Sathish Ninasam: "ನಾನು ಓದಿದ್ದು SSLC ಮಾತ್ರ..ಹೀಗಾಗಿ ಆ ರೀತಿ ಯಾರನ್ನೂ ಟೀಕಿಸುವ ಮನಸ್ಥಿತಿ ಇಲ್ಲ"-ಸತೀಶ್ ನೀನಾಸಂ
ಈ ವರ್ಷ ಕನ್ನಡ ಚಿತ್ರರಂಗದ ಪರಿಸ್ಥಿತಿ ಅಧೋಗತಿಗೆ ಹೋಗಿದೆ. 2026 ಅರ್ಧ ವರ್ಷ ಮುಗಿದೇ ಹೋಯ್ತು. ಆದರೆ, ಇದೂವರೆಗೂ ಕನ್ನಡ ಚಿತ್ರರಂಗದಲ್ಲಿ ಒಂದೇ ಒಂದು ಸಿನಿಮಾ ಹಿಟ್ ಲಿಸ್ಟ್ ಸೇರಿದ್ದು. ಅದು ಬಿಟ್ಟರೆ, ಉಳಿದ ಎಲ್ಲಾ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಮಕಾಡೆ ಮಲಗಿವೆ. ನಿರ್ಮಾಪಕರು ನೂರಾರು ಕೋಟಿ ರೂಪಾಯಿ ಕಳೆದುಕೊಂಡು ಕಂಗಾಲಾಗಿದ್ದಾರೆ. ಈ ಮಧ್ಯೆ ಅವರನ್ನೇ ಕೆರಳಿಸುವ ಹೇಳಿಕೆ ಕೊಟ್ಟಿ ನಟ ಸತೀಶ್ ನೀನಾಸಂ ಇಕ್ಕಟ್ಟಿಗೆ ಸಿಕ್ಕಿಕೊಂಡಿದ್ದಾರೆ.
ಸತೀಶ್ ನೀನಾಸಂ ಹಾಗೂ ಮಹೇಶ್ ಕುಮಾರ್ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ 'ಅಯೋಗ್ಯ 2' ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಹೀಗಾಗಿ ಸಿನಿಮಾ ತಂಡ ಹಾಡಿನಿಂದ ಪ್ರಚಾರವನ್ನು ಆರಂಭಿಸಿತ್ತು. ಈ ವೇಳೆ ಸತೀಶ್ ನೀನಾಸಂ ನಿರ್ಮಾಪಕರ ಕುರಿತು ಕೊಟ್ಟ ಒಂದು ಹೇಳಿಕೆ ಅವರ ಕಣ್ಣುಗಳನ್ನು ಕೆಂಪಾಗಿಸಿತ್ತು. ಇದನ್ನು ಅರಿತ ಸತೀಶ್ ಕೂಡಲೇ ನಿರ್ಮಾಪಕರಿಗೆ ಕ್ಷಮೆಯನ್ನೂ ಕೇಳಿದ್ದರು.

'ಅಯೋಗ್ಯ 2' ಸಾಂಗ್ ರಿಲೀಸ್ ವೇಳೆ ನಟ ಸತೀಶ್ ನೀನಾಸಂ "ನಿರ್ಮಾಪಕರು ಎಜುಕೇಟೆಡ್ ಆಗಿರಬೇಕು" ಎಂದು ಹೇಳಿಕೆ ಕೊಟ್ಟಿದ್ದರು. ಅದು ನಿರ್ಮಾಪಕರನ್ನು ಕೆರಳಿಸಿತ್ತು. ಹೀಗಾಗಿ ಆಕ್ರೋಶ ಭುಗಿಲೆದ್ದಿದ್ದರಿಂದ ನಿರ್ಮಾಪಕರ ಸಂಘದಲ್ಲಿ ಈ ಬಗ್ಗೆ ಸಭೆಯನ್ನು ಕರೆಯಲಾಗಿತ್ತು. ಈ ವೇಳೆ ಸತೀಶ್ ಮತ್ತೊಮ್ಮೆ ತಾವು ಕೊಟ್ಟ ಹೇಳಿಕೆಗೆ ಕ್ಲಾರಿಟಿಯನ್ನು ನೀಡಿದ್ದರು. ಅದರ ಝಲಕ್ ಇಲ್ಲಿದೆ.
ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ
"ನಿರ್ಮಾಪಕರು ಎಜುಕೇಟೆಡ್ ಆಗಿರಬೇಕು" ಆಗಿರಬೇಕು ಎಂದು ಹೇಳಿದ್ದಕ್ಕೆ ಯಾರಿಗಾದರೂ ನೋವಾಗಿದ್ದರೆ, ನಾನು ಕ್ಷಮೆಯನ್ನು ಕೇಳುತ್ತೇನೆ ಎಂದು ಸಭೆಯಲ್ಲಿ ಹೇಳಿದ್ದಾರೆ. ""ನಮ್ಮ ಸಿನಿಮಾ ಅಯೋಗ್ಯ 2 ಪ್ರಿ-ಪೋನ್ ಆಗಿದೆ. ಅದರ ಬಗ್ಗೆ ನಾನು ನನ್ನ ನಿರ್ಮಾಪಕರು ಇವತ್ತು ಸೇರಬೇಕಿತ್ತು. ಯಾಕಂದ್ರೆ ಒಂದು ಸಿನಿಮಾವನ್ನು ನಿಲ್ಲಿಸುವುದಕ್ಕೆ ನಾವು ಹಾಕಿರುವ ಎಫರ್ಟ್ ಅನ್ನು ನೀವು ನೋಡಿದ್ದೀರ. ಅಶೋಕಾ ಸಿನಿಮಾವನ್ನು ನಿಲ್ಲಿಸುವುದಕ್ಕೆ ಒದ್ದಾಡಿದ್ದನ್ನು ನೀವು ನೀಡಿದ್ದೀರ. ಚಿತ್ರರಂಗ ಯಾವ ಪರಿಸ್ಥಿತಿಯಲ್ಲಿ ಇದೆ ಅನ್ನೋದನ್ನು ನೋಡಿಕೊಂಡು ನಾನು ಎಜ್ಯುಕೇಷನ್ ಅನ್ನೋ ಪದ ಬಳಿಸಿದ್ದೆ. ಯಾರಿಗೆ ಇದರಿಂದ ನೋವಾಗಿದೆಯೋ ಅವರಿಗೆ ಕ್ಷಮೆ ಕೇಳುತ್ತೇನೆ." ಎಂದು ಸತೀಶ್ ನಿರ್ಮಾಪಕರ ಮುಂದೆ ಹೇಳಿದ್ದಾರೆ.

"ನಾನು ಓದಿದ್ದು SSLC ಅಷ್ಟೇ"
"ನಾನು ಓದಿರುವುದು SSLCನೇ. ನಮ್ಮ ತಾಯಿ ಓದಿಯೇ ಇಲ್ಲ. ಹಾಗಾಗಿ ಯಾರನ್ನೂ ಹೀಯಾಳಿಸುವಂತಹ ಮನಸ್ಥಿತಿ ನನಗೆ ಇಲ್ಲ. ನಾನು ಬಂದಿರೋದು ಯಾವುದೋ ಒಂದು ಸಣ್ಣ ಕುಗ್ರಾಮದಿಂದ 200-300 ರೂಪಾಯಿಗೆ ಸೀರಿಯಲ್ ಮಾಡಿಕೊಂಡು ಬಂದವನು. ನೀವೆಲ್ಲರೂ ಒಂದಲ್ಲ ಇಂದು ಕಾಲದಲ್ಲಿ ಸಿನಿಮಾ ಮಾಡಿದವರು. ಇಂಡಸ್ಟ್ರಿಯನ್ನು ಕಟ್ಟಿದವರು. ಪಾರ್ವತಮ್ಮ ರಾಜ್ಕುಮಾರ್, ಅಣ್ಣಾವ್ರಿಂದ ಹಿಡಿದು ಸಾಕಷ್ಟು ಜನ ನಿರ್ಮಾಪಕರು ಕೆಲಸ ಮಾಡಿದ್ದಾರೆ. ನಾನು ಹೇಳಿದ್ದು ಏನಂದ್ರೆ, ಒಬ್ಬ ನಿರ್ಮಾಪಕ ಬರಬೇಕಾದರೆ, ಜ್ಞಾನ ಇಲ್ಲದೆ ಬರೋದು ತುಂಬಾನೇ ತಪ್ಪು ಎಂದು ಹೇಳಿದ್ದೇನೆ. ಅದು ಹಂಡ್ರೆಡ್ ಪರ್ಸೆಂಟ್ ತಪ್ಪು. ಯಾಕೆ ತಪ್ಪು ಅಂದರೆ, ಸಿನಿಮಾದ ಜ್ಞಾನ ಬಹಳ ಮುಖ್ಯ ಆಗುತ್ತೆ." ಎಂದು ಸತೀಶ್ ನೀನಾಸಂ ಸ್ಪಷ್ಟನೆ ನೀಡಿದ್ದಾರೆ.
"ಕ್ಷಮೆ ಕೇಳುವುದರಿಂದ ಚಿಕ್ಕವನಾಗುವುದಿಲ್ಲ"
"ಒಂದು ಕೋಟಿ ಬಜೆಟ್ ಸಿನಿಮಾ ಎರಡು ಕೋಟಿ ಆದಾಗ ಯಾರು ಹೊಣೆ ಆಗುತ್ತಾರೆ? ನಿರ್ಮಾಪಕರಿಗೆ ಗೊತ್ತಿದ್ದಾಗ ಇದನ್ನು ಪ್ರಶ್ನೆ ಮಾಡಬಹುದು. ಆಗ ನಿರ್ಮಾಪಕರು ಉಳಿಯುತ್ತಾರೆ. ಚಿತ್ರರಂಗ ಉಳಿಯುತ್ತೆ. ಬಂದ ನಿರ್ಮಾಪಕರು ನಷ್ಟ ಮಾಡಿಕೊಂಡು ಆಚೆ ಹೋದಾಗ ನಮಗೆ ನೋವಾಗುತ್ತೆ. ಅವರು ಒಂದು ಸಿನಿಮಾ ಮಾಡೋದಿಲ್ಲ. ನೂರಾರು ಸಿನಿಮಾ ಮಾಡಬೇಕು. ಲಕ್ಷಾಂತರ ಜನರ ಲೈಫ್ ಇದೆ. ಈ ದೃಷ್ಟಿಯಲ್ಲಿ ಹೇಳಿದ್ದೇನೆ ಹೊರತು. ನನಗೆ ನೋವು ಮಾಡಬೇಕು ಅನ್ನೋ ಉದ್ದೇಶವಿಲ್ಲ. ಆದರೂ ನೋವಾಗಿದ್ದರೆ, ನಾನು ಕ್ಷಮೆ ಕೇಳುತ್ತೇನೆ. ಇದರಿಂದ ನಾನು ಚಿಕ್ಕವನಾಗುವುದಿಲ್ಲ." ಎಂದು ಸತೀಶ್ ಹೇಳಿದ್ದಾರೆ.


Click it and Unblock the Notifications