"ಅಮ್ಮನ ಸೇವೆ ಹೇಗೆ ಮಾಡ್ಬೇಕು ಅನ್ನೋದನ್ನು ವಿನೋದ್ ರಾಜ್ ನೋಡಿ ಕಲೀಬೇಕು": ಹಿರಿಯ ನಟ ಸುಂದರ್ ರಾಜ್
ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ 86 ವಸಂತಗಳನ್ನು ಪೂರೈಸಿದ್ದಾರೆ. ಕನ್ನಡದಲ್ಲಿ ನೂರಾರು ಸಿನಿಮಾಗಳಲ್ಲಿ ಪ್ರೇಕ್ಷಕರನ್ನು ಗೆದ್ದ ನಟಿ. ಇತ್ತೀಚೆಗೆ ತಾವು ಚಿತ್ರರಂಗದಲ್ಲಿರುವ ಕಲಾವಿದರನ್ನು, ತಂತ್ರಜ್ಞರನ್ನು ನೋಡಬೇಕು ಅನ್ನೋ ಬಯಕೆಯನ್ನು ಇಟ್ಟುಕೊಂಡಿದ್ದರು.
ಹೀಗಾಗಿ ಸುಂದರ್ ರಾಜ್, ಓಂ ಸಾಯಿ ಪ್ರಕಾಶ್, ಶ್ರೀನಾಥ್, ಪದ್ಮವಾಸಂತಿ ಸೇರಿದಂತೆ ಹಿರಿಯರೆಲ್ಲಾ ಸೇರಿಕೊಂಡು 'ಅಮ್ಮ ನೀನಮ್ಮ.. ನಿಮ್ಮೊಳಗೆ ನಾವಮ್ಮ' ಅನ್ನೋ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಕಾರ್ಯಕ್ರಮದಡಿಯಲ್ಲಿ ಹಿರಿಯ ನಟಿಯನ್ನು ಭೇಟಿ ಮಾಡಿ, ಅವರೊಂದಿಗೆ ಕಾಲ ಕಳೆದಿದ್ದಾರೆ.
ಒಂದೂವರೆ ತಿಂಗಳ ಹಿಂದೆ ಹಿರಿಯ ನಟಿ ಲೀಲಾವತಿ ಆರೋಗ್ಯದಲ್ಲಿ ಏರುಪೇರಾಗಿತ್ತು. ಸುಂದರ್ ರಾಜ್ ಸೇರಿದಂತೆ ಹಿರಿಯ ಗಣ್ಯರೆಲ್ಲ ಭಾಗವಹಿಸಿದ್ದರು. ಆ ವೇಳೆ ಲೀಲಾವತಿಯನ್ನು ಕನ್ನಡ ಚಿತ್ರರಂಗದ ನಟಿಯರನ್ನು ಭೇಟಿ ಮಾಡಬೇಕು ಅನ್ನೋ ಆಸೆಯನ್ನು ವ್ಯಕ್ತಪಡಿಸಿದ್ದರು. ಹೀಗಾಗಿ ಅವರೊಂದಿಗೆ ನಟಿಸಿದ ಕಲಾವಿದರು ಹಿರಿಯ ನಟಿಯನ್ನು ಭೇಟಿಯಾಗಿ ಅವರೊಂದಿಗೆ ಕಾಲ ಕಳೆದಿದ್ದಾರೆ. ಈ ವೇಳೆ ಅಮ್ಮ ಸೇವೆ ಮಾಡುತ್ತಿರುವ ವಿನೋದ್ ರಾಜ್ ಬಗ್ಗೆ ಸುಂದರ್ ರಾಜ್ ಮನಬಿಚ್ಚಿ ಮಾತಾಡಿದ್ದಾರೆ.

"ವಿನೋದ್ ರಾಜ್ ಬಳಿ ಅಮ್ಮ ಇದ್ದಾರೆ"
ಇತ್ತೀಚೆಗಷ್ಟೇ ವಿನೋದ್ ರಾಜ್ ಮದುವೆ ವಿಚಾರದ ಬಗ್ಗೆ ಸುದ್ದಿಯಲ್ಲಿ ಇದ್ದರು. ಆ ವೇಳೆ ಹಿರಿಯ ನಟಿ ಲೀಲಾವತಿ ಅವರು ಕೂಡ ಪ್ರತಿಕ್ರಿಯೆ ನೀಡಿದ್ದರು. ಜೀವನದ ಉದ್ದಕ್ಕೂ ಇಂತಹ ಹಲವು ಕಷ್ಟಗಳು ಬಂದಾಗ, ಅಮ್ಮ-ಮಗ ಒಟ್ಟಿಗೆ ಎದುರಿಸಿದ್ದಾರೆ. ಅಲ್ಲದೆ, ಇಳಿ ವಯಸ್ಸಿನಲ್ಲಿ ವಿನೋದ್ ರಾಜ್ ಅಮ್ಮನ ಸೇವೆ ಮಾಡುತ್ತಿದ್ದಾರೆ. ಅದಕ್ಕೆ ಸುಂದರ್ ರಾಜ್ 'ದಿವಾರ್' ಸಿನಿಮಾ ಉದಾಹರಣೆ ಕೊಟ್ಟಿದ್ದಾರೆ.
"ದಿವಾರ್ ಅಂತ ಒಂದು ಸಿನಿಮಾ ನೋಡಿರಬಹುದು. ಅದರಲ್ಲಿ ಅಮಿತಾಭ್ ಬಚ್ಚನ್ ಡಾನ್. ಶಶಿ ಕಪೂರ್ ಪೊಲೀಸ್ ಆಫೀಸರ್. ಆಗ ಡಾನ್ ಹೇಳುತ್ತಾನೆ. ನನ್ನ ಹತ್ತಿರ ಕೋಟಿ ಕೋಟಿ ಹಣವಿದೆ. ಕಾರು ಇದೆ. ಬಂಗ್ಲೆ ಇದೆ ಆಸ್ತಿಯಿದೆ. ನಿನ್ನ ಬಳಿ ಏನಿದೆ? ಅಂತ. ಆಗ ಶಶಿ ಕಪೂರ್ ಹೇಳ್ತಾರೆ ನನ್ನ ಬಳಿಕ ತಾಯಿ ಇದ್ದಾಳೆ ಅಂತ. ವಿನೋದ್ ರಾಜ್ ಇವತ್ತು ಹೇಳಿ ತೋರಿಸಿದ್ದಾರೆ. ಮಾಡಿ ತೋರಿಸಿದ್ದಾರೆ." ಎಂದಿದ್ದಾರೆ ಸುಂದರ್ ರಾಜ್.
"ವಿನೋದ್ ರಾಜ್ ನೋಡಿ ಕಲೀಬೇಕು"
ಹಿರಿಯ ನಟಿ ಲೀಲಾವತಿಯವರಿಗೆ ಈಗ 86 ವರ್ಷ. ಸಹಜವಾಗಿಯೇ ವಯ ಸಹಜ ಆರೋಗ್ಯ ಸಮಸ್ಯೆಗಳಿವೆ. ಇಂತಹ ಸಂದರ್ಭದಲ್ಲಿ ವಿನೋದ್ ರಾಜ್ ತಮ್ಮ ಬದುಕನ್ನೇ ಅಮ್ಮನ ಸೇವೆಗೆ ಮುಡಿಪಿಟ್ಟಿದ್ದಾರೆ. ಇದು ಎಲ್ಲರಿಗೂ ಮಾದರಿ ಎನ್ನುತ್ತಾರೆ ಸುಂದರ್ ರಾಜ್.
" ಇವತ್ತು ಅವರು ತಾಯಿಯನ್ನು ನಡೆಸಿಕೊಂಡಿರೋ ರೀತಿಯನ್ನು ನಾವು ನೋಡಿ ಕಲಿಯಬೇಕು. ಬೆಂಗಳೂರಿನಿಂದ 25 ಕಿ.ಮೀನಲ್ಲಿ ಬಂಡೆ ಪ್ರದೇಶದಲ್ಲಿ ಭವ್ಯವಾದ ತೋಟವನ್ನು ಮಾಡಿ ಇಲ್ಲಿ ಕೇವಲ ಮನುಷ್ಯರಿಗಷ್ಟೇ ಅಲ್ಲ. ಪ್ರಾಣಿ,ಪಕ್ಷಿಗಳಿಗೆ ಅನ್ನ ಹಾಕುತ್ತಿದ್ದಾರೆ. ಅವರ ವಿಶೇಷತೆ ಅದು.. ಅವರಿಗೊಂದು ದೊಡ್ಡ ನಮಸ್ಕಾರ." ಎನ್ನುತ್ತಾರೆ ಸುಂದರ್ ರಾಜ್.

"ಲೀಲಾವತಿ ಅಮ್ಮ ನೂರು ವರ್ಷ ಬಾಳಲಿ"
ಹಿರಿಯರ ನಟಿಯನ್ನು ಕನ್ನಡ ಚಿತ್ರರಂಗದ ಕಲಾವಿದರು ಅವರ ಮನೆಗೆ ಭೇಟಿ ಮಾಡಿದ್ದಾರೆ. ಅವರಿಗೆ ಸನ್ಮಾನ ಮಾಡಿ, ಅವರೊಂದಿಗೆ ಕೆಲ ಹೊತ್ತು ಕಾಲ ಕಳೆದಿದ್ದಾರೆ. ಅವರ ಮನೆಯಲ್ಲಿಯೇ ಊಟ ಮಾಡಿ, ಚಿಕ್ಕದೊಂದು ಹರಟೆ ಹೊಡೆದು ಬಂದಿದ್ದಾರೆ. ಈ ವೇಳೆ ಲೀಲಾವತಿಯವರು ನೂರು ವರುಷ ಬಾಳಲಿ ಎಂದು ಸುಂದರ್ ರಾಜ್ ಹಾರೈಸಿದ್ದಾರೆ.
"ಎಲ್ಲಾ ಹಿರಿಯರು ಹೇಳಿದ ಹಾಗೇ ಲೀಲಾವತಿಯವರು ನೂರು ವರ್ಷ ಬಾಳಲಿ. ಅವರಿಗೆ ಮತ್ತಷ್ಟು ಶಕ್ತಿ ದೇವರು ಕೊಡಲಿ. ಅಮ್ಮ ಲೀಲಮ್ಮ ನಾವು ನಿಮ್ಮ ಜೊತೆ ಇದ್ದೀವಮ್ಮ" ಎಂದು ಹಿರಿಯ ನಟ ಸುಂದರ್ ರಾಜ್ ಹೇಳಿದ್ದಾರೆ.


Click it and Unblock the Notifications











