ಪ್ಯಾನ್ ಇಂಡಿಯಾ ಅಲ್ಲ. ಪ್ಯಾನ್ ಏಷ್ಯಾ ಸಿನಿಮಾದಲ್ಲಿ ಡಿಂಗ್ರಿ ನಾಗರಾಜ್ ಪುತ್ರ; ಏನಂತಾರೆ ರಾಜವರ್ಧನ್?
ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗಗಳು ಆಗುತ್ತಿವೆ. ಸೀನಿಯರ್ಸ್ ಅಷ್ಟೇ ಅಲ್ಲ, ಯುವ ಪ್ರತಿಭೆಗಳು ಕೂಡ ಹೊಸ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ದೂರ ದೃಷ್ಟಿಯಿಂದ ವಿಶ್ವದ ಮಟ್ಟದಲ್ಲಿ ಸಿನಿಮಾ ಮಾಡುವತ್ತ ಗಮನ ಹರಿಸಿದ್ದಾರೆ. ಹೀಗಾಗಿ ವರ್ಷಾನುಗಟ್ಟಲೆ ಆ ಒಂದೇ ಸಿನಿಮಾಗಾಗಿ ಬೇಕಿರೋ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ.
ಇದೀಗ ಕನ್ನಡ ಚಿತ್ರರಂಗ ಮತ್ತೊಂದು ತಂಡ ಭಾರೀ ಸಾಹಸಕ್ಕೆ ಕೈ ಹಾಕುವುದಕ್ಕೆ ಮುಂದಾಗಿದೆ. ಕ್ರಿಯೇಟಿವ್ ತಂಡದೊಂದಿಗೆ ಪ್ಯಾನ್ ವರ್ಲ್ಡ್ ಅಲ್ಲ, ಪ್ಯಾನ್ ಏಷ್ಯಾ ಸಿನಿಮಾ ಮಾಡುವುದಕ್ಕೆ ಸಜ್ಜಾಗುತ್ತಿದೆ. ಇದೇ ಪ್ಯಾನ್ ಏಷ್ಯಾ ಸಿನಿಮಾದ ನಾಯಕನಾಗಿ ಕನ್ನಡ ಚಿತ್ರರಂಗದ ಹಿರಿಯ ನಟ ಡಿಂಗ್ರಿ ನಾಗರಾಜ್ ಅವರ ಪುತ್ರ ರಾಜವರ್ಧನ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಹಿರಿಯ ನಟ ಡಿಂಗ್ರಿ ನಾಗರಾಜ್ ಅವರ ಪುತ್ರ ರಾಜವರ್ಧನ್ ಸ್ಯಾಂಡಲ್ವುಡ್ನಲ್ಲಿ ಭರವಸೆಯನ್ನು ಮೂಡಿಸಿದ್ದಾರೆ. ಇದೂವರೆಗೂ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೊದಲ ಸಿನಿಮಾದಿಂದಲೂ ರಾಜವರ್ಧನ್ ವಿಶಿಷ್ಠ ಕಥೆಗಳನ್ನೇ ಆಯ್ಕೆ ಮಾಡಿಕೊಂಡು ಬಂದಿದ್ದಾರೆ. ಈ ನಾಲ್ಕು ಸಿನಿಮಾಗಳ ಮೂಲಕ ತಮ್ಮನ್ನು ಗುರುತಿಸಿಕೊಳ್ಳುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಈಗ ಬಿಗ್ ಸಿನಿಮಾಗಳ ಹುಡುಕಾಟದಲ್ಲಿದ್ದು, ಅದರ ಪ್ರಯತ್ನವೇ ಈ ಪ್ಯಾನ್ ಏಷ್ಯಾ ಸಿನಿಮಾ.
ಕನ್ನಡದಲ್ಲಿ 'ಕೆಜಿಎಫ್', 'ಕಾಂತಾರ', 'ಟಾಕ್ಸಿಕ್' ಅಂತಹ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಈಗಾಗಲೇ ತೆಲುಗಿನ 'ಬಾಹುಬಲಿ', 'RRR' ಅಂತಹ ಸಿನಿಮಾಗಳು ದಕ್ಷಿಣ ಭಾರತೀಯ ಸಿನಿಮಾಗಳ ಹಿರಿಮೆಯನ್ನು ಹೆಚ್ಚಿಸಿವೆ. ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸಿನಿಮಾಗಳು ವಿಶ್ವ ಮಟ್ಟದಲ್ಲಿ ಭಾರತೀಯ ಚಿತ್ರರಂಗವನ್ನ ಮೆರೆಸಿವೆ. ಭಾರತೀಯ ಚಿತ್ರರಂಗದ ಈ ಫಿಲಂ ಮೇಕರ್ಗಳ ಸಿನಿಮಾ ಸಾಧನೆ ಹೊಸ ತಲೆಮಾರಿಗೆ ಸ್ಫೂರ್ತಿಯಾಗಿ ಹೊರ ಹೊಮ್ಮಿದೆ.
ಈಗಾಗಲೇ ಸಾಧನೆ ಮಾಡಿರುವ ಈ ಪ್ಯಾನ್ ಇಂಡಿಯಾ ಸಿನಿಮಾಗಳ ಹಾದಿಯಲ್ಲಿ ಸಾಗುವುದಕ್ಕೆ ರಾಜವರ್ಧನ್ ಮುಂದಾಗಿದ್ದಾರೆ. ಈ ಹಾದಿಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸುವುದಕ್ಕೆ ಪಕ್ಕಾ ಹೀರೋಮೆಟೀರಿಯಲ್, ಸಿನಿಮೋತ್ಸಾಹಿ ಹಾಗೂ ಬಹುಮುಖ ಪ್ರತಿಭೆಯಾಗಿರುವ ನಟ ರಾಜವರ್ಧನ್ ಈಗಾಗಲೇ ಒಂದು ತಂಡವನ್ನು ಕಟ್ಟಿಕೊಂಡು ಅದರ ಮೇಲೆ ಕೆಲಸ ಮಾಡುತ್ತಿದ್ದಾರೆ.
ರಾಜವರ್ಧನ್ ಪ್ಯಾನ್ ಏಷ್ಯಾ ಸಿನಿಮಾಗಾಗಿ ಈ ತಂಡ ಸುಮಾರು 5 ವರ್ಷಗಳಿಂದ ಸತತವಾಗಿ ಪೂರ್ವ ತಯಾರಿ ನಡೆಸುತ್ತಿದೆ. ಇದೀಗ ಅದು ಕೊನೆಯ ಹಂತಕ್ಕೆ ಬಂದು ತಲುಪಿದ್ದು, ಸದ್ಯದಲ್ಲಿಯೇ ರಾಜವರ್ಧನ್ ಹಾಗೂ ಚಿತ್ರತಂಡ ಸೇರಿಕೊಂಡು ಪ್ಯಾನ್ ಏಷ್ಯಾ ಸಿನಿಮಾ ಬಗ್ಗೆ ಮಾಹಿತಿಗಳನ್ನು ಹಂಚಿಕೊಳ್ಳಲಿದೆ. ನಾಳೆ (ಮಾರ್ಚ್ 24) ರಾಜವರ್ಧನ್ ಅವರ ಹುಟ್ಟುಹಬ್ಬವಿರುವುದರಿಂದ ಈ ಪ್ಯಾನ್ ಏಷ್ಯಾ ಸಿನಿಮಾ ಬಗ್ಗೆ ಮಾಹಿತಿ ರಾಜವರ್ಧನ್ ಮಾಹಿತಿ ಹಂಚಿಕೊಂಡಿದ್ದಾರೆ.

"ಬಿಚ್ಚುಗತ್ತಿ ಚಿತ್ರದಿಂದ 'ಗಜರಾಮ'ವರೆಗೂ ಮಾಡಿದ ಎಲ್ಲಾ ಸಿನಿಮಾಗಳು ಒಂದೊಂದು ಬಗೆಯಲ್ಲಿ ಪಾಠ ಹೇಳಿಕೊಟ್ಟಿವೆ. ಕಳೆದ ವರ್ಷ ನಾನು ಕ್ರಿಯೇಟೀವ್ ಹೆಡ್ ಆಗಿ, ನಿರ್ಮಾಪಕನಾಗಿ ಕೆಲಸ ಮಾಡಿದ್ದ 'ಕಮಲ್ ಶ್ರೀದೇವಿ' ಚಿತ್ರ ಸಿನಿಮಾದೊಳಗಿನ, ಹೊರಗಿನ ಬೇಕು-ಬೇಡ ಮತ್ತು ವ್ಯವಹಾರಿಕ ಜ್ಞಾನವನ್ನ ಕಲಿಸಿದೆ. ನಾನೂ ಮೂಲತಃ ಚಿತ್ರಕಲಾ ವಿದ್ಯಾರ್ಥಿ. ಸಿನಿಮಾದೊಳಗೆ ಕೊನೆಯವರೆಗೂ ನಾನು ವಿದ್ಯಾರ್ಥಿನೇ.. ಈವರೆಗೂ ನಾನು ಮಾಡಿದ ಸಿನಿಮಾ ಕೆಲಸಗಳೆಲ್ಲವೂ ಕಲಿಕೆಯೇ.. ಈವರೆಗೂ ನಾನೇನು ಮಾಡಿದ್ದೇನೂ ಅದೆಲ್ಲವೂ ಅನುಭವ ಅಷ್ಟೇ.. ನನ್ನ ಅಸಲಿ ಸಿನಿಮಾ ಪಯಣ ಇಲ್ಲಿಂದ ಆರಂಭ.. ನನ್ನ ಸಿನಿಮಾ ಕನಸು, ದಾರಿ, ಗುರಿ ಈ ಚಿತ್ರವಾಗಲಿದೆ ಅನ್ನೋದು ನನ್ನ ಭರವಸೆ. ಹೇಳಬೇಕು ಅಂದ್ರೆ, ಇದೇ ನನಗೆ ಮೊದಲ ಸಿನಿಮಾ ಅನ್ನಿಸ್ತಿದೆ. ಅಷ್ಟು ತಯಾರಿ ಆಗ್ತಿದೆ. ತುಂಬಾ ಪ್ರತಿಭಾವಂತ ವಿಶ್ವ ದರ್ಜೆಯ ಸಿನಿಮಾ ಮಾಡೋ ಸಾಮರ್ಥ್ಯದ ತಂಡ ಬೆನ್ನಿಗೆ ನಿಂತಿದೆ. ಸದ್ಯಕ್ಕೆ ಇಷ್ಟು ಮಾತ್ರ ಹೇಳಬಲ್ಲೇ.. ಉಳಿದ ವಿಷ್ಯಯಗಳು ಒಂದೊಂದಾಗಿ ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ." ಎನ್ನುತ್ತಾರೆ ನಟ ರಾಜವರ್ಧನ್.
ಕಳೆದ ಒಂದು ವರ್ಷಗಳಿಂದ ರಾಜವರ್ಧನ್ ಚಿತ್ರರಂಗದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ನಟನೆಯಿಂದ ಅಂತರವನ್ನು ಕಾಯ್ದುಕೊಂಡಿದ್ದರು. ಪ್ಯಾನ್ ಏಷ್ಯಾ ಸಿನಿಮಾ ಬಗ್ಗೆ ಗಮನ ಹರಿಸಿದ್ದರಿಂದ ಚಿತ್ರರಂಗದಿಂದ ದೂರವೇ ಇದ್ದರು ಎಂದು ಹೇಳಲಾಗುತ್ತಿದೆ. ಒಟ್ನಲ್ಲಿ ಕನ್ನಡ ಚಿತ್ರರಂಗದಿಂದ ಮತ್ತೊಬ್ಬ ನಟ ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ಏಷ್ಯಾ ಸಿನಿಮಾ ಮಾಡುವ ಸಾಹಸಕ್ಕೆ ಕೈ ಹಾಕಿದ್ದು, ಮುಂದಿನ ದಿನಗಳಲ್ಲಿ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕ ಸಿಗಬಹುದು.


Click it and Unblock the Notifications















