ಕಿಚ್ಚನ 'ಹೆಬ್ಬುಲಿ' ಸಿನಿಮಾದಿಂದ ಪ್ರೇರಣೆ ಪಡೆದ 'ಹೆಬ್ಬುಲಿ ಕಟ್' ಬೆಂಬಲಕ್ಕೆ ನಿಂತ ಸತೀಶ್ ನೀನಾಸಂ, ನವೀನ್ ಶಂಕರ್
ಸ್ಯಾಂಡಲ್ವುಡ್ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಸದ್ದು ಮಾಡುತ್ತಿಲ್ಲ. ಹೊಸಬರ ಸಿನಿಮಾಗಳಲ್ಲಿ ಥಿಯೇಟರ್ಗಳಲ್ಲಿ ನಿಲ್ಲುತ್ತಿಲ್ಲ. ಹೀಗಿದ್ದರೂ ಹೊಸ ತಮ್ಮ ಪ್ರಯತ್ನಗಳನ್ನು ಮಾತ್ರ ನಿಲ್ಲಿಸಿಲ್ಲ. ಹೊಸ ಕಂಟೆಂಟ್ಗಳ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಲೇ ಇದ್ದಾರೆ. ಅಂತಹ ಒಂದು ಸಿನಿಮಾವೇ 'ಹೆಬ್ಬುಲಿ ಕಟ್'. ಉತ್ತರ ಕರ್ನಾಟಕ ಭಾಗದ ಪ್ರತಿಭೆಗಳೇ ಸೇರಿಕೊಂಡಿರುವ ಈ ಸಿನಿಮಾ ಟೈಟಲ್ನಿಂದಲೇ ಗಮನ ಸೆಳೆದಿತ್ತು.
'ಹೆಬ್ಬುಲಿ ಕಟ್' ತಂಡಕ್ಕೆ ಸತೀಶ್ ನೀನಾಸಂ ಬೆಂಬಲಕ್ಕೆ ನಿಂತ ಬಳಿಕ ಹೊಸ ಹುರುಪು ಬಂದಿದೆ. ಈಗ ಉತ್ತರ ಕರ್ನಾಟಕದ ನಟ ನವೀನ್ ಶಂಕರ್ ಬೆಂಬಲಕ್ಕೆ ಬಂದ್ಮೇಲೆ ಮತ್ತೀ ಬಲ ಬಂದಂತೆ ಆಗಿದೆ. ಅಂದ್ಹಾಗೆ ಈ ಸಿನಿಮಾ ಮುಂದಿನ ತಿಂಗಳು ಅಂದರೆ ಜುಲೈ 4ರಂದು ರಿಲೀಸ್ ಆಗುತ್ತಿದೆ. ಸತೀಶ್ ಪಿಕ್ಚರ್ ಹೌಸ್ ಬ್ಯಾನರ್ನಲ್ಲಿ ಸತೀಶ್ 'ಹೆಬ್ಬುಲಿ ಕಟ್' ಸಿನಿಮಾವನ್ನು ಅರ್ಪಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ನಟ ನವೀಶ್ ಶಂಕರ್, ಸತೀಶ್ ನೀನಾಸಂ ಹಾಗೂ ಇಡೀ ಚಿತ್ರತಂಡ ಭಾಗಿಯಾಗಿದ್ದರು.

'ಹೆಬ್ಬುಲಿ ಕಟ್' ಸಿನಿಮಾ ಕಿಚ್ಚ ಸುದೀಪ್ ನಟಿಸಿದ 'ಹೆಬ್ಬುಲಿ' ಸಿನಿಮಾದ ಪ್ರೇರಣೆಯಿಂದ ಕಥೆಯನ್ನು ಹೆಣೆಯಲಾಗಿದೆ. ಹೀಗಾಗಿ ಈ ಸಿನಿಮಾ ಪ್ರೇಕ್ಷಕರಿಗೆ ವಿಶೇಷ ಅನುಭವ ನೀಡಬಹುದು. 'ಹೆಬ್ಬುಲಿ ಕಟ್' ಟ್ರೈಲರ್ ಬಿಡುಗಡೆ ಬಳಿಕ ಸತೀಶ್ ನೀನಾಸಂ ಸಿನಿಮಾ ಬಗ್ಗೆ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. "ನನಗೆ ಹೆಬ್ಬುಲಿ ಕಟ್ ಸಿನಿಮಾ ತುಂಬಾ ಬೇಗ ಕನೆಕ್ಟ್ ಆಗುತ್ತೆ. ಈ ಸಿನಿಮಾವನ್ನು ನಾನು ನೋಡಿದ್ದೇನೆ. ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಫೋನ್ ಮಾಡಿ ಹೆಬ್ಬುಲಿ ಕಟ್ ಸಿನಿಮಾ ಇದೆ ನೀವು ನೋಡಬೇಕು. ಸಾಧ್ಯವಾದರೆ ಜೊತೆಯಲಿ ನಿಂತ್ತುಕೊಳ್ಳಿ ಅಂತ ಹೇಳಿದರು. ಸಿನಿಮಾ ನೋಡುತ್ತಾ ಹೋದಂತೆ ಗಮನ ಸೆಳೆಯಿತು. ಮೊದಲ ಭಾಗ ಮುಗಿಸುವಷ್ಟರಲ್ಲಿ ಎದೆ ಭಾರ ಎನಿಸಿತು. ಸೆಕೆಂಡ್ ಆಫ್ನ ಕೊನೆಯ 20 ನಿಮಿಷ ಉಸಿರಾಡಲು ಕಷ್ಟವಾಯಿತು. ಭಯ, ತಳಮಳ ಶುರುವಾಯ್ತು. ಜನರು ಹೇಗೆಲ್ಲ ಸಿನಿಮಾವನ್ನು ಸ್ವೀಕಾರ ಮಾಡುತ್ತಾರೆ ಎಂಬ ಪ್ರಶ್ನೆ ಮೂಡುವುದಕ್ಕೆ ಶುರುವಾಯ್ತು. ರೀಲ್ಸ್, ಗಲಾಟೆ, ಯುದ್ಧ ಮಧ್ಯೆ ಬ್ಯೂಟಿಫುಲ್ ಸಿನಿಮಾ ಬರುವುದು ಕಷ್ಟ. ರೀಲ್ಸ್, ನ್ಯೂಸ್ ಮಧ್ಯೆ ಪ್ರೇಕ್ಷಕ ಥಿಯೇಟರ್ಗೆ ಬರಬೇಕು ಅಂದ್ರೆ ಒಳ್ಳೆ ಕಥೆ ಬರಬೇಕು. ಸೋಶಿಯಲ್ ಮೀಡಿಯಾದಲ್ಲಿ ಕಳೆದು ಹೋಗುತ್ತಿದ್ದೇವೆ. ಒಂದು ಹೆಬ್ಬುಲಿ ಕಟ್ ನಮ್ಮನ್ನ ಎಚ್ಚರ ಮಾಡುತ್ತೆ. ಎದೆ ಭಾರ ಮಾಡುತ್ತೆ, ಸತ್ಯ ಹೇಳುತ್ತದೆ. ಈ ಸಿನಿಮಾವನ್ನು ಥಿಯೇಟರ್ನಲ್ಲಿ ನೋಡಿ" ನೀನಾಸಂ ಸತೀಶ್ ಹೇಳಿದ್ದಾರೆ.
ಟ್ರೈಲರ್ ರಿಲೀಸ್ ಮಾಡಿ ಮಾತಾಡಿದ ನವೀಶ್ ಶಂಕರ್ "ಇಂತಹ ಸಿನಿಮಾಗಳನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸುವ ಅವಶ್ಯಕತೆ ಇದೆ. ನಾನು ಹೆಬ್ಬುಲಿ ಕಟ್ ಸಿನಿಮಾವನ್ನು ನೋಡಿದ್ದೇನೆ. ಇದು ಒಳ್ಳೆಯ ಸಿನಿಮಾ. ಆ ನಂಬಿಕೆಯಿಂದಲೇ ನಾನು ಇಲ್ಲಿವರೆಗೂ ಬಂದು ಮಾತಾಡುತ್ತಿದ್ದೇನೆ. ನಿರ್ದೇಶಕ ಭೀಮ್ ರಾವ್ ತೂಕದ ವಿಷಯವನ್ನು ಬಹಳ ಸಿಂಪಲ್ ಆಗಿ ಹೇಳಿದ್ದಾರೆ. ಎಂಟರ್ಟೈನಿಂಗ್ ಆಗಿ ಸಿನಿಮಾದಲ್ಲಿ ತೋರಿಸಿದ್ದಾರೆ"ಎಂದು ಸತೀಶ್ ನೀನಾಸಂ ಹೇಳಿದ್ದಾರೆ.
"ಸತೀಶ್ ಸರ್ ಅವರ ಜೊತೆನೇ ಒಂದಿಷ್ಟು ಮಂದಿ ಈ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಇದು ಆಫ್ ಬೀಟ್ ಸಿನಿಮಾವಲ್ಲ. ಸಿನಿಮಾ ನೋಡಿದ ಮೇಲೆ ಕಣ್ಣೀರು ಬರಬಹುದು. ಹೆಬ್ಬುಲಿ ಕಟ್ ನೈಜ ಘಟನೆಯಾಧಾರಿತ ಸಿನಿಮಾ. ಸುದೀಪ್ ಸರ್ ಅನ್ನು ಈ ಸಿನಿಮಾದಲ್ಲಿ ಐಕಾನ್ ಆಗಿ ತೋರಿಸಿದ್ದೇವೆ. ಇನ್ನು ಈ ಸಿನಿಮಾವನ್ನು ಸತೀಶ್ ಸರ್ ಪ್ರೆಸೆಂಟ್ ಮಾಡುತ್ತಿದ್ದಾರೆ. ನಮ್ಮ ಜೊತೆ ನಿಂತಿರುವುದಕ್ಕೆ ಬಲ ಬಂದಿದೆ" ಎಂದು ನಿರ್ದೇಶಕ ಭೀಮ್ ರಾವ್ ಹೇಳಿದ್ದಾರೆ.
ಅಂದ್ಹಾಗೆ, ರಾಯಚೂರಿನ ಯುವ ನಿರ್ದೇಶಕ ಭೀಮರಾವ್ ಪೈದೊಡ್ಡಿ 'ಹೆಬ್ಬುಲಿ ಕಟ್' ಸಿನಿಮಾದ ನಿರ್ದೇಶಕ. 2017ರಲ್ಲಿ ಕಿಚ್ಚ ಸುದೀಪ್ ನಟಿಸಿದ 'ಹೆಬ್ಬುಲಿ' ಸಿನಿಮಾವನ್ನೇ
ಸ್ಫೂರ್ತಿಯಾಗಿಟ್ಟುಕೊಂಡು ಈ ಸಿನಿಮಾದ ಕಥೆ ಹೆಣೆಯಲಾಗಿದೆ. ಆ ವೇಳೆ 'ಹೆಬ್ಬುಲಿ' ಸಿನಿಮಾದಲ್ಲಿ ಕಿಚ್ಚ ಸುದೀಪ್ ಕೇಶ ವಿನ್ಯಾಸ ಜನಪ್ರಿಯತೆ ಪಡೆದುಕೊಂಡಿತ್ತು. ಕಿಚ್ಚ ಸುದೀಪ್ರ ಸ್ಟಾರ್ಡಮ್ನಿಂದ ಸ್ಪೂರ್ತಿ ಪಡೆದ ಒಬ್ಬ ವ್ಯಕ್ತಿಯ ಜೀವನದ ಸವಾಲುಗಳನ್ನು ಹೇಗೆ ಎದುರಿಸುತ್ತಾನೆ ಎನ್ನುವುದನ್ನು ಭಾವನಾತ್ಮಕವಾಗಿ ಚಿತ್ರಿಸಲಾಗಿದೆ. ಈ ಸಿನಿಮಾದ ಚಿತ್ರಕಥೆ ಮತ್ತು ಸಂಭಾಷಣೆಯನ್ನು 'ಡೇರ್ಡೆವಿಲ್ ಮುಸ್ತಾಫಾ' ಖ್ಯಾತಿಯ ಅನಂತ ಶಾಂದ್ರೇಯ ಬರೆದಿದ್ದಾರೆ.
ನಟ ಸತೀಶ್ ನೀನಾಸಂ ಈ ಸಿನಿಮಾವನ್ನು ಇಷ್ಟ ಪಟ್ಟು 'ಸತೀಶ್ ಪಿಕ್ಚರ್ ಹೌಸ್' ಬ್ಯಾನರ್ ಮೂಲಕ ಸಿನಿಮಾವನ್ನು ರಿಲೀಸ್ ಮಾಡುತ್ತಿದ್ದಾರೆ. ಹೊಸ ತಂಡಕ್ಕೆ ತನ್ನ ಬ್ಯಾನರ್ ಮೂಲಕ ಪ್ರೋತ್ಸಾಹ ನೀಡುತ್ತಿದ್ದಾರೆ. ಮೌನೇಶ್ ನಟರಂಗ, ಅನನ್ಯಾ ನಿಹಾರಿಕಾ, ಮಹಾದೇವ ಹಡಪದ, ಉಮಾ ವೈ.ಜಿ., ವಿನಯ್ ಮಹಾದೇವನ್, ಮಹಾಂತೇಶ್ ಹಿರೇಮಠ, ಪುನೀತ್ ಶೆಟ್ಟಿ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.


Click it and Unblock the Notifications











