"ಜಾತಿ, ಧರ್ಮ ನೋಡದೆ ನಮ್ಮಂತಹವ್ರನ್ನು ಗುರುತಿಸಿದವ್ರು"; ರಿದಂ ಕಿಂಗ್ ಬಾಲಿ ನಿಧನಕ್ಕೆ ಸಾಧು ಕೋಕಿಲ ಸಂತಾಪ
ಕಿರುತೆರೆಯ ಮ್ಯೂಸಿಕ್ ಶೋ ಸರಿಗಮಪದ ತೀರ್ಪುಗಾರರ ಪ್ಯಾನಲ್ನ ಸದಸ್ಯರಾಗಿದ್ದವರು 'ಬಾಲಿ' ಅಥವಾ ಬಾಲಸುಬ್ರಹ್ಮಣ್ಯಂ. ಇವರ ಸಂಗೀತ ಲೋಕದ ಬಹಳ ದೊಡ್ಡದಿದೆ. ವಾದ್ಯಗಳನ್ನು ನುಡಿಸುವುದರಲ್ಲಿ ಪರಿಣಿತರಾಗಿದ್ದ ಬಾಲಸುಬ್ರಹ್ಮಣ್ಯಂ ಅವರನ್ನು ಸಂಗೀತ ಲೋಕ 'ಬಾಲಿ' ಎಂದೇ ಗುರುತಿಸುತ್ತೆ. ಅಷ್ಟೇ ಪ್ರೀತಿಯಿಂದ ಇವರಿಗೆ ರಿದಂ ಕಿಂಗ್ ಎಂಬ ಬಿರುದನ್ನು ನೀಡಿದೆ.
ರಿದಂ ಕಿಂಗ್ 'ಬಾಲಿ' ಎಂದೇ ಜನಪ್ರಿಯರಾಗಿದ್ದ ಜನಪ್ರಿಯ ಮೃದಂಗ ವಾದಕ ಬಾಲಸುಬ್ರಹ್ಮಣ್ಯಂ ಇಂದು (ಜನವರಿ 2) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಇವರ ನಿಧನಕ್ಕೆ ಕನ್ನಡ ಚಿತ್ರರಂಗದ ನಟ ಹಾಗೂ ಸಂಗೀತ ನಿರ್ದೇಶಕ ಸಾಧು ಕೋಕಿಲಾ ಸಂತಾಪ ಸೂಚಿಸಿದ್ದಾರೆ.

'ಬಾಲಿ' ಕನ್ನಡ ಚಿತ್ರರಂಗ ಹಾಗೂ ಸುಗಮ ಸಂಗೀತ ಕ್ಷೇತ್ರಕ್ಕೆ ಚಿರಪರಿಚಿತರು. ನೂರಾರು ಕಲಾವಿದರನ್ನು ಅವರು ಪ್ರೋತ್ಸಾಹಿಸಿ, ಬೆಳಸಿದ್ದಾರೆ. ಕಲೆಯನ್ನೇ ಉಸಿರಾಗಿಟ್ಟುಕೊಂಡಿದ್ದ ಅವರ ನಿಧನಕ್ಕೆ ಸಂಗೀತ ಲೋಕ ಹಾಗೂ ಚಿತ್ರರಂಗ ಸಂತಾಪವನ್ನು ವ್ಯಕ್ತಪಡಿಸುತ್ತಿದೆ. ನಟ ಹಾಗೂ ಸಂಗೀತ ನಿರ್ದೇಶಕ ಹಾಗೂ ಕೆ.ಎಫ್.ಎಂ.ಎ ಅಧ್ಯಕ್ಷರಾದ ಸಾಧುಕೋಕಿಲ ದು:ಖವನ್ನು ವ್ಯಕ್ತಪಡಿಸಿ ವಿಡಿಯೋ ಸಂದೇಶ ಕಳುಹಿಸಿದ್ದಾರೆ.
"ಇವತ್ತಿನ ದಿನ ಅತೀ ಶೋಕದ ದಿನ. ಕಲಾವಿದರ ಕುಟುಂಬಕ್ಕೆ ತುಂಬಲಾರದ ನಷ್ಟ. ರಿದಂ ಕಿಂಗ್ ಸುಗ, ಸಂಗೀತದಲ್ಲಿ ಆಗಬಹುದು. ಚಲನ ಚಿತ್ರ ಸಂಗೀತದಲ್ಲಿ ಆಗಬಹುದು. ಸಂಗೀತದ ಬಗ್ಗೆ ಅಪಾರವಾದ ತಿಳುವಳಿಕೆಯನ್ನು ಇಟ್ಟುಕೊಂಡಿದ್ದ ನಮ್ಮ ಬಾಲಿಯವರು ವಿಧಿವಶರಾಗಿದ್ದಾರೆ. ಇದು ತುಂಬಲಾರದ ನಷ್ಟ." ಎಂದು ಸಾಧು ಕೋಕಿಲಾ ಹೇಳಿದ್ದಾರೆ.
"ಅವರು ಕಲಾವಿದರಿಗೆ ಪೋಷಕರು. ಜಾತಿ, ಧರ್ಮ ಯಾವುದೂ ನೋಡದೆ ನಮ್ಮಂತಹ ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸಿ ನಮ್ಮನ್ನೆಲ್ಲ ಮುಂದೆ ತಂದವರು. ಅವರು ವಿಧಿವಶರಾಗಿರುವುದು ಬಹಳ ಶೋಕದ ವಿಷಯ." ಎಂದಿದ್ದಾರೆ.
"ನಮ್ಮ ಈ ಚಿತ್ರರಂಗ ಚೆನ್ನೈನಲ್ಲಿ ಇತ್ತು. ಅಲ್ಲಿಂದ ಕರ್ನಾಟಕಕ್ಕೆ ಬಂದಾಗ, ಇಲ್ಲಿಯ ಎಲ್ಲಾ ಕಲಾವಿದರನ್ನು ಗುರುತಿಸಿ, ಸುಗಮ ಸಂಗೀತದಲ್ಲಿ ಆಗಬಹುದು, ವಾದ್ಯಗೋಷ್ಠಿಯಲ್ಲಿ ಆಗಬಹುದು. ಕಲಾವಿದರಾಗಿ ದುಡಿಯುತ್ತಿದ್ದೇವೆ ಅಂದರೆ, ಅದಕ್ಕೆ ಬಾಲಿಯವರು ಕೂಡ ಮುಖ್ಯ ಕಾರಣಕರ್ತರಾಗುತ್ತಾರೆ. ಅವರಿಗೋಸ್ಕರ ಎಲ್ಲಾ ಕಲಾವಿದರು ದೇವರಲ್ಲಿ ಪ್ರಾರ್ಥಿಸಬೇಕಾ ವಿನಂತಿ." ಎಂದು ಸಾಧು ಕೋಕಿಲ ಮನವಿ ಮಾಡಿಕೊಂಡಿದ್ದಾರೆ.
ಬಾಲಿಯವರು ಚಿಕ್ಕ ವಯಸ್ಸಿನಲ್ಲಿಯೇ ಮೃದಂಗ ಕಲಿಕೆ ಆರಂಭಿಸಿದ್ದರು. ಹಾಗೇ ಡೋಲಕ್, ಮೃದಗಂ, ತಬಲಾ ವಾದ್ಯಗಳನ್ನು ನುಡಿಸುವಲ್ಲೂ ಪರಿಣಿತರಾಗಿದ್ದರು. ಇಷ್ಟೇ ಅಲ್ಲ ಡ್ರಮ್ಸ್, ಬ್ಯಾಂಗೋ, ಕಾಂಗೋಸ್ ಗಳಲ್ಲಿ ಕೂಡ ಅವರಿಗೆ ಅಸಾಧಾರಣ ಪರಿಣಿತಿ ಇತ್ತು. ಇದರೊಂದಿಗೆ ಸುಗಮ ಸಂಗೀತ ಕ್ಷೇತ್ರದ ದಿಗ್ಗಜರಾಗಿದ್ದ ಬಾಳಪ್ಪ ಹುಕ್ಕೇರಿ, ಪಿ.ಕಾಳಿಂಗ ರಾವ್, ಮೈಸೂರು ಅನಂತ ಸ್ವಾಮಿ, ಸಿ.ಅಶ್ವತ್ಥ್ ಅವರ ಸಂಯೋಜನೆಯ ವಾದ್ಯಗೋಷ್ಟಿಗಳನ್ನು ಅವರು ನಿರ್ವಹಿಸಿದ್ದರು. ಕನ್ನಡದ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ 'ನಿತ್ಯೋತ್ಸವ'ದಿಂದಲೂ ಬಾಲಿಯವರು ಸಕ್ರಿಯರಾಗಿದ್ದರು.
ಹಾಗೇ ಸಿನಿಮಾ ಕ್ಷೇತ್ರದಲ್ಲೂ ಪರಿಚಿತರು ಸಂಗೀತ ನಿರ್ದೇಶಕರಾದ ಜಿ.ಕೆ.ವೆಂಕಟೇಶ್, ವಿಜಯಭಾಸ್ಕರ್, ಎಂ.ರಂಗರಾವ್, ಡಾ.ರಾಜೀವ ತಾರಾನಾಥ್, ಅಶ್ವತ್ಥ್-ವೈದಿಯವರು ಸಂಯೋಜಿಸಿದ್ದ ಚಿತ್ರಗೀತೆಗಳಿಗೆ ಬಾಲಿ ಅವರು ಕೆಲಸ ಮಾಡಿದ್ದರು. ಹಾಗೇ ಶಂಕರ್ನಾಗ್ ಅವರ ಸಂಕೇತ್ ಸ್ಟುಡಿಯೋ ನಿರ್ಮಾಣದಲ್ಲೂ ಬಾಲಿ ಅವರ ಶ್ರಮವಿದೆ. ಹಿನ್ನೆಲೆ ಸಂಗೀತದ ಬಗ್ಗೆ ಆಡಿಯೋ-ವಿಡಿಯೋ-ಓದುವ ಹೀಗೆ ಮೂರು ಆಯಾಮದ ಪುಸ್ತಕವನ್ನು ಬರೆದಿದ್ದರು. ತಮ್ಮದೇ 'ರಮ್ಯ ಕಲ್ಚರಲ್ ಅಕಾಡಮಿ'ಯ ಮೂಲಕ ಹೊಸ ಕಲಾವಿದರಿಗೆ ತರಬೇತಿ ನೀಡಿದ್ದರು.


Click it and Unblock the Notifications











