫ್ಯಾನ್ ಅಂತಿದ್ದರು. ಈ ಸಿನಿಮಾ ಮಾತ್ರ ಅವರ ಕರಿಯರ್ನಲ್ಲಿಯೇ ದೊಡ್ಡ ಹಿಟ್ ಆಗುತ್ತೆ. ಇದು ಇಡೀ ಕುಟುಂಬ ಬಂದು ನೋಡುವಂತಹ ಸಿನಿಮಾ ಆಗುತ್ತೆ ಅಂತ ಹೇಳುವುದಕ್ಕೆ ಇಷ್ಟ ಪಡುತ್ತೇನೆ." ಎಂದಿದ್ದಾರೆ.
ಈ ಸಂದರ್ಶನದಲ್ಲಿ 14 ವರ್ಷದಿಂದ ಯಾಕೆ ಸಿನಿಮಾ ಮಾಡಿಲ್ಲ ಅನ್ನೋದನ್ನು ರಿವೀಲ್ ಮಾಡಿದ್ದಾರೆ. 'ಸಾರಥಿ' ಅಂತಹ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟ ಬಳಿಕ ಒಳ್ಳೆಯ ಕಥೆಗಳು ಬರಲಿಲ್ಲ. ಎಲ್ಲಿ ಕೆಟ್ಟ ಸಿನಿಮಾಗಳನ್ನು ಮಾಡುತ್ತೇನೋ ಎನ್ನುವ ಭಯವಿತ್ತು. ಹೀಗಾಗಿ ಸಿನಿಮಾ ಮಾಡುವುದಕ್ಕೆ ಹೋಗಿರಲಿಲ್ಲ. 'ಲ್ಯಾಂಡ್ಲಾರ್ಡ್' ಕಥೆ ಇಷ್ಟ ಆಯ್ತು. ಆ ಕಾರಣಕ್ಕೆ ಸಿನಿಮಾ ಮಾಡುತ್ತಿರುವುದಾಗಿ ನಿರ್ಮಾಪಕ ಸತ್ಯಪ್ರಕಾಶ್ ಹೇಳಿದ್ದಾರೆ. ಹಾಗೇ ಮುಂದಿನ ದಿನಗಳಲ್ಲಿ 6 ತಿಂಗಳಿಗೊಮ್ಮೆ ಸಿನಿಮಾ ಮಾಡುವ ಭರವಸೆಯನ್ನೂ ನೀಡಿದ್ದಾರೆ.
"ನಾವು ಮಾತಾಡಿಕೊಂಡಿದ್ದೇವೆ. ಲ್ಯಾಂಡ್ಲಾರ್ಡ್ ಒಳ್ಳೆಯ ರೀತಿಯ ಕೈ ಹಿಡಿದರೆ, ಆರು ತಿಂಗಳು ಒಂದು ವರ್ಷಕ್ಕೊಂದು ಸಿನಿಮಾನ್ನು ಖಂಡಿತಾ ಮಾಡುತ್ತೇವೆ." ಎಂದು ಫಿಲ್ಮಿಬೀಟ್ ಕನ್ನಡದ ಸಂದರ್ಶನದಲ್ಲಿ ನಿರ್ಮಾಪಕ ಸತ್ಯ ಪ್ರಕಾಶ್ ರಿವೀಲ್ ಮಾಡಿದ್ದಾರೆ.
'ಸಾರಥಿ' ರಿಲೀಸ್ ಮಾಡುವಾಗಲೂ ದರ್ಶನ್ ಜೈಲಿನಲ್ಲಿದ್ದರು. ಆ ವೇಳೆನೇ ಸಿನಿಮಾ ಬಿಡುಗಡೆ ಮಾಡುವುದಕ್ಕೆ ನಿರ್ಮಾಪಕರು ನಿರ್ಧರಿಸಿದ್ದರು. ಇಂತಹದ್ದೊಂದು ನಿರ್ಧಾರ ತೆಗೆದುಕೊಳ್ಳುವುದಕ್ಕೆ ಕಾರಣ ಸಿನಿಮಾ ಹಾಗೂ ಕಥೆ ಮೇಲಿದ್ದ ನಂಬಿಕೆ. ಆದರೂ ದರ್ಶನ್ ಈ ಸಮಯದಲ್ಲಿ ರಿಲೀಸ್ ಮಾಡುವುದು ಬೇಡ ಎಂದು ಸಲಹೆ ನೀಡಿದ್ದರಂತೆ. ಆದರೂ, ಅವರ ಮಾತು ಕೇಳದೆ ಸಿನಿಮಾ ರಿಲೀಸ್ಗೆ ಮುಂದಾಗಿದ್ದರು.
"ಸಿನಿಮಾ ಚೆನ್ನಾಗಿದ್ದಾಗ ಪ್ರೇಕ್ಷಕರು ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ. ದರ್ಶನ್ ಅವರ ಬಗ್ಗೆ ಹೇಳೋ ಹಾಗೇ ಇಲ್ಲ. ಇಡೀ ಕರ್ನಾಟಕದಾದ್ಯಂತ ಅವರದ್ದೇ ಆದ ಫ್ಯಾನ್ ಬೇಸ್ ಇದೆ. ಅವರು ಒಳಗೆ ಇದ್ದರೂ ಯಾವ ರೀತಿ ಸಿನಿಮಾ ಗೆಲ್ಲಿಸುತ್ತಿದ್ದಾರೆ ಎನ್ನುವುದನ್ನು ನೀವು ನೋಡಿದ್ದೀರ. ದರ್ಶನ್ ಅವರು ಕೇಳಿದರು. ನೋಡಿ ನಾನು ಒಳಗೆ ಇದ್ದೀನಿ. ಪ್ರಮೋಷನ್ ಮಾಡುವುದಕ್ಕೆ ಕಷ್ಟ ಆಗುತ್ತೆ. ನೀವು ಇನ್ನೂ ಹೊಸಬರು ಗೊತ್ತಾಗಲ್ಲ ಅಂದರು. ಆಗ ನಾನು ಇಲ್ಲ ಸರ್, ನನಗೆ ಕಥೆ ಬಗ್ಗೆ ಸಿನಿಮಾ ಬಗ್ಗೆ ಹೋಪ್ ಇದೆ. ಮಾಡೇ ಮಾಡ್ತೀನಿ ಅಂದೆ. ಆಗ ದರ್ಶನ್ ಸರ್ ನಿಮ್ಮಿಷ್ಟ ಅಂತ ದರ್ಶನ್ ಹೇಳಿದರು." ಎಂದು ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
'ಸಾರಥಿ' ಸಿನಿಮಾ ರಿಲೀಸ್ ಮಾಡುವ ನಿರ್ಧಾರ ಸರಿಯಾಗಿಯೇ ಇತ್ತು. ಆದರೂ ಒಂದು ಎಡವಟ್ಟು ಮಾಡಿಕೊಂಡಿದ್ದರು. ಅದೇನು ಅನ್ನೋದನ್ನು ಫಿಲ್ಮಿಬೀಟ್ಗೆ ರಿವೀಲ್ ಮಾಡಿದ್ದಾರೆ. "ಸಾರಥಿ ಸಿನಿಮಾ ಸುಮಾರು 150 ದಿನ ಹೋಯ್ತು. ನೀವು ನಂಬಿದ್ರೆ ನಂಬಿ 100 ಚಿತ್ರಮಂದಿರಗಳಲ್ಲಿ 50 ದಿನ ಹೋಯ್ತು. 75 ದಿನ 75 ಚಿತ್ರಮಂದಿರಗಳಲ್ಲಿ ಹೋಯ್ತು. 50 ಥಿಯೇಟರ್ಗಳಲ್ಲಿ 150 ದಿನ ಓಡಿತ್ತು. ಸಾರಥಿ ಸಿನಿಮಾ ಚೆನ್ನಾಗಿ ಹೋಯ್ತು. ನನಗೆ ಮೋಸ ಆಗಲಿಲ್ಲ. ಆ ವೇಳೆ ದರ್ಶನ್ ಸರ್ ಕರ್ಕೊಂಡು ಇಡೀ ಕರ್ನಾಟಕ ಟೂರ್ ಮಾಡುತ್ತಿದ್ದೆ. ಆಗ ಸ್ವಲ್ಪ ಬೆಂಗಳೂರು ಭಾಗದಲ್ಲಿ ತೊಂದರೆ ಆಯ್ತು. ಆ ವೇಳೆ ಈ ಕಡೆ ಗಮನ ಕೊಡಲಿಲ್ಲ." ಎಂದು ನಿರ್ಮಾಪಕ ಕೆವಿ ಸತ್ಯ ಪ್ರಕಾಶ್ ಹೇಳಿಕೊಂಡಿದ್ದಾರೆ.


Click it and Unblock the Notifications











